ಗದಗ: ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿ ದೆಸೆಯಿಂದ ಹೊಸ ಹೊಸ ತಂತ್ರಜ್ಞಾನದ ಕಲಿಕೆ ಹಾಗೂ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನಾರ್ಮೇಷನ್ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ಡಾ| ಕವಿ ಮಹೇಶ ಹೇಳಿದರು.
ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ‘ಕ್ಷಿತಿಜ್-2019’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಂತ್ರಿಕ ಶಿಕ್ಷಣ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಏಕೈಕ ಕ್ಷೇತ್ರ ಇದಾಗಿದೆ. ದೇಶದ ಪ್ರಗತಿಯಲ್ಲಿ ತಾಂತ್ರಿಕ ಶಿಕ್ಷಣ ಪದವೀಧರರ ಪಾತ್ರ ಮಹತ್ವದ್ದಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿಶೇಷವಾದ ಕೌಶಲ ಮತ್ತು ಆಸಕ್ತಿ ಹೊಂದಿರುತ್ತಾರೆ. ಹೀಗಾಗಿ ದೇಶದ ಉನ್ನತ ಪರೀಕ್ಷೆಗಳಲ್ಲಿ ಅವರ ಫಲಿತಾಂಶವೇ ಮುಂಚೂಣಿಯಲ್ಲಿರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೊಸ ಹೊಸ ಅವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಜಾಣ್ಮೆಯ ಜೊತೆಗೆ ದೇಶದ ಅಭಿವೃದ್ಧಿಯ ಚಿಂತನೆ ಬಹು ಮುಖ್ಯ. ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಮಂಗಳಯಾನ-1 ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ನಡೆಸಿ, ಈಗ ಮಂಗಳಯಾನ-2ರ ಸಿದ್ಧತೆಯಲ್ಲಿ ತೊಡಗಿದ್ದೇವೆ. ಸಂವಹನ ಕ್ಷೇತ್ರದಲ್ಲಿಯೂ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದೇವೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಒತ್ತು ನಿಡಬೇಕಿದೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಯಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವ್ಯಕ್ತಿತ್ವ ರೂಪಿಸಿಕೊಳ್ಳುವುದರೊಂದಿಗೆ, ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಂಡಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರೊ|ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಶ್ರೀಗಳ ಕನಸಿನ ಕೂಸಾಗಿ ಬೆಳೆದ ತಾಂತ್ರಿಕ ಮಹಾವಿದ್ಯಾಲಯವು ಹತ್ತು ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ತಾವು ಬೆಳೆದ ಪರಿಸರವನ್ನು ಮರೆಯದೆ ಸಮಾಜದ ಋಣವನ್ನು ತೀರಿಸಬೇಕು. ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಮಾನಸಿಕವಾಗಿ ಗಟ್ಟಿಗೊಳ್ಳಬೇಕು. ಎಂತಹದ್ದೇ ಸಮಸ್ಯೆ, ಸವಾಲುಗಳು ಎದುರಾದರೂ ಅವುಗಳನ್ನು ಮೆಟ್ಟಿನಿಂತು ಗುರಿಯತ್ತ ಸಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.
ಡಾ| ಈರಣ್ಣ ಕೊರಚಗಾಂವ, ಡಾ| ಡಿ.ಎಂ. ಗೌಡರ, ಡಾ| ವಿ.ಟಿ. ಮಾಗಳದ, ಡಾ| ಜಿ.ಡಿ. ರೇವಣಕರ, ವಿಜಯಕುಮಾರ ಮಾಲಗಿತ್ತಿ, ಸುನೀಲ್ ಪಾಟೀಲ, ಪ್ರವೀಣ ಜ್ಯೋತಿ, ನಿಂಗಪ್ಪ ಪೂಜಾರ, ರಾಜೇಂದ್ರ ಕಡಿ, ಐ.ಎಸ್. ಪಾಟೀಲ, ಮಲ್ಲಿಕಾರ್ಜುನ ಜಿ.ಡಿ, ಚಂದ್ರಕಾಂತ ಹಟ್ಟಿ, ಬಿ.ಕೆ. ಬೆಳ್ಳೆರಿ, ಜಗದೀಶ್ವರ, ಪ್ರಸನ್ನ ನಾಡಗೌಡರ ಇದ್ದರು.