Advertisement

ಸಮಾಜ ಸಮೃದ್ಧಗೊಳಿಸಿದ್ದು ಫುಲೆ

11:51 AM Jan 04, 2018 | |

ಶಹಾಬಾದ: ವೈಚಾರಿಕ ಚಿಂತನೆ, ತ್ಯಾಗ ಮನೋಭಾವನೆಯಿಂದ ಭಾರತೀಯ ಸಮಾಜವನ್ನು ಸಮೃದ್ಧಗೊಳಿಸಿದ ಸಾವಿತ್ರಿಬಾಯಿ ಪುಲೆ ದೇಶ ಕಂಡ ಮಹಾನ್‌ ಮಹಿಳೆ ಹಾಗೂ ಮೊದಲ ಶಿಕ್ಷಕಿ ಎಂದು ಎಐಎಂಎಸ್‌ಎಸ್‌ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಡಾ|
ಸೀಮಾ ದೇಶಪಾಂಡೆ ಹೇಳಿದರು.

Advertisement

ಬುಧವಾರ ನಗರದ ಆಸ್ಪಲ್ಲಿ ಪ್ರೌಢಶಾಲೆಯಲ್ಲಿ ಎಐಡಿವೈಒ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಸಾವಿತ್ರಿಬಾಯಿ ಫುಲೆ ಅವರ 187ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಕೇವಲ 13ನೇ ವಯಸ್ಸಿನಲ್ಲಿಯೇ ಮದುವೆಯಾದ ಸಾವಿತ್ರಿಬಾಯಿಗೆ ಅಕ್ಷರ, ಪುಸ್ತಕ ಜ್ಞಾನವಿರಲಿಲ್ಲ. ವಿದ್ಯೆ ಕಲಿಯಬೇಕೆಂಬ ಆಸೆ ಇತ್ತು. ಇವರ ಆಸೆಗೆ ಒತ್ತಾಸೆಯಾಗಿ ನಿಂತವರು ಆ ಕಾಲಕ್ಕೆ ಪ್ರಗತಿಪರ ಚಿಂತನೆಯ ಅವರ ಪತಿ ಜ್ಯೋತಿಬಾ ಫುಲೆ. ಇವರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಶಿಕ್ಷಣ ಪಡೆದರು. ಆಗಿನ ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಮೊದಲ ಶಿಕ್ಷಕಿಯ ತರಬೇತಿ ಪಡೆದು 17ನೇ ವಯಸ್ಸಿಗೆ ಶಿಕ್ಷಕಿಯಾದರು ಎಂದರು.

ಮಹಿಳೆ ಸಬಲಳಾಗಬೇಕೆಂದರೆ ಅವಳಿಗೆ ಶಿಕ್ಷಣ ನೀಡುವುದು ಅಗತ್ಯವೆಂದು ಅರಿತು ಶಿಕ್ಷಣ ನೀಡಲು ಪ್ರಾರಂಭಿಸಿದರು ಜ್ಯೋತಿಬಾ. ಆಗ ಪಟ್ಟಭದ್ರರಿಗೆ, ಸಂಪ್ರದಾಯಸ್ಥರು ಇವರ ಕಾರ್ಯ ಸಹಿಸಲಾಗದೇ ಕಾಟ ನೀಡಲು ಪ್ರಾರಂಭಿಸಿದರು. ಆದರೂ ಎದೆಗುಂದದೆ ಬಿಡೇವಾಡದಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ನಿರ್ಲಕ್ಷಿತ ಬಾಲಕಿಯರಿಗೆ, ಅವಕಾಶ ವಂಚಿತ ಹೆಣ್ಣು ಮಕ್ಕಳಿಗಾಗಿ ಹಾಗೂ ದಿಕ್ಕೆಟ್ಟ ಸ್ತ್ರೀಯರಿಗೆ ಶಾಲೆ ಆರಂಭಿಸಿ ಹೊಸ ಇತಿಹಾಸವನ್ನೇ ಬರೆದರು. ತಳವರ್ಗದ ಅನಕ್ಷರಸ್ಥ ಸಾವಿತ್ರಿಬಾಯಿ ಅಕ್ಷರ ಕಲಿತು, ಶಿಕ್ಷಣವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಕರುಣಾಮಯಿ ಎಂದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ನಿಂಗಣ್ಣ ಜಂಬಗಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಮೇಲ್ಜಾತಿಯಲ್ಲಿ ಜನಿಸಿದವರಲ್ಲ. ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ಆದರೂ ಶೋಷಿತ ಮಹಿಳೆಯರ ಶಿಕ್ಷಣಕ್ಕಾಗಿ, ಮಾನವೀಯ ಸಮಾಜ ನಿರ್ಮಾಣಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟವರು. ಹಾಗಾಗಿಯೇ ಇವತ್ತಿಗೂ ಮಹಾರಾಷ್ಟ್ರದಲ್ಲಿ ಸಾವಿತ್ರಿಬಾಯಿ ಫುಲೆ ಎಂದರೆ ಕ್ರಾಂತಿಯ ಕಿಡಿ ಹೊತ್ತಿಸಿದ ಮಹಾಮಾತೆ ಎಂದು ನೆನೆಯುತ್ತಾರೆ ಎಂದು ಹೇಳಿದರು.

Advertisement

ಎಐಡಿವೈಒ ನಗರ ಅಧ್ಯಕ್ಷ ಜಗನ್ನಾಥ ಎಸ್‌.ಎಚ್‌. ಮಾತನಾಡಿ, ಸಾವಿತ್ರಿಬಾಯಿ ಜೀವನಗಾಥೆ ಶಾಲಾ-ಕಾಲೇಜುಗಳ ಪಠ್ಯವಾಗಬೇಕು ಎಂದರು. ಮುಖ್ಯಶಿಕ್ಷಕಿ ಶೋಭಾ ಅರಳಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಮೇಶ ಜೋಗದನಕರ್‌ ನಿರೂಪಿಸಿದರು, ವಿಶ್ವನಾಥ ಸಿಂಘೆ ಸ್ವಾಗತಿಸಿದರು, ಶಿಕ್ಷಕಿ ಶಿಲ್ಪಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next