Advertisement

ಮಲ್ಲೇಶ್ವರಂ ಮಾದರಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ವಿಸ್ತರಣೆ: ಸಿಎಂ ಬೊಮ್ಮಾಯಿ

02:27 PM Oct 29, 2022 | Team Udayavani |

ಬೆಂಗಳೂರು: ಆಧುನಿಕ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮಲ್ಲೇಶ್ವರಂ ಮಾದರಿಯನ್ನು ಅನುಸರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Advertisement

ಅವರು ಇಂದು ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಇರುವ ಸರ್ಕಾರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಲ್ಲೇಶ್ವರಂ ಸ್ಕೂಲ್ ಮಾಡೆಲ್ ಹಾಗೂ ಪುನೀತ್ ಸ್ಯಾಟಿಲೈಟ್ ವರ್ಕ್ ಸ್ಟೇಷನ್ ಉದ್ಘಾಟಿಸಿ ಮಾತನಾಡಿದರು.

ಮಲ್ಲೇಶ್ವರಂ ಮಾದರಿ ಶಾಲೆಯಲ್ಲಿ ಮಕ್ಕಳೇ ತಯಾರಿಸಿರುವ ಸ್ಯಾಟಿಲೈಟ್ ಇಂದು ಅನಾವರಣವಾಗಿದೆ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಆಗಿದ್ದು, ಬಹಳ ಯೋಗ್ಯ ವ್ಯಕ್ತಿಯ ಹೆಸರಿನಲ್ಲಿ ಕೆಲಸವಾಗುತ್ತಿದೆ ಎಂದರು.

ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವ ಸಮರ್ಪಣೆ ಮಾಡುವ ರೀತಿಯಲ್ಲಿ ಈ ಸ್ಯಾಟಿಲೈಟ್ ನ್ನು ಗಗನಕ್ಕೇರಿಸುವ ಕೆಲಸ ಶ್ಲಾಘನೀಯ. ಆಕಾಶದೆತ್ತರಕ್ಕೆ ಮಲ್ಲೇಶ್ವರಂ ಶಾಲೆಯ ಖ್ಯಾತಿ ಏರಲಿ ಎಂದರು. ಪುನೀತ್ ರಾಜಕುಮಾರ್ ಅವರು ಸದಾ ಹೊಸತನ್ನು ಹುಡುಕುವ, ಪ್ರಯೋಗಶೀಲ, ಅಂತ:ಕರಣವುಳ್ಳ ವ್ಯಕ್ತಿ. ಅತ್ಯಂತ ಸಣ್ಣ ವಯಸ್ಸಿನಲ್ಲೇ ಈ ಲೋಕ ಬಿಟ್ಟರೂ ಅವರು ಬದುಕಿದ ಕೆಲ ದಿನಗಳಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಭೂಮಿಯಲ್ಲಿ ಬಿಟ್ಟು ಹೋಗಿದ್ದಾರೆ. ಪರೋಪಕಾರಿ ಕಾರ್ಯಗಳು, ವಿದ್ಯಾಭ್ಯಾಸ ನೀಡುವ ಸಂಸ್ಥೆ, ಅನಾಥ ಮಕ್ಕಳ ಶಕ್ತಿ ಧಾಮ, ಸಹಾಯ, ನಗುಮುಖದಿಂದ ಎಲ್ಲರ ದುಃಖ ದುಮ್ಮಾನಗಳನ್ನು ದೂರ ಮಾಡಿದ್ದಾರೆ. ಅವರು ನಮ್ಮ ಜೊತೆಗೆ ಎಂದಿಗೂ ಇರುತ್ತಾರೆ. ರಾಜ್ಯದ ಉದ್ದಗಲಕ್ಕೂ ಅವರ ಖ್ಯಾತಿ ಪಸರಿಸಿದೆ. ಮಲ್ಲೇಶ್ವರಂ ಶಾಲೆ ಪುನೀತ್ ಖ್ಯಾತಿಯನ್ನು ಸ್ಯಾಟಿಲೈಟ್ ಮೂಲಕ ಆಕಾಶದೆತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನಂಬಿದ್ದೇನೆ  ಎಂದರು.

ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಮೌಲ್ಯ: ಶಿಕ್ಷಣ ಬಹಳ ಮುಖ್ಯ. 21 ನೇ ಶತಮಾನ ಜ್ಞಾನದ ಶತಮಾನ. ಜ್ಞಾನಾರ್ಜನೆ ಬಹಳ ಮುಖ್ಯ ವಾಗುತ್ತದೆ. ಕಲಿಯುವಾಗ ಗುಣಾತ್ಮಕ ಹಾಗೂ ನೈತಿಕ ವಿದ್ಯೆಯನ್ನು ಕಲಿಯಬೇಕು. ವಿಜ್ಞಾನ ಮತ್ತು ಗಣಿತವನ್ನು ಎಲ್ಲರೂ ಕಲಿಯಲೇಬೇಕು. ಎಲ್ಲರ ಜೀವನದಲ್ಲಿ ಇವು ಉಪಯೋಗಕ್ಕೆ ಬರುತ್ತವೆ. ವಿಜ್ಞಾನ ಮತ್ತು ಗಣಿತದಲ್ಲಿ ಭದ್ರ ಬುನಾದಿ ಹಾಕಲು ಭಾಷೆಯಲ್ಲಿಯೂ ಭದ್ರ ಬುನಾದಿಯನ್ನು ಹಾಕಬೇಕು. ಮಾತೃಭಾಷೆ ಸಹಜವಾಗಿ ಬರುವ ಭಾಷೆ. ಅದನ್ನು ಅಚ್ಚುಕಟ್ಟಾಗಿ ಕಲಿತರೆ ನಮ್ಮ ಜ್ಞಾನ ಉತ್ತಮಗೊಳ್ಳುತ್ತದೆ. ಪ್ರಶ್ನೆ ಕೇಳುವ ಹಕ್ಕು ಮಕ್ಕಳಿಗಿದೆ. ಮಕ್ಕಳು ಪ್ರಶ್ನೆ ಕೇಳಬೇಕು. ಶಿಕ್ಷಕರು ಕಲಿತು ಮಕ್ಕಳ ಉತ್ಸಾಹವನ್ನು ಪ್ರೋತ್ಸಾಹ ಮಾಡಬೇಕು. ಮಕ್ಕಳ ಗ್ರಹಣಶಕ್ತಿ ಹೆಚ್ಚಿರುವುದರಿಂದ ನೈತಿಕ ಮೌಲ್ಯ, ಭಾಷೆ, ವಿಜ್ಞಾನ ಹಾಗೂ ಗಣಿತವನ್ನು ಮೂಲಭೂತವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಕಲಿಸಬೇಕು. ಉನ್ನತ ಶಿಕ್ಷಣ ಕಲಿಯುವಾಗ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.

