Advertisement

Finance matter; ಸದೃಢ ಆರ್ಥಿಕತೆಯತ್ತ ಭಾರತ ದಾಪುಗಾಲು

12:08 AM Oct 30, 2023 | Team Udayavani |

ವಿಶ್ವದಾದ್ಯಂತ ಹಣ ದುಬ್ಬರದಿಂದ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ. ಬಲಾಡ್ಯ ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ನಲುಗಿದ್ದು ಆರ್ಥಿಕತೆ ಮತ್ತಷ್ಟು ಕುಸಿಯದಂತೆ ತಡೆಯಲು ಬಡ್ಡಿದರ ಕಡಿತದ ಮೊರೆ ಹೋಗಿವೆ. ಇವೆಲ್ಲದರ ಹೊರತಾಗಿ ಭಾರತದ ಆರ್ಥಿಕತೆ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದೆ. ಕೊರೊನಾ, ರಷ್ಯಾ- ಉಕ್ರೇನ್‌ ಸಮರ, ಬೆಲೆಯೇರಿಕೆ, ಹಣದುಬ್ಬರ ಮತ್ತಿತರ ಸವಾಲು ಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿರುವ ಆರ್‌ಬಿಐ ಮತ್ತು ಕೇಂದ್ರ ಸರಕಾರ, ಭವಿಷ್ಯದ ಸಂಭಾವ್ಯ ಸವಾಲುಗಳನ್ನು ಎದುರಿಸಲು ಮುನ್ನೆಚ್ಚರಿಕೆಯ ಹೆಜ್ಜೆ ಇರಿಸಿವೆೆ.

Advertisement

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಬಿಡುಗಡೆ ಮಾಡಿದ ಇತ್ತೀಚೆಗಿನ ಜಾಗತಿಕ ಆರ್ಥಿಕತೆಯ ವಿಸ್ತೃತ ವರದಿಯ ಪ್ರಕಾರ ವಿಶ್ವದ ಆರ್ಥಿಕತೆಯು ದಶಕದಲ್ಲಿಯೇ ಅತೀ ಕಡಿಮೆ ಬೆಳವಣಿಗೆಯನ್ನು ಕಾಣಲಿದೆಯೆಂಬ ಮುನ್ಸೂಚನೆಯನ್ನು ನೀಡಿದೆ. ಆದರೆ ಬೇರೆಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಹಣಕಾಸು ಸ್ಥಿತಿ ಉತ್ತಮ ರೀತಿಯಲ್ಲಿದೆ. ಜಾಗತಿಕ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದ್ದರೂ ಕುಂಟುತ್ತಾ ಸಾಗುತ್ತಿದೆ ಎಂದು ಎಚ್ಚರಿಸಿದೆಯಲ್ಲದೆ ಮುಂದುವರಿದ ರಾಷ್ಟ್ರಗಳಲ್ಲಿನ ಬೆಳವಣಿಗೆಯ ನಿಧಾನಗತಿ ಸ್ಪಷ್ಟವಾಗಿರುವುದನ್ನು ಐಎಂಎಫ್ ವಿಶ್ಲೇಷಿಸಿದೆ. ಮುಂದುವರಿದ ಆರ್ಥಿಕತೆಗಳ ಶೇ. 2.6 ರ ನಿಧಾನಗತಿಯ ಬೆಳವಣಿಗೆಯು ಈ ವರ್ಷಕ್ಕೆ ಶೇ.1.5 ಕ್ಕೆ ಕುಸಿಯಲಿದ್ದು 2024 ರಲ್ಲಿ ಶೇ.1.4 ರಷ್ಟು ಇರಲಿದೆಯೆಂದು ವಿಶ್ಲೇಷಿಸಿದೆ. ಇದೆಲ್ಲದರ ನಡುವೆಯೂ ಭಾರತವು ವಿಶ್ವದ ಅನ್ಯ ದೇಶಗಳಿಗಿಂತ ಹೆಚ್ಚಿನ ಬೆಳವಣಿಗೆಯೊಂದಿಗೆ ಅಗ್ರಸ್ಥಾನದಲ್ಲಿದೆಯಲ್ಲದೆ 2024ರ ಆರ್ಥಿಕ ವರ್ಷದಲ್ಲಿಯೂ ವೇಗವಾಗಿ ಬೆಳೆಯುತ್ತಿದ್ದು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ ಮತ್ತು ಆರ್ಥಿಕತೆಯು ಶೇ. 6.3 ರಷ್ಟು ಆಗಲಿದೆ ಎಂದು ಐಎಂಎಫ್ ಹೇಳಿದೆ. ಅದಲ್ಲದೆ ವಿಶ್ವದ ಆರ್ಥಿಕತೆಯಲ್ಲಿ ಶೇ. 7.3ರ ಪಾಲನ್ನು ಹೊಂದಿರುವ ಭಾರತವು ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಶೇ. 12.5ರ ಪಾಲನ್ನು ಹೊಂದಿದೆ ಮತ್ತು ವಿಶ್ವದ ಒಟ್ಟಾರೆ ರಫ್ತಿನಲ್ಲಿ ಶೇ.2.5 ರಷ್ಟು ಭಾರತದಿಂದಾಗುತ್ತಿದೆ.

