Advertisement

ರೈತರ ಆರ್ಥಿಕಾಭಿವೃದ್ಧಿಗೆ ಪ್ರೋತ್ಸಾಹ

08:59 PM Jun 01, 2019 | Lakshmi GovindaRaj |

ಚಾಮರಾಜನಗರ: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡಿ ರೈತರ ಅರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಿ ಸ್ವಾಭಿಮಾನದ ಬದುಕು ಸಾಗಿಸಲು ಅನುಕೂಲವಾಗಿರುವ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಎಸ್‌. ಗುರುಮಲ್ಲಪ್ಪ ತಿಳಿಸಿದರು.

Advertisement

ತಾಲೂಕಿನ ದೇಮಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅವರಣದಲ್ಲಿ ನಡೆದ ವಿಶ್ವ ಹಾಲು ದಿನಾಚರಣೆ ಹಾಗು ಗ್ರಾಮೀಣ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಹಾಲು ವಿತರಣೆ ಮಾಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಯುವಕರಿಗೆ ಹೆಚ್ಚಿನ ಉದ್ಯೋಗವನ್ನು ಹೈನುಗಾರಿಕೆ ಕಲ್ಪಿಸಿದೆ. ಸಹಕಾರ ಸಂಘಗಳ ಮೂಲಕ ಪ್ರತಿ ಗ್ರಾಮಗಳಿಂದ ಹಾಲು ಶೇಖರಣೆ ಮಾಡಿ, ಗ್ರಾಹಕರಿಗೆ ನೇರವಾಗಿ ಮಾರಾಟವ ಮಾಡುವ ಜೊತೆಗೆ ಪ್ರತಿ ವಾರ ರೈತರಿಗೆ ಹಣ ನೀಡುವ ರೈತ ಸಂಸ್ಥೆಯಾಗಿದೆ. ಹೀಗಾಗಿ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಬದ್ಧರಾಗಬೇಕು ಎಂದರು.

ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಕಳೆದ ಏಪ್ರಿಲ್‌ ತಿಂಗಳಿಂದ ಕಾರ್ಯಾರಂಭ ಮಾಡಿದೆ. ಹಾಲಿನ ಶೇಖರಣೆ, ಹಾಲಿನ ಪ್ಯಾಕೆಟ್‌ ಹಾಗೂ ವಿಎಚ್‌ಟಿ ಘಟಕ ನಿರ್ಮಾಣ ಮಾಡಲಾಗಿದೆ. ಪ್ರತಿ ದಿನ ಡೇರಿಗೆ 2.50 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ. ಇದರಲ್ಲಿ 40 ಸಾವಿರ ಲೀಟರ್‌ ಹಾಲು ಮಾತ್ರ ಮಾರಾಟವಾಗುತ್ತಿದೆ. ಇನ್ನುಳಿದ ಹಾಲನ್ನು ಟೆಟ್ರಾ ಪ್ಯಾಕೆಟ್‌ ಯುನಿಟ್‌, ಹಾಗು ನಂದಿನಿ ಸಿಹಿ ಉತ್ಪನ್ನಗಳ ತಯಾರಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಾಲು ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಹೆಚ್ಚಿನ ಲಾಭ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.

ಚಾಮುಲ್‌ ನಿರ್ದೇಶಕ ಕಿಲಗೆರೆ ಬಸವರಾಜು ಮಾತನಾಡಿ, ರೈತರು ಗ್ರಾಮದಲ್ಲಿರುವ ಸಹಕಾರ ಸಂಘದ ಬೆಳವಣಿಗೆಗಾಗಿ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸರ್ಕಾರ ಹಾಗು ಒಕ್ಕೂಟದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.

Advertisement

ಚಾಮುಲ್‌ ಪ್ರಭಾರ ಉಪವ್ಯವಸ್ಥಾಪಕ ಎಂ.ಎನ್‌. ಆನಂದರಾಜ್‌ ಮಾತನಾಡಿ, ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರತಿ ಡೇರಿಗಳಲ್ಲಿ ಬಿಎಂಸಿ ಕೇಂದ್ರಗಳನ್ನು ನಿರ್ಮಾಣ ಮಾಡಿ, ಹಾಲು ಶೇಖರಣೆಗೊಂಡ ತಕ್ಷಣದಿಂದಲೇ ಸಂಸ್ಕರಣೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೇ ಕುದೇರು ಬಳಿ ಪ್ರತ್ಯೇಕ ಹಾಲು ಒಕ್ಕೂಟದ ಘಟಕವನ್ನು ಸ್ಥಾಪನೆ ಮಾಡಿದ್ದು, ಇದರ ಅಭಿವೃದ್ಧಿಗೆ ರೈತರು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕು. ಡೇರಿಗೆ ಕಲಬೆರಕೆ ಹಾಲು ಸರಬರಾಜು ಮಾಡದೇ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಗ್ರಾಮೀಣ ರೈತರ ಜಾಗೃತಿಗಾಗಿ ಕಿರು ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಯಿತು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಶ್ರೀಕಂಠಸ್ವಾಮಿ, ಪ್ರಭಾರ ಉಪ ವ್ಯವಸ್ಥಾಪಕರಾದ ಶ್ರೀಕಾಂತ್‌, ರವಿಕುಮಾರ್‌, ಮುರುಗೇಶ್‌, ಶಿವಕುಮಾರ್‌, ವಿಸ್ತರಣಾಧಿಕಾರಿಗಳಾದ ಪ್ರಭು, ರಾಜೇಂದ್ರಕುಮಾರ್‌, ಸಂಘದ ಉಪಾಧ್ಯಕ್ಷ ಚಿನ್ನಮ್ಮ, ಕಾರ್ಯದರ್ಶಿ ಶಿವನಾಗಪ್ಪ, ನಿರ್ದೇಶಕರಾದ ಸಿದ್ದಪ್ಪ, ಪ್ರಕಾಶ್‌, ಬಸವಣ್ಣ, ಶಿವಣ್ಣ, ಶಂಕರಪ್ಪ, ಗುರಸಿದ್ದಪ್ಪ, ನಂಜಮ್ಮಣಿ, ಮರಿಸಿದ್ದಯ್ಯ, ಚಿನ್ನಸ್ವಾಮಿ, ನಾಗರಾಜಶೆಟ್ಟಿ ಹಾಗು ಮುಖಂಡ ದೇಮಹಳ್ಳಿ ಶಿವಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next