Advertisement

ತಂತಿ ತಗುಲಿ ತಾಯಿ-ಮಗಳು ದಹನ ಪ್ರಕರಣ; ಲೋಕಾಯುಕ್ತದಿಂದ ಸ್ವಯಂ ಪ್ರೇರಿತ ದೂರು ದಾಖಲು

02:23 PM Nov 23, 2023 | Team Udayavani |

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ತಾಯಿ, ಮಗು ಸಜೀವ ದಹನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸೇರಿ 7 ಮಂದಿ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿದೆ.

Advertisement

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕೆ.ಆರ್‌.ಸರ್ಕಲ್‌ನ ಬೆಸ್ಕಾಂ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರು, ಉತ್ತರ ವಲಯದ ಬೆಸ್ಕಾಂನ ಮುಖ್ಯ ಎಂಜಿನಿಯರ್‌, ಪೂರ್ವ ವೃತ್ತದ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್‌, ವೈಟ್‌ಫೀಲ್ಡ್‌ ವಿಭಾಗದ ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌, ವೈಟ್‌ಫೀಲ್ಡ್‌ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಳ್ಳಲಾಗಿದೆ.

ಹಾಗೆಯೇ ಎರಡು ವಾರಗಳಲ್ಲಿ (ಡಿ.8ರೊಳಗೆ) ಘಟನೆ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ. ಲೋಕಾಯುಕ್ತ ದೂರಿನಲ್ಲಿ ಪ್ರಮುಖವಾಗಿ ಇಂತಹ ಘಟನೆಗಳು ಕಳೆದ ಕೆಲ ವರ್ಷಗಳಿಂದ ನಡೆಯುತ್ತಲೇ ಇವೆ. ಬೆಸ್ಕಾಂ ವೆಬ್‌ಸೈಟ್‌ ಪ್ರಕಾರ 2015-16ರಿಂದ 2022ರ ಅವಧಿಯಲ್ಲಿ ಪ್ರತಿ ವರ್ಷ 200-280 ವಿದ್ಯುತ್‌ ಅವಘಢಗಳು ಸಂಭವಿಸಿವೆ.

ಈ ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಲೇ ಘಟನೆ ನಡೆದಿದೆ ಎಂಬುದು ಪತ್ತೆಯಾಗಿದೆ. ತಾಯಿ-ಮಗಳು ಬೆಸ್ಕಾಂ ಕಚೇರಿಯ 100 ಮೀಟರ್‌ ದೂರದಲ್ಲಿ ವಿದ್ಯುತ್‌ ಅವಘಡಕ್ಕೆ ಬಲಿಯಾಗಿದ್ದಾರೆ. ಹಾಗಾದರೆ ರಸ್ತೆ ಬದಿಯಿರುವ ಬೀದಿ ದೀಪ, ಮರಗಳು, ಕಟ್ಟಡಗಳು, ಟೆಲಿಫೋನ್‌ ಕಂಬ, ಟ್ರಾನ್‌ Õಫಾರ್ಮರ್‌ ಹಾಗೂ ಇತರೆಡೆ ಹಾದು ಹೋಗಿರುವ ವಿದ್ಯುತ್‌ ವೈಯರ್‌ಗಳ ನಿರ್ವಹಣೆ ಹೇಗೆ ಎಂಬುದು ಪ್ರಶ್ನೆಯಾಗಿದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ತನಿಖೆ ಹಾದಿ ತಪ್ಪಿಸಲು ಇಲಿ ಮೇಲೆ ದೋಷಣೆ

Advertisement

ಬೆಂಗಳೂರು: ತಾಯಿ, ಮಗು ಬಲಿ ಪಡೆದ ವಿದ್ಯುತ್‌ ಅವಘಡ ಪ್ರಕರಣದ ಬಗ್ಗೆ ಸಬೂಬುಗಳನ್ನು ಹೇಳುವುದು ಬಿಟ್ಟು ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದ್ದಾರೆ.

ತನಿಖೆಗೆ 4 ಸಮಿತಿ ರಚಿಸಿರುವುದಾಗಿ ಜಾರ್ಜ್‌ ಅವರೇ ಹೇಳಿದ್ದಾರೆ. ತನಿಖೆ ಮುಗಿದು ವರದಿ ಕೈ ಸೇರುವ ಮೊದಲೇ ಇಲಿ ಮೇಲೆ ಎತ್ತಿಹಾಕು ತ್ತಿರುವ ಹಿಂದಿನ ಉದ್ದೇಶವಾದರೂ ಏನು? ತನಿಖೆಯ ಹಾದಿ ತಪ್ಪಿಸುವ ಯತ್ನ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಹೀಗೆಯೇ ವರದಿ ನೀಡಲಿ ಎಂದು ಪರೋಕ್ಷವಾಗಿ ತನಿಖಾ ಸಮಿತಿಗಳ ಮೇಲೆ ಒತ್ತಡ ಹೇರಿದಂತೆ ಅಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಿಎಂ ಮಧ್ಯ ಪ್ರವೇಶಕ್ಕೆ ಆಗ್ರಹ: ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸುವುದು ಸರಿಯಲ್ಲ. ತಕ್ಷಣವೇ ಮಧ್ಯಪ್ರವೇಶಿಸಿ ಸಚಿವ ಜಾರ್ಜ್‌ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ನ್ಯಾಯ ಸಿಗುವ ತನಕ ಹೋರಾಟ: ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕೊಲೆಗಡುಕ ಸರ್ಕಾರದ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು. ಇಂಧನ ಸಚಿವರ ರಾಜೀನಾಮೆ ಪಡೆದು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವ ತನಕ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವುದು ಎಂದು ಅಶೋಕ ಎಚ್ಚರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next