Advertisement

ಬೆಳೆ ವಿಮೆಗಾಗಿ ರೈತರ ಧರಣಿ ಶುರು

02:58 PM Sep 10, 2019 | Suhan S |

ಮುದ್ದೇಬಿಹಾಳ: ಸರ್ಕಾರಗಳು ವಿಮೆ ಕಂಪನಿಯವರು ಕೊಡುವ ಎಂಜಲು ಕಾಸಿಗೆ ಬಲಿಯಾಗಿ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಂ. ಮಹೇಶ್ವರಸ್ವಾಮಿ ಗಂಭೀರ ಆರೋಪ ಮಾಡಿದ್ದು ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ರೈತರ ಜೊತೆ ಚಲ್ಲಾಟ ಆಡೋದನ್ನು ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣ ನಿಲ್ಲಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

2017-18, 2018-19ನೇ ಸಾಲಿನ ಬೆಳೆ ವಿಮೆ ವಂಚಿತ ಬಸರಕೋಡ, ಕೋಳೂರ, ತಂಗಡಗಿ, ಯರಝರಿ, ಕುಂಟೋಜಿ, ತಾರನಾಳ ಭಾಗದ ಸಾವಿರಕ್ಕೂ ಹೆಚ್ಚು ರೈತರು ಇಲ್ಲಿನ ಮಿನಿ ವಿಧಾನಸೌಧ ಎದುರು ಸೋಮವಾರದಿಂದ ಪ್ರಾರಂಭಿಸಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡದೆ ಅನ್ಯಾಯ ಮಾಡಿರುವ ವಿಮೆ ಕಂಪನಿ ಮತ್ತು ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ತಪ್ಪು ವರದಿ ಕೊಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮರು ಸಮೀಕ್ಷೆ ನಡೆಸಿ ರೈತರಿಗೆ ನ್ಯಾಯ ಕೊಡಿಸಬೇಕು. ವಿಮೆ ಕಂಪನಿಯವರು ರೈತರ ವಿಷಯದಲ್ಲಿ ಗೋಲ್ಮಾಲ್ ಮಾಡಿದ್ದಾರೆ. ರೈತ ಬೆಳೆಯದಿದ್ದರೆ ಇವರು ಅನ್ನ ತಿನ್ನೋದು ಸಾಧ್ಯವೇ? ಇವರು ರೈತರನ್ನು ಹೇಗೆ ವಂಚಿಸುತ್ತಾರೆ ಅನ್ನೋದು ಗೊತ್ತಿದೆ. ತಹಶೀಲ್ದಾರ್‌ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅವೈಜ್ಞಾನಿಕವಾಗಿದೆ. ರೈತರ ಓಟು ಪಡೆಯುವ ಬುದ್ಧಿಗೇಡಿ ರಾಜಕಾರಣಿಗಳು ರೈತರ ನೆರವಿಗೆ ಧಾವಿಸಬೇಕಿದೆ. ಈ ತಾಲೂಕನ್ನು ಸರ್ಕಾರ ಬರಗಾಲ ಎಂದು ಘೋಷಿಸಿದರೂ ಅನ್ಯಾಯ ಏಕೆ? ವಿಮೆ ವಂಚಿತ ಪ್ರಕರಣ ಮರು ಪರಿಶೀಲನೆಗೆ ಅವಕಾಶ ಇದ್ದು ಅದರಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಗುರುನಾಥಗೌಡ ಬಿರಾದಾರ, ವೈ.ಎಚ್. ವಿಜಯಕರ, ಬಾಬು ಸೂಳಿಭಾವಿ ಸೇರಿದಂತೆ ಹಲವು ರೈತ ಮುಖಂಡರು ಮಾತನಾಡಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ರೈತರು ಅಶಾಂತಿ ಹಾದಿ ತುಳಿಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಧರಣಿ ನಿರತ ಸ್ಥಳಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಪ್ರತಿನಿಧಿಯಾಗಿದ್ದ ಸಹಾಯಕ ಕೃಷಿ ನಿರ್ದೇಶಕ ಎಂ.ಎನ್‌. ಯರಝರಿ, ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಚ್. ಸಿಂಗೇಗೋಳ, ಸಾಂಖ್ಯೀಕ ಇಲಾಖೆ ಸಿಬ್ಬಂದಿ, ವಿಮೆ ಕಂಪನಿ ವಿಭಾಗೀಯ ವ್ಯವಸ್ಥಾಪಕ ಪೋಳ ಅವರೊಂದಿಗೆ ಆಗಮಿಸಿ ತಹಶೀಲ್ದಾರ್‌ ವಿನಯ್‌ಕುಮಾರ ಪಾಟೀಲ ಅವರು ವಿಮೆ ಹಣ ಬಂದಿಲ್ಲ ಎಂದು ಯಾರೂ ಆರೋಪಿಸಿಲ್ಲ. ಆದರೆ ಬಂದಿದ್ದು ಪೈಸೆ ಲೆಕ್ಕದಲ್ಲಿ. ಇದು ಸಮಸ್ಯೆಯ ಸೀರಿಯಸ್‌ನೆಸ್‌ ತಿಳಿಸಿಕೊಡುತ್ತದೆ. ಹೀಗಾಗಿ ವಿಮಾ ಕಂಪನಿ ವಿಭಾಗೀಯ ವ್ಯವಸ್ಥಾಪಕರನ್ನು ಇಲ್ಲಿಗೆ ಕರೆಸಿದ್ದು ಅವರಿಂದಲೆ ಉತ್ತರ ಪಡೆದುಕೊಳ್ಳಬೇಕು ಎಂದರು.

