Advertisement

ಸೌಲಭ್ಯ ಸಿಗದೆ ನರಳುತ್ತಿದ್ದಾರೆ ಎಂಡೋ ಸಂತ್ರಸ್ತರು

10:29 AM Sep 07, 2018 | |

ಪುತ್ತೂರು: ಒಳಮೊಗ್ರು ಗ್ರಾಮದ ಎಂಡೋಸಲ್ಫಾನ್‌ ಸಂತ್ರಸ್ತೆ ಪುಷ್ಪಾವತಿ ಸೆ. 5ರಂದು ಸಂಜೆ ನಿಧನ ಹೊಂದಿದರು. ಎಂಡೋ ಸಂತ್ರಸ್ತರು ತಮ್ಮ ಜೀವಿತದ ಅರ್ಧ ಆಯಸ್ಸಿನಲ್ಲೇ ಸಾಯುತ್ತಿದ್ದಾರೆ ಎನ್ನುವುದು ಹೊಸ ವಿಷಯವೇನೂ ಅಲ್ಲ. ಆದರೆ ಹಾಸಿಗೆ ಬಿಟ್ಟು ಏಳಲಾರದ ಪುಷ್ಪಾವತಿ ಅವರ ಮೈಮೇಲೆ ಹುಣ್ಣು ಆಗಿ ಕೊನೆಯುಸಿರೆಳೆದರು!

Advertisement

ಎಂಡೋ ಸಂತ್ರಸ್ತರಿಗೆ ಎಲ್ಲ ಸವಲತ್ತು ನೀಡಲಾಗುತ್ತಿದೆ ಎನ್ನುವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಗಮನ ಹರಿಸಬೇಕಿದೆ. ಪುಷ್ಪಾವತಿ ಅವರು ಜನಿಸಿದ್ದು 1984ರಲ್ಲಿ. ಸುಮಾರು 34 ವರ್ಷ ಮಲಗಿದಲ್ಲಿಯೇ ಇದ್ದರು, ಅದೂ ನೆಲದಲ್ಲಿ. ಮೈಯಲ್ಲಿ ಹುಣ್ಣಾಗಲು ಇಷ್ಟು ಸಾಕಲ್ಲವೇ? ಪುಷ್ಪಾವತಿ ಅವರ ಸ್ಥಿತಿ ಪರಿಶೀಲಿಸಿದ್ದ ವೈದ್ಯಾಧಿಕಾರಿಗಳು ಅವರಿಗೆ ವಾಟರ್‌ ಬೆಡ್‌ ಅಗತ್ಯವೆಂದು ಸೂಚಿಸಿದ್ದರು. ಮೂರು ತಿಂಗಳು ಕಳೆದರೂ ಸರಕಾರದಿಂದ ವಾಟರ್‌ ಬೆಡ್‌ ಬಾರದ ಕಾರಣ ಪುಷ್ಪಾವತಿ ದಾರುಣ ಸಾವು ಕಾಣಬೇಕಾಯಿತು.

ಅನೇಕ ಎಂಡೋ ಸಂತ್ರಸ್ತರು ಹುಣ್ಣು, ಹುಳುಗಳಾಗಿ ಸಾಯುತ್ತಿದ್ದಾರೆ, ಅದೂ ತಮ್ಮದಲ್ಲದ ತಪ್ಪಿಗೆ. ಆಕಾಶದಲ್ಲೇ ಸುತ್ತು ಹೊಡೆಯುತ್ತಾ ಹೆಲಿಕಾಪ್ಟರ್‌ ಮೂಲಕ ಗೇರು ತೋಟಕ್ಕೆ ಎಂಡೋ ಸಲ್ಫಾನ್‌ ಸಿಂಪಡಿಸುವಾಗ ಇಷ್ಟು ದೊಡ್ಡ ದುರಂತದ ಅರಿವು ಆಗದಿರಬಹುದು. ಆಮೇಲೆ ಗೊತ್ತಾಯಿತು. ಆಗಲಾದರೂ ಸರಕಾರ ತನ್ನ ಪ್ರಜೆಗಳ ಸುಖ-ದುಃಖ ಆಲಿಸಲು ಬರಬೇಕಿತ್ತು. ಈಗ ಅಮಾಯಕ ಪ್ರಜೆಗಳು ಹುಳುಗಳಾಗಿ ಸಾಯುವ ಹಂತಕ್ಕೆ ತಲುಪಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸರಕಾರ ಕಣ್ತೆರೆಯದೇ ಇದ್ದರೆ, ಇನ್ಯಾವಾಗ ಇವರ ನೆರವನ್ನು ನಿರೀಕ್ಷಿಸಲು ಸಾಧ್ಯ?

