Advertisement

ಮುಂಗಾರು ಬಿತ್ತನೆಗೆ ಸಜ್ಜಾದ ಅನ್ನದಾತ

01:33 PM May 25, 2022 | Team Udayavani |

ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಳ್ಳೆಯ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2.65 ಲಕ್ಷ ಹೆಕ್ಟೇರ್‌ ಕ್ಷೇತ್ರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಡಾ|ಚೇತನಾ ಪಾಟೀಲ ತಿಳಿಸಿದ್ದಾರೆ.

Advertisement

ಬಾದಾಮಿ ತಾಲೂಕಿನಲ್ಲಿ 57,000 ಹೆಕ್ಟೇರ್‌, ಬಾಗಲಕೋಟೆಯಲ್ಲಿ 29,000 ಹೆಕ್ಟೇರ್‌, ಬೀಳಗಿಯಲ್ಲಿ 24,425 ಹೆಕ್ಟೇರ್‌, ಹುನಗುಂದದಲ್ಲಿ 42,925 ಹೆಕ್ಟೇರ್‌, ಜಮಖಂಡಿಯಲ್ಲಿ 66,650 ಹೆಕ್ಟೇರ್‌ ಹಾಗೂ ಮುಧೋಳದಲ್ಲಿ 45,000 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಏಕದಳ ಧಾನ್ಯಗಳಲ್ಲಿ ಗೋವಿನಜೋಳ 41,700 ಹೆಕ್ಟೇರ್‌ ಕ್ಷೇತ್ರ, ಸಜ್ಜೆ 23,000 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದೆ. ದ್ವಿದಳ ಧಾನ್ಯಗಳಲ್ಲಿ ತೊಗರಿ 30,000 ಹೆಕ್ಟೇರ್‌ ಹಾಗೂ ಹೆಸರು 32,000 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇರುವುದಾಗಿ ತಿಳಿಸಿದ್ದಾರೆ.

ಎಣ್ಣೆ ಕಾಳುಗಳಲ್ಲಿ ಸೂರ್ಯಕಾಂತಿ 24000 ಹೆಕ್ಟೇರ್‌ ಹಾಗೂ ಸೋಯಾ ಅವರೆ ಅಂದಾಜು 4000 ಹೆಕ್ಟೇರ್‌ ಕ್ಷೇತ್ರದಲ್ಲಿ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಪೂರ್ವ ಮುಂಗಾರು ಹಾಗೂ ಮುಂಗಾರು ಬೆಳೆಗಳ ಬಿತ್ತನೆ ಬೀಜ ದಾಸ್ತಾನು ಮಾಡಲು ಸಂಸ್ಥೆಗಳಿಗೆ ಬೇಡಿಕೆ ನೀಡಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಹೆಸರು 262 ಕ್ವಿಂಟಲ್‌, ತೊಗರಿ 61 ಕ್ವಿಂಟಲ್‌, ಸೋಯಾ ಅವರೆ 1050 ಕ್ವಿಂಟಲ್‌ ದಾಸ್ತಾನು ಇದ್ದು, ಗೋವಿನಜೋಳ, ಸಜ್ಜೆ, ಉದ್ದು, ಸೂರ್ಯಕಾಂತಿ ಬೆಳೆಗಳನ್ನು ಸದ್ಯದಲ್ಲಿಯೇ ದಾಸ್ತಾನು ಮಾಡಿಕೊಂಡು ರೈತರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯ ಒಟ್ಟು 18 ರೈತ ಸಂಪರ್ಕ ಕೇಂದ್ರಗಳಲ್ಲದೆ ಹೆಚ್ಚುವರಿಯಾಗಿ 9 ಬಿತ್ತನೆ ಬೀಜ ಕೇಂದ್ರಗಳ ಮುಖಾಂತರ ರೈತರಿಗೆ ಬಿತ್ತನೆ ಬೀಜ ವಿತರಿಸಲು ತಯಾರಿ ಮಾಡಿಕೊಳ್ಳಲಾಗಿದೆ. ತೊಗರಿ, ಉದ್ದು, ಹೆಸರು, ಸೋಯಾ ಅವರೆ ಬೆಳೆಗಳ ಪ್ರಮಾಣಿತ ಬಿತ್ತನೆ ಬೀಜಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 25 ರೂ., ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ 37.50 ರೂ.ಗಳ ರಿಯಾಯತಿ ನಿಗ ಪಡಿಸಲಾಗಿದೆ. ಸೂರ್ಯಕಾಂತಿ ಬೆಳೆ ಸಂಕರಣ ತಳಿಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 80 ರೂ., ಪ.ಜಾತಿ ಮತ್ತು ಪ. ಪಂಗಡದ ರೈತರಿಗೆ 120 ರೂ. ಪ್ರತಿ ಕೆಜಿಗೆ‌ ರಿಯಾಯತಿ ನಿಗ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಮೆಕ್ಕೆಜೋಳದ ಸಂಕರಣ ಬೆಳೆಗಳಲ್ಲಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 20 ರೂ., ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ 30 ರೂ.ಪ್ರತಿ ಕೆಜಿಗೆ ರಿಯಾಯಿತಿಯನ್ನು ನಿಗ ಪಡಿಸಲಾಗಿದೆ. ದಾಸ್ತಾನು ಮಾಡಲಾದ ಬಿತ್ತನೆ ಬೀಜಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 57.9 ಮಿ.ಮೀ ಮಳೆ ಆಗಬೇಕಾಗಿದ್ದು, ವಾಸ್ತವಿಕವಾಗಿ 158.5 ಮಿ.ಮೀ ಮಳೆ ಆಗಿದೆ. ತಾಲೂಕುವಾರು ಬಾದಾಮಿ 124.3 ಮಿ.ಮೀ, ಬಾಗಲಕೋಟೆ 156 ಮಿ.ಮೀ, ಬೀಳಗಿ 176.7 ಮಿ.ಮೀ, ಹುನಗುಂದ 118.5 ಮಿ.ಮೀ, ಜಮಖಂಡಿ 218.2 ಮಿ.ಮೀ, ಮುಧೋಳ 200.8 ಮಿ.ಮೀ, ಗುಳೇದಗುಡ್ಡ 125.9 ಮಿ.ಮೀ, ರಬಕವಿ-ಬನಹಟ್ಟಿ 196.0 ಮಿ.ಮೀ, ಇಳಕಲ್ಲ 120.4 ಮಿ.ಮೀ ನಷ್ಟು ಮಳೆ ಆಗಿದ್ದು, ಹಂಗಾಮಿನ ಬಿತ್ತನೆ ಬೇಡಿಕೆಯನುಸಾರ ಬೀಜಗಳನ್ನು ಸರಬರಾಜು ಮಾಡಿಸಿಕೊಂಡು ವಿತರಿಸಲಾಗುವುದೆಂದು ತಿಳಿಸಿದ್ದಾರೆ.

