Advertisement

ಹೀಗೂ ಒಂದು ನರ(Nerves)ಮೇಧ

11:41 PM Oct 27, 2023 | Team Udayavani |

ನ. 1ರಂದು ಕರ್ನಾಟಕ ರಾಜ್ಯೋತ್ಸವ. 1956ರಿಂದ ಭಾಷಾವಾರು ಪ್ರಾಂತಗಳು ರಚನೆಯಾದಂದಿನಿಂದ (1973ರಲ್ಲಿ ಕರ್ನಾಟಕ ರಾಜ್ಯವೆಂದು ಘೋಷಣೆ) ರಾಜ್ಯೋತ್ಸವ ನಡೆಯುತ್ತಿದೆ. ಇದು ರಾಜಕೀಯ ಆಡಳಿತಾತ್ಮಕ ದೃಷ್ಟಿ. ಅದಕ್ಕೂ ಮುನ್ನ ಐದಾರು ರಾಜ್ಯಗಳಲ್ಲಿ ಕನ್ನಡಿಗರು ಹಂಚಿ ಹೋಗಿದ್ದರು. ಹೀಗಿದ್ದರೂ ಬ್ರಿಟಿಷರ ಕಾಲದಲ್ಲಿ 1890ರಲ್ಲಿ ಧಾರವಾಡದಲ್ಲಿ, 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ದೃಷ್ಟಿಯಿಂದ ಭಾವನಾತ್ಮಕ ಕನ್ನಡ ನಾಡು ಆರಂಭಗೊಂಡಿತ್ತು. ಸ್ವತಂತ್ರ ಭಾರತದ ಕರ್ನಾಟಕ ಕನ್ನಡ ಮಾತನಾಡುವ ಪ್ರದೇಶವನ್ನು ಕಳೆದುಕೊಂಡದ್ದೆಷ್ಟು?, ನಾಯಕರು ಅನುಭವಿಸಿದ ರಾಜಕೀಯ ಅಧಿಕಾರ, ಕಳೆದುಕೊಂಡ ಕನ್ನಡಭೂಮಿಯ ನಷ್ಟಕ್ಕೆ ಸಮನಾದೀತೆ?

Advertisement

5-5-1915ರಂದು ಕನ್ನಡ ಮಾತನಾಡುವ ಜನರು ಐದಾರು ಪ್ರಾಂತಗಳಲ್ಲಿ ಹರಿದು ಹಂಚು ಹೋಗಿದ್ದ ಕಾಲದಲ್ಲಿ ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌, ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಬೆಂಗಳೂರಿನಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್‌ (ಕಸಾಪ) ಸ್ಥಾಪನೆಯಾಯಿತು. ಬಳಿಕ ಕರ್ನಾಟಕ ಸಾಹಿತ್ಯ ಪರಿಷತ್‌, 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಎಂದಾಯಿತು. 20-7-1890ರಲ್ಲಿಯೇ ರಾ.ಹ.ದೇಶಪಾಂಡೆ ಮತ್ತಿತರ ಸಮಾನ ಮನಸ್ಕರು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ ಕನ್ನಡನಾಡಿನ ಕನಸಿನ ಬೀಜ ಬಿತ್ತಿದ್ದರು. ಮಹಾತ್ಮಾ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ರಾಷ್ಟ್ರೀಯ ಕಾಂಗ್ರೆಸ್‌ ಮಹಾಧಿವೇಶನವಾದ ಬೆಳಗಾವಿ ಸಮ್ಮೇಳನದಲ್ಲಿ (1924) ಕರ್ನಾಟಕ ಏಕೀಕರಣಕ್ಕೆ ಚಾಲನೆ ದೊರಕಿತ್ತು.

