Advertisement

“ಗ್ರಾಮವಾಸ್ತವ್ಯ’ದತ್ತ  ಮತ್ತೆ ಮುಖ ಮಾಡಿದ ಎಚ್‌ಡಿಕೆ

02:30 AM Jul 13, 2017 | Harsha Rao |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ “ಗ್ರಾಮವಾಸ್ತವ್ಯ’ಕ್ಕೆ ಮುಂದಾಗಿದ್ದಾರೆ. ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ವರ್ಚಸ್ಸು ವೃದ್ಧಿ ಹಾಗೂ ಜನಪ್ರಿಯತೆಗೆ ಕಾರಣವಾದ “ಗ್ರಾಮವಾಸ್ತವ್ಯ’ ಮತ್ತೆ ಆರಂಭಿಸಿ ಆ ಮೂಲಕ ಪಕ್ಷಕ್ಕೆ ಗ್ರಾಮೀಣ ಭಾಗದಲ್ಲಿ ಜನಬೆಂಬಲ ಪಡೆಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

Advertisement

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಆಷಾಢ ಕಳೆದ ನಂತರ ಒಂದೂವರೆ ತಿಂಗಳ ಕಾಲ ಪ್ರವಾಸ ಕೈಗೊಂಡು “ಗ್ರಾಮವಾಸ್ತವ್ಯ’ ನಡೆಸಿ ಜನರ ಕುಂದು ಕೊರತೆ ಆಲಿಸುವ ಜತೆಗೆ ಗ್ರಾಮೀಣ ಮತದಾರರನ್ನು
ಪಕ್ಷದತ್ತ ಸೆಳೆಯಲು ಯೋಜನೆ ರೂಪಿಸಿದ್ದಾರೆ. ರಾಜ್ಯ ಬಜೆಟ್‌ ನಂತರ ಗ್ರಾಮವಾಸ್ತವ್ಯ ಪ್ರಾರಂಭಿಸಲು ಕುಮಾರಸ್ವಾಮಿ ಸಿದ್ಧತೆ ನಡೆಸಿ ಹುಬ್ಬಳ್ಳಿಯಲ್ಲಿ ಅದೇ ಕಾರಣಕ್ಕೆ ಮನೆ ಸಹ ಮಾಡಿದ್ದರು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಇದೀಗ ಗ್ರಾಮವಾಸ್ತವ್ಯ ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು
ಮೂಲಗಳು ತಿಳಿಸಿವೆ.

ಹೈ-ಕ ಭಾಗದ ಯಾದಗಿರಿ, ಕಲಬುರಗಿ, ಬೀದರ್‌, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಗ್ರಾಮವಾಸ್ತವ್ಯ ಮಾಡಲು ನಿರ್ಧರಿಸಲಾಗಿದೆ. ಗ್ರಾಮವಾಸ್ತವ್ಯ ಸಂದರ್ಭದಲ್ಲೇ ರಾಯಚೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ, ಹುಬ್ಬಳ್ಳಿ ಅಥವಾ
ಹಾವೇರಿಯಲ್ಲಿ ಯುವಕರ ಸಮಾವೇಶ, ವಿಜಯಪುರದಲ್ಲಿ ರೈತರ ಸಮಾವೇಶ ಸಹ ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕೂ ಮುನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಜತೆಗೂ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಮತ್ತೂಂದು ಮೂಲಗಳ ಪ್ರಕಾರ, “ಗ್ರಾಮವಾಸ್ತವ್ಯ’ವು ಪ್ರಜ್ವಲ್‌ ರೇವಣ್ಣ ಹೇಳಿಕೆಯಿಂದ ಪಕ್ಷಕ್ಕೆ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಪ್ರಯತ್ನವೂ ಆಗಿದೆ. ಪ್ರಜ್ವಲ್‌ ಹೇಳಿಕೆ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಪೆಟ್ಟು
ಕೊಟ್ಟಿರುವುದರಿಂದ ಬಲ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮವಾಸ್ತವ್ಯ ಆರಂಭಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಮೈಸೂರು ಭಾಗಕ್ಕೆ ಅನಿತಾ ನಾಯಕತ್ವ:
ಎಚ್‌.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯದತ್ತ ಹೊರಟರೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯ ಹೊಣೆಗಾರಿಕೆ ಅನಿತಾ ಕುಮಾರಸ್ವಾಮಿ ವಹಿಸಿಕೊಳ್ಳಲಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಮುಂದಿನ
ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಯಕೆಯಿಂದ ಈಗಾಗಲೇ ಭೂಮಿಕೆ ಸಿದ್ಧಪಡಿಸಿಕೊಂಡಿರುವ ಅನಿತಾ ಕುಮಾರಸ್ವಾಮಿ, ರಾಮನಗರ ಜಿಲ್ಲಾದ್ಯಂತ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಚನ್ನಪಟ್ಟಣದಲ್ಲಿ
ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಮನೆ ಸಹ ಮಾಡಲು ತೀರ್ಮಾನಿಸಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ಪತಿ ಕುಮಾರಸ್ವಾಮಿಗೆ ನೆರವಾಗುವಂತೆ ಎಚ್‌.ಡಿ. ದೇವೇಗೌಡರು ಅನಿತಾಗೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಜತೆಗೆ ಮುಂದಿನ ದಿನಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ,
ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಪಕ್ಷ ಸಂಘಟನೆಗೆ ಇಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಜಿಟಿಡಿ ಸಮಾಧಾನಿಸಿದ್ದು ಅನಿತಾ ಕುಮಾರಸ್ವಾಮಿ
ಪಕ್ಷದ ಚಟುವಟಿಕೆಗಳನ್ನು ನಿಧಾನಕ್ಕೆ ಹಿಡಿತಕ್ಕೆ ಪಡೆಯುತ್ತಿರುವ ಅನಿತಾ ಕುಮಾರಸ್ವಾಮಿ, ಎಚ್‌.ವಿಶ್ವನಾಥ್‌ ಪಕ್ಷಕ್ಕೆ
ಬಂದರೆ ಹುಣಸೂರು ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಸಾಧ್ಯವಾಗುವು ದಿಲ್ಲ ಎಂದು ಮುನಿಸಿಕೊಂಡಿದ್ದ
ಮಾಜಿ ಸಚಿವ ಜಿ.ಟಿ.ದೇವೇಗೌಡರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ. ಮೈಸೂರಿನಲ್ಲಿ ಜಿಟಿಡಿ ಮನೆಗೆ ಭೇಟಿ
ನೀಡಿದ್ದ ಅವರು ನಿಮ್ಮ ಮಗನ ಭವಿಷ್ಯದ ಜವಾಬ್ದಾರಿ ನಮಗೆ ಬಿಡಿ ಎಂದು ಸಮಾಧಾನ ಮಾಡಿದ್ದರು ಎಂದು
ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next