Advertisement

ಚುಂಚಘಟ್ಟ ಕೆರೆ ಸೇರುತ್ತಿದೆ ಹೊಲಸು!

11:00 AM Jan 24, 2020 | Suhan S |

ಬೆಂಗಳೂರು: ದೂರದಿಂದ ನೋಡುವುದಕ್ಕೆ ಸ್ವಚ್ಛ-ಸುಂದರ ಕೆರೆ. ತಿಳಿ ಹಸಿರು ಬಣ್ಣ, ಆಗಾಗ ಅದರಲ್ಲಿ ಮುಳುಗಿ ಏಳುವ ಪಕ್ಷಿಗಳು. ಅಲ್ಲಲ್ಲಿ ಕಾಣಸಿಗುವ ಗಿಡ-ಮರಗಳು. ಇವಿಷ್ಟೂ ಹೋಗಿಬರುವವರನ್ನು ಕೈಬೀಸಿ ಕರೆಯುತ್ತದೆ. ಹಾಗಂತ ನೀವು ಹತ್ತಿರ ಹೋದರೆ, ಕ್ಷಣಾರ್ಧದಲ್ಲಿ ಅದರಿಂದ ಹೊರಹೊಮ್ಮುವ ದುರ್ನಾತ ದೂರ ತಳ್ಳುತ್ತದೆ!

Advertisement

-ಚುಂಚಘಟ್ಟ ಕೆರೆಯ ಚಿತ್ರಣ ಇದು. ಆರು ತಿಂಗಳ ಹಿಂದಷ್ಟೇ ಪಾಲಿಕೆ ಕೋಣನಕುಂಟೆ ವಾರ್ಡ್‌ ವಾಪ್ತಿಯಲ್ಲಿರುವ 23ಎಕರೆ ವಿಸ್ತೀರ್ಣದ ಚುಂಚಘಟ್ಟ ಕೆರೆಯನ್ನು ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಕೆರೆಗೆ ಈ ಭಾಗದ ವಸತಿ ಸಮುತ್ಛಯಗಳು ಹಾಗೂ ಜಲ ಮಂಡಳಿಯ ಪೈಪ್‌ಗ್ಳ ಮೂಲಕ ಒಳಚರಂಡಿ ನೀರು ಸೇರುತ್ತಿದೆ. ಇದರಿಂದ ಪಾಲಿಕೆ ಶ್ರಮ ಈಗ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ಮನಸ್ಸು ಮಾಡಿದರೆ, ಹೀಗೆ ಅಭಿವೃದ್ಧಿಪಡಿಸಿದ ಈ ಕೆರೆಗೆ ಸ್ಥಳೀಯರು ಮತ್ತಷ್ಟು ಕೈಜೋಡಿಸಿ ಗಿಡಗಳನ್ನು ನೆಟ್ಟು ಭವಿಷ್ಯದಲ್ಲಿ ಸುತ್ತಲಿನ ಕಾಂಕ್ರೀಟ್‌ ಕಾಡಿಗೆ “ಲಂಗ್‌ ಸ್ಪೇಸ್‌’ ಆಗಿ ಪರಿವರ್ತಿಸಬಹುದು. ಆದರೆ, ಬದಲಿಗೆ ಅದರ ಕತ್ತುಹಿಸುಕುವ ಕೆಲಸ ನಡೆಯುತ್ತಿದೆ. “ಕೆರೆಗೆ ವಸತಿ ಸಮುತ್ಛಯಗಳ ನೀರು ಹರಿದುಬರುತ್ತಿರುವ ಬಗ್ಗೆ ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. 15ಕ್ಕೂ ಹೆಚ್ಚು ಮನೆಗಳ ಒಳಚರಂಡಿ ನೀರು ನೇರವಾಗಿ ಕೆರೆಗೆ ಸೇರುತ್ತಿದ್ದು, ಇಲ್ಲಿ ಉಸಿರಾಡುವುದಕ್ಕೂ ತೊಂದರೆಯಾಗುತ್ತಿದೆ’ ಎಂದು ಸ್ಥಳೀಯ ಕೃಷ್ಣ ಪ್ಪ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಶೌಚಾಲಯ ನೀರು: ಕೋಣನಕುಂಟೆ ವಾರ್ಡ್‌ನ ವಸತಿ ಪ್ರದೇಶಗಳ ಶೌಚಾಲಯದ ನೀರು ನೇರವಾಗಿ ಕೆರೆಯ ಒಡಲು ಸೇರುವಂತೆ ಪೈಪ್‌ ಲೈನ್‌ ಅಳವಡಿಸಲಾಗಿದೆ. ಒಳ ಚರಂಡಿ ನೀರು ಹರಿದುಹೋಗುವ ಪೈಪ್‌ಗ್ಳು ಒಡೆದುಹೋಗಿದ್ದು, ಈ ಭಾಗದ ವಸತಿ ಪ್ರದೇಶಗಳ ಮುಂದೆಯೇ ಹರಿದು ಹೋಗುತ್ತಿದೆ. ಇದನ್ನು ತಪ್ಪಿಸಲು ಪೈಪ್‌ಗ್ಳನ್ನು ಅಳವಡಿಸಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ, ಈ ಪೈಪ್‌ಗ್ಳ ಸಂಪರ್ಕ, ಕೆರೆಗೆ ನೀಡಲು ಅನುಮತಿ ನೀಡಿದವರು ಯಾರು ಎನ್ನುವ ಬಗ್ಗೆ ಪಾಲಿಕೆ ಮತ್ತು ಸ್ಥಳೀಯರು ಉತ್ತರ ನೀಡುತ್ತಿಲ್ಲ.