Advertisement

ವಿಮಾ ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಪೋಳ ಮಾತನಾಡಲು ಮುಂದಾದಾಗ ರೈತರು ಗೊಂದಲ ಎಬ್ಬಿಸಿದರು. ವಿಮೆ ಏಕೆ ಬಂದಿಲ್ಲ ಅನ್ನೋದಕ್ಕೆ ಸ್ಪಷ್ಟ ಕಾರಣ ತಿಳಿಸುವಂತೆ ಒತ್ತಡ ಹೇರಿದರು. ಇದರಿಂದ ಧರಣಿ ಟೆಂಟ್‌ನಲ್ಲಿ ಗೊಂದಲ ಸೃಷ್ಟಿಯಾಗಿ ಸ್ಪಷ್ಟ ಉತ್ತರ ದೊರಕಲಿಲ್ಲ.

ಈ ಹಿಂದೆ 2-3 ಬಾರಿ ಇದೇ ವಿಷಯಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸಿದ್ದಾಗ ಸೆ. 9ರಂದು ವಿಮೆ ಕಂಪನಿ ಅಧಿಕಾರಿಗಳು ಇಲ್ಲಿಗೆ ವಿವರಣೆ ನೀಡಲಿದ್ದಾರೆ ಎಂದು ತಹಶೀಲ್ದಾರ್‌ ವಿನಯ್‌ಕುಮಾರ ಪಾಟೀಲ ಭರವಸೆ ನೀಡಿದ್ದರು. ಹೀಗಾಗಿ ಆಗೆಲ್ಲ ರೈತರು ಪ್ರತಿಭಟನೆ ಕೈ ಬಿಟ್ಟಿದ್ದರು. ಆದರೆ ಸೋಮವಾರ ವಿಮೆ ಕಂಪನಿ ಪ್ರತಿನಿಧಿ ಧರಣಿ ಟೆಂಟ್‌ಗೆ ಬಂದರೂ ರೈತರಿಗೆ ಸೂಕ್ತ ಕಾರಣ ಒದಗಿಸುವಲ್ಲಿ, ಸಮಸ್ಯೆ ಬಗೆಹರಿಸಿ ವಿಮೆ ಹಣ ದೊರಕಿಸಿಕೊಡುವಲ್ಲಿ ವಿಫಲರಾದರು. ಇದರಿಂದ ಆಕ್ರೋಶಗೊಂಡ ರೈತರು ತಮ್ಮೊಂದಿಗೆ ಮಾತುಕತೆಗೆ ಬಂದಿದ್ದ ಕೃಷಿ ಅಧಿಕಾರಿಗಳಿಗೆ, ವಿಮೆ ಕಂಪನಿ ಪ್ರತಿನಿಧಿಗೆ ಘೇರಾವ್‌ ಹಾಕಿ ಟೆಂಟ್ನಿಂದ ಕದಲದಂತೆ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಪಿಐ ರವಿಕುಮಾರ ಕಪ್ಪತ್ತನ್ನವರ್‌, ತಹಶೀಲ್ದಾರ್‌ ಅವರು ಇವರನ್ನು ಬಚಾವ್‌ ಮಾಡಿ, ರೈತರ ಮನವೊಲಿಸಿ ಸೂಕ್ತ ಉತ್ತರ ದೊರಕಿಸಿಕೊಡಲು ಕಾಲಾವಕಾಶ ಪಡೆದುಕೊಂಡರು.

ರೈತ ಸಂಘದ ಸಂಗಣ್ಣ ಬಾಗೇವಾಡಿ, ಅಯ್ಯಪ್ಪ ಕೋಳೂರ, ವೈ.ಎಲ್. ಬಿರಾದಾರ, ಹುಲಗಪ್ಪಗೌಡ ಬಿರಾದಾರ, ಲಕ್ಷ್ಮಣಗೌಡ ಬಿರಾದಾರ, ಶಿವಬಸಪ್ಪ ಪೂಜಾರಿ, ಬಸವರಾಜ ಕೋಳೂರ, ಶಾಂತಪ್ಪ ಮಾನೇಕರ, ರಾಮಣ್ಣ ಮಾದಿನಾಳ, ಶಾರದಾ ಕಾಳಣ್ಣವರ, ಸಂಗಮ್ಮ ಹಿರೇಮಠ, ಗುರುಬಾಯಿ ಬಿರಾದಾರ, ಸೋಮವ್ವ ಬಿರಾದಾರ, ಬಸರಕೋಡ ಭಾಗದ ರೈತ ಮುಖಂಡರಾದ ನಾಗರಾಜ ತಂಗಡಗಿ, ಬಾಪುಗೌಡ ಬಿರಾದಾರ, ಕೆ.ಎಸ್‌. ಕೊಟಗಿ, ವೀರೇಶ ಮಂಕಣಿ, ಶಾಂತಗೌಡ ಮೇಟಿ, ಮಲ್ಲಣ್ಣ ಮೇಟಿ, ಕರಬಸಯ್ಯ ಹಿರೇಮಠ, ರಾಚಪ್ಪ ಕೋವಣ್ಣವರ, ಗೌಡಪ್ಪಗೌಡ ಪಾಟೀಲ, ಆನಂದ ಬಿರಾದಾರ ಸೇರಿದಂತೆ ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು. ಇವರಿಗೆಲ್ಲ ಬಸರಕೋಡ ಭಾಗದ ರೈತ ಮುಖಂಡರು ಸ್ಥಳದಲ್ಲೇ ಅಡುಗೆ ತಯಾರಿಸಿ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next