Advertisement

ನಕಲಿ ಐಪಿಎಸ್‌ ಅಧಿಕಾರಿ ಬಂಧನ

03:51 PM Jun 12, 2023 | Team Udayavani |

ಬೆಂಗಳೂರು: ಐಪಿಎಸ್‌ ಅಧಿಕಾರಿ ಎಂದು ಹೇಳಿಕೊಂಡು ಲಕ್ಷಾಂತರ ರೂ. ವಂಚಿಸಿದ ನಕಲಿ ಪೊಲೀಸ್‌ ಅಧಿಕಾರಿಯೊಬ್ಬ ಕಾಟನ್‌ಪೇಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಿಶುಕುಮಾರ್‌ (45) ಬಂಧಿತ. ಆರೋಪಿ ಮಲ್ಲೇಶ್ವರ ನಿವಾಸಿ ರಾಘವೇಂದ್ರ ಎಂಬವರಿಗೆ 25 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ರಾಘವೇಂದ್ರ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ದೂರುದಾರ ರಾಘವೇಂದ್ರ ಮಲ್ಲೇಶ್ವರದಲ್ಲಿ ಸ್ಟರಿಯಾಸ್‌ ಫೈನಾನ್ಸ್‌ ಸರ್ವೀಸ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕರಾಗಿದ್ದಾರೆ. ಹೇಮಂತ್‌ ನಾಯ್ಡು ಎಂಬವರು ವಿಶುಕುಮಾರ್‌ರನ್ನು ಸಿಸಿಬಿ ಡಿವೈಎಸ್ಪಿ ಎಂದು ಪರಿಚಯಿಸಿದ್ದರು. ಬಳಿಕ ಆಗಾಗ್ಗೆ ಕಚೇರಿಗೆ ಬಂದು ಪೊಲೀಸರ ಕಾರ್ಯಾಚರಣೆ, ಅವುಗಳ ಫೋಟೋಗಳನ್ನು ತೋರಿಸುತ್ತಿದ್ದ. ವಾಟ್ಸ್‌ಆ್ಯಪ್‌ಗ್ಳ ಮೂಲಕ ಕಳುಹಿಸಿ ಬಿಲ್ಡಪ್‌ ಪಡೆಯುತ್ತಿದ್ದ.

25 ಲಕ್ಷ ರೂ. ಸಾಲ ಪಡೆದಿದ್ದ ವಿಶುಕುಮಾರ್‌: ಈ ಮಧ್ಯೆ ತುರ್ತು 25 ಲಕ್ಷ ರೂ. ಬೇಕಿದೆ, ಮೂರು ತಿಂಗಳಲ್ಲಿ ವಾಪಸ್‌ ಕೊಡುವುದಾಗಿ ರಾಘವೇಂದ್ರ ಬಳಿ ಕೇಳಿದ್ದ. ಯಾವ ಕಾರಣಕ್ಕೆ ಹಣ ಎಂದು ಕೇಳಿದಾಗ, ತನ್ನ ಮದುವೆ ಇದೆ. ಅದಕ್ಕಾಗಿ ಬೇಕಿದೆ ಎಂದಿದ್ದ. ಹೀಗಾಗಿ ರಾಘವೇಂದ್ರ ಸ್ನೇಹಿತರ ಮೂಲಕ ಹಣ ಪಡೆದು 20 ಲಕ್ಷ ರೂ. ಬ್ಯಾಂಕ್‌ ಖಾತೆಗೆ ಬಳಿಕ 5 ಲಕ್ಷ ರೂ. ನಗದು ರೂಪದಲ್ಲಿ ನೀಡಿದ್ದರು. ಅಲ್ಲದೆ, 2022ರ ಡಿಸೆಂಬರ್‌ 9ರಂದು ಎಂ.ಎಸ್‌.ಬಿಲ್ಡಿಂಗ್‌ ಮುಂಭಾ ಗದ ಆಂಜನೇಸ್ವಾಮಿ ದೇವಸ್ಥಾನದಲ್ಲಿ ನಡೆದ ಆರೋಪಿಯ ಮದುವೆಗೂ ರಾಘವೇಂದ್ರ ಹಾಜರಾಗಿದ್ದರು. ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

ಖಾಲಿ ಚೆಕ್‌ಗಳನ್ನು ಹರಿದು ಹಾಕುವಂತೆ ಎಚ್ಚರಿಕೆ: ಆ ನಂತರ 2023ರ ಫೆಬ್ರವರಿಯಲ್ಲಿ ಆರೋಪಿಗೆ ಹಣ ಕೇಳಿದಾಗ, ಇಲ್ಲದ ಸಬೂಬು ಹೇಳಿ ಆರೋಪಿ ಮುಂದೂಡುತ್ತಿದ್ದ. ಕರೆ ಮತ್ತು ಸಂದೇಶ ಕಳುಹಿಸಿದಾಗ, ತಾನೊಬ್ಬ ಪೊಲೀಸ್‌ ಅಧಿಕಾರಿಯಾಗಿದ್ದು, ಎಲ್ಲ ಸಂದರ್ಭದಲ್ಲಿ ಉತ್ತರ ನೀಡಲು ಸಾಧ್ಯವಿಲ್ಲ. ಬಳಿಕ ಮಾತನಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದ. ಆ ಬಳಿಕವೂ ಯಾವುದೇ ಸ್ಪಂದನೆ ನೀಡದಿದ್ದಾಗ, ಪೊಲೀಸ್‌ ಠಾಣೆಗೆ ದೂರು ನೀಡುತ್ತೇನೆ ಎಂದು ರಾಘವೇಂದ್ರ ಹೇಳಿದ್ದರು. ಆಗ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಯಾವುದೇ ಠಾಣೆಗೆ ಹೋದರು ಪ್ರಯೋಜನವಿಲ್ಲ. ಕೊಟ್ಟಿರುವ ಖಾಲಿ ಚೆಕ್‌ಗಳನ್ನು ಹರಿದು ಹಾಕುವಂತೆ ಎಚ್ಚರಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