ಕಸಾಪ: ಮೊದಲ ಕಲರವ
ಕಸಾಪ ಉದ್ಘಾಟನೆ ಸಮಾರಂಭದಲ್ಲಿ ಬೆಂಗಳೂರು, ಕೋಲಾರ, ಮೈಸೂರು, ಮಂಡ್ಯ, ಶಿವಮೊಗ್ಗ ಮೊದಲಾದ ಜಿಲ್ಲೆಗಳನ್ನು ಒಳಗೊಂಡ ಮೈಸೂರು ಪ್ರಾಂತ, ರಾಯಚೂರು, ಕಲಬುರಗಿ, ಬೀದರ್‌ ಸಹಿತದ ಹೈದರಾಬಾದ್‌ ಪ್ರಾಂತ (ಈಗ ಕಲ್ಯಾಣ ಕರ್ನಾಟಕ), ಧಾರವಾಡ, ಬೆಳಗಾವಿ, ವಿಜಯಪುರ, ಉತ್ತರ ಕನ್ನಡವನ್ನು ಒಳಗೊಂಡ ಮುಂಬಯಿ ಪ್ರಾಂತ, ಕೊಡಗು ಪ್ರಾಂತ (ಕೊಡಗು ಜಿಲ್ಲೆಯೇ ಒಂದು ರಾಜ್ಯವಾಗಿತ್ತು, ಅದಕ್ಕೊಬ್ಬ ಮುಖ್ಯಮಂತ್ರಿ ಇದ್ದರು), ಕಾಸರಗೋಡು ಸಹಿತ ಕರಾವಳಿ ಭಾಗ, ಬಳ್ಳಾರಿ ಪ್ರದೇಶ ಒಳಗೊಂಡ ಮದ್ರಾಸ್‌ ಪ್ರಾಂತ್ಯದ ಕನ್ನಡ ವಿದ್ವಜ್ಜನರು ಬಂದಿದ್ದರು. ಕನ್ನಡದ ಕಲರವ ಇದ್ದ, ಈಗ ಮಹಾರಾಷ್ಟ್ರದ ಭಾಗವಾಗಿರುವ ಶೋಲಾಪುರದಿಂದಲೂ ಬಂದಿದ್ದರು. ಬೆಂಗಳೂರಿನ ಸುಮಾರು 400, ಹೊರಗಿನ 200 ವಿದ್ವಜ್ಜನರ ಆ ಕಾಲದ ದೊಡ್ಡ ಸಭೆ. ಮೈಸೂರು ವಿ.ವಿ. ಮೊದಲ ಕುಲಪತಿ ಎಚ್‌.ವಿ.ನಂಜುಂಡಯ್ಯನವರು ಪರಿಷತ್ತಿನ ಮೊದಲ ಅಧ್ಯಕ್ಷರು. ಇದಕ್ಕೂ ಮುನ್ನ ತಳೆದ ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಮೊದಲು ಕಾಣುವ ವ್ಯಕ್ತಿ ಕರ್ನಾಟಕ ಕುಲಪುರೋಹಿತರೆನಿಸಿದ ಆಲೂರು ವೆಂಕಟರಾಯರು.

