Advertisement

ನಿರೀಕ್ಷೆ ಮೂಡಿಸಿದ ಆರ್ಥಿಕ ಸಮೀಕ್ಷೆ: ಮುಂಗಡ ಪತ್ರದ ಮುನ್ನುಡಿ

10:59 AM Jan 30, 2018 | Team Udayavani |

ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಸಿದ್ಧಪಡಿಸಿರುವ 2018-19ನೇ ಸಾಲಿನ ಆರ್ಥಿಕ ಸಮೀಕ್ಷೆ ಯನ್ನು ನಂಬುವುದಾದರೆ ದೇಶದ ಆರ್ಥಿಕ ಸ್ಥಿತಿ ಉಜ್ವಲ ಆಗುವುದು ನಿಶ್ಚಿತ. ಮುಂದಿನ ಹಣಕಾಸು ವರ್ಷದಲ್ಲಿ ಶೇ. 7ರಿಂದ ಶೇ. 7.5 ಆರ್ಥಿಕ ಪ್ರಗತಿಯಾಗಲಿದೆ ಎಂದು ಸಮೀಕ್ಷೆ ಹೇಳಿದೆ. ನೋಟು ರದ್ದು ಮತ್ತು ಜಿಎಸ್‌ಟಿ ಜಾರಿಯಾದ ಬಳಿಕ ಆರ್ಥಿಕತೆ ತುಸು ಹಿನ್ನಡೆ ಅನುಭವಿಸಿದ್ದ ಪರಿಣಾಮವಾಗಿ ಜಿಡಿಪಿ ಅಭಿವೃದ್ಧಿ ದರ ಶೇ.6ಕ್ಕೆ ಕುಸಿದಿತ್ತು. ಆದರೆ ಇದು ತಾತ್ಕಾಲಿಕ ಹಿನ್ನಡೆ ಎನ್ನುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಶೇ. 7ರಿಂದ 7.5ರ ನಡುವಿನ ಅಭಿವೃದ್ಧಿ ಸುಸ್ಥಿರ ಎನ್ನಬಹುದು. ಹೀಗಾಗಿ ಈ ಸಮೀಕ್ಷೆ ಹಲವಾರು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ವಿಶೇಷವೆಂದರೆ ಸುಬ್ರಮಣಿ ಯನ್‌ ಬರೀ ಆರ್ಥಿಕ ವಿಚಾರಗಳು ಮಾತ್ರವಲ್ಲದೆ ಅದಕ್ಕೆ ತಳಕು ಹಾಕಿಕೊಂಡಿರುವ ಸಾಮಾಜಿಕ ಅಂಶಗಳತ್ತಲೂ ಗಮನ ಹರಿಸಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಭಾರತೀಯರ ಗಂಡು ಮಕ್ಕಳ ಮೋಹದ ಕುರಿತಾಗಿರುವ ವರದಿ. ಪ್ರಧಾನಿ ನರೇಂದ್ರ ಮೋದಿ ರವಿವಾರದ ಮನ್‌ ಕಿ ಬಾತ್‌ನಲ್ಲಿ ಒಂದು ಹೆಣ್ಣು ಮಗು ಹತ್ತು ಗಂಡು ಮಕ್ಕಳಿಗೆ ಸಮ ಎಂದು ಹೇಳಿದ್ದರೂ ಜನರು ಮಾತ್ರ ಇನ್ನೂ ಗಂಡು ಮಕ್ಕಳ ಮೋಹದಿಂದ ಹೊರಬಂದಿಲ್ಲ. ಅಪೇಕ್ಷಿಸಿದಷ್ಟು ಗಂಡು ಮಕ್ಕಳಾಗುವ ತನಕ ಹೆರುತ್ತಲೇ ಹೋಗುತ್ತಾರೆ ಎಂಬ ಅಂಶ ಸಮೀಕ್ಷೆಯಲ್ಲಿದೆ. 