ವಂಚನೆಯನೇ ಕೆಲಸ ಮಾಡಿಕೊಂಡಿದ್ದ: ಕೆಲ ದಿನಗಳ ಬಳಿಕ ಈ ವಿಚಾರವನ್ನು ರಾಘವೇಂದ್ರ ತಮ್ಮ ಸ್ನೇಹಿತರ ಬಳಿ ವಿಚಾರಿಸಿದಾಗ, ಆತ ನಕಲಿ ಪೊಲೀಸ್‌ ಅಧಿಕಾರಿ ಎಂಬುದು ಗೊತ್ತಾಗಿದೆ. ಅಲ್ಲದೆ, ಈತ ಕೆಲವರಿಗೆ ತಾನು ಐಪಿಎಸ್‌ ಅರ್ಜನ್‌, ಇನ್ನು ಕೆಲವರಿಗೆ ಎಸಿಪಿ ವಿಶುಕುಮಾರ್‌ ಎಂದು ಹೇಳಿಕೊಂಡು ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಸಿಸಿಬಿಗೆ ದೂರು ನೀಡಿದ್ದರು. ಬಳಿಕ ಕಾಟನ್‌ ಪೇಟೆ ಠಾಣೆ ಪೊಲೀಸರು ಕೇಸ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಯಾವುದೇ ಕೆಲಸಕ್ಕೆ ಹೋಗದೆ ಇದೇ ರೀತಿ ವಂಚನೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ವರ್ಗಾವಣೆ ದಂಧೆ ನಡೆಸುತ್ತಿದ್ದ ಆರೋಪಿ: ತಾನೂ ಐಪಿಎಸ್‌ ಅಧಿಕಾರಿ, ತನ್ನ ಹೆಸರು ಅರ್ಜುನ್‌ ಅಥವಾ ಭವನ್‌ ವಿ.ಕುಮಾರ್‌ ಎಂದು ಪರಿಚಯಿಸಿ ಕೊಳ್ಳುತ್ತಿದ್ದ. ಬಳಿಕ ವರ್ಗಾವಣೆ ದಂಧೆ ಮಾಡುತ್ತಿದ್ದ. ಅಲ್ಲದೆ, ತನ್ನ ಸಂಬಂಧಿಕರು ಹಿರಿಯ ಐಪಿಎಸ್‌ ಅಧಿಕಾರಿ ಗಳಿದ್ದಾರೆ. ಅವರ ಮೂಲಕ ವರ್ಗಾವಣೆ ಮಾಡಿಸಿಕೊಡುತ್ತೇನೆ ಮತ್ತು ಒಳ್ಳೆ ಕಡೆ ಪೋಸ್ಟಿಂಗ್‌ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಈತನ ಮಾತಿಗೆ ಮರುಳಾದ ಕೆಲವು ಪೊಲೀಸರು ಪೋಸ್ಟಿಂಗ್‌ ಮಾಡಿಕೊಡಲು ಹಣ ನೀಡಿದ್ದಾರೆ. ಹೀಗೆ ಒಂದೂವರೆ ಕೋಟಿಗೂ ಅಧಿಕ ಹಣ ಪಡೆದಿದ್ದಾನೆ ಎಂದು ಹೇಳಲಾಗಿದೆ. ಹಣ ಪಡೆದ ಬಳಿಕ ಪೋಸ್ಟಿಂಗ್‌ ವಿಚಾರ ಕೇಳಿದಾಗ ಸಬೂಬು ಹೇಳುತ್ತಿದ್ದ ಎಂಬುದು ಗೊತ್ತಾಗಿದೆ.

ಪ್ರಕರಣ ಸಿಸಿಬಿಗೆ! : ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆದರೆ, ಆರೋಪಿ ಪೊಲೀಸರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ವಂಚಿಸಿದ್ದರಿಂದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಪ್ರಕರಣ ವರ್ಗಾವಣೆಯಾಗಲಿದೆ. ಇದೇ ರೀತಿ ಎಷ್ಟು ಜನರಿಗೆ ವಂಚಿಸಿದ್ದಾನೆ? ಯಾರಿಗೆಲ್ಲ ವಂಚಿಸಿದ್ದಾನೆ? ಇತರೆ ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next