Advertisement

ಎಂಜಿನಿಯರ್ಸ್‌ ದಿನ: ಇತಿಹಾಸದಲ್ಲಿದೆ ಭಾರತೀಯ ಶೈಲಿಯ ಎಂಜಿನಿಯರಿಂಗ್‌

04:00 PM Sep 15, 2020 | Karthik A |

ಕರ್ಮಭೂಮಿ ಪುಣ್ಯಭೂಮಿ ಜ್ಞಾನಭೂಮಿ ಯೋಗಭೂಮಿ ಎಂದೆಲ್ಲ ಕರೆಸಿಕೊಳ್ಳುವ ಈ ನಾಡು ಶಿಲ್ಪಕಲೆಗಳ ತವರೂರು. ದೇಶದ ಉದ್ದಗಲಕ್ಕೂ ಭೇಟಿ ನೀಡಿದಾಗ ಅರಿವಾಗುವ ಸಂಗತಿ ಎಂದರೆ ಈ ದೇಶದ ಪ್ರತಿ ಮೂಲೆಯಲ್ಲೂ ಒಬ್ಬ ಅತ್ಯಂತ ಪ್ರತಿಭಾನ್ವಿತ ಎಂಜಿನಿಯರ್‌ ಇದ್ದ ಎಂಬುದು.

Advertisement

ನಮ್ಮ ಎಂಜಿನಿಯರ್ ಇತಿಹಾಸ ಪರಂಪರೆ ಪ್ರಾರಂಭವಾಗುವುದು, ಮಯ ವಿಶ್ವಕರ್ಮ ಇವರಂತ ಶ್ರೇಷ್ಠ ವ್ಯಕ್ತಿತ್ವಗಳಿಂದ. ಇಂತಹ ಪರಂಪರೆಯಲ್ಲಿ ಹುಟ್ಟಿ ಬಂದ ಪ್ರತಿಯೊಬ್ಬ ಎಂಜಿನಿಯರ್‌ ಕೂಡ ಮಯ ವಿಶ್ವಕರ್ಮರೇ ಆಗಿದ್ದರು. ಆದ್ದರಿಂದಲೇ ವಿಶಿಷ್ಟ ರೀತಿಯ ಕಲೆ ಮತ್ತು ಇತಿಹಾಸವನ್ನು ಹೊದ್ದು ನಿಂತಿರುವ ವಾಸ್ತುಶಿಲ್ಪಗಳು ಅಂದಿನ ಕರಕುಶಲಕರ್ಮಿಗಳ ಉಡುಗೊರೆಯೇ ಸರಿ. ಕಾಲಾನಂತರದಲ್ಲಾದ ಬ್ರಿಟಿಷರ ದಾಳಿಯೇ ಮಹಾವಿದ್ಯೆ ನಮ್ಮ ಕೈತಪ್ಪಿ ಹೋಗುವಂತೆ ಮಾಡಿದ್ದು ಎಂದರೆ ತಪ್ಪಾಗಲಾರದು.

ಈ ದೇಶದ ಎಂಜಿನಿಯರ್‌ಗಳ ಪ್ರತಿಭೆಯನ್ನು ಜಗದಗಲಕ್ಕೆ ಸಾರಬಲ್ಲ ತಾಕತ್ತಿರುವ ಕೆಲವು ಪ್ರಾಚೀನ ವಾಸ್ತುಶಿಲ್ಪಗಳ ಉಲ್ಲೇಖ ಮಾಡುವ ಪ್ರಯತ್ನ ಇಲ್ಲಿದೆ.

