Advertisement

ಭಯದ ನೆರಳಲ್ಲಿ ಸಂಬಂಧ ಸರಪಳಿ

10:20 AM Jan 11, 2020 | mahesh |

“ಟಗರು’ ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ನಂತರ ನಿರ್ದೇಶಕ ದುನಿಯಾ ಸೂರಿ ಸದ್ದಿಲ್ಲದೆ, ಮತ್ತೂಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಅಂದಹಾಗೆ, ಸೂರಿ ನಿರ್ದೇಶನದ ಹೊಸಚಿತ್ರದ ಹೆಸರು “ಪಾಪ್‌ಕಾರ್ನ್ ಮಂಕಿ ಟೈಗರ್‌’. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಸೆನ್ಸಾರ್‌ ಮುಂದಿರುವ ಈ ಚಿತ್ರ ಇದೇ ಜನವರಿ ಕೊನೆಗೆ ಅಥವಾ ಫೆಬ್ರವರಿ ಮೊದಲವಾರ ತೆರೆಗೆ ಬರುವ ಸಾಧ್ಯತೆ ಇದೆ. ಇತ್ತೀಚೆಗಷ್ಟೆ ಟೀಸರ್‌ ಮೂಲಕ ಹೊರಬಂದಿರುವ “ಪಾಪ್‌ಕಾರ್ನ್ ಮಂಕಿ ಟೈಗರ್‌’ ನೋಡುಗರ ಗಮನ ಸೆಳೆಯುತ್ತಿದ್ದು, ಇದೇ ವೇಳೆ ಮಾತಿಗೆ ಸಿಕ್ಕ ನಿರ್ದೇಶಕ ದುನಿಯಾ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಓವರ್‌ ಟು ದುನಿಯಾ ಸೂರಿ

Advertisement

“ಪಾಪ್‌ಕಾರ್ನ್ ಮಂಕಿ ಟೈಗರ್‌’ನಲ್ಲಿ ಏನು ಹೇಳಲು ಹೊರಟಿದ್ದೀರಿ?
ಇದು ಮನುಷ್ಯನ ಸಂಬಂಧಗಳು ಮತ್ತು ಅದರ ಮೇಲಿರುವ ಭಯ ಎರಡರ ಸುತ್ತ ನಡೆಯುವ ಚಿತ್ರ. ಕೆಲ ಸಂಬಂಧಗಳು ಭಯ ಹುಟ್ಟಿಸುವಂತಿದ್ದರೂ, ಆ ಸಂಬಂಧಗಳು ನಮಗೆ ಬೇಕೆ ಬೇಕು ಎನಿಸುತ್ತವೆ. ಪ್ರೀತಿ-ಪ್ರೇಮ, ಬದುಕಿನ ವ್ಯಾಲ್ಯೂ, ಗಂಡು-ಹೆಣ್ಣಿನ ಸಂಬಂಧಗಳು ಎಲ್ಲವೂ ಇಲ್ಲಿದೆ. ನಮ್ಮೊಳಗಿನ ಅನೇಕ ಪ್ರಶ್ನೆಗಳಿಗೆ ಚಿತ್ರ ಉತ್ತರವಾಗುತ್ತದೆ. ನನ್ನ ಪ್ರಕಾರ ಇದು ನೋಡುಗನಿಗೆ ಒಂಥರಾ ಕನ್ನಡಿ ಇದ್ದಂತೆ!

ಧನಂಜಯ್‌ ಅವರ ಗೆಟಪ್‌, ಲುಕ್‌, ಮ್ಯಾನರಿಸಂ ಎಲ್ಲವೂ ಡಿಫ‌ರೆಂಟ್‌ ಆಗಿರುವಂತಿದೆಯಲ್ಲ?
ಹೌದು. “ಟಗರು’ ಮಾಡುವಾಗ ಡಾಲಿ ಪಾತ್ರಕ್ಕೆ ಧನಂಜಯ್‌ ಜೀವ ತುಂಬಿ ಅಭಿನಯಿಸಿದ್ದರು. ಆದ್ರೆ ಇದರಲ್ಲಿ ಹಾಗಲ್ಲ. ಧನಂಜಯ್‌ ಒಳಗಿನ ಒಬ್ಬ ವ್ಯಕ್ತಿಯ ಪಾತ್ರವೇ ಚಿತ್ರದಲ್ಲಿದೆ. ನಿರ್ದೇಶಕನಾಗಿ ಧನಂಜಯ್‌ ಒಳಗಿರುವ ಬೇರೆ ಬೇರೆ ವ್ಯಕ್ತಿತ್ವಗಳನ್ನು, ವಿಷಯಗಳನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ ಧನಂಜಯ್‌ ಗೆಟಪ್‌, ಲುಕ್‌, ಮ್ಯಾನರಿಸಂ ಎಲ್ಲವೂ ಬೇರೆ ಥರನೇ ಕಾಣುತ್ತದೆ.

