Advertisement

ಸಂಸದರ ಕಚೇರಿಗೆ ರೈತರ ಮುತ್ತಿಗೆ

12:37 PM Jul 17, 2017 | Team Udayavani |

ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ರೈತರು ಸಂಸದ ಪ್ರಹ್ಲಾದ ಜೋಶಿ ಅವರ ಕಚೇರಿಗೆ ರವಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರೈತ ಸೇನಾ ಉಪಾಧ್ಯಕ್ಷ ಶಂಕರಣ್ಣ ಅಂಬಲಿ, ರೈತ ಮುಖಂಡರಾದ ಶಂಕರಗೌಡ ಪಾಟೀಲ, ಗುರು ರಾಯನಗೌಡ್ರ ನೇತೃತ್ವದಲ್ಲಿ ಸಂಸದರ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಬಳಿಯ ಕಚೇರಿಗೆ ಮುತ್ತಿಗೆ ಹಾಕಿದ ರೈತ ಹೋರಾಟಗಾರರು, ಕಳೆದ 2 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಈ ಭಾಗದ ಜನಪ್ರತಿನಿಧಿಗಳು ನಿರ್ಲಕ್ಷ ತೋರುತ್ತ ಬರುತ್ತಿದ್ದಾರೆ. 

Advertisement

ಮಹದಾಯಿ ಯೋಜನೆ ಜಾರಿಗಾಗಿಯೇ ವೀರೇಶ ಸೊಬರದಮಠ ಅವರು ಸನ್ಯಾಸ ದೀಕ್ಷೆ ಸ್ವೀಕರಿಸಿದರೂ ಸರಕಾರಗಳು, ಜನಪ್ರತಿನಿಧಿಗಳು ಕಣ್ಣು ತೆರೆಯುತ್ತಿಲ್ಲ. ಇವರ ಧೋರಣೆಯಿಂದಾಗಿ ಸೊಬರದಮಠ ಇಂದಿನಿಂದ (ಜು.16) ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 

ಒಂದು ವೇಳೆ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ನಾನು ಮೃತಪಟ್ಟರೆ ಮಹದಾಯಿ ನದಿ ದಂಡೆಯ ಮೇಲೆ ನನ್ನ ಅಂತ್ಯಸಂಸ್ಕಾರ ಮಾಡಿ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಬೇಡಿ. ಯೋಜನೆ ಜಾರಿಯಾಗುವವರೆಗೂ ಮುಂದುವರಿಸಿ ಎಂದು ಕರೆಕೊಟ್ಟಿದ್ದಾರೆ. 

ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಆ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸಂಸದ ಜೋಶಿ ಅವರನ್ನು ಭೇಟಿ ಮಾಡಿ, ಕೂಡಲೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೋರಲಾಗುತ್ತಿದೆ. ಅವರು ನಮ್ಮನ್ನು ಭೇಟಿಯಾಗಲೇ ಬೇಕು ಎಂದು ಪಟ್ಟುಹಿಡಿದರು. 

ರೈತರ ಪಟ್ಟು: ಸ್ಥಳದಲ್ಲಿದ್ದ ಪೊಲೀಸ್‌ ಆಯುಕ್ತ ಪಿ.ಎಚ್‌. ರಾಣೆ, ಡಿಸಿಪಿ ರೇಣುಕಾ ಸುಕುಮಾರ, ಎಸಿಪಿ ದಾವೂದಖಾನ್‌ ಅವರು, ಸಂಸದರು ದೆಹಲಿಗೆ ತೆರಳಿದ್ದಾರೆ. ನಿಮ್ಮ ಮನವಿಯನ್ನು ನೀಡಿ, ಅವರಿಗೆ ಸಲ್ಲಿಸಲಾಗುವುದು ಎಂದರು. ಸಂಸದರು ಇಲ್ಲದಿದ್ದರೂ ಪರವಾಗಿಲ್ಲ ಬಿಜೆಪಿಯಲ್ಲಿನ ಅವರ ಆಪ್ತ ಮುಖಂಡರನ್ನಾದರೂ ಇಲ್ಲವೆ ಜಿಲ್ಲಾ ಪ್ರಭಾರಿ ಮಹೇಶ ಟೆಂಗಿನಕಾಯಿ ಅವರನ್ನು ಸ್ಥಳಕ್ಕೆ ಕರೆಯಿಸಿ ಎಂದು ರೈತ ಹೋರಾಟಗಾರರು ಪಟ್ಟುಹಿಡಿದರು. 

