Advertisement

ಕೊನೆಗೂ ಅಂತ್ಯ ಕಂಡ ಸಕ್ಕರೆ ಸಂಘರ್ಷ

03:55 PM Nov 25, 2018 | |

ಬಾಗಲಕೋಟೆ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಪದೇ ಪದೇ ಹೇಳುತ್ತಿದ್ದರೂ ಕಬ್ಬಿನ ಬೆಲೆಗಾಗಿ ರೈತರು, ಸಕ್ಕರೆ ಕಾರ್ಖಾನೆಗಳ ವಿರುದ್ಧ ಹೋರಾಟ ನಡೆಸುವುದು ಪ್ರತಿವರ್ಷ ಸಾಮಾನ್ಯವಾಗಿದೆ. ಈ ವರ್ಷ ನಡೆದ ಸುದೀರ್ಘ‌ ಒಂದು ತಿಂಗಳ ರೈತರ ಹೋರಾಟ ಕೊನೆಗೊಂಡಿದ್ದು, ಕಳೆದ ವರ್ಷ ಕಬ್ಬು ಪೂರೈಸಿದ್ದ ರೈತರಿಗೆ ಟನ್‌ಗೆ 2500 ರೂ. ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ.

Advertisement

ಹೌದು, ಜಿಲ್ಲೆಯಲ್ಲಿ 2.40 ಲಕ್ಷ ಹೆಕ್ಟೇರ್‌ ಕಬ್ಬು ಬೆಳೆಯುವ ಪ್ರದೇಶವಿದೆ. ಅದನ್ನು ನಂಬಿಕೊಂಡೇ ಜಿಲ್ಲೆಯಲ್ಲಿ 11 ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿವೆ. ಆದರೆ, ಕಬ್ಬು ಬೆಲೆ ನಿಗದಿ ವಿಷಯದಲ್ಲಿ ಪ್ರತಿ ವರ್ಷ ಸಂಘರ್ಷ- ಹೋರಾಟ ನಡೆಯುತ್ತಲೇ ಇದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಸ್‌ಎಪಿ (ಸ್ಟೇಟ್‌ ಅಡ್ವೆ$çಜ್‌ ಪ್ರೈಜ್‌) ಕಾನೂನು ಜಾರಿಗೊಳಿಸಬೇಕು ಎಂಬುದು ರೈತ ಮುಖಂಡರ ಒತ್ತಾಯ.

ಅಂತ್ಯಕಂಡ ಸಂಘರ್ಷ: ಸಕ್ಕರೆ ಕಾರ್ಖಾನೆ ಸ್ಥಗಿತ, ಕಬ್ಬು ತುಂಬಿದ ಟ್ಯಾಕ್ಟರ್‌ಗಳಿಗೆ ಬೆಂಕಿ, ಮುಧೋಳದಲ್ಲಿ ನಿರಂತರ ಹೋರಾಟ ಹೀಗೆ ಒಂದು ತಿಂಗಳಿಂದ ಸಂಘರ್ಷದಲ್ಲಿ ಹಾದಿಯಲ್ಲಿದ್ದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಧ್ಯೆದ ಸಂಘರ್ಷ ಕೊನೆಗೂ ಅಂತ್ಯಗೊಂಡಿದೆ. ಅಳೆದು-ತೂಗಿದ ಬಳಿಕ ಸಕ್ಕರೆ ಕಾರ್ಖಾನೆಗಳು, ಕಳೆದ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭಿಸುವ ಮೊದಲು ಘೋಷಿಸಿದಂತೆ ಟನ್‌ಗೆ ರೂ. 2500 ನೀಡುವುದಾಗಿ, ಜಿಲ್ಲಾಧಿಕಾರಿಗೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿವೆ.

