Advertisement

ಕಾಮರೂಪಿ ರಂಗಸ್ಥಳದ ರಥ

07:33 PM Apr 04, 2019 | mahesh |

ಪುರಾಣದ ಪುಟಗಳನ್ನು ತೆರೆದಾಗ ರಥ, ಮಹಾರಥ, ಮಣಿರಥ ಮುಂತಾದ ರಥಗಳು ನಮ್ಮ ಕಣ್ಣಿಗೆ ಬೀಳುತ್ತವೆ. ವೈವಿಧ್ಯಮಯವಾದ ಈ ರಥಗಳಿಗೆ ಭಿನ್ನ ಭಿನ್ನ ಹೆಸರುಗಳೂ ಇದ್ದವು. ಕೇವಲ ಪ್ರಯಾಣಕ್ಕಾಗಿರುವ ವಾಹನ ಪುಷ್ಯರಥ. ಅನೇಕ ಚಕ್ರಗಳುಳ್ಳ ಯುದ್ಧಕ್ಕಾಗಿ ಬಳಸುವ ರಥದ ಹೆಸರು ಸ್ಯಂದನ. ಎರಡು ಹುಲಿಯ ಚರ್ಮಗಳನ್ನು ಹೊದಿಸಿರುವ ರಥಕ್ಕೆ ದ್ವೆ„ಪರಥವೆಂದು ಹೆಸರು. ಬಿಳಿಯ ಕಂಬಳಿ ಹೊದಿಸಿದ ರಥದ ಹೆಸರು ಕಾಂಬಳ. ಬಟ್ಟೆಯಿಂದ ಹೊದಿಸಲ್ಪಟ್ಟ ರಥ ವಾಸ್ತ್ರ. ಮರದ ಹೊದಿಕೆಯುಳ್ಳ ಪೆಟ್ಟಿಗೆಯಂಥ ರಥ ದಾರವ. ಎಂಟು ಕುದುರೆಗಳನ್ನು ಕಟ್ಟುವ ದೊಡ್ಡ ರಥದ ಹೆಸರು ವೈನೀತಕ.

Advertisement

ಗುಂಬ, ಚಕ್ರಗಳು, ಮೂತಿ, ನೊಗ, ಈಚುಮರ, ಕಡಾಣಿ, ಕಡೆಗೂಟಗಳು ಸೇರಿ ಒಂದು ರಥ ಸಿದ್ಧವಾಗುತ್ತದೆ. ಇವೆಲ್ಲಕ್ಕಿಂತ ಭಿನ್ನವಾದ ವಿಶಿಷ್ಟವಾದ, ಅಪೂರ್ವವಾದ ಕಾಮರೂಪಿ ರಥವೆ ರಂಗಸ್ಥಳದ ರಥ. ಮೂರಡಿ ವಿಸ್ತೀರ್ಣದ ಒಂದು ಚೌಕಾಕೃತಿಯ ಮರದ ದಪ್ಪ ಹಲಗೆ.ಅದಕ್ಕೆ ನಾಲ್ಕು ಮರದ ಕಾಲುಗಳು.ಇದರ ಎತ್ತರವೂ ಮೂರಡಿ ಆಗಬಹುದಷ್ಟೆ. ನಾಲ್ಕು ಮರದ ಚಕ್ರಗಳು. ಇದು ಹಿಮ್ಮೇಳದವರ ಆಸನದ ಮುಂದಿರುವ ಪೀಠ. ಇದನ್ನು ಯಕ್ಷಗಾನದ ಪರಿಭಾಷೆಯಲ್ಲಿ “ರಥ ಎಂದು ಹೇಳುತ್ತಾರೆ. ಈ ರಥ ನಿರ್ಮಾಣಕ್ಕೆ ಬೇಕಾದ ಸಮಯ ಕೇವಲ ಹತ್ತು ನಿಮಿಷ. ನಾಲ್ಕು ಚಕ್ರಗಳನ್ನು, ನಾಲ್ಕು ಕಾಲುಗಳನ್ನು ಭದ್ರಗೊಳಿಸುವ ಕಡಾಣಿ. ಬೇರೆ-ಬೇರೆಯಾಗಿರುವ ಈ ಮರದ ಸಾಧನಗಳನ್ನು ಬಿಗಿದು ರಥವಾಗಿಸಲು ಬೇಕಾದದ್ದು ಹತ್ತಿಪ್ಪತ್ತು ಅಡಿಗಳ ಉದ್ದದ ಹಗ್ಗ. ಇದು ಕೂಡಾ ಹತ್ತಿಯ ಬಿಗಿ ದಾರಗಳನ್ನು ಹೆಣೆದು ರಚಿಸಿದ ದಪ್ಪದ ಹಗ್ಗ. ಹಗ್ಗದಿಂದ ರಥದ ಆಕೃತಿ ಹೊಸೆಯಲು ಅನುಕೂಲವಾಗುವಂತೆ ನಿಯತ ಜಾಗಗಳಲ್ಲಿ ಸಣ್ಣ ಸಣ್ಣ ರಂಧ್ರಗಳು. ಚಕ್ರಗಳನ್ನು ಕ್ರಮವಾಗಿ ಇರಿಸಿ, ಆಧಾರಕ್ಕಿರುವ ನಾಲ್ಕು ಮರದ ತುಂಡುಗಳನ್ನು ಜೋಡಿಸಿ ಕಾಲುಗಳನ್ನು ಇರಿಸಿ ಮೇಲೆ ಹಲಗೆಯನ್ನು ಇಟ್ಟು ರಂಧ್ರಗಳಲ್ಲಿ ಹಗ್ಗ ತೂರಿ ವಿಧಿಯಂತೆ ಎಳೆದು ಕಟ್ಟಿದರೆ ಸಾಕು ಬಾಂಬು ಬಿದ್ದರೂ ಅದು ಸಡಿಲವಾಗದು. ಸಂಜೆ ಕಟ್ಟುವುದು, ಬೆಳಗ್ಗೆ ಬಿಚ್ಚುವುದು. ಯಾವ ಕಲಾವಿದನ ಕಲ್ಪನೆಯಲ್ಲಿ ಈ ರಥ ಮೂಡಿತೋ ಗೊತ್ತಿಲ್ಲ.

