Advertisement

ಭಾರೀ ಮಳೆಗೆ ಉತ್ತರ ತತ್ತರ; ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ

12:08 AM Aug 26, 2020 | mahesh |

ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಸಕ್ರಿಯಗೊಂಡ ಮುಂಗಾರಿನ ಪರಿಣಾಮವೆಂಬಂತೆ ದಿಲ್ಲಿ, ಗುಜರಾತ್‌, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶದ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ವರುಣ ಅಬ್ಬರಿಸತೊಡಗಿದ್ದಾನೆ.

Advertisement

ಗುಜರಾತ್‌, ರಾಜಸ್ಥಾನದಲ್ಲಿ ಕಳೆದ 5 ದಿನಗಳಿಂದಲೂ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆ ಸಂಬಂಧಿ ಘಟನೆಗಳಿಂದ ಗುಜರಾತ್‌ನಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಗುಜರಾತ್‌ ಶೇ.179ರಷ್ಟು ಹೆಚ್ಚುವರಿ ಮಳೆ ಕಂಡರೆ, ರಾಜಸ್ಥಾನದಲ್ಲಿ ಶೇ.33ರಷ್ಟು ಹೆಚ್ಚು ಮಳೆ ಬಿದ್ದಿದೆ. ಬುಧವಾರದಿಂದ 3 ದಿನಗಳ ಕಾಲ ಇಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಲ್ಲಿ ಮಾತ್ರವಲ್ಲದೇ, ಒಡಿಶಾ, ಪಶ್ಚಿಮ ಬಂಗಾಲ, ಜಾರ್ಖಂಡ್‌, ಛತ್ತೀಸ್‌ಗಢ‌, ಮಧ್ಯಪ್ರದೇಶವೂ ಭಾರೀ ಮಳೆಗೆ ಸಾಕ್ಷಿಯಾಗಲಿವೆ ಎಂದಿದೆ.

ಸ್ವಾಮಿನಾರಾಯಣ ದೇಗುಲ ಮುಳುಗಡೆ: ಭಾರೀ ಮಳೆ ಯಿಂದಾಗಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಗೊಂಡಾಲ್‌ ನಗರದಲ್ಲಿರುವ ಸ್ವಾಮಿ ನಾರಾಯಣ ದೇಗುಲವು ಭಾಗಶಃ ಮುಳು ಗಡೆ ಯಾಗಿದೆ. ಭುಜ್‌ನ ಹಲವು ಪ್ರದೇಶಗಳೂ ಜಲಾವೃತ ವಾಗಿದ್ದು, ಮೋತಿಸಾರ್‌ ಅಣೆಕಟ್ಟಿನ 14 ಕ್ರಸ್ಟ್‌ ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.

ಭೂಕುಸಿತಕ್ಕೆ ಐವರು ಬಲಿ
ಮಳೆಯಬ್ಬರದಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡದಲ್ಲಿ ಉಂಟಾದ ಭೂಕುಸಿತಕ್ಕೆ ಮಂಗಳ ವಾರ ಐವರು ಬಲಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಎರಡು ಕಡೆ ಭೂಕುಸಿತ ಸಂಭ ವಿಸಿದೆ. ಒಂದು ಕಡೆ ಒಂದೇ ಕುಟುಂಬದ ಮೂವರು, ಮತ್ತೂಂದು ಕಡೆ ಒಬ್ಬರು ಸಾವಿಗೀಡಾಗಿದ್ದಾರೆ. ಜಾನುವಾರುಗಳನ್ನು ಮೇಯಿಸಲು ತೆರಳಿದ್ದಾಗ ಈ ಘಟನೆ ನಡೆದ ಕಾರಣ, ಹಲವು ಜಾನುವಾರುಗಳು ಕೂಡ ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ರಾಂಬಾನ್‌ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಹಲವು ಕಡೆ ಗುಡ್ಡ ಕುಸಿತ ಉಂಟಾಗಿದೆ. ಹೀಗಾಗಿ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್‌ ಮಾಡಲಾಗಿದೆ. ಹೀಗಾಗಿ, ದೇಶದ ಇತರೆ ಭಾಗಗಳನ್ನು ಕಾಶ್ಮೀರಕ್ಕೆ ಸಂಪರ್ಕಿಸುವ ರಸ್ತೆಯೇ ಬಂದ್‌ ಆದಂತಾಗಿದೆ. ಇನ್ನು, ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ ಉಂಟಾಗಿ, ಕಿರಿಯ ಎಂಜಿನಿಯರ್‌ ಮೃತ ಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next