ಜಲ ಮಂಡಳಿ ಹೊಣೆ?: “ಕೆರೆ ಈ ರೀತಿ ಹಾಳಾಗುವುದಕ್ಕೆ ಜಲ ಮಂಡಳಿ ಅಧಿಕಾರಿಗಳೇ ನೇರ ಹೊಣೆ. ವಸತಿ ಸಮುತ್ಛಯಗಳಿಂದ ನೀರು ಬರುತ್ತಿರುವ ಬಗ್ಗೆ ಹಲವು ಬಾರಿ ಎಚ್ಚರಿಸಲಾಗಿದೆ’ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳು ಆರೋಪಿಸುತ್ತಾರೆ. “ಬ್ರಿಗೇಡ್‌ ಗಾಡೇನಿಯಾ ಎಂಬ ಅಪಾರ್ಟ್‌ಮೆಂಟ್‌ನಿಂದ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವ ಬಗ್ಗೆ ಜಲಮಂಡಳಿ ಗಮನಕ್ಕೆ ತರಲಾಗಿದೆ. ಜತೆಗೆ ರಾಜಕಾಲುವೆ ಮಾರ್ಗಗಳ ಮೂಲಕ ಕೆರೆಗೆ ನೀರು ಹರಿಸಲು ಅಳವಡಿಸಲಾಗಿರುವ ಪೈಪ್‌ಗ್ಳಲ್ಲೂ ಒಳಚರಂಡಿ ನೀರು ಹರಿದುಬರುತ್ತಿದೆ. ಈ ಕುರಿತು ಮಂಡಳಿಗೆ ಪತ್ರ ಬರೆಯಲಾಗಿದೆ. ಸಮಸ್ಯೆ ಬಗೆಹರಿಸಲು ತಿಂಗಳ ಕಾಲಾವಕಾಶವನ್ನೂ ಅದು ಕೋರಿದೆ’ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಇದಲ್ಲದೆ, ಹೀಗೆ ಒಳಚರಂಡಿ ನೀರು ಸೇರುವುದನ್ನು ಸಂಪೂರ್ಣವಾಗಿ ತಡೆಯುವಂತೆ ಹಾಗೂ ಕೆರೆಯನ್ನು ಮೊದಲ ಸ್ಥಿತಿಗೆ ತರುವಂತೆ ಸೂಚನೆ ನೀಡಲಾಗಿದೆ’ ಎಂದೂ ಅವರು ಸಮಜಾಯಿಷಿ ನೀಡಿದರು.

ಕೆರೆಗೆ ಒಳಚರಂಡಿ ನೀರು ಬಿಟ್ಟವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ಜಲಮಂಡಳಿಯಿಂದ ಲೋಪವಾಗಿದ್ದರೂ ಕ್ರಮಕ್ಕೆ ಸೂಚಿಸಲಾಗಿದೆ.  –ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಕೆರೆ ಅಭಿವೃದ್ಧಿಯಲ್ಲೂ ಲೋಪ : ಚುಂಚಘಟ್ಟ ಕೆರೆ ಅಭಿವೃದ್ಧಿ ಮಾಡುವುದಕ್ಕೆ ಎರಡು ವರ್ಷಗಳ ಕಾಲಾವಕಾಶ ತೆಗೆದುಕೊಳ್ಳಲಾಗಿತ್ತು. ಆದರೆ, ಪ್ರಾಣಿ-ಪಕ್ಷಿಗಳಿಗೆ ಪೂರಕವಾಗಿ ಕೆರೆಯನ್ನು ಅಭಿವೃದ್ಧಿ ಮಾಡಿಲ್ಲ ಎಂದು ನೀರಿನ ಹಕ್ಕಿಗಾಗಿ ಜಲಾಂದೋಲನ ಸದಸ್ಯ ರಾಘವೇಂದ್ರ ಪಚ್ಚಾಪುರ ಆರೋಪಿಸುತ್ತಾರೆ. ಕೆರೆ ಪಥ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇಲ್ಲಿನ ಪ್ರಮುಖ ಸಸಿ ಮತ್ತು ಮರಗಳನ್ನು ಕಡಿಯಲಾಗಿದೆ. ಹೀಗಾಗಿ, ಇಲ್ಲಿಗೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಈಗ ಕೆರೆಗೆ ವಿಷಯುಕ್ತ ಅಂಶಗಳ ಜತೆಗೆ ವಿಷಯುಕ್ತ ಪಾಚಿ ಅಂಶ (ಅಲ್‌ಗ‌ಲ್‌ ಬ್ಲೂಮ್‌) ಸಹ ಸೇರುತ್ತಿದೆ. ಹೀಗಾಗಿ, ಕೆರೆಯಲ್ಲಿ ಆಮ್ಲಜನಕ ಪ್ರಮಾಣ ಕುಸಿಯುತ್ತಿದೆ. ಇದರಿಂದ ಜಲಚರಗಳಿಗೆ, ಪಕ್ಷಿಗಳಿಗೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next