ರಾತ್ರಿಯಿಂದ ಬೆಳಗ್ಗಿನ ತನಕ ಈ ರಥ ರಥವಾಗಿಯೇ ಉಳಿಯುವುದಿಲ್ಲ. ಅದು ಸಾಂದರ್ಭಿಕವಾಗಿ ಅರಸನ ಕೋಟೆಯಾಗಬಲ್ಲುದು. ಉತ್ತುಂಗ ಹಿಮಾಲಯವಾಗಬಲ್ಲುದು. ಹನುಮಂತನ ಹೆಗಲಾಗಬಹುದು. ಬಂಗಾರದ ಸಿಂಹಾಸನ ಆಗಬಲ್ಲುದು. ಮಹಾರಾಣಿಯ ಹಂಸತೂಲಿಕಾತಲ್ಪವೂ ಆಗಬಲ್ಲುದು. ಯೋಗಿಯ ದರ್ಭಾಸನ, ದೇವರ ಪೀಠ, ಕಲ್ಲು-ಬಂಡೆ, ದೇವಸ್ಥಾನದ ಅಂಗಣ, ಇಂದ್ರನ ಐರಾವತ, ವಿಷ್ಣುವಿನ ಗರುಡ, ಬ್ರಹ್ಮನ ಹಂಸ, ಶಿವನ ನಂದಿ ಆಗುವ ಈ ರಥ ಅವಶ್ಯ ಬಿದ್ದರೆ ವಿಮಾನವೂ ಆಗಬಹುದು. ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳ ದೊರೆಗಳಿಗೆ ಅದೇ ಸಿಂಹವಿಷ್ಟರ. ಅದು ಯಾವುದಾಗಬೇಕೆಂದು ವೇಷಧಾರಿಗಳು ಹೇಳುತ್ತಾರೋ ಆ ಕ್ಷಣಕ್ಕೆ ಅದು ಅದೇ ಆಗಿಬಿಡುತ್ತದೆ. ಅಂತಹ ಕಾಮರೂಪಿ ರಥವಿದು.

ಮೇಳಗಳು ವಾಣಿಜ್ಯ ಕೇಂದ್ರಿತವಾದಾಗ ಅಲಂಕಾರಗಳು ಪ್ರಧಾನ ಪಾತ್ರ ವಹಿಸಿದವು. ಆದುದರಿಂದ ಈ ರಥದ ಸಾಂಕೇತಿಕತೆಯನ್ನು ಅರಿಯದೆ ದೊಡ್ಡ ದೊಡ್ಡ ಸಿಂಹಾಸನಗಳು ರಂಗಸ್ಥಳದ ಮೇಲೇರಿದವು. ಪ್ರಸಂಗಗಳಲ್ಲಿರುವ ಚತುರ್ದಶ ಭುವನಗಳ ಸಮಗ್ರ ಸಂಗತಿಗಳನ್ನು ರಂಗಸ್ಥಳವೆಂಬ ನಾಲ್ಕು ಕಂಬಗಳ ಚಪ್ಪರದ ನಡುವೆ ತರಬೇಕಾದ ಈ ಕಲೆಗೆ ಎಷ್ಟು ನೈಜ ದೃಶ್ಯ ತೋರಿಸಲು ಸಾಧ್ಯ? ಆದುದರಿಂದ ಹೊಸತನ್ನು ತರಲು ಹೊರಟಿರುವ ಯಾರೇ ಆಗಲೀ ಕಲಾಸ್ವರೂಪವನ್ನು ಮತ್ತು ಕಲಾತ್ಮಕತೆಯನ್ನು ತಿಳಿದಿರಬೇಕು. ಯಕ್ಷಗಾನ ಸಾಂಕೇತಿಕ ರಂಗಭೂಮಿ, ನೈಜ ರಂಗಭೂಮಿಯಲ್ಲ.