ಒಟ್ಟು 11 ಸಕ್ಕರೆ ಕಾರ್ಖಾನೆಗಳ ಪೈಕಿ, ಬಾಗಲಕೋಟೆ ತಾಲೂಕಿನ ನಾಯಿನೇಗಲಿ ಗ್ರಾಮದ ಇಐಡಿ ಪ್ಯಾರಿ ಸದಾಶಿವ ಶುಗರ್ ಕಾರ್ಖಾನೆ (2016-17ನೇ ಸಾಲಿನ 13.88 ಕೋಟಿ ಬಾಕಿ ಉಳಿಸಿಕೊಂಡಿದೆ), 2017-18ನೇ ಸಾಲಿಗೆ ಘೋಷಿಸಿದಂತೆ ಎಲ್ಲ ಹಣ ಪಾವತಿ ಮಾಡಿದೆ. ಉಳಿದ 11 ಕಾರ್ಖಾನೆಗಳು, ಘೋಷಿಸಿದ ಮೊತ್ತ ಕೊಡದ ಹಿನ್ನೆಲೆಯಲ್ಲಿ ರೈತರ ಹೋರಾಟ ತೀವ್ರಗೊಂಡಿತ್ತು. ಇದೀಗ ಜಮಖಂಡಿಯ ಶಾಸಕ ಆನಂದ ನ್ಯಾಮಗೌಡ ಒಡೆತನದ ಜಮಖಂಡಿ ಶುಗರ್ ಮಾತ್ರ, ಜಿಲ್ಲಾಧಿಕಾರಿಗೆ ಮುಚ್ಚಳಿಕೆ ಪತ್ರ ಕೊಟ್ಟಿಲ್ಲ. ಉಳಿದ 9 ಕಾರ್ಖಾನೆಗಳು, ಮುಚ್ಚಳಿಕೆ ಪತ್ರ ಕೊಟ್ಟಿದ್ದು, ಶುಕ್ರವಾರ ರಾತ್ರಿಯಿಂದಲೇ ಕಬ್ಬು ನುರಿಸುವುದನ್ನು ಆರಂಭಿಸಿವೆ.

9 ಕಾರ್ಖಾನೆಗಳಿಂದ ಮುಚ್ಚಳಿಕೆ: ಜಿಲ್ಲೆಯ ಮುಧೋಳದ ನಿರಾಣಿ ಶುಗರ್, ಉತ್ತೂರಿನ ಐಸಿಪಿಎಲ್‌ ಶುಗರ್, ತಿಮ್ಮಾಪುರದ ರನ್ನ ಶುಗರ್, ಸಮೀರವಾಡಿಯ ಗೋದಾವರಿ ಶುಗರ್, ಬಾಡಗಂಡಿಯ ಬೀಳಗಿ ಶುಗರ್, ಕುಂದರಗಿಯ ಜೆಮ್‌ ಶುಗರ್, ಜಮಖಂಡಿ ತಾಲೂಕಿನ ಸಿದ್ದಾಪುರದ ಪ್ರಭುಲಿಂಗೇಶ್ವರ ಶುಗರ್, ಹಿಪ್ಪರಗಿಯ ಸಾಯಿಪ್ರಿಯಾ ಶುಗರ್, ತೇರದಾಳದ ಸಾವರಿನ್‌ ಶುಗರ್ ಮಾಲೀಕರು 2017-18ನೇ ಸಾಲಿಗೆ ಕಬ್ಬು ಪೂರೈಸಿದ ರೈತರಿಗೆ ಟನ್‌ಗೆ ತಲಾ ರೂ. 2500 ದರ ನೀಡುವುದಾಗಿ ಮುಚ್ಚಳಿಕೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ನೀಡಿವೆ. ಆದರೆ, ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ಜಮಖಂಡಿ ಶುಗರ್ನಿಂದ ಮುಚ್ಚಳಿಕೆ ಪತ್ರ ನೀಡಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ಖಚಿತಪಡಿಸಿವೆ.

Advertisement

ರೈತರ ಬೇಡಿಕೆ ಏನಿತ್ತು: ಕಳೆದ ಒಂದು ತಿಂಗಳಿಂದ ರೈತರು ಕಬ್ಬು ವಿಷಯದಲ್ಲಿ ಹೋರಾಟ ನಡೆಸಲು ಪ್ರಮುಖ ಮೂರು ಕಾರಣಗಳಿದ್ದವು. 2016-17ನೇ ಸಾಲಿನ ಕೊನೆಯ ಕಂತು ತಲಾ ರೂ. 310 ಹಾಗೂ 2017-18ನೇ ಸಾಲಿಗೆ ಕಾರ್ಖಾನೆಗಳೇ ಘೋಷಿಸಿದ ರೂ. 2500 ದರ ನೀಡಬೇಕು ಹಾಗೂ 2018-19ನೇ ಸಾಲಿನ ಕಬ್ಬಿನ ದರ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸಬೇಕು ಎಂಬುದು ರೈತರ ಪ್ರಮುಖ ಒತ್ತಾಯವಾಗಿತ್ತು.