ಕೆ.ಆರ್‌.ಎಸ್‌. ಡ್ಯಾಮ್‌
1924ರಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ಅವರು ಇದರ ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತಾರೆ. ಬರೊಬ್ಬರಿ 96 ವರ್ಷಗಳೇ ಸಂದರೂ ಆ ಡ್ಯಾಮ್‌ ಇಂದಿಗೂ ಬಲಿಷ್ಠವಾಗಿದೆ. ಇದರ ವಿಶೇಷತೆ ಏನೆಂದರೆ ಒಂದು ಹಿಡಿ ಸಿಮೆಂಟ್‌ ಅನ್ನು ಬಳಸದೇ, ಮೊಟ್ಟೆ, ಸೆಗಣಿ, ಇಟ್ಟಿಗೆ ಹುಡಿ ಇತ್ಯಾದಿಗಳನ್ನು ಬಳಸಿ ಇದರ ನಿರ್ಮಾಣವಾಗಿದೆ ಎಂಬುದು.

Advertisement

ಲೇಪಾಕ್ಷಿ ದೇವಾಲಯ
ಆಂಧ್ರಪ್ರದೇಶದಲ್ಲಿರುವ ಈ ದೇವಲಯಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಗುಡ್ಡದ ಮೇಲೆ ಹಾಸಿರುವ ಕಲ್ಲನ್ನು ಸಮತಟ್ಟು ಕೂಡ ಮಾಡದೆ ಹೇಗಿದೆಯೋ ಹಾಗೆ ಅದರ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ. ನಿರ್ಮಾಣದ ಹಂತದಲ್ಲಿ ಒಂದೆ ಒಂದು ಮೊಳೆ, ಸಿಮೆಂಟ್‌ ಅಥವಾ ಯಾವುದೇ ಸಾಧನವನ್ನು ಆಧಾರಕ್ಕಾಗಿ ಬಳಸಲಾಗಿಲ್ಲ. ಕೇವಲ ಕಲ್ಲಿನ ಜೋಡಣೆಯಲ್ಲೇ ದೇವಾಲಯದ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ ಈ ದೇವಾಲಯದ ನಡುವಿನಲ್ಲಿ ಇರುವ ಒಂದು ಕಂಬ ಯಾವುದೇ ಆಧರವಿಲ್ಲದೆ ನೇತಾಡುವಂತೆ ರಚನೆಗೊಂಡಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಬ್ರಿಟಿಷರ ಕಾಲದಲ್ಲಿ ಇದರ ಹಿಂದಿನ ವೈಜ್ಞಾನಿಕತೆಯನ್ನು ಅರಿಯುವ ಉದ್ದೇಶದಿಂದ ಕಂಬವನ್ನು ಸರಿಸಲು ಪ್ರಯತ್ನಿಸಿದಾಗ ಮೇಲ್ಚಾವಡಿಯಲ್ಲಿ ವಯತ್ಯಾಸಗಳು ಉಂಟಗುವುದರ ಜತೆಗೆ ಕಂಬದ ಒಂದು ಮೂಲೆ ನೆಲ ಸ್ಪರ್ಶವಾಯಿತೆ ಹೊರತು ವೈಜ್ಞಾನಿಕ ಮರ್ಮವನ್ನು ಅರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.