ಸವಲತ್ತು ಮರೀಚಿಕೆ
ಪುತ್ತೂರು ತಾಲೂಕಿನಲ್ಲಿ ಒಟ್ಟು 1,622 ಮಂದಿ ಎಂಡೋ ಸಂತ್ರಸ್ತರನ್ನು ಆರೋಗ್ಯ ಇಲಾಖೆ ಗುರುತಿಸಿ, ಗುರುತು ಚೀಟಿ ನೀಡಲಾಗಿದೆ. ಇನ್ನೂ 28 ಮಂದಿಯನ್ನು ಗುರುತಿಸಿದ್ದು, ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಟ್ಟಿದೆ. ಸರಕಾರದ ಸವಲತ್ತು ಪಡೆಯುವ ಪಟ್ಟಿಯಲ್ಲಿರುವ 1,622 ಜನರಲ್ಲೂ ಅದೆಷ್ಟೋ ಮಂದಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮಾಸಾಶನ, ಉಚಿತ ಬಸ್‌ ಪಾಸ್‌ – ಹೀಗೆ ಎಲ್ಲವನ್ನೂ ನೀಡುತ್ತಿದ್ದೇವೆ ಎನ್ನುವ ಅಧಿಕಾರಿಗಳು, ಜನಪ್ರತಿನಿಧಿಗಳು, ವಾಸ್ತವಾಂಶವನ್ನು ಮುಚ್ಚಿಡುತ್ತಿದ್ದಾರೆ. ಇನ್ನೂ ಹಲವಾರು ಸೌಲಭ್ಯಗಳು ಫಲಾನುಭವಿಗಳಿಗೆ ಸಿಗುತ್ತಲೇ ಇಲ್ಲ.

ಏನೆಲ್ಲ ಸೌಲಭ್ಯ ಬೇಕು?
ವಾಟರ್‌ ಬೆಡ್‌, ವೀಲ್‌ ಚೇರ್‌, ಫಿಸಿಯೋಥೆರಪಿ ಘಟಕ, ಪುನರ್ವಸತಿ ಕೇಂದ್ರ, ಉಚಿತ ರೇಷನ್‌ ಸಹಿತ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಲೇ ಬಂದಿದ್ದಾರೆ. ಇದು ನಿಜವೇ ಆಗಿದ್ದರೆ, ಒಳಮೊಗ್ರಿನ ಪುಷ್ಪಾವತಿ ಅವರ ಮೈಮೇಲೆ ಹುಣ್ಣು ಆಗಿ ಸಾಯುವ ಪ್ರಮೇಯ ಬರುತ್ತಿರಲಿಲ್ಲ ಎನ್ನುತ್ತಾರೆ ಪುಷ್ಪಾವತಿ ಅವರ ಮನೆಯವರು.

Advertisement

ಪೀಡಿತರ ಬೇಡಿಕೆಗಳು
ಎಂಡೋ ಸಲ್ಫಾನ್‌ ಪೀಡಿತರನ್ನು ಗುರುತಿಸುವುದು. ಸ್ಮಾರ್ಟ್‌ ಕಾರ್ಡ್‌ ನೀಡುವ ಮೂಲಕ ಉಚಿತ ವೈದ್ಯಕೀಯ ಸೇವೆ ಒದಗಿಸುವುದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ವಾಹನದ ವ್ಯವಸ್ಥೆ. ಹೋಮ್‌ ಬೇಸ್ಡ್ ಪ್ಯಾಲಿಯೇಟಿವ್‌ ಕೇರ್‌, ಮೊಬೈಲ್‌ ಮೆಡಿಕಲ್‌ ಯುನಿಟ್‌, ಉಚಿತ ಆಹಾರವನ್ನು ಪೂರೈಸುವುದು, ಎಂಡೋ ದುಷ್ಪರಿಣಾಮ ನಿವಾರಣೆಗೆ ಒಂದು ವಿಶೇಷ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳುವುದು ಇತ್ಯಾದಿ. ಈ ಎಲ್ಲ ಪ್ರಸ್ತಾವನೆ ಬಗ್ಗೆ 2013ರ ಆಗಸ್ಟ್‌ 31ರಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆದರೆ ಇನ್ನೂ ಜಾರಿಗೆ ಬಂದಿಲ್ಲ.

ಕಡತದಲ್ಲೇ ಎಲ್ಲವೂ
ಎಂಡೋ ಸಂತ್ರಸ್ತರಿಗೆ ಸರಕಾರದ ಕಡತದಲ್ಲಿ ಎಲ್ಲವೂ ಸಿಗುತ್ತಿದೆ. ಪರಿಶೀಲಿಸಿದರೆ ಮಾಸಾಶನ, ಬಸ್‌ ಪಾಸ್‌ ಬಿಟ್ಟು ಬೇರಾವ ಸೌಲಭ್ಯವೂ ಸಿಗುತ್ತಿಲ್ಲ. ನಮ್ಮ ಅಮಾಯಕತೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಕೆಲಸ ನಡೆಸಲಾಗುತ್ತಿದೆ. ಸಂತ್ರಸ್ತರಿಗೆ ತಲಾ 10 ಕೆ.ಜಿ. ದವಸ-ಧಾನ್ಯ ವಿತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಒಂದೆಡೆ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಎಲ್ಲಿಯೂ ಸಿಗುತ್ತಿಲ್ಲ.
– ಸಂಜೀವ ಕಬಕ
ಎಂಡೋ ವಿರೋಧಿ ಹೋರಾಟಗಾರ 

 ಸೌಲಭ್ಯದ ನಿರೀಕ್ಷೆ
ಪುತ್ತೂರು ತಾಲೂಕಿನ ಎಂಡೋ ಬಾಧಿತರಿಗಾಗಿ 12 ವಾಟರ್‌ ಬೆಡ್‌ ಹಾಗೂ 12 ವೀಲ್‌ ಚೇರ್‌ಗಳ ಅಗತ್ಯವಿದೆ ಎಂದು ಮಾರ್ಚ್‌ 19ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ಸೌಲಭ್ಯ ಸಿಗುವ ನಿರೀಕ್ಷೆ ಇದೆ.
– ಡಾ| ಅಶೋಕ್‌ ಕುಮಾರ್‌ ರೈ
ತಾಲೂಕು ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next