ಹುಬ್ಬಳ್ಳಿ: ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಹಾಗೂ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಮಂಗಳವಾರ ಬೆಳಗಿನ ಜಾವ ಇಲ್ಲಿನ ಹಳೇಹುಬ್ಬಳ್ಳಿ ಎಸ್.ಎಂ. ಕೃಷ್ಣ ನಗರ ಬಳಿಯ ಕಮಾನಗರ್ ಪಾರ್ಕ್ನ ಬಳಿ ನಡೆದಿದೆ. ದುಷ್ಕರ್ಮಿಗಳ ಕೃತ್ಯಕ್ಕೆ 6 ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಂದು ಸ್ವಿಫ್ಟ್ ಕಾರಿಗೆ ಸ್ವಲ್ಪ ನಷ್ಟವಾಗಿದೆ.
ಅಬ್ದುಲಶಾ ಎಚ್. ಬ್ಯಾಹಟ್ಟಿ ಎಂಬುವರಿಗೆ ಸೇರಿದ ಮಾರುತಿ ಸುಜುಕಿ ಕಾರು ಹಾಗೂ ನೂರ್ಅಹ್ಮದ ಮುಲ್ಲಾ, ಜಾಕೀರಹುಸೇನ ಚೌಧರಿ, ಶೇಖ ಮುಖಾರ ಬಳ್ಳಾರಿ, ರಜಾನ ಮಕಾನದಾರ ಎಂಬುವರಿಗೆ ಸೇರಿದ ಬೈಕ್ಗಳು ಬೆಂಕಿಗೆ ಆಹುತಿಯಾಗಿವೆ. ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಬೈಕ್ಗಳು, ಕಾರಿಗೆ ಬೆಂಕಿ ಹಚ್ಚಿದ್ದಲ್ಲದೆ, ಪಕ್ಕದಲ್ಲಿಯೇ ನಿರ್ಮಾಣ ಹಂತದ ಕಟ್ಟಡದ ಶೆಡ್ ಬಾಗಿಲು ಮುರಿದು ಅಲ್ಲಿದ್ದ ಬೆಲೆಬಾಳುವ ಇಲೆಕ್ಟ್ರಿಕಲ್ ಸಾಮಗ್ರಿ ಕಳುವು ಮಾಡಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿಪಿಗಳಾದ ಬಿ.ಬಿ. ಪಾಟೀಲ, ದಾವೂದಖಾನ್, ಇನ್ ಸ್ಪೆಕ್ಟರ್ ಮಾರುತಿ ಗುಳ್ಳಾರಿ ಆಗಮಿಸಿ ಪರಿಶೀಲಿಸಿದರು. ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಿಕೆ ಸದಸ್ಯ ಅಲ್ತಾಫ ಕಿತ್ತೂರ ಭೇಟಿಕೊಟ್ಟು, ವಾಹನಗಳನ್ನು ಸುಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಸುಟ್ಟ ವಾಹನಗಳಿಗೆ ವಿಮಾ ಹಣ ಕೊಡಿಸಲು ಪ್ರಯತ್ನಿಸುತ್ತೇನೆ. 20 ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇನೆ. ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದರು.