Advertisement

ಅಭ್ಯರ್ಥಿಗಳ ಎದೆಯಲ್ಲಿ ಲಬ್‌.. ಡಬ್‌..

11:06 AM May 23, 2019 | Team Udayavani |

ಕೊಪ್ಪಳ: ಎರಡು ತಿಂಗಳಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಅಬ್ಬರಿಸಿದ ಅಭ್ಯರ್ಥಿಗಳ ಹಣೆ ಬರಹ ಇಂದು ನಿರ್ಧಾರವಾಗಲಿದೆ. ರಾಜಕೀಯ ರಂಗಿನಾಟದಲ್ಲಿ ಮತದಾರ ಯಾರ ಪರ ಒಲವು ತೋರಿದ್ದಾನೆ ಎನ್ನುವುದು ಇಂದು ಬಹಿರಂಗಗೊಳ್ಳಲಿದೆ. ಹುರಿಯಾಳುಗಳ ಎದೆಯಲ್ಲಿ ಈಗಾಗಲೆ ಲಬ್‌..ಡಬ್‌.. ಶುರುವಾಗಿದೆ.

Advertisement

ಹೌದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬರದ ಬಿಸಿ, ಬಿಸಿಲಿನ ತಾಪದ ಮಧ್ಯೆಯೂ ಲೋಕ ಸಮರದ ಕಾವು ಭರ್ಜರಿ ರಂಗು ಪಡೆದಿತ್ತು. ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ಆರ್ಭಟದಲ್ಲಿ ಯಾರ ಕೈ ಮೇಲಾಗಿದೆ. ಯಾರಿಗೆ ಸೋಲಾಗಲಿದೆ ಎನ್ನುವುದಕ್ಕೆ ಕ್ಷಣಗಣನೆ ಶುರುವಾಗಿದೆ.

ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣ ಕರಡಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ರಾಜಶೇಖರ ಹಿಟ್ನಾಳ ಕಣಕ್ಕಿಳಿದಿದ್ದಾರೆ. ಉಳಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಿಗಿಂತ ಕೈ-ಕಮಲದ ಅಭ್ಯರ್ಥಿಗಳ ಆರ್ಭಟವೇ ಕ್ಷೇತ್ರದಲ್ಲಿ ಜೋರಾಗಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕ್ಷೇತ್ರದ ತುಂಬೆಲ್ಲ ಟೆಂಪಲ್ ರನ್‌ ನಡೆಸಿ, ಎಲ್ಲ ಸ್ವಾಮೀಜಿಗಳನ್ನು ಭೇಟಿ ಮಾಡಿ ಮತಭೇಟೆಗೆ ಮುಂದಾಗಿದ್ದರು. ಇದರ ಬೆನ್ನಲ್ಲೇ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಇತರೆ ನಾಯಕರೊಂದಿಗೆ ಎಂಟೂ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿ ಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಕ್ಷೇತ್ರಕ್ಕೆ ಕರೆ ತಂದು ಪ್ರಚಾರ ನಡೆಸಿ ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದು, ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಇತ್ತ ಸಂಗಣ್ಣ ಕರಡಿ ಸದ್ದಿಲ್ಲದೇ ಹಾಲಿ, ಮಾಜಿ ಶಾಸಕರೊಂದಿಗೆ ಪ್ರಚಾರ ನಡೆಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯೇ ಗಂಗಾವತಿ ಕ್ಷೇತ್ರದಲ್ಲಿ ಕೇಸರಿಮಯದ ಮಾತನ್ನಾಡಿ, ಜೊತೆಗೆ ಮತ್ತೂಮ್ಮೆ ಮೋದಿ ಸರ್ಕಾರ್‌ ಎಂದಿದ್ದಾರೆ. ಬಿ.ಎಸ್‌. ಯಡಿಯೂರಪ್ಪ, ಸಿ.ಟಿ. ರವಿ, ಜಗದೀಶ ಶೆಟ್ಟರ್‌, ಈಶ್ವರಪ್ಪ, ಆರ್‌. ಅಶೋಕ ಸೇರಿದಂತೆ ಹಲವು ನಾಯಕರ ದಂಡೇ ಪ್ರಚಾರ ನಡೆಸಿದೆ. ಜೊತೆಗೆ ಲಿಂಗಾಯತ ಪ್ರಭಾವವಿರುವ ಕ್ಷೇತ್ರಗಳಲ್ಲಿ ವಿಶ್ವಾಸವನ್ನಿಟ್ಟಿರುವ ಸಂಗಣ್ಣ ಕರಡಿ ನನಗೆ ಗೆಲುವಾಗಲಿದೆ ಎನ್ನುವ ಮಾತನ್ನಾಡಿದ್ದಾರೆ.

ಕ್ಷೇತ್ರದ ಮತದಾರ ಪ್ರಭು ಅಭ್ಯರ್ಥಿಗಳ ಹಣೆ ಬರಹವನ್ನು ಮತಯಂತ್ರದಲ್ಲಿ ಭದ್ರ ಪಡೆಸಿದ್ದು, ಇನ್ನೇನು ಫಲಿತಾಂಶ ಹೊರ ಬೀಳಲಿದೆ. ಒಂದು ತಿಂಗಳಿಂದ ಮತ ಎಣಿಕೆಯ ದಿನವನ್ನೇ ಕಾಯುತ್ತಿದ್ದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಗೆ ತಳಮಳ, ಕುತೂಹಲ ಸೇರಿ ಆತಂಕ ಶುರುವಾಗಿದೆ. ನಮಗೆ ಗೆಲುವಾಗುವುದೋ? ಸೋಲಾಗುವುದೋ? ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾವ ಕ್ಷೇತ್ರಗಳು ಮುನ್ನಡೆ ಕೊಡಲಿವೆ? ಯಾವ ಕ್ಷೇತ್ರಗಳು ಹಿನ್ನಡೆಯಾಗಲಿವೆ ? ಎನ್ನುವ ಆಂತರಿಕ ಲೆಕ್ಕಾಚಾರ ಈಗಾಗಲೇ ಅಭ್ಯರ್ಥಿಗಳಿಗೆ ತಿಳಿದಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.

Advertisement

ವಿಜಯಲಕ್ಷ್ಮೀ ಯಾರಿಗೆ?: ಈ ಹಿಂದಿನ ಇತಿಹಾಸ ಅವಲೋಕಿಸಿದರೆ ಹೆಚ್ಚು ಬಾರಿ ಕಾಂಗ್ರೆಸ್‌ಗೆ ಗೆಲುವಾಗಿದೆ. ಹಿಂದಿನ 2 ಅವಧಿ ಬಿಜೆಪಿ ಹಿಡಿತ ಸಾಧಿಸಿದೆ. ಈ ಬಾರಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ? ಎನ್ನುವುದಕ್ಕೆ ಉತ್ತರ ಮೇ 23ರ ಮಧ್ಯಾಹ್ನ 1 ಗಂಟೆಗಾಗಲೇ ಹೊರ ಬೀಳುವ ಸಾಧ್ಯತೆಯಿದೆ.

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next