Advertisement

“ಕರ್ನಾಟಕ ಜಾಬ್ಸ್ ಫಾರ್‌ ಕನ್ನಡಿಗಾಸ್‌’ಗೆ ವ್ಯಾಪಕ ಸ್ಪಂದನೆ

11:02 PM May 05, 2019 | Lakshmi GovindaRaj |

ಬೆಂಗಳೂರು: “ರಾಜ್ಯದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ಸಿಗಬೇಕು’ ಎಂಬ ಆಶಯದೊಂದಿಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಆರಂಭವಾಗಿರುವ “ಕರ್ನಾಟಕ ಜಾಬ್ಸ್ ಫಾರ್‌ ಕನ್ನಡಿಗಾಸ್‌’ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಈ ಅಭಿಯಾನವು ಮೂರೂವರೆ ದಶಕಗಳ ಹಿಂದೆ ನಡೆದಿದ್ದ “ಮಣ್ಣಿನ ಮಕ್ಕಳಿಗೆ ಉದ್ಯೋಗ’ ಹಕ್ಕೊತ್ತಾಯವನ್ನು ಮೆಲುಕು ಹಾಕುವಂತೆ ಮಾಡಿದೆ.

Advertisement

1ನೇ ತರಗತಿಯಿಂದ ಕನ್ನಡ ಮಾಧ್ಯಮ, ಕನ್ನಡಕ್ಕೆ ಪ್ರತ್ಯೇಕ ಧ್ವಜ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಸ್ಥಳೀಯ ಕನ್ನಡ ಭಾಷೆಯಲ್ಲಿ ನಡೆಸಬೇಕು ಎಂಬ ಒತ್ತಾಯ ಸೇರಿ ಕನ್ನಡ ಭಾಷೆ ಹಾಗೂ ಕನ್ನಡಿಗರ ಜೀವನಕ್ಕೆ ಸಂಬಂಧಪಟ್ಟ ವಿಚಾರಗಳು ಪದೇಪದೆ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುತ್ತಿವೆ. ಇದೀಗ ರಾಜ್ಯದಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂಬ ಹಕ್ಕೊತ್ತಾಯದ ವಿಚಾರವೂ ಮತ್ತೆ ಮುಂಚೂಣಿಗೆ ಬಂದಿದೆ. ಈ ಕೂಗಿಗೂ ಹಲವು ದಶಕಗಳ ಇತಿಹಾಸವಿದೆ.

ಸ್ವಾತಂತ್ರಾé ನಂತರ ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ದೇಶದ ಅಲ್ಲಲ್ಲಿ ಸ್ಥಾಪನೆಯಾಗಲಾರಂಭಿಸಿದವು. ಅದರಂತೆ ಬೆಂಗಳೂರಿನಲ್ಲಿ ಎಚ್‌ಎಎಲ್‌ ಸೇರಿ ಹಲವು ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆಯಾದವು. ಆದರೆ ಈ ಕಾರ್ಖಾನೆಗಳಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇತ್ತು. ಪ್ರಮುಖವಾಗಿ ತಮಿಳುನಾಡು ಹಾಗೂ ಕೇರಳದಿಂದ ವಲಸೆ ಬಂದವರು ಹೆಚ್ಚು ಉದ್ಯೋಗ ಪಡೆಯುತ್ತಿದ್ದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದು ಸಹಜವಾಗಿಯೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ ಹೋರಾಟಕ್ಕೆ ನಾಂದಿ ಹಾಡಿತು ಎಂದು ಕನ್ನಡಪರ ಹೋರಾಟಗಾರರು ಹೇಳುತ್ತಾರೆ.

