Advertisement

ಮೊದಲು ನಿಮ್ಮ ಶಾಸಕರಿಗೆ ಬುದ್ದಿ ಹೇಳಿ

03:12 PM Dec 28, 2022 | Team Udayavani |

ನಾಗಮಂಗಲ: ನನಗೆ ಬುದ್ದಿ ಹೇಳುವುದನ್ನು ಬಿಟ್ಟು ತಾಲೂಕಿನಲ್ಲಿ ಭ್ರಷ್ಟಾಚಾರ ಮಾಡಿಕೊಂಡು ಸಾಮಾನ್ಯ ಜನತೆಯ ಜೀವ ಹಿಂಡುತ್ತಿರುವ ಶಾಸಕ ಸುರೇಶ್‌ ಗೌಡರಿಗೆ ಬುದ್ಧಿ ಹೇಳಲಿ ಎಂದು ಮಾಜಿ ಸಂಸದ ಎಲ್‌. ಆರ್‌.ಶಿವರಾಮೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

Advertisement

ತಾಲೂಕಿನ ಕದಬಹಳ್ಳಿ ಗ್ರಾಮದ ಕಾವೇಟಿ ರಂಗನಾ ಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಎಲ್‌ಆರ್‌ಎಸ್‌ ಸ್ವಾಭಿಮಾನಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ.26ರಂದು ತಾಲೂಕಿನಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಎಲ್‌. ಆರ್‌.ಶಿವರಾಮೇಗೌಡರಿಗೆ ನಮ್ಮ ಪಕ್ಷದವರು ಬುದ್ದಿ ಹೇಳುತ್ತಿದ್ದಾರೆ ಎಂದು ಎಚ್‌ಡಿಕೆ ಹೇಳಿದ್ದರು. ನಾನು ಯಾರಿಂದಲೂ ಬುದ್ದಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ, ತಾಲೂಕಿನಲ್ಲಿ ನಿಮ್ಮದೇ ಪಕ್ಷದ ಶಾಸಕ ಸುರೇಶ್‌ ಗೌಡರು ತಮ್ಮದೇ ಆದ ಕಂಪನಿ ಮಾಡಿಕೊಂಡು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಬುದ್ದಿ ಹೇಳಿ ಎಂದು ಟಾಂಗ್‌ ನೀಡಿದರು.

ಶಾಸಕರಿಗೆ ಹೇಳಿ: ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆ ಇದೆ. ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಮಿತಿ ಮೀರಿದ ಭ್ರಷ್ಟಾಚಾರ ದಿಂದ ಯಾವುದೇ ಕಚೇರಿಗಳಿಗೆ ಜನಸಾಮಾನ್ಯರು ಹೋಗುವುದಕ್ಕೆ ಆಗುತ್ತಿಲ್ಲ. ಶಾಸಕ ಸುರೇಶ್‌ಗೌಡರ ಆಡಳಿತ ವೈಖರಿಯಿಂದ ಜನತೆ ಬೇಸತ್ತು ಹೋಗಿದ್ದಾರೆ. ಮೊದಲು ನಿಮ್ಮ ಪಕ್ಷದ ಶಾಸಕರಿಗೆ ಬುದ್ದಿ ಹೇಳದೇ, ನನಗೆ ಬುದ್ದಿ ಹೇಳುತ್ತೇವೆ ಎಂದು ಹೇಳಿರುವುದು ಯಾವ ಕಾರಣಕ್ಕೆ ಹೇಳಿ ಎಂದು ಪ್ರಶ್ನಿಸಿದರು.

ಕ್ಷುಲ್ಲಕ ಕಾರಣಕ್ಕೆ ಹೊರಹಾಕಿದಿರಿ: ತಾಲೂಕಿನಲ್ಲಿ ಪಂಚರತ್ನ ಯಾತ್ರೆ ವಿಫ‌ಲವಾಗಿದೆ. ನಿಮ್ಮ ಯಾತ್ರೆಯಿಂದ ತಾಲೂಕಿನಲ್ಲಿ ಈ ಬಾರಿ ಯಾವ ಬದಲಾವಣೆಯೂ ಆಗುವುದಿಲ್ಲ. ಕುಮಾರ ಪರ್ವದ ಹಿಂದೆ ನಾವೆಲ್ಲ ಓಡಿ ಬಂದು ಸುರೇಶ್‌ಗೌಡರನ್ನು ಗೆಲ್ಲಿಸಲು ಶ್ರಮ ಹಾಕಿದ್ದೆವು. ಆದರೆ, ಪಕ್ಷಕ್ಕಾಗಿ ದುಡಿದ ನಮ್ಮಂತಹ ನಿಷ್ಠಾವಂತರನ್ನು ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಪಕ್ಷದಿಂದ ಹೊರ ಹಾಕಿದ್ದೀರಿ ಎಂದು ಹೇಳಿದರು.

ರಹಸ್ಯ ಭೇಟಿ ವಿಚಾರ ಬಹಿರಂಗಪಡಿಸಿದ ಎಲ್‌ ಆರ್‌ಎಸ್‌: ನಾನು ಪಕ್ಷದಿಂದ ಹೊರ ಬಿದ್ದಮೇಲೆ ಸ್ವಾಭಿಮಾನಿ ಹೆಸರಿನಲ್ಲಿ ಪಕ್ಷೇತರನಾಗಿ ಚುನಾವಣೆ ಯಲ್ಲಿ ಸ್ಪಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಹಂತದಲ್ಲಿರುವಾಗ ನನ್ನನ್ನು ಕರೆಯಿಸಿ ಚುನಾವಣೆಗೆ ನಿಲ್ಲಬೇಡಿ ಎಂದು ಕೇಳಿಕೊಂಡಿಲ್ಲವೇ? ಅದಕ್ಕೆ ಏನು ಉತ್ತರ ಕೊಡಬೇಕೋ ಅದನ್ನು ನಾನು ಕೊಟ್ಟು ಬಂದಿಲ್ಲವೇ? ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮತ್ತು ತಮ್ಮ ನಡುವಿನ ರಹಸ್ಯ ಭೇಟಿಯ ಚರ್ಚೆಯ ವಿಷಯಗಳನ್ನು ಬಿಚ್ಚಿಟ್ಟರು.