Advertisement

ಉಪವಾಸ ಸತ್ಯಾಗ್ರಹದ ವೇಳೆ ಸೊಬರದಮಠ ಅವರು ಅಸುನೀಗಿದರೆ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಈ ಭಾಗದ ಜನಪ್ರತಿನಿಧಿಗಳೇ ಹೊಣೆಗಾರರಾಗುತ್ತಾರೆ. ಆದ್ದರಿಂದ ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಜೋಶಿ ಅವರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಕೂಡಲೇ ಯೋಜನೆ ಜಾರಿಗೊಳಿಸಲು ಸರ್ವಪ್ರಯತ್ನ ಮಾಡಲಾಗುವುದೆಂದು ಭರವಸೆ ಕೊಟ್ಟು ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವರಿಕೆ ಮಾಡಬೇಕು. 

ಅನಾಹುತ ಸಂಭವಿಸುವ ಮೊದಲು ನಾವೆಲ್ಲ ಸೊಬರದಮಠ ಅವರನ್ನು ಉಳಿಸಿಕೊಳ್ಳಬೇಕಾಗಿದೆ. ಈ ವಿಷಯದಲ್ಲಿ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಪ್ರಧಾನಿ ಒಳ್ಳೆಯರಿದ್ದಾರೆ. ಆದರೆ ಅವರಿಗೆ ಈ ಭಾಗದ ಸಂಸದರು ಮಹದಾಯಿ ವಿಷಯವಾಗಿ ಸರಿಯಾಗಿ ಮನವರಿಕೆ ಮಾಡಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ ಸಮಸ್ಯೆ ಈಡೇರಿಸಿದರೆ ಪ್ರಧಾನಿ ಅವರನ್ನು ಪೂಜಿಸಲಾಗುವುದು ಎಂದರು. 

ಬೆಂಬಲ-ಸಹಕಾರದ ಭರವಸೆ: ಸ್ಥಳಕ್ಕಾಗಮಿಸಿದ ಮಹೇಶ ಟೆಂಗಿನಕಾಯಿ ಮಾತನಾಡಿ, ಜಗದೀಶ ಶೆಟ್ಟರ ಹಾಗೂ ಜೋಶಿ ಅವರಿಗೆ ನಿಮ್ಮ ಹೋರಾಟದ ಬಗ್ಗೆ ಮನವರಿಕೆ ಮಾಡಲಾಗುವುದು. ನೀವು ಹೋರಾಟ ಮಾಡುತ್ತಿರುವುದು ರೈತರಿಗಾಗಿ ಮಾತ್ರವಲ್ಲ ಎಲ್ಲರಿಗೂ ಅನ್ವಯಿಸುತ್ತದೆ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ, ಸಹಕಾರ ನೀಡಲಾಗುವುದು ಎಂದು ಹೇಳಿದರು. 

ನಂತರ ರೈತ ಹೋರಾಟಗಾರರು ಪ್ರತಿಭಟನೆ ಹಿಂಪಡೆದರು. ಪ್ರಹ್ಲಾದ ಮುದರಡ್ಡಿ, ಪ್ರವೀಣ ಬಂಡಿವಾಡ, ಅಶೋಕ ನೀರಲಗಿ,  ಗುರಪ್ಪ ಚವರಡ್ಡಿ, ಲಚ್ಚವ್ವ ಜ್ಯೋತಣ್ಣವರ, ಅನಸಮ್ಮ ಶಿಂಧೆ, ರತ್ನವ್ವ ಸವಳಬಾವಿ, ಗಂಗವ್ವ ಹಡಪದ ಸೇರಿದಂತೆ ಕಿರೇಸೂರ, ಬ್ಯಾಹಟ್ಟಿ, ಹೆಬಸೂರ, ಕುಸುಗಲ್ಲ ಹಾಗೂ ನರಗುಂದ ಭಾಗದ ರೈತರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next