Advertisement

ಮಹಾತ್ಮರ ಸಂದೇಶಗಳು ಸಾರ್ವಕಾಲಿಕ

04:20 PM Jun 10, 2019 | Naveen |

ಇಂಡಿ: ಬುದ್ಧ, ಬಸವ, ಅಂಬೇಡ್ಕರ್‌ ಅವರು ಶೋಷಿತರ ಉದ್ದಾರಕರಾಗಿದ್ದು ಅವರ ಸಂದೇಶಗಳು ಸರ್ವಕಾಲಿಕ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

Advertisement

ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ಭಗವಾನ ಬುದ್ಧ ಜಯಂತಿ ನಿಮಿತ್ತ ಭಾರತೀಯ ಬೌದ್ಧಸಭಾ ಮತ್ತು ಡಿಪ್ರೇಸ್‌ ಕ್ಲಾಸ್‌ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘ ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.

ಸಾಮೂಹಿಕ ಸರಳ ವಿವಾಹ ಅತ್ಯಂತ ಪವಿತ್ರ. ಬೌದ್ಧ ಧರ್ಮದ ಪ್ರಕಾರ ಯಾವುದೇ ವ್ಯಕ್ತಿ ಜೀವನದಲ್ಲಿ ಅಡಂಭರವಿಲ್ಲದ ಶುದ್ಧ ಜೀವನ ಸಾಗಿಸುವುದಾಗಿದೆ. ಭಗವಂತ ಈ ಭೂಮಿ ಮೇಲೆ ಪ್ರತಿಯೊಂದು ಜೀವಿಗೆ ತನ್ನದೇಯಾದ ವಿಶಿಷ್ಟ ಶಕ್ತಿ ಕೊಟ್ಟಿದ್ದಾನೆ. ಅದನ್ನು ಒಳ್ಳೆ ಕಾರ್ಯಗಳಿಗೆ ಉಪಯೋಗಿಸಬೇಕು. ಇಂದು ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಬೌದ್ಧ ಮಹಾಸಭಾ ಪದಾಧಿಕಾರಿ ಗೌರವ ತರುವ ಕೆಲಸ ಮಾಡಿದ್ದಾರೆ ಎಂದರು.

ಇಂತಹ ಕಾರ್ಯಗಳು ಇನ್ನೊಂದು ಸಮುದಾಯಕ್ಕೆ ಮಾದರಿಯಾಗಿದೆ. ಒಂದು ಸಮಾಜದ ಪ್ರಗತಿಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ದಲಿತ ಸಮುದಾಯ ಬಂಧುಗಳು ಅಂಬೇಡ್ಕರ್‌ ಹೇಳಿದ ಮೂರು ಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟಗಳೆಂಬ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲಿ ಸಮಾನತೆ ಇದೆ ಅಲ್ಲಿ ಒಳ್ಳೆ ಕಾರ್ಯಗಳು ನಡೆಯುತ್ತವೆ. ಮನುಷ್ಯ ಇರುವ ದಿನಗಳಲ್ಲಿ ಪ್ರೀತಿ, ವಿಶ್ವಾಸದ ಜೀವನ ಸಾಗಿಸಬೇಕು. ಡಾ| ಬಾಬಾಸಾಹೇಬ ಅಂಬೇಡ್ಕರ್‌ ಕೇವಲ ಒಂದೇ ವರ್ಗಕ್ಕೆ ಸೀಮಿತರಲ್ಲ. ಇಡಿ ಶೋಷಿತ ಸಮುದಾಯದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್‌ ವಿಚಾರಗಳು ಮನೆ ಮನೆಗೆ ತಲುಪುವಂತಾಗಬೇಕು ಎಂದು ಹೇಳಿದರು.

