Advertisement

“ರೈತರಿಂದ ದೂರವಾದ ರೈತ ಸಂಪರ್ಕ ಕೇಂದ್ರ’

05:30 AM Jul 21, 2017 | |

ಕಿನ್ನಿಗೋಳಿ: ಕಿನ್ನಿಗೋಳಿ ಬಸ್‌ ನಿಲ್ದಾಣ ಕಾಮಗಾರಿ ವಿಳಂಬ, ಪಾರ್ಕಿಂಗ್‌ ಸಮಸ್ಯೆ, ಬಹುಗ್ರಾಮ ಕುಡಿಯವ ನೀರಿನ ಯೋಜನೆ ವಿಳಂಬ, ರೈತ ಸಂಪರ್ಕ ಕೇಂದ್ರ ಸ್ಥಾಪನೆ ಸಹಿತ ಹಲವು ಪ್ರಮುಖ ವಿಚಾರಗಳ ಬಗ್ಗೆ ನಡೆದ ವಾದ-ವಿವಾದ ಕಿನ್ನಿಗೋಳಿ ಗ್ರಾಮ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

Advertisement

ಗ್ರಾಮ ಪಂಚಾಯತ್‌ ಸಭಾಭವನದಲ್ಲಿ  ಬುಧವಾರ ಪಂಚಾಯತ್‌ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ  ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ
ಮೂಲ್ಕಿಯ ರೈತ ಸಂಪರ್ಕ ಕೇಂದ್ರ ರೈತರಿಂದ ದೂರವಾಗಿದೆ. ಅಲ್ಲಿನ ರಸ್ತೆ ಸರಿ ಇಲ್ಲ,  ಕಟ್ಟಡ ಸೋರುತ್ತಿದೆ. ಸಕಾಲದಲ್ಲಿ ಬಿತ್ತನೆ ಬೀಜ ಬರುತ್ತಿಲ್ಲ ಎಂದು ಗ್ರಾಮಸ್ಥರಾದ ವಿಲಿಯಂ ಕಾಡೋìಜ, ಗಂಗಾಧರ ದೂರಿದರು. ಕಿನ್ನಿಗೋಳಿ ಪರಿಸರದಲ್ಲಿ  ರೈತರಿಗೆ ಬೇಕಾಗುವಂತಹ ಎಷ್ಟು ಕಾರ್ಯಕ್ರಮ ಮಾಡಿದ್ದೀರಿ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ಒತ್ತಾಯಿಸಿ, ಕಿನ್ನಿಗೋಳಿಯಲ್ಲಿ  ರೈತ ಸಂಪರ್ಕ ಕೇಂದ್ರ ಶಾಖೆ ತೆರೆಯುವಂತೆ ಆಗ್ರಹಿಸಿದರು.

ಈಗ ಇರುವ  ಹಳೆ ಕಟ್ಟಡದಲ್ಲಿ ರೈತಸಂಪರ್ಕ ಕೇಂದ್ರ ಕಾರ್ಯಾರಂಭ ಮಾಡಲಾಗುತ್ತಿದೆ. ಬಿತ್ತನೆ ಕಡಿಮೆ ಪ್ರಮಾಣದಲ್ಲಿ ಬಂದಿವೆ. ಕಿನ್ನಿಗೋಳಿ ರಾಮ ಮಂದಿರಲ್ಲಿ ರೈತರ ಮಾಹಿತಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಅಧಿಕಾರಿ ಗಂಗಾದೇವಿ ತಿಳಿಸಿದರು.

ಕಿನ್ನಿಗೋಳಿ ಸೇವಾ ಸಹಕಾರಿ ಬ್ಯಾಂಕ್‌ ಮೂಲಕ ಬಿತ್ತನೆ ಬೀಜ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಳೆದ ಗ್ರಾಮ ಸಭೆಯಲ್ಲಿ ತಿಳಿಸಿದ್ದೀರಿ. ಬಳಿಕ ಯಾಕೆ ವಿತರಣೆ ಮಾಡಿಲ್ಲ  ಎಂಬ ಜೋಸೆಫ್ ಕ್ವಾಡ್ರಸ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಗಾದೇವಿ, ನಮಗೆ ಮೇಲಿನ ಅಧಿಕಾರಿಗಳು ತಿಳಿಸಿದಂತೆ ಮಾಡಿದ್ದೇವೆ ಎಂದರು.