ಬಿತ್ತನೆಗೆ ಅವಶ್ಯವಿರುವ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ರೈತ ಬಾಂಧವರು ರಸಗೊಬ್ಬರಗಳ ಖರೀದಿಯನ್ನು ಪಿಒಎಸ್‌ ಯಂತ್ರದ ಮುಖಾಂತರವೇ ಪಡೆಯಲು ಆಧಾರ ಸಂಖ್ಯೆ ನೀಡಿ ಸಹಕರಿಸಲು ರೈತರಲ್ಲಿ ಕೋರಿರುತ್ತಾರೆ. ಹೆಚ್ಚಿನ ಮಾಹಿತಿಗೆ ತಮ್ಮ ಹೋಬಳಿಯ, ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ್ದಾರೆ.

ಪ್ರಸಕ್ತ ಸಾಲಿನ ಕೃಷಿ ಇಲಾಖೆ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವ ಪ್ರಮಾಣಿತ ಸ್ವ-ಪರಾಗಸ್ಪರ್ಶಿ ಬೆಳೆಗಳಲ್ಲಿ ಬೀಜ ಬದಲಿಕೆ ಅನುಪಾತದನ್ವಯ ಒಮ್ಮೆ ಬಿತ್ತನೆ ಬೀಜಗಳನ್ನು ವಿತರಿಸಿದ ರೈತರಿಗೆ ಮುಂದಿನ ಮೂರು ವರ್ಷಗಳ ಬಳಿಕ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಮುಂಬರುವ ವರ್ಷದಲ್ಲಿ ಅಂತಹ ರೈತರಿಗೆ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗಲ್ಲ. ಒಂದು ವೇಳೆ ರೈತರು ಬೆಳೆ ಪರಿವರ್ತನೆ ಮಾಡಲು ಇಚ್ಚಿಸಿದಲ್ಲಿ ಮಾತ್ರ ಬೇರೆ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ಮುಂಬರುವ ವರ್ಷಗಳಲ್ಲಿ ವಿತರಿಸಲಾಗುವುದು ಹಾಗೂ ಈ ವ್ಯವಸ್ಥೆ ಪ್ರಕೃತಿ ವಿಕೋಪ ಉಂಟಾದ ವರ್ಷಗಳಿಗೆ ಅನ್ವಯಿಸುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರಾದ ಡಾ|ಚೇತನಾ ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next