ಇದೇ ಮೂರು ಬೇಡಿಕೆಗಳಿಗಾಗಿ ಕಾರ್ಖಾನೆ ಮತ್ತು ರೈತರ ಮಧ್ಯೆ ಜಟಾಪಟಿ ಕೂಡ ನಡೆದಿತ್ತು. ಸ್ವತಃ ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಂ ಮಧ್ಯಸ್ಥಿಕೆ ವಹಿಸಿ, 2016-17ನೇ ಸಾಲಿನ ಟನ್‌ಗೆ ತಲಾ ರೂ. 310 ಕೊಡುವ ಬಾಕಿ ಸಮಸ್ಯೆ ಇತ್ಯರ್ಥಗೊಳಿಸಿದ್ದರು. ಆದರೆ, ಕಳೆದ ವರ್ಷ ಘೋಷಿಸಿದ 2500 ರೂ. ಕೊಡಲು ಕಾರ್ಖಾನೆಯವರು ಒಪ್ಪಿರಲಿಲ್ಲ. ಅವರು ಎಫ್‌ಆರ್‌ಪಿ ಅನ್ವಯ ಕಳೆದ ಸಾಲಿನ ಹಣ ಪಾವತಿ ಮಾಡಿದ್ದೇವೆ ಎಂದು ವಾದಿಸುತ್ತಿದ್ದರು. ಇದಕ್ಕೆ ರೈತರು ಒಪ್ಪದೇ, ಕಾರ್ಖಾನೆಯವರೇ ಘೋಷಿಸಿದ ದರ
ಕೊಡಿ ಎಂದು ಪಟ್ಟು ಹಿಡಿದಿದ್ದರು.

ಈ ವರ್ಷ ಒಪ್ಪಂದದ ದರ ಕೊಡಿ: ಪ್ರಸಕ್ತ ಸಾಲಿಗೆ ಕಬ್ಬು ಪೂರೈಸುವ ರೈತರಿಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ಅನ್ವಯ ದರ ನೀಡುವುದಾಗಿ ಕಾರ್ಖಾನೆಗಳು ಘೋಷಿಸಿಕೊಂಡಿವೆ. ಸಕ್ಕರೆ ಇಳುವರಿ ಪ್ರಮಾಣದ ಮೇಲೆ ಈ ದರ ನಿಗದಿಯಾಗಿದ್ದು, ಅದರಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ (ಎಚ್‌ಎನ್‌ಟಿ)ವೆಚ್ಚವನ್ನು ಕಾರ್ಖಾನೆಗಳು ಕಡಿತ ಮಾಡಿಕೊಳ್ಳುತ್ತವೆ. ಇದಕ್ಕೆ ರೈತರು ಒಪ್ಪುತ್ತಿಲ್ಲ.

ಈ ವರೆಗೆ ಎಚ್‌ಎನ್‌ಟಿ ಅನ್ನು ಕಾರ್ಖಾನೆಗಳೇ ಭರಿಸಿವೆ. ಎಲ್ಲ ಕಾರ್ಖಾನೆಯವರು, ತಮ್ಮ ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ರೈತರೊಂದಿಗೆ ಸಭೆ ನಡೆಸಿ, ಒಪ್ಪಂದದ ಬೆಲೆ ಘೋಷಣೆ ಮಾಡಿವೆ. ಈ ವರ್ಷವೂ ಎಫ್‌ಆರ್‌ಪಿ ದರವೇ ಅಂತಿಮ ಎನ್ನದೇ, ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಒಪ್ಪಂದದ ಬೆಲೆ ಘೋಷಣೆ ಮಾಡಬೇಕು ಎಂಬುದು ರೈತರ ಒತ್ತಾಯ.

ಈ ವಿಷಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಮಧ್ಯಸ್ಥಿಕೆ ವಹಿಸಿ, ಟನ್‌ ಕಬ್ಬಿಗೆ ಎಫ್‌
ಆರ್‌ಪಿ ದರದ ಜತೆಗೆ ಸರ್ಕಾರದಿಂದ 150 ಹಾಗೂ ಕಾರ್ಖಾನೆಯವರಿಂದ ತಲಾ 150 ರೂ. ಟನ್‌ಗೆ ಹೆಚ್ಚುವರಿಯಾಗಿ ಕೊಡಿಸುವುದಾಗಿ ಹೇಳಿದ್ದಾರೆ ಎಂದು ರೈತರು ಮುಖಂಡರು ಹೇಳುತ್ತಾರೆ. ಆದರೆ, ಈ ಹಣ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಕಾರ್ಖಾನೆಗಳಿಂದಲೇ ರೈತರಿಗೆ ಸೂಕ್ತ ದರ ಕೊಡಿಸಬೇಕು ಎಂಬುದು ರೈತರ ಒತ್ತಾಯ.