ಮೊದಲೆಲ್ಲಾ ಈ ರಥವನ್ನು ಅಗತ್ಯಕ್ಕೆ ತಕ್ಕಂತೆ ರಂಗಸ್ಥಳದ ಯಾವುದೇ ಭಾಗಕ್ಕೆ ಬೇಕಾದರೂ ತರುತ್ತಿದ್ದರಂತೆ. ಅಭಿಮನ್ಯು, ಶಬರ ಇತ್ಯಾದಿ ಪಾತ್ರಗಳು ಪ್ರವೇಶ ದ್ವಾರದಲ್ಲಿ ರಥದ ಮೇಲೆ ನಾಲ್ಕನೇ ಹೆಜ್ಜೆ ಕುಣಿದು ಅನಂತರವೇ ರಂಗಪ್ರವೇಶ ಮಾಡುತ್ತಿದ್ದರಂತೆ. ಕರ್ಣಾರ್ಜುನ ಕಾಳಗದಲ್ಲಿ ಅರ್ಜುನನ ಬಾಣಪ್ರಯೋಗದಿಂದ ಹಾರುವ ಕರ್ಣನ ರಥ, ಕರ್ಣನ ಬಾಣಪ್ರಯೋಗದಿಂದ ಜಾರುವ ಅರ್ಜುನನ ರಥವೂ ಆಗಿ ಈ ರಂಗಸ್ಥಳದ ರಥವೇ ಉಪಯೋಗಿಸಲ್ಪಟ್ಟು, ಕರ್ಣಾರ್ಜುನರು ಈ ರಥವನ್ನೇರಿಯೇ ಬಾಣಪ್ರಯೋಗ ಮಾಡುತ್ತಾ ವಿಶಿಷ್ಟ ದೃಶ್ಯ ನಿರ್ಮಾಣ ಮಾಡುತ್ತಿದ್ದರಂತೆ.

Advertisement

ಕಟೀಲು ಮೇಳಗಳಲ್ಲಿ, ಉಡುಪಿಯ ಯಕ್ಷಗಾನ ಕಲಾಕೇಂದ್ರದಲ್ಲಿ, ಈ ರಥದ ಬಳಕೆ ಇದೆ. ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷರು ಈ ರಥವನ್ನೇರಿಯೇ ವಿದೇಶದ ಜೈತ್ರಯಾತ್ರೆ ಮಾಡಿ ಬಂದಿದ್ದಾರೆ. ಈ ರಥವನ್ನು ಕಟ್ಟುವ ಬಿಚ್ಚುವ ಕಲೆಯನ್ನು ಮತ್ತು ಇದರೊಳಗಿರುವ ಪರಿಕರಗಳನ್ನು ಕಂಡು ಅಮೆರಿಕದ ಕಲಾರಸಿಕರು ಆಶ್ವರ್ಯ ಪಟ್ಟಿದ್ದಾರಂತೆ. ಆದರೆ ನಮ್ಮ ಕಲಾಕ್ಷೇತ್ರದ ಪ್ರಭೃತಿಗಳಿಗೆ ಈ ರಥವೊಂದು ಆಶ್ಚರ್ಯವಾಗಿ ಕಾಣದ್ದು ದಿಟಕ್ಕೂ ಆಶ್ಚರ್ಯ.

ರಾಜಕುಮಾರಿಯರಿಗೆ ಮಂಚವಾಗುವ, ಸಾರ್ವಭೌಮರ ಸಭಾಸ್ಥಾನದಲ್ಲಿ ಸ್ವರ್ಣ ಸಿಂಹಾಸನವಾಗುವ, ಯುದ್ಧ ಕ್ಷೇತ್ರದಲ್ಲಿ ಯೋಧರ ವಾಹನವಾಗುವ, ಭಾನು, ಭುವಿ, ಪಾತಾಳಗಳಲ್ಲಿ ಸಂಚರಿಸುವ ವಾಹನಗಳಾಗುವ, ರಂಗಸ್ಥಳದ ಸರ್ವಾರ್ಥವಾಗುವ ಮರದ ತುಂಡುಗಳ ಈ ರಥ ಯಕ್ಷಗಾನದ ಒಂದು ಅಪೂರ್ವ, ವಿಶಿಷ್ಟ ಕಲಾಗಾರಿಕೆ.

ತಾರಾನಾಥ ವರ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next