ಕೈಲಾಸ ಗುಹೆ
ಎಲ್ಲೋರದಲ್ಲಿ ಇರುವ ಈ ಗುಹಾ ದೇವಾಲಯವನ್ನು ಏಕಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ದೇವಾಲಯದ ಸುತ್ತಲಿನ ವರಾಂಡದಲ್ಲಿರುವ ಪ್ರತೀ ಕಂಬದಲ್ಲಿಯೂ ವಿಶೇಷ ವಿನ್ಯಾಸದ ಶಿಲ್ಪಕಲೆಗಳಿದ್ದು, ಪ್ರತಿಯೊಂದು ಕಂಬವೂ ಇತಿಹಾಸವನ್ನು ಸಾರುತ್ತದೆ. ರಥದ ಆಕೃತಿಯಲ್ಲಿ ಇದರ ಕೆತ್ತನೆಯಾಗಿದೆ. ದೊಡ್ಡ ಒಂದು ಬಂಡೆಕಲ್ಲಿನಲ್ಲಿ ಸುಂದರವಾದ ದೇವಾಲಯವನ್ನು ಕಾಣಬಲ್ಲ ಸಾಮರ್ಥ್ಯ ಅಂದಿನ ಎಂಜಿನಿಯರ್‌ಗಳಿಗೆ ಇತ್ತು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಸಿಂಧುದುರ್ಗಾ
ಮಹಾರಾಷ್ಟ್ರದಲ್ಲಿರುವ ಈ ಕೋಟೆ ಶಿವಾಜಿಯ ಕಾಲದ್ದು. ಅವರ ಕಾಲದಲ್ಲಿ ಅನೇಕ ಕೋಟೆಗಳ ನಿರ್ಮಾಣವಾಗಿದ್ದರು. ಈ ಕೋಟೆ ವಿಶೇಷ ಸ್ಥಾನವನ್ನು ಪಡೆದಿದೆ ಯಾಕೆಂದರೆ ಈ ಕೋಟೆ ಇರುವುದು ಸಮುದ್ರದ ಮಧ್ಯದಲ್ಲಿ. ಸುಮಾರು 400 ವರ್ಷ ಹಳೆಯದಾದ ಈ ಕೋಟೆಯನ್ನು ತಲುಪಲಿರುವುದು ಸಮುದ್ರ ಮಾರ್ಗ ಮಾತ್ರ. ಈ ಕೊಟೆಯ ಮುಖ್ಯದ್ವಾರವನ್ನು ಕಂಡು ಹಿಡಿಯುವುದು ಸುಲಭದ ಮಾತಲ್ಲ. ಅಕಸ್ಮಾತ್‌ ಪೂರ್ತಿ ಕೋಟೆಯನ್ನು ಸುತ್ತಿ ಬಂದಮೇಲೆ ದ್ವಾರದ ಅರಿವಾದರೂ ಒಳಗೆ ಹೋಗುವಾಗ ಆ ಮಾರ್ಗ ನೇರವಾಗಿಲ್ಲ. ನೆಲದ ಮೇಲೆ ಕೋಟೆ ಕಟ್ಟುವುದು ಸಾಮಾನ್ಯ ಅದರೆ ಇದು ನಿರ್ಮಾಣವಾಗಿರುವುದು ಸಮುದ್ರದ ನೀರಿನ ಮೇಲೆ. ಇದರ ನಿರ್ಮಾಣಕ್ಕೆ ಸುಮಾರು 75,000 ಕೆ.ಜಿ. ಕಬ್ಬಿಣವನ್ನು ಬಳಸಲಾಗಿದೆ ಮತ್ತು ಮೂರು ವರ್ಷದ ಕಾಲಾವಧಿಯಲ್ಲಿ ಇದನ್ನು ಸಂಪೂರ್ಣಗೊಳಿಸಿರುವುದು ಅವರ ಹೆಗ್ಗಳಿಕೆ. ಇಷ್ಟೇ ಅಲ್ಲದೆ ಸಮುದ್ರ ಮಧ್ಯದಲ್ಲಿ ನಿರ್ಮಾಣಗೊಂಡ ಕೋಟೆಯ ಒಳಗೆ ಮೂರು ಸಿಹಿನೀರಿನ ಬಾವಿ ಕೂಡ ಇದೆ. ಇವೆಲ್ಲ ಅಚ್ಚರಿಯ ಸಂಗತಿಗಳಲ್ಲವೇ? 17ನೇ ಶತಮಾನದ ಸುಮಾರಿಗೆ ನಿರ್ಮಾಣಗೊಂಡು ಇಂದಿಗೂ ಅಷ್ಟೇ ಸುದೃಢವಾಗಿರುವ ಇದು ಭಾರತೀಯ ವಾಸ್ತುಶಿಲ್ಪದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಕುತುಬ್‌ ಮಿನಾರ್‌
ಇಲ್ಲಿನ ಕಬ್ಬಿಣದ ಸ್ತಂಬ ಇಂದಿಗೂ ಅಂದಿನಂತೆ ಇದೆ. ಸಾವಿರಾರು ವರ್ಷಗಳಿಂದ ಗಾಳಿ ಮಳೆ ಬಿಸಿಲನ್ನು ಲೆಕ್ಕಿಸದೇ, ತುಕ್ಕು ಹಿಡಿಯದೇ ಉಳಿದಿರುವುದು ಮತ್ತೂಂದು ಅಚ್ಚರಿಯ ಸಂಗತಿ. ಅದೇ ರೀತಿ ಕರಾವಳಿಯಲ್ಲಿರುವ ಸಾವಿರ ಕಂಬದ ಬಸದಿ.ಇದು ಅಂದಿನ ವಾಸ್ತುಶಿಲ್ಪದ ಸಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಹೀಗೆ ನೋಡುತ್ತಾ ಹೋದರೆ ಭಾರತದ ಪ್ರತೀ ಪ್ರಚೀನಾ ವಾಸ್ತುಶಿಲ್ಪದಲ್ಲಿಯೂ ಮನಮೋಹಕ ವಿಚಾರಗಳಿವೆ. ಇಂದಿನ ವಿಜ್ಞಾನದ ಪರಿಧಿಯನ್ನೂ ಮೀರಿ ನಿಂತಿರುವ ಅಚ್ಚರಿಗಳಿವೆ. ಇವೆಲ್ಲದಕ್ಕೂ ಕಾರಣ ಹಿಂದಿನ ಎಂಜಿನಿಯರ್‌ಗಳು. ಅಂದಿನ ಎಲ್ಲ ದೇವಾಲಯಗಳು, ಮನೆಗಳು, ಡ್ಯಾಂಗಳು ಏನೇ ಇರಲಿ ಅವೆಲ್ಲವೂ ಪ್ರಕೃತಿಯ ಜತೆ ಸಮ್ಮಿಳಿತವಾಗಿದ್ದವು.