ಕಳೆದುಕೊಂಡ ಭೂಭಾಗ
ಭಾಷಾವಾರು ಪ್ರಾಂತದ ಮೊದಲು ಕನ್ನಡ ಕಲರವ ಕೇಳಿಬರುತ್ತಿದ್ದ ಅನೇಕ ಭೂಪ್ರದೇಶಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಬ್ರಿಟಿಷರ ಕಾಲದಿಂದ ಮದ್ರಾಸ್‌ ಪ್ರಾಂತದಲ್ಲಿದ್ದು ಮಂಗಳೂರು ಜತೆ ಬೆಸೆದುಕೊಂಡಿದ್ದ ಕಾಸರಗೋಡು ಪ್ರದೇಶವನ್ನು ಕೇರಳಕ್ಕೆ ಬಿಟ್ಟುಕೊಡಲಾಯಿತು. ಕೆ.ಆರ್‌.ಕಾರಂತ, ಶಿವರಾಮ ಕಾರಂತರಂತಹವರು ಮಾಡಿದ ಪ್ರಯತ್ನ ಸಫ‌ಲವಾಗಲಿಲ್ಲ. ಕವಿ ಕಯ್ನಾರ ಕಿಂಞಣ್ಣ ರೈಯವರು “ಬೆಂಕಿ ಬಿದ್ದಿದೆ ಮನೆಗೆ’ ಎಂಬ ಕವನ ಹಾಡಿ ದುಃಖೀಸಿದರು, ಜೀವನದ ಕೊನೆಯವರೆಗೂ ಹೋರಾಡಿದರು. ಮದ್ರಾಸ್‌ ಪ್ರಾಂತದಲ್ಲಿದ್ದ ಬಳ್ಳಾರಿ ಕರ್ನಾಟಕದ ಜತೆ ವಿಲೀನವಾಯಿತಾದರೂ ಬಳ್ಳಾರಿ ಜತೆಗಿದ್ದ ಕಡಪ, ಕರ್ನೂಲು, ಅದೋನಿ, ಮಂತ್ರಾಲಯ, ಅನಂತಪುರ, ರಾಯಚೂರು ಜಿಲ್ಲೆಯಲ್ಲಿದ್ದ ಗದ್ವಾಲ, ಆಲಂಪುರ ಇವುಗಳೆಲ್ಲ ಆಂಧ್ರಪ್ರದೇಶದ ಪಾಲಾಯಿತು. ಈಗಲೂ ಅಲ್ಲಿ ಕನ್ನಡದ ಬಳಕೆ ಇದೆ. ಕನ್ನಡದ ನಾಡಾಗಿದ್ದ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಹೆಸರಾದ ಕೊಲ್ಹಾಪುರ, ಶೋಲಾಪುರ, ಮೀರಜ್‌, ಅಕ್ಕಲಕೋಟೆ, ಸಾಂಗ್ಲಿಯನ್ನು ಮಹಾರಾಷ್ಟ್ರಕ್ಕೆ ಧಾರೆ ಎರೆದೆವು.

ಈಗ ತಮಿಳುನಾಡಿನ ಭಾಗವಾಗಿರುವ ಕೊಯಮತ್ತೂರು, ಸೇಲಂ, ಉದಕಮಂಡಲ (ಊಟಿ) ಸುತ್ತಮುತ್ತ ಕನ್ನಡ ಆಡುಭಾಷೆಯಾಗಿತ್ತು. ಕೊಯಮತ್ತೂರಿನ ಕೃಷಿ ಕಾಲೇಜಿನಲ್ಲಿ ಕನ್ನಡದಲ್ಲಿ ಬೋಧಿಸುತ್ತಿದ್ದರು. 1980ರ ವರೆಗೂ ಅಲ್ಲಿ ಶಾಲೆಗಳಲ್ಲಿ ಕನ್ನಡ ಐಚ್ಛಿಕ ವಿಷಯವಾಗಿತ್ತು. 1940ರಲ್ಲಿ ಮಣಿಪಾಲದಿಂದ ಹೊರಡುತ್ತಿದ್ದ “ಅಂತರಂಗ’ ಪತ್ರಿಕೆ ಕೊಯಮತ್ತೂರಿನಲ್ಲಿ ಜನಪ್ರಿಯ ವಾರಪತ್ರಿಕೆಯಾಗಿತ್ತು. ಬೆಂಗಳೂರಿಗೆ ಹೊಂದಿಕೊಂಡಂತಿರುವ ಈಗಲೂ ಕನ್ನಡ ಮಾತನಾಡುವ ಜನರಿರುವ ಹೊಸೂರು, ಧರ್ಮಪುರಿ ತಮಿಳುನಾಡಿಗೆ, ಹಿಂದೂಪುರ ಆಂಧ್ರಪ್ರದೇಶಕ್ಕೆ ಹೋಗುವಂತಾಯಿತು.

