Advertisement

ನಕಲಿ ಕಂದಾಯ ಅಧಿಕಾರಿ ಎಸಿಬಿ ಬಲೆಗೆ

12:33 PM Dec 12, 2018 | |

ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಕಂದಾಯ ಅಧಿಕಾರಿ ಎಂದು ಹೇಳಿ ಸರ್ಕಾರಿ ಸೌಲಭ್ಯಗಳನ್ನು ಮಾಡಿಸಿಕೊಡುವುದಾಗಿ ತಿಳಿಸಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾನೆ. ವಿಜಯನಗರ ನಿವಾಸಿ ರಂಗರಾಜು(54) ಬಂಧಿತ ಆರೋಪಿ.

Advertisement

ಮಡಿವಾಳದ ನಿವಾಸಿಯೊಬ್ಬರು ಆದಾಯ ಧೃಢೀಕರಣ ಪ್ರಮಾಣ ಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಅವರಿಗೆ ದೂರವಾಣಿ ಕರೆ ಮಾಡಿದ್ದ ರಂಗರಾಜು, ತಾನು ಬೆಂಗಳೂರು ದಕ್ಷಿಣ ವಿಭಾಗದ ರಾಜಸ್ವ ನಿರೀಕ್ಷಕ ಎಂದು ಪರಿಚಯಿಸಿಕೊಂಡಿದ್ದಾನೆ. ಜತೆಗೆ, ಆದಾಯ ಧೃಢೀಕರಣ ಪ್ರಮಾಣ ಪತ್ರ ನೀಡಲು 900 ರೂ. ಲಂಚ ಬೇಡಿಕೆ ಇಟ್ಟಿದ್ದ.

ಈ ಕುರಿತು ದೂರದಾರರು ನೀಡಿದ ದೂರು ಆಧರಿಸಿ ಮಂಗಳವಾರ 900 ರೂ. ಲಂಚ ಸ್ವೀಕರಿಸಿದ ವೇಳೆ ಎಸಿಬಿ ದಾಳಿನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ. ಮಲ್ಲಿಕಾರ್ಜುನ್‌ ಎಂಬ ಹೆಸರಿನಲ್ಲಿ ಉಪ ತಹಶೀಲ್ದಾರ್‌ ಎಂದು ನಮೂದಾಗಿರುವ ನಕಲಿ ಗುರುತಿನ ಚೀಟಿ ಹೊಂದಿರುವುದು ಬೆಳಕಿಗೆ ಬಂದಿದ್ದು,

ನಕಲಿ ಗುರುತಿನ ಚೀಟಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆತ ಉಪತಹಶೀಲ್ದಾರ್‌ ಕಚೇರಿಯಲ್ಲಿ ಯಾವ ಅಧಿಕಾರಿ ಜತೆ ಸಂಪರ್ಕ ಸಾಧಿಸಿದ್ದ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಆರೋಪಿ ರಂಗರಾಜುವಿಗೆ ಹಣ ನೀಡಿ ಮೋಸಹೋದವರು ದೂರು ನೀಡಿದರೆ ಕ್ರಮ ವಹಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next