ಡಾ| ಬಾಬಾಸಾಹೇಬ ಅಂಬೇಡ್ಕರ್‌ ಎರಡನೇ ಮೊಮ್ಮಗ ಭೀಮರಾವ್‌ ಅಂಬೇಡ್ಕರ್‌ ಮಾತನಾಡಿ, ಸಮಾಜದಲ್ಲಿ ಇಂತಹ ಸರಳ ಸಾಮೂಹಿಕ ವಿವಾಹಗಳು ನಡೆಯಬೇಕು. ಬುದ್ಧ ಧಮ್ಮ ತತ್ವ ಸಂದೇಶಗಳು ಅತ್ಯಂತ ಸರಳ ಮಾರ್ಗವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಒಳ್ಳೆ ಮಾರ್ಗ ಕಂಡುಕೊಳ್ಳಲು ಸರಳ ದಾರಿಯಾಗಿದೆ. ಇಂದಿನ ದಿನಗಳಲ್ಲಿ ದುಂದು ವೆಚ್ಚದ ಮದುವೆ ಮಾಡಿ ಸಾಲದ ವಿಷ ವರ್ತುಲದಲ್ಲಿ ಸಿಲುಕುವುದಕ್ಕಿಂತ ಎಲ್ಲ ಗುರು ಹಿರಿಯರ, ಬೌದ್ಧ ಭಂತೇಜಿಯವರ ಸನ್ನಿಧಾನದಲ್ಲಿ ಮದುವೆಗಳು ನಡೆದರೆ ಯಾವುದೇ ವಿಘ್ನಗಳು ಬರುವುದಿಲ್ಲ. ವರದಕ್ಷಿಣೆ ಸಮಾಜ ಘಾತಕ ಶಕ್ತಿ ಇದ್ದಂತೆ. ವರದಕ್ಷಿಣೆ ಕೊಡುವವರಿಗಿಂತ ತೆಗೆದುಕೊಳ್ಳುವದು ಮಹಾ ಅಫರಾಧ. ಸಂವಿಧಾನದಲ್ಲಿ ಕಠಿಣ ಶಿಕ್ಷೆ ಇರುವದರಿಂದ ಸರಳ ಸಾಮೂಹಿಕ ವಿವಾಹ ಸಮಾಜದಲ್ಲಿ ನಡೆಯಬೇಕು ಎಂದು ಹೇಳಿದರು. ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಸಮಾಜದಲ್ಲಿ ಸರಳ ಸಾಮೂಹಿಕ ವಿವಾಹಗಳು ನಡೆಯಬೇಕು. ಬೌದ್ಧ ಮಹಾಸಭಾದಿಂದ ನಡೆಯುವ ಸಾಮೂಹಿಕ ವಿವಾಹ ವಿಜಯಪುರ ಜಿಲ್ಲೆಯಲ್ಲಿಯೇ ಪ್ರಥಮ ಎಂದು ಹೇಳಿದರು.

Advertisement

ಬೀದರ ಬುದ್ಧ ವಿಹಾರದ ವರಜ್ಯೋತಿ ಅಣದೂರ ಪೂಜ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದ‌ರು. ಶಿವಶಂಕರ ಸ್ವಾಮಿಗಳು, ಶಿವಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದ‌ರು. ಚಂದ್ರಶೇಖರ ಕೋಡಬಾಗಿ, ದಿನೇಶ ವೀರಶೆಟ್ಟಿ, ಜಟ್ಟೆಪ್ಪ ರವಳಿ, ಕಾಸುಗೌಡ ಬಿರಾದಾರ, ಪ್ರಶಾಂತ ಕಾಳೆ, ಭೀಮಣ್ಣಾ ಕೌಲಗಿ, ಅಣ್ಣಾರಾವ್‌ ಸೋಲಾಪುರ ವೇದಿಕೆಯಲ್ಲಿದ್ದರು.

ತುಕಾರಾಮ ಅಣ್ಣಿಗೇರಿ, ರಮೇಶ ನಿಂಬಾಳ, ಮಲಕು ನಗಡ್ಡಿ, ರವಿ ನಡಗಡ್ಡಿ, ಧರ್ಮು ಸಾಲೋಟಗಿ, ಧರ್ಮು ಪರಶೇನರ, ರಾಜು ಬಾಣಿಕೋಲ, ಮುಕುಂದ ಕಾಂಬಳೆ, ಸತೀಶ ಸಾವಳಸಂಗ, ದತ್ತು ಕೋಳಿ, ಪರಮೇಶ್ವರ ಕನ್ನೊಳ್ಳಿ, ಅರ್ಜುನ ಹೊಸಮನಿ, ಮಹಾದೇವ ಬನಸೋಡೆ, ಧನರಾಜ ಮುಜಗೊಂಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next