Advertisement

ಧೈರ್ಯವಿದ್ದರೆ 370ನೇ ವಿಧಿ ಜಾರಿಗೊಳಿಸಿ: ಮೋದಿ

10:33 AM Oct 15, 2019 | Team Udayavani |

ಜಲಗಾಂವ್‌/ಲಾತೂರ್‌: “ಧೈರ್ಯವಿದ್ದರೆ ರದ್ದು ಮಾಡಲಾಗಿರುವ ಸಂವಿಧಾನದ 370ನೇ ವಿಧಿಯನ್ನು ಮತ್ತೆ ಜಾರಿ ಮಾಡುತ್ತೇವೆ ಎಂದು ಹೇಳಿ, ಈ ಬಗ್ಗೆ ನಿಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ’
– ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರಿಗೆ ಸವಾಲು ಹಾಕಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಯುಕ್ತ ಜಲಗಾಂವ್‌ನಲ್ಲಿ ರವಿವಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಎನ್ನುವುದು ನಮಗೆ ಕೇವಲ ಭೂಮಿಯ ಭಾಗ ಮಾತ್ರ ಅಲ್ಲ. ನಮಗೆ ಅದು ದೇಶದ ಕಿರೀಟವೇ ಆಗಿದೆ ಎಂದು ಹೇಳಿದರು.

Advertisement

ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ವಿಚಾರದ ಬಗ್ಗೆ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಟೀಕಿಸಿದರು. 40 ವರ್ಷಗಳ ಅವಧಿಯಲ್ಲಿ ಹದಗೆಟ್ಟಿದ್ದ ಪರಿಸ್ಥಿತಿಯನ್ನು ನಾಲ್ಕು ತಿಂಗಳುಗಳಲ್ಲಿ ಯಥಾಸ್ಥಿತಿಗೆ ತರುತ್ತೇವೆ ಎಂದು ಘೋಷಣೆ ಮಾಡಿದರು ನರೇಂದ್ರ ಮೋದಿ.

ಪಾಕಿಸ್ಥಾನದ ಭಾಷೆ
ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರು ಪಾಕಿ ಸ್ಥಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಕೇಂದ್ರ ಸರಕಾರದ ನಿರ್ಧಾರಕ್ಕೆ ಆ ಎರಡು ಪಕ್ಷಗಳ ನಾಯಕರು ಬೆಂಬಲ ನೀಡಲೇ ಇಲ್ಲ ಎಂದು ವಾಗ್ಧಾಳಿ ನಡೆಸಿದರು ಪ್ರಧಾನಿ.

“ಜಮ್ಮು ಮತ್ತು ಕಾಶ್ಮೀರ ವಿಚಾರದ ನಿಟ್ಟಿನಲ್ಲಿ ಎರಡೂ ಪಕ್ಷಗಳು ಮೊಸಳೆ ಕಣ್ಣೀರು ಹರಿಸುವುದನ್ನು ಬಿಟ್ಟು ನಿಜವಾದ ನಿಲುವು ಏನು ಎನ್ನುವುದನ್ನು ಆ ಪಕ್ಷಗಳ ನಾಯಕರು ಘೋಷಣೆ ಮಾಡಬೇಕು. ಕೇಂದ್ರ ಸರಕಾರ ಕೈಗೊಂಡ ನಿರ್ಧಾರದಿಂದಾಗಿ ದೇಶದಲ್ಲಿ ಪ್ರತ್ಯೇಕತಾವಾದ ಮತ್ತು ಉಗ್ರವಾದ ಕೊನೆಗೊಳ್ಳಲಿದೆ’ ಎಂದರು ಮೋದಿ. ನಾವು ಕೈಗೊಂಡ ನಿರ್ಧಾರ ಸರಿಯಾಗಿಲ್ಲ ಎಂದಾದರೆ, ರದ್ದಾಗಿರುವ 370ನೇ ವಿಧಿಯನ್ನು ಮತ್ತೆ ಜಾರಿ ಮಾಡುತ್ತೇವೆ ಎಂಬ ಅಂಶವನ್ನು ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರು ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಭಾರತ ಬಲವಾಗಿದೆ
ಇಲ್ಲಿನ ಸಾಕೋಲಿಯಲ್ಲಿ ಮತ್ತೂಂದು ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ವಿಶ್ವವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತ ಮತ್ತಷ್ಟು ಬಲಯುತವಾಗಿದೆ. ಅಂಥ ಸವಾಲುಗಳನ್ನು ಎದುರಿಸಲಿದೆ ಎಂದಿದ್ದಾರೆ. ತಮ್ಮ ನೇತೃತ್ವದ ಸರಕಾರದ ಅವಧಿಯಲ್ಲಿ ಕೇವಲ ಜನರ ಬೇಡಿಕೆಯನ್ನು ಆಧರಿಸಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ ಮೋದಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next