Advertisement

ವಿಜ್ಞಾನ ಕೇಂದ್ರ ಸ್ಥಾಪನೆಗೆ ಒತ್ತು: ಡಿಸಿಎಂ ಪರಮೇಶ್ವರ್‌

10:06 AM Feb 21, 2019 | |

ನಾಗಮಂಗಲ: ವಿಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುವ ಹಾಗೂ ಯುವ ವಿಜ್ಞಾನಿಗಳನ್ನು ತಯಾರು ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

Advertisement

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್‌ ಸಭಾಮಂಟಪದಲ್ಲಿ ನಡೆದ ಮಠದ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆರನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ವಿಜ್ಞಾತಂ ಪ್ರಶಸ್ತಿ ಪ್ರದಾನ ಹಾಗೂ ಜ್ಞಾನ-ವಿಜ್ಞಾನ, ತಂತ್ರಜ್ಞಾನ ಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯುವ ವಿಜ್ಞಾನಿಗಳಿಗೆ ಪ್ರೋತ್ಸಾಹ: ಪ್ರಸ್ತುತ ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನದ ಅವಶ್ಯಕತೆ ಹೆಚ್ಚಾಗಿದೆ. ವಿದ್ಯಾರ್ಥಿಗಳನ್ನು ವಿಜ್ಞಾನಕ್ಕೆ ಪೂರಕವಾಗಿ ತಯಾರುಗೊಳಿಸಬೇಕಿದೆ. ಹಾಗಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ವಿಜ್ಞಾನ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ವಿಜ್ಞಾನ ಪರಿಕರಗಳನ್ನು ನೀಡುವ ಮೂಲಕ ಯುವ ವಿಜ್ಞಾನಿಗಳನ್ನು ತಯಾರು ಮಾಡಲು ಸರ್ಕಾರ ಕಟಿಬದ್ಧವಾಗಿದೆ ಎಂದರು. 

ಅಪಾರ ಕೊಡುಗೆ: ದೇಶದಲ್ಲಿರುವ ಅದೆಷ್ಟೋ ಮಠಗಳು ಧಾರ್ಮಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿವೆ. ಆದರೆ ಕರ್ನಾಟಕದಲ್ಲಿರುವ ಶ್ರೀ ಮಠಗಳು ಧಾರ್ಮಿಕತೆ ಜೊತೆ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
 
ಅಭಿವೃದ್ಧಿಯ ದಾಪುಗಾಲಿನಲ್ಲಿ ಬೆಳೆಯುತ್ತಿರುವ ಸಮಾಜಕ್ಕೆ ಅಗತ್ಯವಾದ ನೂತನ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಆದಿಚುಂಚನಗಿರಿ ಮಠ ಮುಂಚೂಣಿ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಅದ್ವಿತೀಯ ಕಾರ್ಯ ನಿರ್ವಹಿಸುತ್ತಿದ್ದು ವಿಜ್ಞಾನ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿರುವ ಶ್ರೀಮಠವನ್ನು ಹಾಗೂ ಸ್ವಾಮೀಜಿಯನ್ನು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಅಪರಿಮಿತ ಸಾಧನೆ: ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತು ಜ್ಞಾನ- ವಿಜಾnನ ಕ್ಷೇತ್ರದಲ್ಲಿ ಮಾಡುತ್ತಿರುವ ಅಪರಿಮಿತ ಸಾಧನೆಯಿಂದ ಶ್ರೀಮಠದ ಕೀರ್ತಿಯ ಜೊತೆಗೆ ರಾಜ್ಯದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿ ದ್ದಾರೆ ಎಂದು ಹೇಳಿದರು.

Advertisement

ವಿಜ್ಞಾತಂ ಪ್ರಶಸ್ತಿ ಪ್ರದಾನ: ಸಮ್ಮೇಳನದ ಪ್ರತೀತಿಯಂತೆ ವಿಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿರುವ ಹಿರಿಯ ವಿಜ್ಞಾನಿ ಡಾ.ಶರಶ್ಚಂದ್ರ ಅವರಿಗೆ ಶ್ರೀಮಠದ ವತಿಯಿಂದ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ವಿಜ್ಞಾತಂ ಪ್ರಶಸ್ತಿ ನೀಡಿ
ಗೌರವಿಸಲಾಯಿತು. 