ಪ್ರಸಕ್ತ ವಿಶ್ವದಲ್ಲಿಯೇ ಐದನೇ ಅತೀ ದೊಡ್ಡ ಆರ್ಥಿಕತೆಯೆಂಬ ಹಿರಿಮೆ ಹೊಂದಿರುವ ಭಾರತ 2030 ರ ವೇಳೆಗೆ ಎಷ್ಯಾದ ಎರಡನೆಯ ಮತ್ತು ವಿಶ್ವದ ಮೂರನೆಯ ಬೃಹತ್‌ ಆರ್ಥಿಕತೆಯಾಗಲಿದೆಯಲ್ಲದೆ ಏಷ್ಯಾ ಫೆಸಿಫಿಕ್‌ ಪ್ರದೇಶದ ಅತೀ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಜಾಗತಿಕ ರೇಟಿಂಗ್‌ ಏಜೆನ್ಸಿ ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ವರದಿ ಮಾಡಿದೆ. 2022ರಲ್ಲಿ ಭಾರತ, ಬ್ರಿಟನ್‌ ಮತ್ತು ಫ್ರಾನ್ಸ್‌ ಅನ್ನು ಹಿಂದಿಕ್ಕಿ ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆಯಾಗಿತ್ತು. 2023ರಲ್ಲಿ ಜರ್ಮನಿಯನ್ನು ಹಿಂದಿಕ್ಕಿ ನಾಲ್ಕನೆಯ ಸ್ಥಾನಕ್ಕೆ ಏರಲಿದೆಯೆಂದೂ ವರದಿ ಮಾಡಿದೆ. ನಿರೀಕ್ಷಿತ ಹಾದಿಯಲ್ಲಿಯೇ ದೇಶದ ಆರ್ಥಿಕತೆ ಸಾಗಿದ್ದೇ ಆದಲ್ಲಿ 2030ರ ವೇಳೆಗೆ ಜಪಾನಿನ ಜಿಡಿಪಿಯನ್ನು ಭಾರತ ಹಿಂದಿಕ್ಕಲಿದೆ. ಅಲ್ಲದೆ ಮುಂದಿನ ದಶಕದಲ್ಲಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಮುಂದುವರಿಯಲಿದೆ.

