Advertisement

ಇಂಗ್ಲೆಂಡ್‌ ಕೋರ್ಟ್‌ನ ಆದೇಶ ಜಾರಿಗೊಳಿಸಲ್ಲ: ಹೈಕೋರ್ಟ್‌

10:26 AM Jul 25, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಪಘಾತಕ್ಕೀಡಾಗಿದ್ದ ಬ್ರಿಟಿಷ್‌ ದಂಪತಿಗೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಗೆ ಇಂಗ್ಲೆಂಡ್‌ನ‌ ನ್ಯಾಯಾಲಯವೊಂದು ನೀಡಿರುವ ಆದೇಶವನ್ನು ಜಾರಿಗೊಳಿಸಲಾಗದೆಂದು ರಾಜ್ಯ ಹೈಕೋರ್ಟ್‌ ಆದೇಶ ನೀಡಿದೆ.

Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ಇಂಗ್ಲೆಂಡ್‌ನ‌ ಸ್ಥಳೀಯ ನ್ಯಾಯಾಲಯ ಪ್ರಕರಣವನ್ನು ಮೆರಿಟ್‌ ಆಧರಿಸಿ ಇತ್ಯರ್ಥ ಮಾಡಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

“ಬ್ರಿಟಿಷ್‌ ದಂಪತಿ ವಿದೇಶಿ ನ್ಯಾಯಾಲಯದ ಆದೇಶದ ಪ್ರಮಾಣಿಕೃತ ಪ್ರತಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ, ಕೇವಲ ನಕಲು ಪ್ರತಿಯನ್ನು ಸಲ್ಲಿಸಲಾಗಿದೆ. ಪರಿಹಾರದ ಆದೇಶವನ್ನು ಹೊರಡಿಸುವ ಮುನ್ನ ಪ್ರತಿವಾದಿ (ಕೆಎಸ್‌ ಆರ್‌ಟಿಸಿ) ಸಲ್ಲಿಸಿದ್ದ ಆಕ್ಷೇಪಣೆಯನ್ನೂ ಸಹ ಪರಿಗಣಿಸಿಲ್ಲ. ಆ ನ್ಯಾಯಾಲಯ ಮೆರಿಟ್‌ ಆಧಾರದ ಮೇಲೆ ಆದೇಶವನ್ನು ನೀಡಿಲ್ಲ. ಸಹಜ ನ್ಯಾಯ ಪಾಲನೆ ಮಾಡಿಲ್ಲ. ಹಾಗಾಗಿ ಆ ಆದೇಶ ಇಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಹೇಳಿದೆ.

ಪ್ರಕರಣದ ಹಿನ್ನೆಲೆ: ಇಂಗ್ಲೆಂಡ್‌ನ‌ ನಿಗೆಲ್‌ ರೋರ್ಡಿಕ್‌ ಲಾಯ್ಡ ಹರಡೈನ್‌ ಮತ್ತು ಕರೋಲ್‌ ಅನ್‌ ಹರಡೈನ್‌ ದಂಪತಿ 2002ರ ಮಾ.18ರಂದು ಮೈಸೂರಿನಿಂದ ಗುಂಡ್ಲುಪೇಟೆಗೆ ಕಾರಿನಲ್ಲಿ ಹೋಗುವಾಗ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿತ್ತು. ಅವರು ಯುನೈಟೆಡ್‌ ಕಿಂಗ್‌ಡಂಗೆ ತೆರಳಿದ ನಂತರ ಅಲ್ಲಿನ ಎಕ್ಸೆಟೆರ್‌ ಕೌಂಟಿ ಕೋರ್ಟ್‌ನಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅವರ ಅರ್ಜಿ ಮಾನ್ಯ ಮಾಡಿ ಪರಿಹಾರ ನೀಡುವಂತೆ ಕೆಎಸ್‌ಆರ್‌ ಟಿಸಿಗೆ ಆದೇಶ ನೀಡಿತ್ತು. ಆನಂತರ ಆ ಆದೇಶವನ್ನು ಜಾರಿಗೊಳಿಸುವಂತೆ ಬೆಂಗಳೂರಿನ 25ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತ ಸೆಷನ್ಸ್‌ ಕೋರ್ಟ್‌ ಮುಂದೆ ಅರ್ಜಿ ಹಾಕಿದ್ದರು. ಸೆಷನ್ಸ್‌ ಕೋರ್ಟ್‌ ಬ್ರಿಟಿಷ್‌ ದಂಪತಿಯ ದಾವೆಯನ್ನು ಎತ್ತಿ ಹಿಡಿದಿತ್ತು. ಹಾಗಾಗಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ನಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next