Advertisement

ಪ್ರಸಿದ್ದ ಕರಡಿ ಕಲೆಯ ತಾಳವಾದ್ಯ ಕಲಾವಿದ ಮಡಿವಾಳಪ್ಪ ಕರಡಿ ಇನ್ನಿಲ್ಲ

07:47 PM Oct 12, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಪ್ರಸಿದ್ದ ಕರಡಿ ಕಲೆಯ ತಾಳವಾದ್ಯ ಅಪ್ರತಿಮ ಹಿರಿಯ ಕಲಾವಿದ, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ, ನೇಕಾರ ಸಮುದಾಯದ ಹಿರಿಯ ಜೀವಿ ಮಡಿವಾಳಪ್ಪ ಕರಡಿ ಅವರು ಅನಾರೋಗ್ಯ ನಿಮಿತ್ತ ಬುಧವಾರ ಇಹಲೋಕ ತ್ಯಜಿಸುವದರೊಂದಿಗೆ ಐತಿಹಾಸಿಕ ಕರಡಿ ಕಲೆಯ ತಾಳವಾದ್ಯವನ್ನು ನಿಲ್ಲಿಸಿದ್ದಾರೆ. ಈ ಮೂಲಕ ಈ ಭಾಗದ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

Advertisement

ಪಟ್ಟಣದ ಕರಡಿ ಕಲಾಮನೆತನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮುಧೋಳ ಸಂಸ್ಥಾನ ಮಾಲೋಜಿ ಘೋರ್ಪಡೆ ಕಾಲದಿಂದ ಇಂದಿನವರೆಗೂ, ಸುಮಾರು 8ನೇ ತಲೆಮಾರಿನವರೆಗೂ ಈ ಮನೆತನದಲ್ಲಿ ಕರಡಿ ಕಲೆಯು ವಂಶಪರಂಪರೆಯಾಗಿ ಬೆಳೆದು ಬಂದಿದೆ. ಇಂದಿಗೂ ಈ ಮನೆತನದಲ್ಲಿ ಹಿರಿಯ-ಕಿರಿಯ ಸೇರಿ 45 ಕ್ಕೂ ಅಧಿಕ ಕಲಾವಿದರು ಕಲಾ ಸೇವೆಯಲ್ಲಿದ್ದಾರೆ.

ಕಿರು ಪರಿಚಯ: ಮಹಾಲಿಂಗಪ್ಪ ಮತ್ತು ಕಾಳವ್ವ ಕರಡಿ ದಂಪತಿಗಳ ಮಗನಾಗಿ 1-6-1953 ರಂದು ಜನಿಸಿದ ಮಡಿವಾಳಪ್ಪನವರು ಕಿರಿಯ ವಯಸ್ಸಿನಲ್ಲಿಯೇ ಕಲಾಪ್ರಪಂಚಕ್ಕೆ ಕಾಲಿಟ್ಟರು. ದೊಡ್ಡಪ್ಪ ವೀರಭದ್ರಪ್ಪ, ಅಣ್ಣ ಚನ್ನಪ್ಪ, ಅಪ್ಪ ಮಹಾಲಿಂಗಪ್ಪ ಕರಡಿ ಅವರ ಮಾರ್ಗದರ್ಶನದಲ್ಲಿ ಕರಡಿ ಕಲೆಯನ್ನು ಕರಗತ ಮಾಡಿಕೊಂಡರು. ಅದರಲ್ಲೂ ಕರಡಿ ಕಲೆಯ ತಾಳವಾದ್ಯದಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿ ತಮ್ಮ ಜೀವನದುದ್ದಕ್ಕೂ ಕಲಾಸೇವೆ ಸಲ್ಲಿಸಿ ನಾಡಿನೆಲ್ಲಡೆ ಹೆಸರುವಾಸಿಯಾದವರು ಮಡಿವಾಳಪ್ಪ ಕರಡಿ.

1976 ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ವಜ್ರಮಹೋತ್ಸವದ ನಿಮಿತ್ಯ ನಡೆದ ಪ್ರಪ್ರಥಮ ಜಾನಪದ ಕಲಾಮಹೋತ್ಸವದಲ್ಲಿ ಪ್ರಥಮವಾಗಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ನಂತರ ಕರ್ನಾಟಕ ಸೇರಿದಂತೆ ನಮ್ಮ ದೇಶದ ಹತ್ತಾರು ರಾಜ್ಯಗಳಲ್ಲಿನ ವಿವಿಧ ಸಮ್ಮೇಳನ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ತಮ್ಮ ಜೀವನದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ್ದಲ್ಲದೇ, ಯುವ ಕಲಾವಿದರಿಗೆ ಕಲಾ ಬೋಧನೆ ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ನಿರ್ಣಾಯಕರಾಗಿ ಸೇವೆ ಸಲ್ಲಿಸಿದ ಕೀರ್ತಿ ಮಡಿವಾಳಪ್ಪ ಕರಡಿ ಅವರಿಗೆ ಸಲ್ಲುತ್ತದೆ.

ಮಡಿವಾಳಪ್ಪನವರ ಕರಡಿಯ ತಾಳವಾದ್ಯ ಕಲೆಗೆ ಬಾಗಲಕೋಟೆ ಜಿಲ್ಲಾ ರಾಜ್ಯೋತ್ಸವ, ವಿವಿಧ ಸಂಘ-ಸಂಸ್ಥೆಗಳು, ಮಠಮಾನ್ಯಗಳಿಂದ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ಸರ್ಕಾರದ ಕರ್ನಾಟಕ ಜಾನಪದ ಪರಿಷತ್ ಕೊಡಮಾಡಿದ 2004ನೇ(6-3-2004 )ಸಾಲಿನ ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2014 ರಿಂದ 2017 ರವರೆಗೆ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿಯೂ ತಮ್ಮ ಕಲಾಸೇವೆಯನ್ನು ಸಲ್ಲಿಸಿದ್ದಾರೆ. ಇವರ ಪತ್ನಿ ಕಸ್ತೂರಿಬಾಯಿ ಸೋಬಾನೆ ಪದದ ಕಲಾವಿದೆ, ಮೂರು ಮಕ್ಕಳಾದ ಶಿವಾನಂದ, ಆನಂದ, ಮಹಾಲಿಂಗ ಅವರು ಕರಡಿ ಕಲಾವಿದರಾಗಿದ್ದಾರೆ.

Advertisement

ಬೆಲ್ಲದನಾಡು-ಕಲೆಯ ತವರೂರಾದ ಮಹಾಲಿಂಗಪುರದ ಪ್ರಸಿದ್ದ ಕರಡಿ ಕಲಾವಿದ ಮಡಿವಾಳಪ್ಪ ಕರಡಿ ಅವರ ಅಕಾಲಿಕ ನಿಧನದಿಂದ ಜಾನಪದ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

-ವರದಿ : ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next