Advertisement

ಇದನ್ನೂ ಓದಿ:ಉತ್ತರಪ್ರದೇಶ: ಕ್ರಿಶ್ಚಿಯನ್ ಧರ್ಮಕ್ಕೆ 400 ಮಂದಿ ಹಿಂದೂಗಳ ಬಲವಂತದ ಮತಾಂತರ, ಪ್ರಕರಣ ದಾಖಲು

ತರ್ಕಬದ್ಧವಾಗಿ ಆಲೋಚಿಸಿ: ಮಕ್ಕಳು ತರ್ಕಬದ್ಧವಾಗಿ ಯೋಚಿಸಬೇಕು. ಯಾಕೆ, ಏನು, ಎಲ್ಲಿ ಹೇಗೆ ಎಂದು ಪ್ರಶ್ನಿಸಬೇಕು. ಆಗ ತರ್ಕಬದ್ಧವಾಗಿ ಯೋಚಿಸಬಹುದು. ಬಾಯಿಪಾಠದ ಅಗತ್ಯವಿರುವುದಿಲ್ಲ. ಈ ಪಂಚಪ್ರಶ್ನೆಗಳು ಮಕ್ಕಳ ಯಶಸ್ಸಿನ ಮೆಟ್ಟಿಲುಗಳು. ಕಠಿಣ ಗಣಿತವನ್ನು ನಾಲ್ಕು ಜನರಿಗೆ ಹೇಳಿಕೊಟ್ಟರೆ, ಅದನ್ನು ಮರೆಯುವ ಪ್ರಮೇಯವೇ ಇರುವುದಿಲ್ಲ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರಲ್ಲದೇ ಜ್ಞಾನ ಹಂಚಿಕೊಂಡಷ್ಟೂ ಗಟ್ಟಿಯಾದ ಜ್ಞಾನದ ಭಂಡಾರ ಉಳಿಯಲಿದೆ ಎಂದರು.

ಉಜ್ವಲ ಭವಿಷ್ಯ: ಮಕ್ಕಳನ್ನು ಕಂಡಾಗ ಭಾರತ ಹಾಗೂ ಕನ್ನಡ ನಾಡಿನ ಭವಿಷ್ಯ ಉಜ್ವಲವಾಗಿದೆ ಎಂದು ಅನಿಸುತ್ತದೆ. ಮಕ್ಕಳಲ್ಲಿ ಉತ್ಸಾಹ, ಕುತೂಹಲ ಬಹಳ ಮುಖ್ಯ. ಮಕ್ಕಳಲ್ಲಿ ಕುತೂಹಲ ಹಾಗೂ ಮುಗ್ಧತೆ ಎರಡನ್ನೂ ಜೀವಂತವಾಗಿಡುವ ಶಿಕ್ಷಕ ನಂಬರ್ ಒನ್ ಗುರುವಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಸ್ಯಾಟಿಲೈಟ್ ನಿರ್ಮಾಣಕ್ಕೆ ಸರ್ಕಾರದ ಸಹಾಯ: ವಿದ್ಯೆ ಶಕ್ತಿ ಮತ್ತು ಅವಕಾಶಗಳನ್ನು ನೀಡುತ್ತದೆ. ಎಷ್ಟೇ ದೊಡ್ಡ ಸ್ಥಾನ ದಲ್ಲಿದ್ದರೂ ವಿದ್ಯೆ ಕಲಿಸಿದ ವಿನಯವನ್ನು ಬಿಟ್ಟುಕೊಡಬಾರದು. ಇತರರಿಗಾಗಿ ಬದುಕಿದಾಗ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುತ್ತದೆ. ನಾಡಿನ ಭವ್ಯ ಭವಿಷ್ಯಕ್ಕೆ ತಂತ್ರಜ್ಞಾನ, ನೈತಿಕತೆ, ವಿಜ್ಞಾನ ಸಹಾಯಕ. ಶಾಲೆಗಳಲ್ಲಿ ಬಹುಪಯೋಗಿ ಸ್ಯಾಟಿಲೈಟ್ ನಿರ್ಮಾಣ ಮಾಡುವ ಅವಕಾಶವಿದ್ದು, ಅಗತ್ಯವಿರುವ ತರಬೇತಿ, ವಿನ್ಯಾಸಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next