Advertisement

ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗಿಲ್ಲ: ಶಾಸಕ ಖೂಬಾ

12:56 PM Jan 27, 2018 | Team Udayavani |

ಬಸವಕಲ್ಯಾಣ: ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಕ್ಷೇತ್ರದ ಶಾಸಕನಾಗಿ ನಿಮ್ಮಲ್ಲಿ ಕೈ ಮುಗಿದು ಕ್ಷಮೆ ಕೋರುತ್ತೆನೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ನಗರದ ಹಳೆ ತಹಶೀಲ್ದಾರ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಅನುದಾನ ಕಲ್ಪಿಸಿಲ್ಲ ಎಂದು ಆರೋಪಿಸಿದರು.

Advertisement

ಮಕ್ಕಳೇ ದೇಶದ ಭವಿಷ್ಯ ಎನ್ನುತ್ತಾರೆ. ಆದರೆ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳಿಲ್ಲ. ಕುಡಿಯಲು ಶುದ್ಧ ನೀರು, ಶುದ್ಧವಾದ ಗಾಳಿ ಇಲ್ಲ. ದುಡ್ಡು ಕೊಟ್ಟು ನೀರು ಕುಡಿಯಬೇಕು. ಶಾಲೆ ಇದ್ದರೆ ಶಿಕ್ಷಕರು ಇಲ್ಲ, ಶಿಕ್ಷಕರಿದ್ದಲ್ಲಿ ಆಟದ ಮೈದಾನವಿಲ್ಲ. ಗ್ರಾಮೀಣ ಭಾಗದಲ್ಲಿ ಸಮರ್ಪಕ ಸಾರಿಗೆ ಸಂಪರ್ಕವಿಲ್ಲ. ಮಕ್ಕಳ ಶಾರೀರಿಕ ಮತ್ತು ಶೈಕ್ಷಣಿಕ ಬೆಳವಣಿಗೆ ಹೇಗೆ ಆಗಬೇಕು. ಈ ಬಗ್ಗೆ ದುಃಖವಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನಗರದಲ್ಲಿ ಒಳಚರಂಡಿ ಇಲ್ಲದ ಕಾರಣ ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಗೆ ಸೇರುತ್ತಿವೆ. ಒಳಚರಂಡಿ ಕಾಮಗಾರಿಗೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ 10 ಸಲ, ಸಚಿವರಿಗೆ 10 ಸಲ ಮನವಿ ಮಾಡಿದ್ದೇನೆ. ಅನುದಾನವೇ ಕೊಡುತ್ತಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ಘೋಷಣೆ ಮಾಡಿದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ. 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಕಲ್ಪಿಸುವದಾಗಿ ಘೋಷಣೆ ಮಾಡಿದ್ದಾರೆ. ಒಳಚರಂಡಿ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನದ ನಿರೀಕ್ಷೆಯಲ್ಲಿ ಇರುವುದಾಗಿ ಹೇಳಿದರು. 

ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಮೀರ ಅಜರ ಅಲಿ ನವರಂಗ ಮಾತನಾಡಿದರು. ತಾಪಂ ಆಧ್ಯಕ್ಷೆ ಯಶೋಧಾ ನಿಲಕಂಠ ರಾಠೊಡ, ಉಪಾಧ್ಯಕ್ಷ ಸಂಗಮೇಶ ಬಿರಾದಾರ, ನಗರಸಭೆ ಉಪಾಧ್ಯಕ್ಷೆ ಚಮ್ಮಾಬಾಯಿ, ತಾಪಂ ಇಒ ವಿಜಯಕುಮಾರ ಮಡ್ಡೆ ಉಪಸ್ಥಿತರಿದ್ದರು. ತಹಶೀಲ್ದಾರ ಜಗನ್ನಾಥರೆಡ್ಡಿ ಸ್ವಾಗತಿಸಿದರು. ಪಶು ಸಂಗೋಪನಾ ಇಲಾಖೆ ಸಹಾಯಕ
ಡಾ| ರವೀಂದ್ರನಾಥ ನಿರೂಪಿಸಿದರು.

Advertisement

ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರನನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇದಕ್ಕೂ ಮುನ್ನ ಬೆಳಗ್ಗೆ ಕೋಟಿಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಹಳೇ ತಹಶೀಲ್ದಾರ ಕಚೇರಿ ವರೆಗೆ ಮೆರವಣಿಗೆ ನಡೆಯಿತು. ಶಾಸಕರು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು,
ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಧ್ವಜಾರೋಹಣ: ಕೋಟೆ ಮೇಲೆ ಸ್ವಾತಂತ್ರ ಹೋರಾಟಗಾರರು ಧ್ವಜಾರೋಹಣ ನೆರವೇರಿಸಿದರು. ನೆಹರು ವೃತ್ತದಲ್ಲಿ ತಹಶೀಲ್ದಾರರು, ಗಾಂಧಿ ವೃತ್ತದಲ್ಲಿ ಶಾಸಕರು, ಅಂಬೇಡ್ಕರ್‌ ವೃತ್ತದಲ್ಲಿ ತಾಪಂ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿದರು.

ತೊಗಾಡಿಯಾಗೆ ಏನೂ ಮಾಡಲಾಗದು ತೊಗಾಡಿಯಾ ಸಾಹೇಬ್ರೆ ನೀವು ಯಾವುದೇ ರೀತಿ ಭಯ ಪಡಬೇಕಿಲ್ಲ.
ನಿಮ್ಮನ್ನು ಬಿಜೆಪಿಯವರು ಏನೂ ಮಾಡಲು ಆಗದು. ದೇಶದಲ್ಲಿ ಡಾ| ಅಂಬೇಡ್ಕರ್‌ ಅವರು ಬರೆದ ಸಂವಿಧಾನವಿದೆ. ಕಾನೂನು ಇದೆ. ಹೀಗಾಗಿ ನಿಮ್ಮನ್ನು ಯಾರು ಏನು ಮಾಡಲಾಗದು. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜಸ್ಥಾನ ಪೊಲೀಸರಿಗೆ ತೊಗಾಡಿಯಾ ಹೆದರಬೇಕಾಗಿದೆ. ಬಿಜೆಪಿ ಅವರಿಗೆ ದೇಶದ ಬಗ್ಗೆ ಗೊತ್ತಿಲ್ಲ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಚೋದನೆ ಭಾಷಣ ಮಾಡುತ್ತ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ.  
ಮೀರ ಅಜರಲ್ಲಿ ನವರಂಗ ನಗರದ ಸಭೆ ಅಧ್ಯಕ್ಷ  

Advertisement

Udayavani is now on Telegram. Click here to join our channel and stay updated with the latest news.

Next