ಬಹು ದೊಡ್ಡ ಮತ್ತು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಭಾರತದ ಮಧ್ಯಮ ವರ್ಗದ ಮುಖೇನ ಗ್ರಾಹಕರ ವೆಚ್ಚದ ಪ್ರಮಾಣ ಹೆಚ್ಚುತ್ತಿದೆ. ದೇಶೀಯ ಮಾರುಕಟ್ಟೆಯ ವೇಗದ ಬೆಳವಣಿಗೆ, ದೇಶದ ಕೈಗಾರಿಕ ವಲಯದಲ್ಲಿ ಹೆಚ್ಚುತ್ತಿರುವ ವಿದೇಶೀ ಬಂಡವಾಳ, ಕ್ರಾಂತಿಕಾರಕ ಡಿಜಿಟಲ್‌ ಪರಿವರ್ತನೆ, ಅಂತರ್ಜಾಲ ಬಳಕೆ, ಇ-ಕಾಮರ್ಸ್‌, ಲಾಜಿಸ್ಟಿಕ್‌ ಸ್ಟಾರ್ಟ್‌ ಅಪ್‌ಗ್ಳು ಕಾರಣವಾಗಿವೆ. 2030 ರ ವೇಳೆಗೆ 110 ಕೋಟಿ ಭಾರತೀಯರು ಇಂಟರ್‌ನೆಟ… ಬಳಕೆದಾರರಾಗುವ ಅಂದಾಜಿದೆ. 2020ರಲ್ಲಿ ಅಂದಾಜು 50 ಕೋಟಿ ಬಳಕೆದಾರರಿದ್ದರು. ಅನೇಕ ಸಣ್ಣ ಸಣ್ಣ ಕಂಪೆನಿಗಳು ಯೂನಿಕಾರ್ನ್ಗಳಾಗಿ ಪರಿವರ್ತನೆಗೊಂಡಿವೆ. ಇವೆಲ್ಲವೂ ಭಾರತದ ಆರ್ಥಿಕ ಪ್ರಗತಿಗೆ ಪ್ರಮುಖ ಕಾರಣವಾಗಲಿದೆಯೆಂದು ಎಸ್‌ ಆ್ಯಂಡ್‌ ಪಿ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಬ್ಯಾಂಕಿಂಗ್‌ ವಲಯದ ಸ್ಥಿರತೆ, ಉತ್ಪಾದನೆ, ಮೂಲ ಸೌಕರ್ಯ ಮತ್ತು ಸೇವೆಗಳು ಹಾಗೂ ಹಲವು ವಲಯಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಹೂಡಿಕೆ ಭಾರೀ ಏರಿಕೆ ಕಂಡಿದೆ. ಆಟೋಮೊಬೈಲ್ , ಎಲೆಕ್ಟ್ರಾನಿಕ್ಸ್‌, ರಾಸಾಯನಿಕಗಳಂತಹ ಉತ್ಪಾದನ ಉದ್ಯಮಗಳ ಸಹಿತ ಅನೇಕ ಕೈಗಾರಿಕೆಗಳು ತ್ವರಿತ ಬೆಳವಣಿಗೆ ಕಾಣಲಿವೆ. ಇವೆಲ್ಲವೂ ಭಾರತದ ದೀರ್ಘ‌ಕಾಲದ ಬೆಳವಣಿಗೆಗೆ ಕಾರಣವೆಂದು ವರದಿಯಲ್ಲಿ ಹೇಳಲಾಗಿದೆ.

ಹಣದುಬ್ಬರ: ದೇಶದ ಹಣದುಬ್ಬರ ಇಳಿಕೆ ಉತ್ತೇಜನಕಾರಿಯಾದರೂ ಅಪಾಯ ತಪ್ಪಿಲ್ಲ. ಆರ್‌ಬಿಐ ಗವರ್ನರ್‌ ಹಣದುಬ್ಬರ ತಗ್ಗಿಸುವುದು ತಮ್ಮ ಆದ್ಯತೆ ಎಂದಿ¨ªಾರೆ. ಸದ್ಯದ ಮಟ್ಟಿಗೆ ಬಡ್ಡಿದರವು ಗರಿಷ್ಠ ಮಟ್ಟದಲ್ಲಿಯೇ ಇರಲಿದೆ ಮತ್ತು ಎಲ್ಲಿಯವರೆಗೆ ಬಡ್ಡಿದರವು ಗರಿಷ್ಟ ಮಟ್ಟದಲ್ಲಿರಲಿದೆ ಎಂದು ಸಮಯವೇ ನಿರ್ಧರಿಸಲಿದೆ ಎಂದಿ¨ªಾರೆ. ಕಚ್ಚಾ ತೈಲದ ಬೆಲೆ, ಇಂಧನ ಬೆಲೆ ದೇಶದಲ್ಲಿ ಹೆಚ್ಚಾದರೆ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಭಾರತದ ಮೇಲೂ ಪರಿಣಾಮ ಬೀರಲಿದೆ. ಆದರೆ ನಮ್ಮ ಆರ್ಥಿಕ ತಳಹದಿಯು ಬಲಿಷ್ಟವಾಗಿದೆ ಮತ್ತು ಹಣಕಾಸು ವಲಯದ ಸ್ಥಿತಿಯೂ ಉತ್ತಮವಾಗಿರುವುದರಿಂದ ಹೆಚ್ಚಿನ ಹಾನಿಯಾಗಲಾರದು ಎಂಬುದು ಅವರ ಅನಿಸಿಕೆ. ತನ್ಮಧ್ಯೆ ಮುಂಗಾರು ಮಳೆ ಈ ವರ್ಷ ವಾಡಿಕೆಗಿಂತ ಕಡಿಮೆಯಾಗಿರುವುದರಿಂದ ಮುಂಗಾರು ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗುವ ಸಂಭವವಿರುವುದರಿಂದ ಬೆಲೆಯೇರಿಕೆಯ ಸಾಧ್ಯತೆಯನ್ನು ಗಮನಿಸಿ ಆರ್‌ಬಿಐ ರೆಪೊ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಆರ್ಥಿಕತೆ ಮತ್ತು ಹಣದುಬ್ಬರ ಇವೆರಡನ್ನು ಸರಿದೂಗಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ನೀತಿ ಅನಿವಾರ್ಯವಾಗಿತ್ತು.

