Advertisement

ರಾಜಕೀಯ ದೊಂಬರಾಟ ಖಂಡಿಸಿ ರೈತರ ಧರಣಿ

01:16 PM Jul 16, 2019 | Suhan S |

ತುಮಕೂರು: ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಸಹ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿ ಭಟನೆ ನಡೆಸಿದರು. ಇಲ್ಲಿನ ಟೌನ್‌ಹಾಲ್ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಮಂದಿ ರೈತರು ಸಮ್ಮಿಶ್ರ ಸರ್ಕಾರ ಹಾಗೂ ಶಾಸಕರು, ಸಚಿವರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

Advertisement

ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘದ ಆನಂದ್‌ಪಾಟೀಲ್ ಮಾತನಾಡಿ, ರಾಜ್ಯ ವಿಧಾನ ಸಭೆಯಲ್ಲಿ ಎಬ್ಬಿಸಿರುವ ಗಲಭೆಯನ್ನು ಗಮನಿಸಿದರೆ ರಾಷ್ಟ್ರದ ಮುಂದೆ ಕರ್ನಾಟಕದ ಜನತೆ ತಲೆತಗ್ಗಿಸುವಂತಹ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಮಳೆ ಆಗದೇ ಸಕಾಲಕ್ಕೆ ಬೆಳೆಯೂ ಇಲ್ಲದೆ ರೈತರು ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಾಸಕರು, ಸಚಿವ ರುಗಳು ರಾಜ್ಯದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಗಮನಹರಿಸದೆ ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆ ಗಳಿಗಾಗಿ ರಾಜಕೀಯ ದೊಂಬರಾಟದಲ್ಲಿ ಮುಳುಗಿ ರುವುದು ನಾಚಿಕೆಗೇಡಿನ ಸಂಗತಿ ಎಂದರು.

ತಮ್ಮ ಸ್ವಾರ್ಥ ಹಾಗೂ ಅಧಿಕಾರದ ಆಸೆಗಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಪ್ರಜಾಪ್ರಭುತ್ವ ವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಕತ್ತೆಗಳ ರೀತಿ ಮಾರಾಟವಾಗುತ್ತಿರುವ, ರೆಸಾರ್ಟ್‌ನಲ್ಲಿ ಮಜಾ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಎಲ್ಲ ಶಾಸಕರುಗಳಿಗೆ ಛೀ.. ಥೂ.. ಎಂದು ಉಗಿಯುವ ಚಳವಳಿ ಮಾಡುವುದರ ಮೂಲಕ ಅವರ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಬೇಕಾಗಿದೆ ಎಂದರು.

ರೆಸಾರ್ಟ್‌ ರಾಜಕಾರಣದಲ್ಲಿ ನಿರತರಾಗಿರುವ ಸಚಿವರು, ಶಾಸಕರುಗಳು ಈಗಲಾದರೂ ರಾಜ್ಯದ ಜನರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗ ಬೇಕು ಎಂದು ಒತ್ತಾಯಿಸಿದರು. ಹಸಿರು ಸೇನೆಯ ಕೆಂಕೆರೆ ಸತೀಶ್‌ ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳ ವಿರುದ್ಧವಾಗಿ ನಡೆದು ಕೊಂಡಿರುವ, ಮತದಾರರ ಆಶಯಗಳನ್ನು ನಿರ್ಲಕ್ಷಿ ಸಿರುವ, ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ರಾಜ ಕೀಯ ಪಕ್ಷಗಳಿಗೆ ಬುದ್ಧಿ ಹೇಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಐತಿಹಾಸಿಕ ಸ್ಥಳ ವಿಧಾನಸೌಧದಲ್ಲಿ ನಾಯಿಗಳ ರೀತಿಯಲ್ಲಿ ಕಿತ್ತಾಡಿಕೊಂಡು ಕರ್ನಾಟಕವನ್ನು ಇಡೀ ದೇಶವೇ ನೋಡುವಂತಾಗಿದೆ. ಮೂರು ಪಕ್ಷಗಳ ಶಾಸಕರುಗಳಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ರೆಸಾರ್ಟ್‌ಗಳನ್ನು ತೊರೆದು ಕ್ಷೇತ್ರಗಳ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು. ರಾಜೀನಾಮೆ ಕೊಟ್ಟಿರುವ ಶಾಸಕರುಗಳ ಭಾವಚಿತ್ರವಿರುವ ಫ್ಲೆಕ್ಸ್‌ ಗಳಿಗೆ ಚಪ್ಪಲಿಯಿಂದ ಹೊಡೆದು ಪೆಟ್ರೋಲ್ ಹಾಕಿ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಧನಂಜಯ ಆರಾಧ್ಯ, ದೇವರಾಜು, ಅನಿಲ್ಕುಮಾರ್‌, ಸಿದ್ದರಾಜು, ಲೋಕೇಶ್‌ ಬಂಡಿಮನೆ, ರಾಜಣ್ಣ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next