ಹರಿದ್ವಾರದ ಪತಂಜಲಿ ಆಯುರ್ವೇದ ಮತ್ತು ಯೋಗಪೀಠದ ಸಂಸ್ಥಾಪಕ ಬಾಬಾ ರಾಮ್‌ದೇವ್‌, ಗುಜರಾತ್‌ ರಾಜ್‌ಕೋಟ್‌ನ ಹರ್ಷ, ವಿದ್ಯಾಮಂದಿರದ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿ, ಬೆಳಗಾವಿಯ ಸಾಧುಸಂಸ್ಥಾನಮಠದ ಶ್ರೀ ಶಿವಾನಂದ ಭಾರತಿ ಸ್ವಾಮಿ, ಶ್ರೀ ಪುರುಷೋತ್ತಮಾ ನಂದನಾಥ ಸ್ವಾಮೀಜಿ, ಪ್ರಸನ್ನನಾಥಸ್ವಾಮೀಜಿ, ಪ್ರಕಾಶ್‌ನಾಥಸ್ವಾಮೀಜಿ, ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು, ಸಂಸದ ಎಲ್‌.ಆರ್‌.ಶಿವರಾಮೇಗೌಡ, ಶಾಸಕ ಸುರೇಶ್‌ಗೌಡ, ಮಾಜಿ ಸಚಿವ ಪ್ರಕಾಶ್‌ ಹುಕ್ಕೇರಿ ಇತರರು ಇದ್ದರು.

ಪಟ್ಟಾಭಿಷೇಕೋತ್ಸವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥಸ್ವಾಮೀಜಿ ಅವರ 6ನೇ ವರ್ಷದ ವಾರ್ಷಿಕ ಪಟ್ಟಾಭಿಷೇಕದ ಅಂಗವಾಗಿ ಶ್ರೀಗಳಿಗೆ ಪಟ್ಟಾಭಿಷೇಕ ಕಾರ್ಯ ಕ್ರಮವನ್ನು ಸಹಸ್ರಾರು ಭಕ್ತರ ನಡುವೆ ಅತ್ಯಂತ ಭಕ್ತಿ ಭಾವದಿಂದ ನೆರವೇರಿಸಲಾಯಿತು. ಶ್ರೀ ಕ್ಷೇತ್ರದ ಬಿಜಿಎಸ್‌ ಸಭಾಭವನದಲ್ಲಿ ಬುಧವಾರ ನಡೆದ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಚಿನ್ನದ ಕಿರೀಟ ತೊಡಿಸಿ ಪುಷ್ಪವೃಷ್ಠಿ ಸಲ್ಲಿಸಲಾಯಿತು. ಶ್ರೀಮಠದ ಸಹಸ್ರಾರು ಭಕ್ತರು ಶ್ರೀಗಳ ವಾರ್ಷಿಕ ಪಟ್ಟಾಭಿಷೇಕವನ್ನು ಕಣ್ತುಂಬಿಕೊಂಡು ಸಂತಸಪಟ್ಟರು. ನಂತರ ಆಶೀರ್ವಚನ ನೀಡಿದ ಡಾ.ನಿರ್ಮಲಾ ನಂದನಾಥಸ್ವಾಮೀಜಿ ಅವರು, ಬ್ರಿಟೀಷರು ಭಾರತಕ್ಕೆ ಬಂದುದು ನಮ್ಮನ್ನು ಆಳಬೇಕೆಂದಲ್ಲ. ಅವರು ಬಂದದ್ದು ತಮ್ಮ ವಸ್ತುಗಳನ್ನು ಮಾರಾಟ ಮಾಡಲೆಂದು. ಹಾಗೆ ಬಂದವರು ನಮ್ಮ ದೌರ್ಬಲ್ಯವನ್ನು ಬಳಸಿಕೊಂಡು ನಮ್ಮನ್ನೆಲ್ಲ ಅವರ ಕೈವಶ ಮಾಡಿಕೊಂಡರು. ಆ ದೃಷ್ಟಿಯಿಂದ ಜನತೆ ದೌರ್ಬಲ್ಯವನ್ನು ಕಳೆದುಕೊಂಡು ಬಲಶಾಲಿಗಳಾಗಬೇಕು.