Advertisement

ನಮ್ಮವರಿದ್ದೂ ಆದ ಅನ್ಯಾಯ
ರಾಜ್ಯ ಪುನರ್ವಿಂಗಡಣ ಆಯೋಗದ ಶಿಫಾರಸುಗಳ ಬಗೆಗೆ 18-4-1956ರಂದು ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿ, ಸಂಯುಕ್ತ ಪರಿಶೀಲನ ಸಮಿತಿಗೆ ಕಳುಹಿಸಲಾಯಿತು. 60 ಸದಸ್ಯರಿದ್ದ ಈ ಸಮಿತಿಯಲ್ಲಿ ಪ್ರಭಾವಿ ಕನ್ನಡಿಗರಾದ ಎಸ್‌.ನಿಜಲಿಂಗಪ್ಪ, ಬಿ.ಎನ್‌. ದಾತಾರ್‌, ಕರಾವಳಿಯ ಸಂಸದರಾಗಿದ್ದ ಯು. ಶ್ರೀನಿವಾಸ ಮಲ್ಯರಿದ್ದೂ ಕರ್ನಾಟಕಕ್ಕೆ ಅನ್ಯಾಯವಾಯಿತು. ಇದು ರಾಜ್ಯಸಭೆಯಲ್ಲಿಯೂ ಅಂಗೀಕಾರಗೊಂಡು 31-8-1956ರಂದು ರಾಷ್ಟ್ರಪತಿಗಳ ಅಂಗೀಕಾರ ದೊರಕಿ 1956ರ ನ.1ರಂದು ಭಾಷಾವಾರು ಪ್ರಾಂತ ಘೋಷಣೆಯಾಗಿ ಮೈಸೂರು ರಾಜ್ಯವೆನಿಸಿತು. 1973ರ ನ.1ರಂದು ಘೋಷಣೆಯಾದ “ಕರ್ನಾಟಕ ರಾಜ್ಯ’ ಈಗ ಸುವರ್ಣೋತ್ಸವದಲ್ಲಿದೆ.

“ಯಾವ ಯಾವ ಪ್ರದೇಶಗಳು ಕರ್ನಾಟಕದ ಕೈತಪ್ಪಿದವೋ ಅಲ್ಲೆಲ್ಲ ಆಯಾ ರಾಜ್ಯದವರ ಹಿತಾಸಕ್ತಿಗಾಗಿ ಭದ್ರವಾದ ತಡೆಗೋಡೆಯನ್ನು ಹಾಕಿಕೊಂಡರು. ಈ ಕಾರಣಕ್ಕಾಗಿ ಕನ್ನಡ ಭಾಷೆ ಅಲ್ಲಿಂದ ನಿಧಾನವಾಗಿ ಅಳಿವಿನ ಅಂಚಿಗೆ ತಲುಪಿತು’ ಎನ್ನುತ್ತಾರೆ ವಿಶ್ರಾಂತ ಪ್ರಾಂಶುಪಾಲ, ಸಂಶೋಧಕ ಡಾ| ಅನಿಲ್‌ಕುಮಾರ್‌ ಶೆಟ್ಟಿ ಕೋಟ.

