Advertisement

Bantwal: ಸಿಸಿ ಕೆಮರಾ ಇದ್ದರೂ ಕದ್ದು ಕಸ ಎಸೆವ ಖದೀಮರು!

02:32 PM Aug 06, 2024 | Team Udayavani |

ಬಂಟ್ವಾಳ: ಮೆಲ್ಕಾರ್‌-ಮುಡಿಪು ರಸ್ತೆಯ ಸಜೀಪಮುನ್ನೂರು ಗ್ರಾಮದ ಮಾರ್ನ ಬೈಲಿನಲ್ಲಿ ರಸ್ತೆ ಬದಿಯಲ್ಲೇ ರಾಶಿ ಗಟ್ಟಲೆ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇಲ್ಲಿ ದುರ್ನಾತದ ಜತೆಗೆ ಸೊಳ್ಳೆ ಉತ್ಪತ್ತಿಗೂ ಇದು ಕಾರಣವಾಗುತ್ತಿದೆ. ಈ ಭಾಗದಲ್ಲಿ ಪಂಚಾಯತ್‌ ಎಚ್ಚರಿಕೆ ಫ‌ಲಕ ಹಾಕಿದೆ, ಸಿಸಿ ಟಿವಿ ಕೆಮರಾವನ್ನೂ ಸಜ್ಜುಗೊಳಿಸಿದೆ. ಆದರೆ ಇವೆಲ್ಲವನ್ನು ಮೀರಿ ಖದೀಮರು ಕಸ ಎಸೆದು ಹೋಗುತ್ತಿದ್ದಾರೆ.

Advertisement

ಇಲ್ಲಿ ಕಸ ಹಾಕಬಾರದು ಎಂದು ಎಚ್ಚರಿ ಕೆಯ ಫಲಕವನ್ನು ಸಜೀಪ ಮುನ್ನೂರು ಗ್ರಾಪಂನಿಂದ ಹಾಕಲಾಗಿದೆ. ಆದರೆ ಅದರ ಬುಡದಲ್ಲೇ ಕಸಗಳು ರಾಶಿ ಬಿದ್ದು ದುರ್ನಾತ ಬೀರುತ್ತಿದೆ. ಇಲ್ಲಿ ಕಸ ರಾಶಿ ಬೀಳುತ್ತಿರುವ ಬಗ್ಗೆ ಆಗಾಗ ವರದಿ ಮಾಡಲಾಗುತ್ತದೆ. ಆಗ ಪಂ.ಮುತುವರ್ಜಿಯಿಂದ ಜೆಸಿಬಿ ಮೂಲಕ ಕಸವನ್ನು ತೆರವು ಮಾಡುತ್ತದೆ. ಆದರೆ, ಮರುದಿನದಿಂದಲೇ ಮತ್ತೆ ಕಸ ರಾಶಿ ಬೀಳಲು ಆರಂಭವಾಗುತ್ತದೆ.

ಯಾರು ಈ ಅನಾಗರಿಕರು?

ಈ ರೀತಿ ರಸ್ತೆ ಬದಿಯಲ್ಲಿ ಕಸ ಎಸೆದು ಹೋಗುವ ಅನಾಗರಿಕ ಪ್ರವೃತ್ತಿ ತೋರಿಸುತ್ತಿರುವವರು ಯಾರು ಎಂಬ ಬಗ್ಗೆ ಸ್ಥಳೀಯವಾಗಿ ಅವಲೋಕಿಸಿದಾಗ ಗ್ರಾಮಸ್ಥರು ಈ ರೀತಿ ಮಾಡುತ್ತಿಲ್ಲ. ಬದಲಾಗಿ ಹೊರಗಿನ ಗ್ರಾಮದವರು ಕಸ ಎಸೆದು ಹೋಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಸಿಸಿ ಕೆಮರಾ ಅಲಂಕಾರಕ್ಕಲ್ಲ, ಕ್ರಮ ಕೈಗೊಳ್ಳಿ

Advertisement

ಪಂಚಾಯತ್‌ ಇಲ್ಲಿ ಎಚ್ಚರಿಕೆ ಫ‌ಲಕ ಹಾಕಿದೆ, ಸಿಸಿ ಟಿವಿ ಕೆಮರಾ ಹಾಕಿದೆ. ಆದರೆ, ಈ ಸಿಸಿ ಕೆಮರಾದ ಫ‌ೂಟೇಜ್‌ಗಳನ್ನು ಬಳಸಿ ಕೊಂಡು ಖದೀಮರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡದೆ ಇರುವುದೇ ಸಮಸ್ಯೆಗೆ ಕಾರಣವಾಗಿದೆ. ಕಸ ಎಸೆದು ಹೋಗುವವರನ್ನು ಕೆಮರಾ ಮೂಲಕ ಗುರುತಿಸಿ ಅವರಿಗೆ ದಂಡ ವಿಧಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಅಥವಾ ಸಿಸಿ ಕೆಮರಾದ ವೀಡಿಯೋ ತುಣುಕನ್ನು ಪಂಚಾಯತ್‌ನ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಹಾಕಿದರೂ ಖದೀಮರನ್ನು ಜನರೇ ಗುರುತಿಸುತ್ತಾರೆ. ಅದು ಬಿಟ್ಟು ಕೇವಲ ಸಿಸಿ ಕೆಮರಾ ಹಾಕಿ ಬಿಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಮಾರ್ನಬೈಲಿನ ಕಥೆ ಮಾತ್ರವಲ್ಲ