ದೈಹಿಕವಾಗಿ ಮಾತ್ರವಲ್ಲ ಜ್ಞಾನ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲೂ ಬಲಶಾಲಿಗಳಾಗಬೇಕು. ಭೈರವೈಕ್ಯ ಶ್ರೀಗಳ ಆಶಯವೂ ಅದೇ ಆಗಿತ್ತು. ಗುರುಗಳ ಆಶಯವನ್ನು ಸಾಕಾರಗೊಳಿಸುವತ್ತ ನಾವೆಲ್ಲರೂ ಅಭಿಮುಖರಾಗೋಣ ಎಂದು ತಿಳಿಸಿದರು.

ವಿಜ್ಞಾತಂ ಪ್ರಶಸ್ತಿ ಪ್ರದಾನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರ 6ನೇ ವರ್ಷದ ವಾರ್ಷಿಕ ಪಟ್ಟಾಭಿಷೇಕದ ಅಂಗವಾಗಿ ಜ್ಞಾನ-ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ‘ವಿಜ್ಞಾತಂ’ ಪ್ರಶಸ್ತಿಯನ್ನು ವಿಜ್ಞಾನ ಕ್ಷೇತ್ರಕ್ಕೆ ಅಪರಿಮಿತ ಕೊಡುಗೆ ನೀಡಿರುವ ಹಿರಿಯ ವಿಜ್ಞಾನಿ ಡಾ. ಶರತ್‌ ಚಂದ್ರಗೆ ಪ್ರದಾನ ಮಾಡಲಾಯಿತು. ಶ್ರೀ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ವಿಜ್ಞಾತಂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕರ್ನಾಟಕದ ಜನರು ಸ್ವಭಾವತಃ ರಾಷ್ಟ್ರಭಕ್ತರು. ಅವರು ಮಠಮಾನ್ಯಗಳ ಮೂಲಕ ಶೈಕ್ಷಣಿಕ ವಾಗಿ ಸೇವೆ ಸಲ್ಲಿಸುವ ಜೊತೆಗೆ ದೇಶದ ಸೇವೆಯಲ್ಲಿ ತೊಡಗಿಸಿ ಕೊಂಡು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಅದರೊಂದಿಗೆ ಆದಿಚುಂಚನಗಿರಿ ಮಠವೂ ಸಹ ಒಂದಾಗಿದೆ. ಮಠದ ಸೇವೆಯಲ್ಲಿ ಭೈರವೈಕ್ಯ ಬಾಲಗಂಗಾಧರ ನಾಥಶ್ರೀ ಗಳ ಕೊಡುಗೆ ಅಪಾರ. ಅದನ್ನು ಪ್ರಸ್ತುತ ನಿರ್ಮಲಾನಂದನಾಥಶ್ರೀಗಳು ವಿಸ್ತರಿಸಿಕೊಂಡು ಹೋಗುತ್ತಿದ್ದಾರೆ.
● ಬಾಬಾ ರಾಮ್‌ದೇವ್‌, ಯೋಗಗುರು

ಮನುಷ್ಯನಿಗೆ ಜ್ಞಾನದ ಜೊತೆಗೆ ವಿಜ್ಞಾನ, ತಂತ್ರಜ್ಞಾನದ ಅವಶ್ಯಕತೆಯೂ ಬೇಕು. ಆದರೆ, ಅವೆಲ್ಲಕ್ಕಿಂತ ಮಿಗಿಲಾಗಿ ಮನುಷ್ಯತ್ವ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು, ಮನುಷ್ಯ ಮಧ, ಮಾತ್ಸರ್ಯ ಮುಂದಾದ ಅರಿಷಡ್ವರ್ಗಗಳಿಂದ ಮುಕ್ತರಾಗಿ ಮುಕ್ತಿಯತ್ತ ಮುಖಮಾಡಿದಾಗ ಸತ್ಕಾರ್ಯಗಳನ್ನು ಮಾಡಲು ಸಾಧ್ಯ. ಆಗ ಮಾತ್ರ ಮಾನವ ಜನ್ಮವನ್ನು ಸಾರ್ಥಕಗೊಳಿಸಲು ಸಾಧ್ಯವಾಗುತ್ತದೆ.
● ಪರಮಾತ್ಮನಂದ ಸರಸ್ವತಿ ಸ್ವಾಮೀಜಿ, ಗುಜರಾತ್‌ ರಾಜ್‌ಕೋಟ್‌ನ ಹರ್ಷ ವಿದ್ಯಾಮಂದಿರ

Advertisement

Udayavani is now on Telegram. Click here to join our channel and stay updated with the latest news.

Next