Advertisement

ಮಕ್ಕಳ ಮನೋವಿಕಾಸಕ್ಕೆ ಚಲನಚಿತ್ರೋತ್ಸವ ಪೂರಕ

09:05 PM Jul 12, 2019 | Team Udayavani |

ಚಿಕ್ಕಬಳ್ಳಾಪುರ: ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುವುದರ ಜೊತೆಗೆ ಮನೋವಿಕಾಸಕ್ಕೆ ಮಕ್ಕಳ ಚಲನಚಿತ್ರೋತ್ಸವಗಳು ಹೆಚ್ಚು ಪರಿಣಾಮ ಬೀರುತ್ತವೆ. ದೃಶ್ಯ ಮಾಧ್ಯಮದ ಪ್ರಭಾವ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವಂತ ಚಿತ್ರಗಳ ವೀಕ್ಷಣೆಗೆ ಹೆಚ್ಚು ಅವಕಾಶ ಕಲ್ಪಿಸಿ ಕೊಡಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಆರತಿ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಗರದ ಬಿ.ಬಿ ರಸ್ತೆಯ ಬಾಲಾಜಿ ಚಿತ್ರ ಮಂದಿರದಲ್ಲಿ ಶುಕ್ರವಾರ ಮಕ್ಕಳ ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒತ್ತಡ ನಿವಾರಣೆ: ಪೋಷಕರು, ಶಿಕ್ಷಕರು ಹಾಗೂ ಪಠ್ಯ ಕ್ರಮದ ಒತ್ತಡದಲ್ಲಿರುವ ಮಕ್ಕಳಿಗೆ ಮನರಂಜನೆ ಕೂಡ ತುಂಬಾ ಅಗತ್ಯವಾಗಿದೆ. ಸದಾಭಿರುಚಿಯ ಸಿನಿಮಾ ವೀಕ್ಷಣೆಯಿಂದ ಮಕ್ಕಳಿಗೆ ಮನರಂಜನೆ ಜತೆಗೆ ಒತ್ತಡ ಕಡಿಮೆಯಾಗುತ್ತದೆ ಎಂದರು.

ಸಮಾಜದ ಸ್ವಾಸ್ಥ್ಯ ಕಾಪಾಡಡಲಿ: ಚಲನಚಿತ್ರಗಳ ವೀಕ್ಷಣೆ ತಪ್ಪಲ್ಲ. ಚಿತ್ರಗಳಿಂದ ಒಳ್ಳೆಯದನ್ನು ಸ್ವೀಕರಿಸಬೇಕು. ಕೆಟ್ಟದ್ದನ್ನು ಕೈ ಬಿಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸದಾಭಿರುಚಿಯ ಚಲನಚಿತ್ರಗಳು ಬರುತ್ತಿಲ್ಲ. ಸಾಮಾಜಿಕ ಅನಿಷ್ಠತೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವಂತ ಸಮಾಜದ ಸ್ವಸ್ಥ್ಯವನ್ನು ಕಾಪಾಡುವಂತ ಚಿತ್ರಗಳು ಸಮಾಜಕ್ಕೆ ಅವಶ್ಯಕ ಎಂದರು.

ಶಾಲಾ ಹಂತದಲ್ಲಿ ಮಕ್ಕಳು ತಾನು ಮಾಡುವುದಕ್ಕಿಂತ ಅನುಕರಣೆ ಭಾವ ಹೆಚ್ಚಿರುತ್ತದೆ. ಸಾಧಕರ ಬಗ್ಗೆ ತೋರಿಸುವಂತ ಚಿತ್ರಗಳನ್ನು ಮಕ್ಕಳ ವೀಕ್ಷಣೆಗೆ ಅನುವು ಮಾಡಿಕೊಡುವುದರಿಂದ ಮಕ್ಕಳ ಮನಸ್ಸು ಕೂಡ ಬದಲಾಗುತ್ತದೆ. ಸಮಾಜದ ಪರವಾಗಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