ಕನ್ನಡ ಚಳವಳಿಯ ಪ್ರಯತ್ನದ ಫ‌ಲವಾಗಿಯೇ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕೆಂಬ ಹೋರಾಟ ಶುರುವಾಯಿತು ಎಂದು ಕನ್ನಡಪರ ಹೋರಾಟಗಾರರು ಹೇಳುತ್ತಾರೆ. ಬಹಳಷ್ಟು ಕಾರ್ಖಾನೆಗಳ ಮುಂದೆ ಕನ್ನಡಿಗರು ಪ್ರತಿಭಟನೆ ನಡೆಸುವುದು ನಡೆದಿತ್ತು. ಈ ನಡುವೆ ಕನ್ನಡ ಆಡಳಿತ ಭಾಷೆಯಾಗಿದ್ದರಿಂದ ಕನ್ನಡಿಗರಿಗೇ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಹೋರಾಟ ನಡೆಸಲಾರಂಭಿಸಿದರು.

70 ದಶಕಗಳ ಹಿಂದೆಯೇ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಹೋರಾಟ ನಡೆದಿತ್ತು. ಈ ಬಗ್ಗೆ 1962ರಲ್ಲೇ ಕನ್ನಡ ಹೋರಾಟಗಾರ ಮ.ರಾಮಮೂರ್ತಿ ಅವರು “ಕನ್ನಡ ಮಣ್ಣಿನ ಮಕ್ಕಳ ಬಾಯಿಗೆ ಮಣ್ಣು ಹಾಕದಿರಿ’ ಎಂದು ಹೇಳಿದ್ದರು. 1978ರ ಹೊತ್ತಿನಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಒರಿಸ್ಸಾ, ಆಂಧ್ರ ಇತರೆಡೆಯೂ ಸ್ಥಳೀಯರಿಗೆ ಉದ್ಯೋಗಗಳಲ್ಲಿ ಸಿಂಹ ಪಾಲು ಸಿಗಬೇಕು ಎಂಬ ಹೋರಾಟ ನಡೆದಿತ್ತು. ವ

Advertisement

ರ್ಷಾನುಗಟ್ಟಲೇ ಹೋರಾಟ ನಡೆಸಿದ್ದರಿಂದ ಸರ್ಕಾರದ ಮೇಲೂ ಒತ್ತಡ ಸೃಷ್ಟಿಯಾಗಲಾರಂಭಿಸಿತು. ಮಲ್ಲೇಶ್ವರದಿಂದ ವಿಧಾನಸೌಧದವರೆಗೆ ನಡೆದ ಹೋರಾಟದಲ್ಲಿ ಸಾಮಾನ್ಯ ಕನ್ನಡಿಗನಾಗಿ ನಾನೂ ಪಾಲ್ಗೊಂಡಿದ್ದೆ ಎಂದು ಕನ್ನಡ ಪರ ಚಿಂತಕ ರಾ.ನಂ. ಚಂದ್ರಶೇಖರ್‌ ಮೆಲುಕು ಹಾಕುತ್ತಾರೆ.

1981ರಲ್ಲಿ ಕನ್ನಡಿಗರ ಹಕ್ಕೊತ್ತಾಯಕ್ಕೆ ಅಂದಿನ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಸರ್ಕಾರ ಸ್ಪಂದಿಸಿತ್ತು. ಈ ಸಂಬಂಧ 1981ರ ಮಾ. 27ರಂದು “ಕರ್ನಾಟಕದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಅಭ್ಯರ್ಥಿ ಅಥವಾ ಅವರ ತಂದೆ- ತಾಯಿ, ಪತಿ- ಪತ್ನಿ ನೋಂದಾಯಿಸುವ ದಿನಾಂಕಕ್ಕೆ 15 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಕರ್ನಾಟಕದ ನಿವಾಸಿಗಳಾಗಿರಲೇ ಬೇಕು’ ಎಂಬುದಾಗಿ ರಾಜ್ಯ ಸರ್ಕಾರ ಆದೇಶ ಕೂಡ ಹೊರಡಿಸಿತ್ತು.

1982ರ ನ.5ರಂದು ರಾಜ್ಯದ ಸಾರ್ವಜನಿಕ ವಲಯದಲ್ಲಿ ನೇಮಕಾತಿ ವೇಳೆ ಗರಿಷ್ಠ ಪ್ರಮಾಣದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಆಶಯ ಎಂದು ರಾಜ್ಯದ ಎಲ್ಲ ಉದ್ಯಮಗಳ ಮುಖ್ಯಸ್ಥರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದರು ಎಂದೂ ಸ್ಮರಿಸಿದರು.

