Advertisement

ಅಹಿಂದ ಮತಗಳ ಮೇಲೆ ಕಣ್ಣು

02:41 PM May 03, 2018 | |

ಕೋಲಾರ: ಅಹಿಂದ ಸಮಾವೇಶದ ಹೆಸರಿನಲ್ಲಿ ಜಿಲ್ಲೆಗೆ ಕಾಲಿಟ್ಟು ಎರಡು ಬಾರಿ ಶಾಸಕರಾಗಿದ್ದ ವರ್ತೂರು ಪ್ರಕಾಶ್‌ ಈಗ ಒಕ್ಕಲಿಗ ಮುಖಂಡರನ್ನು ನಂಬಿ ಮತ ಯಾಚಿಸುತ್ತಿದ್ದರೆ, ಅಹಿಂದ ಮತದಾರರನ್ನು ಕಡೆಗಣಿಸಿ ಸತತ ಎರಡು ಬಾರಿ ಸೋಲು ಅನುಭವಿಸಿದ್ದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಈ ಬಾರಿ ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಜೆಡಿಎಸ್‌ ಪರ ಪ್ರಚಾರ ನಡೆಸುತ್ತಿರುವುದು ಕೋಲಾರ ಕ್ಷೇತ್ರದ ಮಹತ್ತರ ಬದಲಾವಣೆಯಾಗಿದೆ.

Advertisement

ಅಹಿಂದ ಚಳವಳಿ ಹುಟ್ಟಿದ ನಂತರ ಕೋಲಾರ ಜಿಲ್ಲೆಯ ಅಹಿಂದ ಮತದಾರರಲ್ಲಿ ರಾಜಕೀಯ ಜಾಗೃತಿ ಉಂಟಾಗಿದ್ದು, ಅಹಿಂದ ಮತದಾರರು ಎಚ್ಚರಿಕೆಯಿಂದ ಮತ ಚಲಾವಣೆ ಮಾಡುತ್ತಿರುವುದನ್ನು ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಪ್ರತಿ ಚುನಾವಣಾ ಫ‌ಲಿತಾಂಶ ದೃಢೀಕರಿಸುತ್ತಿತ್ತು.

ಆದರೆ, ಕೋಲಾರ ಜಿಲ್ಲಾ ರಾಜಕೀಯ ಚಿತ್ರಣ ಬದಲಾಗಿರುವುದನ್ನು ಗಮನಿಸದೇ ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಕೇವಲ ತಮ್ಮ ಒಕ್ಕಲಿಗ ಸಮುದಾಯದ ಮುಖಂಡರನ್ನು ಮಾತ್ರ ಮುಂದಿಟ್ಟುಕೊಂಡು ಮತ ಯಾಚಿಸುವ ಮೂಲಕ ಸತತವಾಗಿ ಎರಡು ಬಾರಿ ಸೋಲನುಭವಿಸಿದ್ದರು. 

ದಲಿತರ ಮನೆಗೆ ಹೋಗಿ ಮತ ಯಾಚನೆ: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಕೆ.ಶ್ರೀನಿವಾಸಗೌಡ ಈ ಬಾರಿ ತಮ್ಮ ಪ್ರಚಾರ ಶೈಲಿಯನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಅಹಿಂದ ಮತದಾರರನ್ನು ಅದರಲ್ಲೂ ದಲಿತ ಮುಖಂಡರ ಮನೆ ಬಾಗಿಲಿಗೇ ಹೋಗಿ ಕೈಮುಗಿದು ಮತ ಯಾಚಿಸುತ್ತಿರುವುದು ಜೆಡಿಎಸ್‌ ಪ್ರಚಾರದಲ್ಲಿ ಆಗಿರುವ ಬಹುದೊಡ್ಡ ಬದಲಾವಣೆಯಾಗಿದೆ. 

ಅಹಿಂದ ಮುಖಂಡರ ಅಸಮಾಧಾನ: ಆದರೆ, ಅಹಿಂದ ಹೆಸರಿನಲ್ಲಿಯೇ ಮತದಾರರನ್ನು ಸೆಳೆದು ಎರಡು ಬಾರಿ ಶಾಸಕರಾಗಿದ್ದ ಆರ್‌.ವರ್ತೂರು ಪ್ರಕಾಶ್‌ ಈ ಬಾರಿ ಕೇವಲ ಗ್ರಾಮಾಂತರ ಪ್ರದೇಶದ ಒಕ್ಕಲಿಗ ಮುಖಂಡರನ್ನು ನಂಬಿಕೊಂಡು ಮತಯಾಚನೆ ಮಾಡುತ್ತಿರುವುದು ಸಹಜವಾಗಿಯೇ ಅಹಿಂದ ಮುಖಂಡರು ಹಾಗೂ ಮತದಾರರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. 