ಚಿತ್ರದ ಕಥೆ ಬಗ್ಗೆ ಏನು ಹೇಳುತ್ತೀರಿ?
ಇದು ಪ್ರತಿಯೊಬ್ಬರ ಜೀವನದಲ್ಲೂ ಅನುಭವಿಸಿರುವ, ಬಂದು ಹೋಗುವ, ನೋಡಿರುವಂಥ ಕಥೆ. ಒಂದು ಆ್ಯಕ್ಸಿಡೆಂಟ್‌ನ ನೋಡಿದವರು, ನೋಡದವರು ಒಬ್ಬೊಬ್ಬರು ಒಂದೊಂದು ರೀತಿ ಹೇಳ್ತಾರೆ. ಆದ್ರೆ ಆ್ಯಕ್ಸಿಡೆಂಟ್‌ ಆದವರು ಮತ್ತೂಂದು ಥರ ಹೇಳ್ತಾರೆ. ಹಾಗೆ ಸಿನಿಮಾದ ಕಥೆ ಕೂಡ. ನಾವು ಒಂದು ವಿಷಯವನ್ನ ಯಾವ ರೀತಿ ಹೇಳ್ತೀವಿ, ಹೇಗೆ ಹೇಳ್ತೀವಿ, ಯಾವ ದೃಷ್ಟಿಕೋನದಲ್ಲಿ ಹೇಳ್ತೀವಿ ಅನ್ನೋದು ಮುಖ್ಯ. ಇದರಲ್ಲೂ ಹಾಗೇ, ಎಲ್ಲರಿಗೂ ತಲುಪುವಂಥ ಕಥೆಯನ್ನ ನನ್ನದೇ ಸ್ಟೈಲ್‌ನಲ್ಲಿ ಸ್ಕ್ರೀನ್‌ ಮೇಲೆ ಪ್ರಸೆಂಟ್‌ ಮಾಡಿದ್ದೇನೆ.

ಟೀಸರ್‌ ನೋಡಿದ್ರೆ, ರಾ ಮೇಕಿಂಗ್‌ ಎದ್ದು ಕಾಣಿಸುತ್ತಿದೆಯಲ್ಲ?
ಚಿತ್ರದ ಸಬ್ಜೆಕ್ಟ್ ಹಾಗಿದೆ. ಅದಕ್ಕೆ ತಕ್ಕಂತೆ ಮೇಕಿಂಗ್‌ ಮಾಡಿದ್ದೇವೆ. ಒಬ್ಬ ವ್ಯಕ್ತಿಯೊಳಗಿನ ಪ್ರೀತಿ-ಪ್ರೇಮ, ಭಯ, ಅಸಹನೆ, ಆಕ್ರೋಶ, ಆನಂದ, ಎಲ್ಲವನ್ನೂ ಇದರಲ್ಲಿ ಕಟ್ಟಿಕೊಡಬೇಕಾಗಿತ್ತು. ಹಾಗಾಗಿ ಅದೆಲ್ಲದರ ಝಲಕ್‌ ಅನ್ನು ಟೀಸರ್‌ನಲ್ಲಿ ನೋಡಬಹುದು. ಸಿನಿಮಾದಲ್ಲಿ ಅದೆಲ್ಲದಕ್ಕೂ ಉತ್ತರ ಸಿಗುತ್ತದೆ. ಪ್ರತಿ ದೃಶ್ಯ, ಸನ್ನಿವೇಶಗಳು ಕಾಡುತ್ತ ಸಾಗುತ್ತದೆ.

Advertisement

ಚಿತ್ರದ ಟೀಮ್‌ ಬಗ್ಗೆ ಏನಂತೀರಾ..?
ಇಡೀ ಚಿತ್ರವನ್ನು ಧನಂಜಯ್‌ ಸಂಭಾಳಿಸಿಕೊಂಡು ಹೋಗುತ್ತಾರೆ. ಉಳಿದಂತೆ ನಿವೇದಿತಾ, ಅಮೃತಾ ಅಯ್ಯಂಗಾರ್‌, ಮೋನಿಷಾ, ಸಪ್ತಮಿ ಹೀಗೆ ಹಲವರ ಪಾತ್ರಗಳು ಅದಕ್ಕೆ ಜೊತೆಯಾಗಿ ಸಾಗುತ್ತವೆ. ಬಹುತೇಕ ಹೊಸ ಹುಡುಗರ ಜೊತೆಗೆ ಈ ಚಿತ್ರವನ್ನು ಮಾಡಿದ್ದೇನೆ. ನಾನು ಏನು ಥಿಂಕ್‌ ಮಾಡ್ತೀನಿ ಅನ್ನೋದು, ಮೊದಲು ನನ್ನ ಜೊತೆಗಿದ್ದವರಿಗೆ ಗೊತ್ತಾಗಬೇಕು. ಆನಂತರವೇ ಅದನ್ನ ಜನರಿಗೆ ತಲುಪಿಸೋದಕ್ಕೆ ಸಾಧ್ಯವಾಗೋದು. ಈ ಟೀಮ್‌ನಿಂದ ಅದು ಸಾಧ್ಯವಾಗಿದೆ.

  • ಜಿ.ಎಸ್‌.ಕಾರ್ತಿಕ ಸುಧನ್‌
Advertisement

Udayavani is now on Telegram. Click here to join our channel and stay updated with the latest news.

Next