ಮಣ್ಣಿನ ಮಕ್ಕಳಿಗೆ ಕೆಲಸ..: ಈ ಆದೇಶ ಹೊರಡಿಸಿದ ಸಂದರ್ಭದಲ್ಲಿ ಆರ್‌.ಗುಂಡೂರಾವ್‌ ಅವರು “ಮಣ್ಣಿನ ಮಕ್ಕಳಿಗೇ ಉದ್ಯೋಗ’ ಎಂಬ ಮಾತನ್ನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಕಾರ್ಮಿಕರ ನೇಮಕಾತಿಯಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ನೇಮಿಸುವಂತೆ ಕೈಗಾರಿಕೆಗಳಿಗೆ ಆದೇಶ ಹೊರಡಿಸುವ ಭರವಸೆಯನ್ನೂ ನೀಡಿದ್ದರು.

ಆದರೆ ಗುಂಡೂರಾವ್‌ ಅವರ ಈ ನಿಲುವನ್ನು ಅಂದಿನ ಕೇರಳ, ತಮಿಳುನಾಡು ಮುಖ್ಯಮಂತ್ರಿಗಳು ವಿರೋಧಿಸಿದ್ದರು. ರಾಷ್ಟ್ರೀಯ ಕಾಂಗ್ರೆಸ್‌ ಮುಖ್ಯಸ್ಥರೂ ಬೆಂಬಲಿಸದ ಕಾರಣ ಗುಂಡೂರಾವ್‌ ಅವರು ತಮ್ಮ ಹೇಳಿಕೆ ಹಿಂಪಡೆದರು ಎಂದು ರಾ.ನಂ.ಚಂದ್ರಶೇಖರ್‌ ಹೇಳಿದರು. ಹಲವು ದಶಕಗಳಿಂದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಹಕ್ಕೊತ್ತಾಯ ನಿರಂತರವಾಗಿದೆ.

ಸಾರ್ವಜನಿಕವಾಗಿ ಅಭಿಪ್ರಾಯ ರೂಪಿಸುವಲ್ಲಿ ಈಚಿನ ದಿನಗಳಲ್ಲಿ ಪರಿಣಾಮಕಾರಿ ಎನಿಸಿರುವ ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದಲ್ಲಿನ ಉದ್ಯೋಗ ಕನ್ನಡಿಗರಿಗೇ ಎಂಬ ಅಭಿಯಾನ ಕೈಗೊಂಡಿದೆ. ಈ ಅಭಿಯಾನವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆದಿಯಾಗಿ ಹಲವರು ಬೆಂಬಲಿಸಿದ್ದಾರೆ. ಮುಂದೆ ಸರ್ಕಾರದಿಂದ ಈ ಅಭಿಯಾನಕ್ಕೆ ಯಾವ ರೀತಿಯ ಸ್ಪಂದನೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಾತು ಕೃತಿಯಾಗಿ ಬರಲಿ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನ್ಯ ಭಾಷಾ, ರಾಜ್ಯಗಳ ಅಧಿಕಾರಿಗಳು ತಮ್ಮ ಭಾಷಿಗರು, ರಾಜ್ಯದವರು ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಕೆಲ ಕಾನೂನುಗಳನ್ನು ದುರ್ಬಲಗೊಳಿಸುತ್ತಿದ್ದು, ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡಬೇಕು ಎಂಬ ಅಭಿಯಾನ ಆರಂಭವಾಗಿರುವುದು ಸ್ವಾಗತಾರ್ಹ. ಈ ಹಕ್ಕೊತ್ತಾಯ ಅರಿವಿನ ಆಂದೋಲನವಾಗಬೇಕು. ಮುಖ್ಯಮಂತ್ರಿಗಳು ಅಭಿಯಾನ ಬೆಂಬಲಿಸಿರುವುದು ಶ್ಲಾಘನೀಯ. ಮುಖ್ಯಮಂತ್ರಿಗಳ ಮಾತು ಕೃತಿಯಾಗಿ ಬರಲಿ.
-ಎಸ್‌.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next