Advertisement

2013ರ ಚುನಾವಣೆಯಲ್ಲಿ ಒಕ್ಕಲಿಗ ಮತದಾರರೊಂದಿಗೆ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು ಚುನಾವಣೆ ಎದುರಿಸಿದ್ದ ಕೆ.ಶ್ರೀನಿವಾಸಗೌಡ ಮತ್ತೂಮ್ಮೆ ವಿಫ‌ಲವಾಗಿ ಸೋಲನ್ನು ಒಪ್ಪಿಕೊಂಡಿದ್ದರು. ಆದರೆ, ಮೂರನೇ ಪ್ರಯತ್ನದಲ್ಲಿ ಹಿಂದಿನ ಎಲ್ಲಾ ತಪ್ಪುಗಳನ್ನು ಅರ್ಥ ಮಾಡಿಕೊಂಡಂತಿರುವ ಕೆ.ಶ್ರೀನಿವಾಸಗೌಡ ಚುನಾವಣಾ ತಂತ್ರಗಾರಿಕೆಯನ್ನು ಬದಲಾಯಿಸಿದ್ದಾರೆ. ಒಂದೆಡೆ ಚುನಾವಣಾ ಕಣದಲ್ಲಿ ಒಕ್ಕಲಿಗ ಅಭ್ಯರ್ಥಿಗಳು ಇಲ್ಲದಂತೆ ನೋಡಿಕೊಂಡಿದ್ದಲ್ಲದೆ, ಒಕ್ಕಲಿಗ ಮತಗಳನ್ನು ಮುಖಂಡರ ಮೂಲಕ ಕ್ರೋಢೀಕರಿಸುತ್ತಿದ್ದಾರೆ. ಒಕ್ಕಲಿಗರೇ ಚುನಾವಣೆ ಪ್ರಚಾರ ಕಾರ್ಯದ ಸಾರಥ್ಯ ವಹಿಸಿದ್ದರೂ, ಅಹಿಂದ ವರ್ಗಗಳ ಮುಖಂಡರ ಮನೆ ಬಾಗಿಲಿಗೆ ಇದೇ ಮೊದಲ ಬಾರಿಗೆ ತೆರಳಿ ಅವರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೂರು ದಿನಗಳ ಹಿಂದೆ ದಲಿತ ಮುಖಂಡರ ಸಭೆ ಕರೆದು ಬೆಂಬಲ ಯಾಚಿಸುವುದರ ಜೊತೆಗೆ ಹಿಂದೆ ದಲಿತರನ್ನು ದೂರ ವಿಟ್ಟು ರಾಜಕೀಯ ಮಾಡಿದ್ದಕ್ಕೆ ಬೇಷರತ್‌ ಆಗಿ ಕ್ಷಮೆ ಯಾಚಿಸಿ ಆಗಿರುವ ತಪ್ಪು ಮರುಕಳಿಸದಂತೆ ವಾಗ್ಧಾನ ಮಾಡಿದ್ದಾರೆ.

ಆದರೆ, ಇದೇ ಅವಧಿಯಲ್ಲಿ ಹಾಲಿ ಶಾಸಕ ವರ್ತೂರು ಪ್ರಕಾಶ್‌ ಈ ಬಾರಿ ತನ್ನ ಪ್ರಚಾರ ಶೈಲಿಯನ್ನು ಬದಲಾಯಿಸಿಕೊಂಡಿದ್ದು, ನಮ್ಮ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬೆಗ್ಲಿ ಸೂರ್ಯ ಪ್ರಕಾಶ್‌ ಮುಂದಾಳತ್ವದಲ್ಲಿ ಒಕ್ಕಲಿಗ ಮುಖಂಡರ ಮೂಲಕ ಮತದಾರರ ಮನವೊಲಿಸುವ ಕಾರ್ಯ ನಡೆಸುತ್ತಿದ್ದಾರೆ. ಕ್ಷೇತ್ರದ ಪ್ರಮುಖ ಒಕ್ಕಲಿಗ ಮುಖಂಡರ ಮನೆ ಬಾಗಿಲಿಗೆ ತೆರಳುತ್ತಿರುವ ವರ್ತೂರು ಪ್ರಕಾಶ್‌ ತಾವು ಒಕ್ಕಲಿಗರ ವಿರೋಧಿಯಲ್ಲ ಎಂಬ ಸಂದೇಶವನ್ನು ರವಾನಿಸುತ್ತಾ ಮತ ಗಳಿಕೆಗೆ ಯತ್ನಿಸುತ್ತಿದ್ದಾರೆ. ವರ್ತೂರು ಪ್ರಕಾಶ್‌ರ ಈ ಪ್ರಯತ್ನಕ್ಕೆ ಅವರ ಬಣದಲ್ಲಿರುವ ಒಕ್ಕಲಿಗ ಗ್ರಾಪಂ, ತಾಪಂ ಸದಸ್ಯರು ಸಾಥ್‌ ನೀಡುತ್ತಿದ್ದಾರೆ. ಕೋಲಾರ ಕ್ಷೇತ್ರದ ಈ ಇಬ್ಬರೂ ಅಭ್ಯರ್ಥಿಗಳಲ್ಲಿ ಆಗಿರುವ ಅಮೂಲಾಗ್ರ ಬದಲಾವಣೆಯನ್ನು ಅಹಿಂದ ಹಾಗೂ ಒಕ್ಕಲಿಗ ಮತದಾರರು ಅಚ್ಚರಿಯಿಂದಲೇ ಗಮನಿಸುತ್ತಿದ್ದಾರೆ. 

