Advertisement

ರೈತರ ಬೆಳೆಗೆ ಎಂಎಸ್‌ಪಿ ಘೋಷಣೆಗೆ ಆಗ್ರಹ

02:49 PM Apr 27, 2022 | Team Udayavani |

ರಾಯಚೂರು: ರೈತರು ಬೆಳೆದ ಎಲ್ಲ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕು, ಎಲ್ಲ ಧಾನ್ಯವನ್ನು ಸರ್ಕಾರವೇ ಖರೀದಿಸಬೇಕು. ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ವಿದ್ಯುತ್‌ ಸರಬರಾಜು ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಸಮೀಪದ ಟಿಪ್ಪು ಸುಲ್ತಾನ್‌ ಉದ್ಯಾನವನದಲ್ಲಿ ಸೇರಿದ ಸಂಘದ ಸದಸ್ಯರು, ರೈತ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ರೈತ, ಕಾರ್ಮಿಕ ಹಾಗೂ ಜನಸಾಮಾನ್ಯರ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಸರ್ಕಾರಗಳ ದುರಾಡಳಿತದ ಪರಿಣಾಮ ಇಂದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಪರಿಣಾಮ ಕೃಷಿ ಮಾಡುವುದೇ ರೈತರಿಗೆ ಕಷ್ಟವಾಗುತ್ತಿದೆ. ಡೀಸೆಲ್‌ ದರ, ರಸಗೊಬ್ಬರ ದರ, ಕೂಲಿ ದರ ಹೀಗೆ ರೈತರಿಗೆ ಖರ್ಚು ಹೆಚ್ಚಾಗುತ್ತಿದ್ದು, ಮುಕ್ತ ಮಾರುಕಟ್ಟಯಲ್ಲಿ ಧಾನ್ಯಗಳ ಬೆಲೆಯು ಕಡಿಮೆಯಿದೆ. ಇದರಿಂದ ರೈತರು ತೀವ್ರ ನಷ್ಟಕ್ಕೆ ತುತ್ತಾಗುತ್ತಿ ಎಂದು ವಿವರಿಸಿದರು.

ರೈತರ ಪಂಪ್‌ಸೆಟ್‌ಗಳಲ್ಲಿ 10 ಗಂಟೆ ನಿರಂತರ ತ್ರಿಪೇಸ್‌ ವಿದ್ಯುತ್‌ ಸರಬರಾಜು ಮಾಡಬೇಕು. ಟ್ರ್ಯಾಕ್ಟರ್‌ ಹಾಗೂ ಇತರೆ ಕೃಷಿ ಉತ್ಪನ್ನಗಳ ಎಂಆರ್‌ಪಿ ದರಗಳನ್ನು ಕಂಪನಿಗಳು ಅಧಿಕೃತವಾಗಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯನ್ನು ಮಾಡಬೇಕು, ನರೇಗಾ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ಅನ್ವಯಿಸಿ ರೈತ ಕುಟುಂಬಗಳಿಗೆ ಗೌರವಧನ ನೀಡಬೇಕು, ರಸಗೊಬ್ಬರದ ಬೆಲೆಯನ್ನು ತಗ್ಗಿಸಬೇಕು, ಪಡಿತರ ಚೀಟಿದಾರರತಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಅಡುಗೆ ಎಣ್ಣೆ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‌, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್‌, ಮುಖಂಡರಾದ ಬಸನಗೌಡ ಬಲ್ಲಟಗಿ, ಬಸನಗೌಡ ಮಲ್ಲಿಗೆಮಡಗು, ದೇವರಾಜ ನಾಯಕ, ಮಲ್ಲಪ್ಪ ಪೂಜಾರಿ, ಮಲ್ಲನಗೌಡೂರು, ಮಲ್ಲಿಕಾರ್ಜುನ ದಿನ್ನಿ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next