Advertisement

ರಾಜಕೀಯವಾಗಿ ಮುಗಿಸುವ ಷಡ್ಯಂತ್ರ: ನನ್ನನ್ನು ಕೇವಲ 5 ತಿಂಗಳಿಗೆ ಮಾತ್ರ ಸಂಸದನನ್ನಾಗಿ ಮಾಡಿದಿರಿ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಳೀಯ ಶಾಸಕರ ಚಿತಾವಣೆಗೆ ಒಳಗಾಗಿ ನಿಖೀಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಟ್ಟಿರಿ, ಉಪಚುನಾವಣೆಯಲ್ಲಿ ನನ್ನನ್ನು ನಿಲ್ಲಿಸಿ 32 ಕೋಟಿ ರೂ. ಕರ್ಚು ಮಾಡಿಸಿದ್ದೀರಿ. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ನನಗೆ ಟಿಕೆಟ್‌ ತಪ್ಪಿಸಿ ರಾಜಕೀಯವಾಗಿ ನನ್ನನ್ನು ಮುಗಿಸುವ ಷಡ್ಯಂತ್ರ ಮಾಡಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ರಾಜಕೀಯವಾಗಿ ಕಷ್ಟದಲ್ಲಿದ್ದೇನೆ. ಅಧಿಕಾರ ಕಳೆದುಕೊಂಡು 25 ವರ್ಷಗಳಾಗಿವೆ. ಎಂಎಲ್‌ಸಿ, ಎಂಪಿ ಮಾಡುತ್ತೇನೆ ಎಂದು ಮೋಸ ಮಾಡಿದರು. ನಾನು ಎರಡು ಸಲ ಗೆದ್ದು ಎರಡು ಸಲ ಸೋತಿದ್ದೇನೆ. ಆದರೂ, ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕಟ್ಟುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಶತಸಿದ್ಧವಾಗಿದ್ದು, ತಾಲೂಕಿನ ಜನತೆ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಶಿವರಾಮೇಗೌಡ ಪುತ್ರ ಎಲ್‌.ಎಸ್‌.ಚೇತನ್‌ ಮಾತನಾಡಿ, ಅಪ್ಪ ಒಂದು ಪಕ್ಷ ಮಗ ಒಂದು ಪಕ್ಷ ಆಗಬಾರದು ಎಂದು ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಜೆಡಿಎಸ್‌ ಸೇರುವ ಉದ್ದೇಶದಿಂದ ಶಾಸಕ ಸುರೇಶ್‌ಗೌಡ ಮನೆಗೆ ಭೇಟಿ ನೀಡಿದ್ದಾಗ ನನ್ನನ್ನು ನಿಕೃಷ್ಟವಾಗಿ ನಡೆಸಿಕೊಂಡರು. ಶಿವರಾಮೇಗೌಡ ಹೊಂದಾಣಿಕೆ ರಾಜಕಾರಣಿ ಅಂತ ಇಲ್ಲ ಸಲ್ಲದ ಆರೋಪ ಮಾಡಿದರು. ಅಂತಹ ಧರಿದ್ರ ಪರಿಸ್ಥಿತಿ ನಮ್ಮ ಕುಟುಂಬಕ್ಕೆ ಇನ್ನೂ ಬಂದಿಲ್ಲ ಎಂದು ಹೇಳಿದರು.

ವಕೀಲ ರಾಮೇಗೌಡ ಮಾತನಾಡಿ, ಶಿವರಾಮೇಗೌಡರ ಸ್ವಾಭಿಮಾನಿ ಸಭೆಯ ಫ್ಲೆಕ್ಸ್‌ಗಳನ್ನು ಹರಿದು ಹಾಕುವ ಮೂಲಕ ತಾಲೂಕಿನಲ್ಲಿ ರಾಜಕೀಯ ಸಂಘರ್ಷ ಮಾಡಲು ಜೆಡಿಎಸ್‌ನವರು ಹೊರಟಿದ್ದಾರೆ ಎಂದು ದೂರಿದರು. ಮುಖಂಡ ಪಾಳ್ಯ ರಘು, ಬಿದರಕೆರೆ ಮಂಜೇಗೌಡ, ಮುಸ್ಲಿಂ ಮುಖಂಡ ಶೇಕ್‌ ಅಹಮದ್‌ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅವ್ವೇರಹಳ್ಳಿ ಗೇಟ್‌ನಿಂದ ಶಿವರಾಮೇಗೌಡರನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ತಾಪಂ ಸದಸ್ಯರಾದ ಹೇಮರಾಜ್‌, ಕರಿಯಣ್ಣ, ಜುಬೇದಾರ್‌, ಶ್ರೀಹರಿ ಮಂಜುನಾಥ್‌, ತುರುಬನಹಳ್ಳಿ ಚೇತನ್‌, ಲಾರಿ ಚನ್ನಪ್ಪ, ನಾರಾಯಣಗೌಡ, ಮಾನಕೆರೆ ಮಹೇಶ್‌, ಆನಂದ್‌, ಸಿ.ಜೆ.ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next