ಮಾರ್ನಬೈಲಿನಲ್ಲಿ ಎರಡು ಕಡೆ ಕಸದ ರಾಶಿ ಇದೆ. ಮಾರ್ನಬೈಲ್‌ ಮಾತ್ರವಲ್ಲ ಇನ್ನೂ ಹಲವು ಕಡೆಗಳಲ್ಲಿ ಜನರು ಕಸ ಎಸೆದುಹೋಗುವ ಪ್ರವೃತ್ತಿ ಕಂಡುಬಂದಿದೆ. ಹಿಂದೆಲ್ಲ ಗ್ರಾಮದ ಮೂಲಕ ಹೆದ್ದಾರಿಯೋ, ಪ್ರಮುಖ ರಸ್ತೆಯೋ ಹಾದು ಹೋದರೆ ಅದು ಗ್ರಾಮಕ್ಕೆ ಹೆಮ್ಮೆಯಾಗಿತ್ತು. ಆದರೆ ಈಗ ಕಸ ಎಸೆಯುವಿಕೆಯಿಂದ ಅಪಾಯವೇ ಹೆಚ್ಚು. ಗ್ರಾಮೀಣ ಭಾಗದಲ್ಲಿ ಹೀಗೆ ಎಸೆದ ತ್ಯಾಜ್ಯಗಳ ವಿಲೇವಾರಿಗೂ ಸರಿಯಾದ ವ್ಯವಸ್ಥೆ ಇರುವುದಿಲ್ಲ.

ತ್ಯಾಜ್ಯದ ರಾಶಿ ನಿಯಂತ್ರಿಸಲಿ

ಮಾರ್ನಬೈಲಿನ ಕಸದ ರಾಶಿಗೆ ಸಂಬಂಧಿಸಿದಂತೆ ಗ್ರಾ.ಪಂ. ತತ್‌ ಕ್ಷಣ ಎಚ್ಚೆತ್ತುಕೊಂಡು ಸಿಸಿ ಕೆಮರಾದ ಜತೆಗೆ ಇತರ ಕಠಿನ ಕ್ರಮಗಳ ಮೂಲಕ ತ್ಯಾಜ್ಯದ ರಾಶಿಯನ್ನು ನಿಯಂತ್ರಿಸಬೇಕಿದೆ. ಈಗಾಗಲೇ ಕೊಳೆತು ನಾರುತ್ತಿರುವ ತ್ಯಾಜ್ಯಗಳನ್ನು ವಿಲೇ ಮಾಡದೇ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ.

-ಡಿ.ಗಂಗಾಧರ ನಾಯ್ಕ, ಸಜೀಪಮುನ್ನೂರು

ಸಿಸಿ ಕೆಮರಾ ಬುಡದಲ್ಲೇ ಕಸ!

ಸಜೀಪಮುನ್ನೂರು ಗ್ರಾ.ಪಂ. ಮಾರ್ನ ಬೈಲಿನಲ್ಲಿ ನಂದಾವರ ದ್ವಾರದ ಪಕ್ಕದಲ್ಲಿ ಮೆಲ್ಕಾರ್‌ ಭಾಗಕ್ಕೆ ಎರಡು ದೊಡ್ಡ ಕಸದ ರಾಶಿಗಳಿದ್ದು, ಪಂಚಾಯತ್‌ನಿಂದ ಮೂರು ಕಡೆ ಎಚ್ಚರಿಕೆ ಫಲಕಹಾಕಲಾಗಿದೆ. ಒಂದು ಕಡೆ ಸಿಸಿ ಕೆಮರಾವನ್ನೂ ಅಳವಡಿಸಲಾಗಿದ್ದು, ಮತ್ತೂಂದು ಕಡೆ ಸಿಸಿ ಕೆಮರಾ ಅಳವಡಿಕೆಗೆ ಕಂಬ ಅಳವಡಿಕೆಯ ಕಾರ್ಯ ಮಾಡಲಾಗಿದೆ. ಸದ್ಯಕ್ಕೆ ಸಿಸಿ ಕೆಮರಾದ ಬುಡದಲ್ಲೇ ಕಸದ ರಾಶಿ ಇದ್ದು, ಹೀಗಾಗಿ ಸಿಸಿ ಕೆಮರಾಕ್ಕೆ ಸಂಪರ್ಕ ಕೊಟ್ಟಿರುವ ಸಾಧ್ಯತೆ ಕಡಿಮೆ ಇದೆ

Advertisement

Udayavani is now on Telegram. Click here to join our channel and stay updated with the latest news.

Next