ಆದ್ದರಿಂದಲೇ ಅವೆಲ್ಲ ಹಲವು ಶತಕಗಳ ನಂತರವೂ ಬಲಿಷ್ಠವಾಗಿ ಉಳಿದುಕೊಂಡಿರುವುದು. ಆದರೆ ಇಂದು ನಾವು ಬೆಳವಣಿಗೆ, ಆಧುನೀಕರಣ ಎಂಬಿತ್ಯಾದಿ ಹೆಸರಿನಡಿಯಲ್ಲಿ ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೇವೆ. ನದಿಗೆ ವಿರುದ್ಧವಾಗಿ ಈಜಿದರೆ, ನದಿ ಅನುವುಮಾಡಿಕೊಡುವಷ್ಟೇ ಸಮಯ ನಮಗೆ ಅವಕಾಶವಿರುವುದು ಎಂಬುದನ್ನು ಮರೆಯಬಾರದು. ಇಂದಿನ ಯುವ ಎಂಜಿನಿಯರ್‌ಗಳಾದ ನಾವು ಪ್ರಕೃತಿಯ ಜತೆ ಜತೆಗೆ ಬದುಕುವಂತೆ ಮನೆ ಕಟ್ಟಡ ಇತ್ಯಾದಿಗಳ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಈ ಬಾರಿಯ ಎಂಜಿನಿಯರ್ ಡೇ ದಿನದಂದು ಈ ರೀತಿಯ ಸಂಕಲ್ಪವನ್ನು ಮಾಡಿ ಸುಂದರ ಮತ್ತು ಸ್ವಸ್ಥ ಸಮಾಜದ ನಿರ್ಮಾತೃಗಳು ನಾವಾಗೋಣ.

 ಸಾಯಿ ಶ್ರೀಪದ್ಮ ಡಿ.ಎಸ್‌., ಸಂತ ಫಿಲೋಮಿನಾ ಕಾಲೇಜು ಮೈಸೂರು 

 

Advertisement

Udayavani is now on Telegram. Click here to join our channel and stay updated with the latest news.

Next