Advertisement

ಉತ್ತಮ ಅಂಶ ಪಾಲಿಸಿ: ಚಿಕ್ಕಬಳ್ಳಾಪುರ ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ ಮಾತನಾಡಿ, ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಒತ್ತಡವನ್ನು ದೂರಮಾಡಿ ಸರಿ ದಾರಿಯಲ್ಲಿ ನಡೆಯುವಂತೆ ತಿದ್ದುವ ಕೆಲಸವನ್ನು ಸಿನಿಮಾ ಮಾಡುತ್ತವೆ. ಮಕ್ಕಳು ಚಿತ್ರದಲ್ಲಿರುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಶಿಕ್ಷಣ ಇಲಾಖೆ ಪ್ರತಿ ವರ್ಷ ಮಕ್ಕಳಿಗೆ ಚಿತ್ರೋತ್ಸವವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಕೇವಲ ಚಿತ್ರ ಮಂದಿರಗಳಲ್ಲಿ ಮಾತ್ರ ಚಿತ್ರ ವೀಕ್ಷಣೆ ಮಾಡದೇ ಶಾಲೆಗಳಲ್ಲಿ ಕೂಡ ತಿಂಗಳಿಗೊಮ್ಮೆ ಶಿಕ್ಷಕರು ಮಾನವೀಯ ಘಟನೆಗಳನ್ನು ಆಧಾರಿಸಿ ಚಿತ್ರೀಕರಿಸಿರುವ ಸಿನಿಮಾಗಳನ್ನು ಮಕ್ಕಳಿಗೆ ತೋರಿಸುವುದರಿಂದ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮನ ಪರಿವರ್ತನೆ: ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಶಾಂತಲಾ ಮಾತಾನಾಡಿ, ಇಂದಿನ ಸಮಾಜದಲ್ಲಿ ನೈತಿಕ ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಮಕ್ಕಳಲ್ಲಿ ಚಿಕ್ಕ ವಯಸ್ಸಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಕಲಿಸುವಂತಹ ಚಿತ್ರಗಳನ್ನು ತೋರಿಸುವುದರಿಂದ ಅವರ ಮನ ಪರಿವರ್ತನೆ ಆಗುತ್ತದೆ. ಇದರಿಂದ ಅವರು ಸಮಾಜದಲ್ಲಿ ಉನ್ನತಿ ಹೊಂದಲು ಅನುಕೂಲವಾಗುತ್ತದೆ ಎಂದರು. ಚಿತ್ರಗಳು ಕೇವಲ ಕಲಾತ್ಮಕವಾಗಿ ಇರದೇ ಹೃದಯಕ್ಕೆ ನಾಟುವಂತ ನೈಜ ಘಟನೆಗಳನ್ನು ಆಧಾರಿಸಿರುವ ಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕೆಂದರು.

ಮಕ್ಕಳ ಚಿತ್ರ ಸಂಸ್ಥೆಯ ವ್ಯವಸ್ಥಾಪಕ ಎಸ್‌.ರಮೇಶ್‌, ಬಾಲಾಜಿ ಚಿತ್ರಮಂದಿರದ ವ್ಯವಸ್ಥಾಪಕ ವೇಣು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಚಿತ್ರಮಂದಿರದ ಸಿಬ್ಬಂದಿ, ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಮಕ್ಕಳ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

13 ಚಿತ್ರ ಮಂದಿರಗಳಲ್ಲಿ ಚಿತ್ರೋತ್ಸವ: ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯ ಆರು ತಾಲೂಕಿನ 13 ಚಲನ ಚಿತ್ರಮಂದಿರಗಳಲ್ಲಿ ಜುಲೈ 12 ರಿಂದ 18 ರವರೆಗೆ (ಭಾನುವಾರ ಹೊರತುಪಡಿಸಿ) ಬೆಳಗ್ಗೆ 8 ರಿಂದ 10 ರವರೆಗೆ ಚಲನ ಚಿತ್ರಗಳು ಪ್ರದರ್ಶನಗೊಳ್ಳಲಿವೆ. 3ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರೋತ್ಸವ ವೀಕ್ಷಣೆಗೆ ಆದ್ಯತೆ ನೀಡಲಾಗಿದೆ. ಒಬ್ಬ ವಿದ್ಯಾರ್ಥಿಗೆ 15 ರೂ. ಶುಲ್ಕ ನಿಗದಿಪಡಿಸಲಾಗಿದೆ. ನಿತ್ಯ 8,255 ಶಾಲಾ ಮಕ್ಕಳು ವಿವಿಧ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಪುಟಾಣಿ ಸಫಾರಿ, ರಾಮರಾಜ್ಯ ಚಿತ್ರ ಪ್ರದರ್ಶನ: ಜಿಲ್ಲಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಲ್ಲಿ ರಾಜ್ಯ ಮಕ್ಕಳ ಚಿತ್ರ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಚಲನಚಿತ್ರೋತ್ಸವದಲ್ಲಿ ಪ್ರತಿ ದಿನ ಪುಟಾಣಿ ಸಫಾರಿ ಹಾಗೂ ರಾಮರಾಜ್ಯ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಆರತಿ ತಿಳಿಸಿದರು. ವಿದ್ಯಾರ್ಥಿಗಳು ಕೇವಲ ಸಿನಿಮಾವನ್ನು ವೀಕ್ಷಣೆಗೆ ಸೀಮಿತಗೊಳಿಸದೇ ಅವುಗಳಲ್ಲಿನ ಒಳ್ಳೆಯ ವಿಚಾರಗಳನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next