ಶ್ರೀನಿವಾಸಗೌಡರಿಗೆ ಸತತ ಎರಡು ಸೋಲು 2008 ಮತ್ತು 2013ರ ಚುನಾವಣೆಯಲ್ಲಿ ಒಕ್ಕಲಿಗ ಮುಖಂಡರನ್ನು ಮಾತ್ರ ಮುಂದಿಟ್ಟುಕೊಂಡು ಚುನಾವಣೆ ಗೆದ್ದೇ ಬಿಟ್ಟೆ ಎಂದು ಬೀಗಿದ್ದ ಕೆ.ಶ್ರೀನಿವಾಸಗೌಡರಿಗೆ ಸತತ ಎರಡು ಸೋಲು ದಾಖಲಾಗಿದ್ದವು. ಇದಕ್ಕೂ ಮುನ್ನ ಮೂರು ಬಾರಿ ಶಾಸಕರಾಗಿ ಗೆದ್ದಿದ್ದ ಕೆ.ಶ್ರೀನಿವಾಸಗೌಡ ಅಹಿಂದ ಮತದಾರರನ್ನು ದೂರವಿಡುತ್ತಾರೆಂಬ ಆರೋಪಕ್ಕೂ ತುತ್ತಾಗಿದ್ದರು. ಅಹಿಂದ ವರ್ಗಗಳಿಗೆ ಸರಕಾರದ ಸವಲತ್ತು ಕೊಡಿಸುವಲ್ಲೂ ಕೆ.ಶ್ರೀನಿವಾಸಗೌಡ ವಿಫ‌ಲವಾಗಿದ್ದಾರೆಂಬ ಆರೋಪ ಅವರ ಮೇಲಿತ್ತು. ಒಕ್ಕಲಿಗ ಮುಖಂಡರ ಹೊರತು ಗೌಡರನ್ನು ಭೇಟಿ ಮಾಡಲು ಸಾಧ್ಯವೇ ಇಲ್ಲವೆಂಬ ವಾತಾವರಣ ಕೋಲಾರದಲ್ಲಿ ನೆಲೆಗೊಂಡಿತ್ತು. ಇದರಿಂದ ಅಹಿಂದ ಮತದಾರರು, ದಲಿತ ಮತದಾರರು 2008 ಮತ್ತು 2013ರ ಚುನಾವಣೆಗಳಲ್ಲಿ ಕೆ.ಶ್ರೀನಿವಾಸಗೌಡರ ವಿರುದ್ಧ ಮತ ಚಲಾಯಿಸಿದ್ದು ವಾಸ್ತವಾಂಶ ಎನ್ನಬಹುದು.

ಫ‌ಲಿತಾಂಶದಿಂದಮಾತ್ರ ಸ್ಪಷ್ಟ ಚಿತ್ರಣ ಕ್ಷೇತ್ರದ ಕೆಲವೆಡೆ ಅಹಿಂದ ಮತದಾರರು ಕೆ.ಶ್ರೀನಿವಾಸ ಗೌಡರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ, ದಲಿತ ಮತದಾರರು ತಮ್ಮನ್ನು ಕಡೆಗಣಿಸಿದ್ದಕ್ಕೆ ಶಾಸಕ ವರ್ತೂರು ಪ್ರಕಾಶ್‌ರನ್ನು ಪ್ರಶ್ನಿಸುತ್ತಿದ್ದಾರೆ. ಕೆ.ಶ್ರೀನಿವಾಸಗೌಡರ ಪ್ರಯತ್ನಕ್ಕೆ ಅಹಿಂದ ಮತದಾರರು ಅದರಲ್ಲೂ ದಲಿತ ಮತದಾರರು ಎಷ್ಟರ ಮಟ್ಟಿಗೆ ಕರಗಿದ್ದಾರೆ. ವರ್ತೂರು ಪ್ರಕಾಶ್‌ ತೋರಿಸುತ್ತಿರುವ ಪ್ರೀತಿಗೆ ಒಕ್ಕಲಿಗರು ಹೇಗೆ ಸ್ಪಂದಿಸಿದ್ದಾರೆ ಎನ್ನುವುದನ್ನು ಚುನಾವಣಾ ಫ‌ಲಿತಾಂಶವೇ ಬಹಿರಂಗಪಡಿಸಬೇಕಾಗಿದೆ.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next