Advertisement

ಜಿಎಸ್‌ಟಿ ಮತ್ತು ನೋಟು ರದ್ದು ಕ್ರಮದಿಂದಾಗಿ ತೆರಿಗೆ ಪಾವತಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗುವುದು ನಿರೀಕ್ಷಿತವೇ ಆಗಿತ್ತು. ಪರೋಕ್ಷ ತೆರಿಗೆ ಪಾವತಿಸುವವರ ಸಂಖ್ಯೆ ಶೇ. 50 ಮತ್ತು 18 ಲಕ್ಷ ಆದಾಯ ಕರ ಪಾವತಿದಾರರು ಹೆಚ್ಚಳವಾಗಿರುವುದು ದೇಶದಲ್ಲಿ ತೆರಿಗೆ ಶಿಸ್ತು ಮೂಡು ತ್ತಿರುವುದರ ಶುಭಸೂಚನೆ. ನಿರ್ದಿಷ್ಟವಾಗಿ ಜಿಎಸ್‌ಟಿ ಬಂದ ಬಳಿಕ ತೆರಿಗೆ ಪಾವತಿಸುತ್ತಿರುವ ಸಣ್ಣ ಉದ್ದಿಮೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇವರೆಲ್ಲ ಹಿಂದೆ ತೆರಿಗೆ ಹೊರೆಯಿಲ್ಲದೆ ಸವಲತ್ತುಗಳನ್ನು ಅನುಭವಿಸುತ್ತಿದ್ದವರು. ತೆರಿಗೆ ಕಳ್ಳತನ ಮಾಡುವುದೇ ದೊಡ್ಡ ಸಾಧನೆ ಎಂದು ಭಾವಿಸುವವರಿರುವ ದೇಶವಿದು. ಹೀಗಾಗಿ 125 ಕೋಟಿ ಜನರಲ್ಲಿ ತೆರಿಗೆ ಪಾವತಿಸುವುದು ಬರೀ ನಾಲ್ಕೈದು ಕೋಟಿ ಜನರು ಮಾತ್ರ. ಈ ಮನೋಭಾವ ಬದಲಾಗುತ್ತಿರುವುದು ಜಿಎಸ್‌ಟಿ ಮತ್ತು ನೋಟು ರದ್ದು ಕ್ರಮದ ಬಹುದೊಡ್ಡ ಸಾಧನೆ ಎನ್ನಬಹುದು. 

ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಸಮರ್ಪಕ ನೀತಿಗಳು ಅಗತ್ಯ ಎನ್ನುವುದು ಜವುಳಿ ಉದ್ಯಮದಲ್ಲಾಗಿರುವ ಅಭಿವೃದ್ಧಿಯಿಂದ ತಿಳಿದು ಬರುತ್ತಿದೆ. ತೆರಿಗೆ ವಿನಾಯಿತಿ ನೀಡಿದ ಪರಿಣಾಮವಾಗಿ ರೆಡಿಮೇಡ್‌ ಉಡುಪುಗಳ ರಫ್ತು ಹೆಚ್ಚಳವಾಗಿ ಜವುಳಿ ಉದ್ಯಮ ಚೇತರಿಸಿಕೊಂಡಿದೆ. ಇದೇ ರೀತಿಯ ಉತ್ತೇಜನವನ್ನು ಇನ್ನೂ ಕೆಲ ಉದ್ಯಮಗಳಿಗೆ ನೀಡುವ ಅಗತ್ಯವಿದೆ. ಮುಖ್ಯವಾಗಿ ಕೃಷಿಯ ಬಳಿಕ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ವಲಯಗಳೆಂದರೆ ರಿಯಲ್‌ಎಸ್ಟೇಟ್‌ ಹಾಗೂ ನಿರ್ಮಾಣ ಉದ್ಯಮ. ಈ ವಲಯಗಳು  ಈ ಮಾದರಿಯ ಉತ್ತೇಜನವನ್ನು ನಿರೀಕ್ಷಿಸುತ್ತಿದೆ. 2020ಕ್ಕಾಗಿ ಈ ಎರಡು ವಲಯಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದೇ ವೇಳೆ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಎಂದಿನಂತೆ ಈ ಸಲವೂ ನಿರಾಶದಾಯಕವಾದ ವರದಿಯೇ ಇದೆ. ಪ್ರಾಕೃತಿಕ ವಿಕೋಪಗಳು, ಹವಾಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದ ಕೃಷಿ ಇಳುವರಿ ಕುಂಠಿತವಾಗುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತಿದೆ. ಇದು ಸಹಜವೇ ಆಗಿದ್ದರೂ ಕೃಷಿ ಕ್ಷೇತ್ರವನ್ನು ಸುಧಾರಿಸಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ. 