Advertisement

ಫಾಗಿಂಗ್‌ಗೆ ಮದ್ದು ದೊರೆಯುತ್ತಿಲ್ಲ
ಪಂಚಾಯತ್‌ ವ್ಯಾಪ್ತಿಯ ಬಿತ್ತುಲ್‌ ಪರಿಸರದಲ್ಲಿ  ಸೊಳ್ಳೆ ಕಾಟವಿದ್ದು, ಫಾಗಿಂಗ್‌ ಯಾಕೆ ಮಾಡಿಲ್ಲ  ಎಂದು ದೀಪಕ್‌ ರೋಡ್ರಿಗಸ್‌ ಪ್ರಶ್ನಿಸಿದರು. ಆರೋಗ್ಯ ಇಲಾಖೆಯ ಪ್ರದೀಪ್‌ ಪ್ರತಿಕ್ರಿಯಿಸಿ, ಫಾಗಿಂಗ್‌ ಮಾಡಲು ಅದಕ್ಕೆ ಸರಿಯಾದ ಮದ್ದು ದೊರೆಯುತ್ತಿಲ್ಲ  ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಳಂಬ ಯಾಕೆ ?
2011ರಲ್ಲಿ  ಕಿನ್ನಿಗೋಳಿಯಲ್ಲಿ 18 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭ ಮಾಡಿದ್ದು ಇನ್ನೂ ಮುಕ್ತಾಯವಾಗಿಲ್ಲ, ಶುದ್ಧೀಕರಣ ಮಾಡದೆ ಹಾಗೇ ನೀರು ಬಿಡಲಾಗುತ್ತಿದೆ ಎಂದು ದೀಪಕ್‌, ಗಂಗಾಧರ್‌ ರಾವ್‌ ಹಾಗೂ ವಿಲಿಯಂ ದೂರಿದಾಗ ಉತ್ತರಿಸಿದ ಎಂಜಿನಿಯರ್‌ ವಿಶ್ವನಾಥ್‌, ಸಾಯಿ ಸುಧೀರ್‌ ಕಂಪೆನಿಯು ಕೆಲಸ ವಿಳಂಬ ಮಾಡಿದ್ದು ಅದನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಮತ್ತೆ  ಹೊಸ ಗುತ್ತಿಗೆ ಟೆಂಡರ್‌ ಹಂತದಲ್ಲಿದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಜಿ.ಪಂ.ಸದಸ್ಯ ವಿನೋದ್‌ ಬೊಳ್ಳೂರು, ಮರುಟೆಂಡರ್‌ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಆಗುತ್ತಿದೆ. ಕ್ರಮ ಕೈಗೊಂಡ ಕೂಡಲೇ ಕಾಮಗಾರಿ ವೇಗ ಪಡೆಯಲಿದೆ ಎಂದರು.ಪಿಡಿಒ ಅರುಣ್‌ ಪ್ರದೀಪ್‌ ಡಿ’ಸೋಜಾ ವಂದಿಸಿದರು.

ಪಾರ್ಕಿಂಗ್‌ ಸಮಸ್ಯೆ 
ಕಿನ್ನಿಗೋಳಿಯಲ್ಲಿ ಮುಖ್ಯ ರಸ್ತೆ ಹಾಗೂ ಇನ್ನಿತರ ಕಡೆಗಳಲ್ಲಿ  ವಾಹನ ನಿಲ್ಲಿಸಲು ಭಯ ಆಗುತ್ತದೆ. ನೋ ಪಾರ್ಕಿಂಗ್‌ ಫಲಕ ಇಲ್ಲದ ಕಡೆ ವಾಹನ ನಿಲ್ಲಿಸಿದರೂ ದಂಡ ಹಾಕಲಾಗುತ್ತಿದೆ ಎಂದು ವಲೇರಿಯನ್‌ ಸಿಕ್ವೇರ ಹಾಗೂ ದೀಪಕ್‌ ರೋಡ್ರಿಗಸ್‌ ಆರೋಪಿಸಿದರು. ಮೂಲ್ಕಿ ಠಾಣೆಯ ಉಪ ನಿರೀಕ್ಷಕ ಶಾಂತಪ್ಪ ಮಾತನಾಡಿ, ಇದು ಮಂಗಳೂರು ಉತ್ತರ ಸಂಚಾರಿ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂದಾಗ ಸಂಚಾರಿ ಠಾಣೆಯವರು ಯಾಕೆ ಸಭೆಗೆ ಬಂದಿಲ್ಲ  ಎಂದು ಗ್ರಾಮಸ್ಥರಾದ ದೀಪಕ್‌ ಪ್ರಶ್ನಿಸಿದರು. ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಪಿಡಿಒ ಅರುಣ್‌ ಪ್ರದೀಪ್‌ ಡಿ’ಸೋಜಾ ತಿಳಿಸಿದರು.

ಅಂಗಡಿ ಪರವಾನಿಗೆ ವಾದ-ಪ್ರತಿವಾದ
ಕಿನ್ನಿಗೋಳಿ- ಗೋಳಿಜೋರ ರಸ್ತೆಯ ಜನವಸತಿ ಪ್ರದೇಶದಲ್ಲಿ  ಬಾರ್‌ ನಡೆಸಲು ಪರವಾನಿಗೆ ನೀಡಲಾಗಿದ್ದು, ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ ನಿಶಾ ಮಥಾಯಸ್‌, ದೀಪಕ್‌ ಮತ್ತಿತರ‌ರ ಪ್ರಶ್ನೆಗೆ ಉತ್ತರಿಸಿದ ಪಿಡಿಒ ಅರುಣ್‌ ಪ್ರದೀಪ್‌ ಡಿ’ಸೋಜಾ, ನಾವು ಅಂಗಡಿಗೆ ಮಾತ್ರ ಪರವಾನಿಗೆ ನೀಡಿದ್ದು  ಬಾರ್‌ ಮಾಡಲು ನೀಡಿಲ್ಲ. ಅದು ಅಬಕಾರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು.  ಆದರೂ ಮಹಿಳೆಯರು ಪಟ್ಟು ಬಿಡಲಿಲ್ಲ   ಬಳಿಕ ನೋಡಲ್‌ ಅಧಿಕಾರಿ ಮಧ್ಯ ಪ್ರವೇಶ ಮಾಡಿ,  ಅಬಕಾರಿ ಇಲಾಖೆಗೆ ದೂರು ನೀಡಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next