ಅಡಾಲ್ಫ್ ಹಿಟ್ಲರ್‌ ಲಕ್ಷ ಲಕ್ಷ ಯಹೂದಿಗಳನ್ನು ವಿಷಾನಿಲದ ಪೆಟ್ಟಿಗೆಗೆ (ಹೋಲೋಕಾಸ್ಟ್‌) ನೂಕಿ ಸಾಮೂಹಿಕ ನರಮೇಧ ಮಾಡಿದ ಎಂಬುದನ್ನು ಇತಿಹಾಸದಲ್ಲಿ ಓದುತ್ತೇವೆ. ಕನ್ನಡಿಗರ ಅಸ್ಮಿತೆ ಇದ್ದ ಪ್ರದೇಶವನ್ನು ಬೇರೆ ರಾಜ್ಯಗಳಿಗೆ ಧಾರೆ ಎರೆದು ಕೊಡುವಾಗ ಆಡಳಿತ ನಾಯಕಮಣಿಗಳು ಸ್ವಾರ್ಥಕ್ಕಾಗಿ ಕಣ್ಮುಚ್ಚಿ ಕುಳಿತ ಪರಿಣಾಮ ಕನ್ನಡಿಗರ ಅಸ್ಮಿತೆಯು ಸ್ಲೋಪಾಯ್ಸನ್‌(ನಿಧಾನ ವಿಷಾನಿಲ)ಗೆ ತುತ್ತಾಗಿ ಅಸುನೀಗುತ್ತ ಬಂತು. ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್‌ ಕುರುಡುಪ್ರೇಮದಿಂದ ಕನ್ನಡದ ಅಸ್ಮಿತೆಗೆ ಧಕ್ಕೆ ತರುತ್ತಿದ್ದೇವೆ. ಹಲವು ವರ್ಷಗಳಿಂದ ಆಡಳಿತ ಬಲಾಡ್ಯರೇ ಹಣದ ಮರಿ ಹಾಕುವ ಆಂಗ್ಲ ಮಾಧ್ಯಮ ಶಾಲೆಗಳನ್ನು ಖಾಸಗಿ ನೆಲೆಯಲ್ಲಿ ತೆರೆದು ತಮ್ಮದೇ ಸಂಸ್ಕೃತಿಯ, ತಮ್ಮದೇ ಸರಕಾರದ ಕನ್ನಡ ಮಾಧ್ಯಮ ಶಾಲೆಗಳನ್ನು ಅದುಮುತ್ತಿದ್ದಾರೆ.

ಭೂಪ್ರದೇಶಗಳು ಆಹಾರಧಾನ್ಯ ಕೊಡುವುದರಿಂದ ಸಜೀವವೂ ಹೌದು. ಈಗ ಅದನ್ನು ಹಣದ ಕಾರ್ಖಾನೆಯಾಗಿಸಿ ನಿರ್ಜೀವ ಸ್ಥಾನ ಕೊಟ್ಟಿದ್ದೇವೆ. ಮಾನವರು ಸಜೀವಿಗಳಾಗಿರುವುದರಿಂದಲೇ ತಲೆಮಾರುಗಳಿಂದ ಭಾಷೆ, ಆಚರಣೆಗಳಲ್ಲಿ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿರುವುದು, ಬಹುತ್ವವಿರುವುದೂ ಇದರಿಂದಲೇ. ನಾವು ರಾಜಕೀಯಾಧಾರಿತ ಭೌಗೋಳಿಕ ಆಡಳಿತಕ್ಕಾಗಿ ಸಂಸ್ಕೃತಿಯನ್ನು ಬಲಿ ಕೊಡುವುದು ಒಂದರ್ಥದಲ್ಲಿ ಜನಾಂಗವನ್ನೇ ನಿರ್ವೀಯರನ್ನಾಗಿ ಮಾಡಿದಂತೆ. ಇದು ನರಮೇಧವಲ್ಲ, ಜನರ ನರಗಳ(Nerves)ಮೇಧ. ಒಂದು ಜನಾಂಗದ ಭಾಷೆಯ ನರಗಳನ್ನೇ ಕಟ್‌ ಮಾಡಿದೆವು/ಮಾಡುತ್ತಲೇ ಇದ್ದೇವೆ. 1947ರಲ್ಲಿ ನಮಗೇನೋ ಅಧಿಕಾರ ಬಂತು, ಅದನ್ನು ಮನಸೋ ಇಚ್ಛೆ ಚಲಾಯಿಸಿದೆವು ಕೂಡ. ಆದರೆ ಕನ್ನಡ ಸಂಸ್ಕೃತಿಗೆ ಕೊಟ್ಟ ಪೆಟ್ಟು ಎಂಥದ್ದು?

ಮಟಪಾಡಿ ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next