ಒಟ್ಟಾರೆ, ಕಳೆದೊಂದು ತಿಂಗಳಿಂದ ನಡೆದಿದ್ದ ಕಾರ್ಖಾನೆ ಮತ್ತು ರೈತರ ಮಧ್ಯದ ಸಂಘರ್ಷ ಅಂತ್ಯಕಂಡಿದೆ. ಆದರೆ, ಪ್ರತಿವರ್ಷವೂ ರೈತರು ಕಬ್ಬಿನ ಬೆಲೆಗಾಗಿ ಹೋರಾಟ-ಸಂಘರ್ಷಕ್ಕಿಳಿಯದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.

ಕಬ್ಬು ಬೆಳೆಗಾರರಿಂದ ಕೃತಜ್ಞತಾ ಸಭೆ
ಮುಧೋಳ: ದಿ| ರಮೇಶ ಗಡದನ್ನವರ ವೇದಿಕೆಯಲ್ಲಿ ಕಬ್ಬು ಬೆಳೆಗಾರರ ಹೋರಾಟಗಾರರು ಹಲವು ದಿನಗಳಿಂದ ನಡೆಸುತ್ತಿದ್ದ ಹೋರಾಟ ಸರ್ಕಾರದ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿರುವ ಹಿನ್ನೆಲೆಯಲ್ಲಿ ನ. 25ರಂದು ಮಧ್ಯಾಹ್ನ 12 ಗಂಟೆಗೆ ಕೃತಜ್ಞತಾ ಸಭೆ ನಡೆಯಲಿದೆ ಎಂದು ಕಬ್ಬು ಬೆಳೆಗಾರರ ಹೋರಾಟಗಾರರ ಮುಖಂಡರಾದ ಕೆ.ಟಿ. ಪಾಟೀಲ ಹಾಗೂ ಉದಯ ಸಾರವಾಡ ತಿಳಿಸಿದ್ದಾರೆ. ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ಕೆಲವು ಆರೋಪ-ಪ್ರತ್ಯಾರೋಪ, ಕೆಲವು ಅಹಿತಕರ ಘಟನೆ ನಡೆದವು. ಅವುಗಳನ್ನು ಎಲ್ಲರೂ ಮರೆತು ಒಂದಾಗುವ ಉದ್ದೇಶದಿಂದ ಕೃತಜ್ಞತಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

ಎಫ್‌ಆರ್‌ಪಿ ದರದಿಂದ ರೈತರಿಗೆ ಅನ್ಯಾಯವಾಗುತ್ತದೆ. ಒಂದೊಂದು ಕಾರ್ಖಾನೆಯ ಸಕ್ಕರೆ ಇಳುವರಿ ಪ್ರಮಾಣ ಬೇರೆ ಬೇರೆ ಇವೆ. ಅದೇ ಮಾನದಂಡದಡಿ ಕಬ್ಬಿಗೆ ದರ ಕೊಟ್ಟರೆ, ಜಿಲ್ಲೆಯ ಒಂದು ಭಾಗದ ರೈತರಿಂದ ಮತ್ತೂಂದು ಭಾಗದ ರೈತರಿಗೆ ವ್ಯತ್ಯಾಸದ ದರ ದೊರೆಯುತ್ತದೆ. ಹೀಗಾಗಿ ರಾಜ್ಯದಲ್ಲಿ ಎಸ್‌ಎಪಿ ಕಾಯ್ದೆ ಜಾರಿಗೊಳಿಸಬೇಕು. ಅಲ್ಲದೇ ನಾವು ಒಂದು ತಿಂಗಳಿಂದ ಹೋರಾಟ ನಡೆಸಿದ ಬಳಿಕ ಕಾರ್ಖಾನೆಯವರು, 2500 ರೂ. ನೀಡಲು ಒಪ್ಪಿದ್ದಾರೆ. ಇಷ್ಟೊಂದು ಸತಾಯಿಸುವುದು ಅಗತ್ಯವಿರಲಿಲ್ಲ. ಪ್ರಸಕ್ತ ವರ್ಷದ ದರ ಘೋಷಣೆ ಮಾಡಬೇಕು. 
 ಮುತ್ತಪ್ಪ ಕೋಮಾರ,
ಜಿಪಂ ಉಪಾಧ್ಯಕ್ಷ ಹಾಗೂ ರೈತ ಮುಖಂಡ 

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next