ರಫ್ತು ಕ್ಷೇತ್ರದಲ್ಲಿ ದೇಶವಿನ್ನೂ ಬಹಳ ಹಿಂದುಳಿದಿರುವ ಅಂಶ ವರದಿಯಲ್ಲಿದೆ. ರಫ್ತಿನಲ್ಲಿ ದೇಶದ ಬೃಹತ್‌ ಶೇ. 10 ಕಂಪೆನಿಗಳ ಪಾಲು ಬರೀ ಶೇ. 38 ಮಾತ್ರ. ಬ್ರಜಿಲ್‌, ಜರ್ಮನಿ, ಮೆಕ್ಸಿಕೊ, ಅಮೆರಿಕದಂತಹ ದೇಶಗಳಿಗೆ ಹೋಲಿಸಿದರೆ ಇದು “ಅಸಹಜ’ ಬೆಳವಣಿಗೆ ಎಂದು ವ್ಯಾಖ್ಯಾನಿಸಿದ್ದಾರೆ ಸುಬ್ರಮಣಿಯನ್‌. ಇದೇ ಮಾದರಿಯಲ್ಲಿ ಅನಿಶ್ಚಿತ ತೈಲ ಬೆಲೆಯೂ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯ ಕುರಿತು ವರದಿಯಲ್ಲಿ ಎಚ್ಚರಿಕೆಯಿದೆ. ಈಗಾಗಲೇ ಜನರು ತೈಲ ಬೆಲೆಯೇರಿಕೆಯ ಬಿಸಿಗೆ ತತ್ತರಿಸುತ್ತಿದ್ದಾರೆ. ಇನ್ನಷ್ಟು ಬೆಲೆಯೇರಿಕೆಯಾದರೆ ಒಟ್ಟಾರೆ ವಿತ್ತೀಯ ಕೊರತೆಯ ಮೇಲೂ ಪರಿಣಾಮವಾಗಲಿದೆ. ಈ ಎಲ್ಲ ಅಂಶಗಳು ಸರಕಾರದ ಚಿಂತೆಗೆ ಕಾರಣವಾಗುವ ಸಾಧ್ಯತೆಯಿದೆ. ಆರ್ಥಿಕ ಸಮೀಕ್ಷೆ ಎನ್ನುವುದು ವಾರ್ಷಿಕ ಮುಂಗಡ ಪತ್ರದ ಮುನ್ನುಡಿಯಿದ್ದಂತೆ. ಮುಂಗಡ ಪತ್ರ ಹೇಗಿರಬಹುದು ಎನ್ನುವುದರ ಸುಳಿವನ್ನು ಇದು ನೀಡುತ್ತದೆ. ಆರ್ಥಿಕ ಸಮೀಕ್ಷೆಯಲ್ಲಿ ಹಲವು ನಿರೀಕ್ಷೆಗಳ ಬೀಜವನ್ನು ಬಿತ್ತಲಾಗಿದೆ. ಮುಂಗಡ ಪತ್ರದಲ್ಲಿ ಹಣಕಾಸು ಸಚಿವ ಅರುಣ್‌ ಜೈಟ್ಲೀ ಅವುಗಳು ಮೊಳಕೆಯೊಡಲು ಯಾವ ರೀತಿ ನೀರು ಗೊಬ್ಬರ ಒದಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next