ಲಕ್ಷ್ಮೇಶ್ವರ: ರೈತರು, ಶಿಕ್ಷಕರು ಮತ್ತು ಸೈನಿಕರು ದೇಶದ ಬೆನ್ನೆಲುಬಾಗಿದ್ದು, ಅವರನ್ನು ಗೌರವ ಭಾವನೆಯಿಂದ ಕಾಣುವುದು ಎಲ್ಲರ ಕರ್ತವ್ಯ ಎಂದು ರೈತ ಮುಖಂಡ ಭರಮಣ್ಣ ರೊಟ್ಟಿಗವಾಡ ಹೇಳಿದರು.
ತಾಲೂಕಿನ ಗೋವನಾಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ರೈತರು ಕೃಷಿ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸವಾಲು ಎದುರಿಸುತ್ತಿದ್ದು ತಮ್ಮ ಬೇಡಿಕೆಗಾಗಿ ಸಂಘಟಿತರಾಗಬೇಕಾಗುತ್ತದೆ. ವಿದ್ಯಾವಂತ ಯುವಕರು ಉದ್ಯೋಗ ಅರಸಿ ಬೇರೆಡೆ ಹೋಗುವುದನ್ನು ಬಿಟ್ಟು ಕೃಷಿಯತ್ತ ಚಿತ್ತ ಹರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕೃಷಿ ಉದ್ಯಮದ ರೀತಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದರು.
ನಂತರ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಗ್ರಾಮದಲ್ಲಿನ ರೈತಪರ ಹೋರಾಟಗಾರರೂ ಹಾಗೂ ಹುತಾತ್ಮ ರೈತರ ಭಾವಚಿತ್ರ ( ವೀರಗಲ್ಲು)ಕ್ಕೆ ಪೂಜೆ ನೆರವೇರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರೈತರ ಸ್ಮರಣೆ: ಸುಮಾರು 27 (1993) ವರ್ಷಗಳ ಹಿಂದೆ ಗ್ರಾಮದ ರೈತರಾದ ಫಕ್ಕೀರಗೌಡ ಮಣಕಟ್ಟಿ, ರಾಮಣ್ಣ ಹುಬ್ಬಳ್ಳಿ, ಉಡಚಪ್ಪ ವಾಲಿಕಾರ ಮೂವರು ರೈತರು ಬೆಂಗಳೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಗ್ರಾಮಸ್ಥರು ಗ್ರಾಮದ ಅಗಸಿಯಲ್ಲಿ ವೀರಗಲ್ಲು ಸ್ಥಾಪಿಸಿ ಪ್ರತಿ ವರ್ಷ ರೈತ ಹುತಾತ್ಮ ದಿನಾಚರಣೆಯಂದು ಈ ರೈತರನ್ನು ಸ್ಮರಿಸುವ ಕಾರ್ಯ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ನೇಮಕವಾದ ಮಂಜುನಾಥ ಕೆಂಚನಗೌಡ್ರ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಎಸ್.ಪಿ. ಬಳಿಗಾರ, ನಿಂಗನಗೌಡ ಮಣಿಕಟ್ಟಿ, ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಮಂಜುನಾಥ ಕೆಂಚನಗೌಡ್ರ, ನಾಗರಾಜ ದೊಡ್ಡಮನಿ, ಚಂದ್ರು ತಳವಾರ, ಸೋಮನಗೌಡ ಕೊರಡೂರ, ದಿವಾನಸಾಬ ಮಸೂತಿ, ಅಲ್ಲಿಸಾಬ ಅಗಸಿಮನಿ, ವೈ.ಡಿ. ಮರಿಲಿಂಗನಗೌಡ್ರ, ದಿವಾಕರ ಬಡಿಗೇರ ಇತರರು ಇದ್ದರು.