Advertisement

ಇಸ್ರೇಲ್‌ ಮತ್ತು ಹಮಾಮ್‌ ಉಗ್ರರ ನಡುವಿನ ಯುದ್ಧ ಹೀಗೆಯೇ ಮುಂದುವರಿದರೆ ಭಾರತದ ಮಾರುಕಟ್ಟೆಯ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರಿ, ವಿದೇಶೀ ಬಂಡವಾಳ ಹೂಡಿಕೆಯ ಒಳ ಹರಿವಿಗೆ ಗಣನೀಯ ಪ್ರಮಾಣದಲ್ಲಿ ಅಡ್ಡಿಯಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಯಾವುದಾದರೊಂದು ಉತ್ಪನ್ನದ ವಿಷಯದಲ್ಲಿ ಸಮಸ್ಯೆಯಾಯಿತು ಎಂದಾದರೆ ಸರಣಿ ಪ್ರತಿಕ್ರಿಯೆಯಂತೆ ಅದು ಮಿಕ್ಕ ಮಗ್ಗಲುಗಳಿಗೂ ಚಾಚಿಕೊಳ್ಳುವುದು ಸರ್ವೆ ಸಾಮಾನ್ಯ ಬೆಳವಣಿಗೆ. ಅದರಲ್ಲೂ ವಾಣಿಜ್ಯ ಚಟುವಟಿಕೆ ಮತ್ತು ಸಾಗಾಣಿಕೆ ವಲಯದ ಜೀವನಾಡಿಯೇ ಆಗಿರುವ ಕಚ್ಚಾತೈಲ ಬೆಲೆ ಹೆಚ್ಚಿದರಂತೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತದೆ. ಇದರಿಂದಾಗಿ ದಿನಬಳಕೆಯ ವಸ್ತುಗಳು ಮತ್ತು ಬಹುತೇಕ ಎಲ್ಲ ಉತ್ಪನ್ನಗಳ ಬೆಲೆಯಲ್ಲೂ ಹೆಚ್ಚಳವಾಗುತ್ತದೆ. ಕಚ್ಚಾ ತೈಲದ ಬೆಲೆಯೇರಿಕೆಯು ಜಾಗತಿಕವಾಗಿ ಹಣದುಬ್ಬರಕ್ಕೆ ಕಾರಣವಾಗುವುದರಿಂದ ಮಧ್ಯಪ್ರಾಚ್ಯ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನ, ಅಮೆರಿಕದಂತಹ ದೇಶಗಳಲ್ಲಿ ಆಮದು ಹಣದುಬ್ಬರವೂ ಅನಿವಾರ್ಯವಾಗುತ್ತದೆ. ಒಂದೊಮ್ಮೆ ಯಾದವೀ ಕಲಹವು ಭಾವನಾತ್ಮಕ ಕಾರಣಗಳಿಂದ ಸಮಾನ ಮನಸ್ಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಇದರ ಕಬಂಧ ಬಾಹುಗಳು ಚಾಚಿದರೆ ಜಗತ್ತಿನ ಮಿಕ್ಕ ರಾಷ್ಟ್ರಗಳಿಗೂ ಸಂಕಷ್ಟ ನಿರ್ವಿವಾದ. ಜಗತ್ತಿನ ಮೂರನೇ ಒಂದರಷ್ಟು ತೈಲ ಪೂರೈಕೆ ಈ ಭಾಗದಿಂದ ನಡೆಯುತ್ತದೆ. ಒಂದೊಮ್ಮೆ ತೈಲೋತ್ಪನ್ನ ರಾಷ್ಟ್ರ ಇರಾನ್‌ ಮತ್ತಿತರ ರಾಷ್ಟ್ರಗಳಿಗೆ ಯುದ್ಧ ವ್ಯಾಪಿಸಿದರೆ ಇಡೀ ಜಾಗತಿಕ ಆರ್ಥಿಕತೆಯ ಮೇಲೆ ಕರಿಛಾಯೆ ಮೂಡಲಿದೆ ಮತ್ತು ಜಾಗತಿಕವಾಗಿ ಹಣದುಬ್ಬರ ತಾರಕಕ್ಕೇರಲಿದೆ.

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ಸಂಘರ್ಷವು ಮಧ್ಯಪ್ರಾಚ್ಯ ವಲಯದ ಮಿಕ್ಕ ದೇಶಗಳಿಗೂ ವ್ಯಾಪಿಸಿದಲ್ಲಿ ಷೇರು ಪೇಟೆಗಳ ಮೇಲೆ ಇನ್ನಷ್ಟು ನಕಾರಾತ್ಮಕ ಪರಿಣಾಮ ಬೀರಿ ಚಟುವಟಿಕೆಗಳಲ್ಲಿ ಅನಪೇಕ್ಷಿತ ಬೆಳವಣಿಗೆಯಾಗಬಹುದು. ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈಗಾಗಲೇ ತಮ್ಮ ವರಮಾನದ ಮುನ್ನೋಟವನ್ನು ತಗ್ಗಿಸಿರುವುದು ಈ ನಿಟ್ಟಿನಲ್ಲಿ ಸಾಕಷ್ಟು ಸೂಚ್ಯರ್ಥವನ್ನು ನೀಡುತ್ತದೆ. ಎಲ್ಲ ಆಗುಹೋಗುಗಳ ನಡುವೆ ಜಾಗತಿಕವಾಗಿ ಗುರಿಗಿಂತ ಹೆಚ್ಚಿನ ಮಟ್ಟದ ಹಣದುಬ್ಬರ, ಬಿಗಿಯಾದ ಸಾಲದ ಪರಿಸ್ಥಿತಿಗಳು, ನಿರುದ್ಯೋಗ, ಇಸ್ರೇಲ್‌-ಹಮಾಸ್‌ ಸಂಘರ್ಷದಿಂದ ಜಾಗತಿಕ ಪೂರೈಕೆ ಸರಪಳಿ ಮೇಲೆ ಬೀಳಲಿರುವ ಪರಿಣಾಮ, ಭೌಗೋಳಿಕ, ರಾಜಕೀಯ ಆಘಾತಗಳು, ಹವಾಮಾನ ವೈಪರೀತ್ಯ ಮತ್ತಿತರ ಮಹತ್ತರ ಸವಾಲುಗಳು ಇಡೀ ಜಗತ್ತನ್ನು ಕಾಡುತ್ತಿವೆ. ಇವೆಲ್ಲವನ್ನೂ ಮೆಟ್ಟಿನಿಲ್ಲಲು ಭಾರತ ಸಹಿತ ವಿಶ್ವ ರಾಷ್ಟ್ರಗಳು ಸಫ‌ಲವಾದಲ್ಲಿ ಆರ್ಥಿಕತೆ ಮತ್ತಷ್ಟು ಪ್ರಗತಿಯನ್ನು ಕಾಣಲು ಸಾಧ್ಯ.

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

 

Advertisement

Udayavani is now on Telegram. Click here to join our channel and stay updated with the latest news.

Next