Advertisement

ಉದಯವಾಣಿ ಸಂದರ್ಶನ: ನವ ಶಿಕ್ಷಣ ನೀತಿಯಲ್ಲಿ ಪ್ರಾಯೋಗಿಕ ಕಲಿಕೆಗೆ ಆದ್ಯತೆ

08:38 AM Dec 18, 2020 | mahesh |

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ರೂಪಿತವಾಗಿರುವ ನವ ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್‌ಇಪಿ) ಮೂಡಿಸಿರುವ ಕುತೂಹಲ ಅಷ್ಟಿಷ್ಟಲ್ಲ. ಹಂತಹಂತವಾಗಿ ಅನುಷ್ಠಾನಕ್ಕೆ ಬರಲಿರುವ ಈ ನೀತಿಯಲ್ಲಿ ಎಂದಿನ ಅಧ್ಯಯನ ವಿಷಯಗಳ ಜತೆಗೆ ಕಲೆ, ಸಂಸ್ಕೃತಿ, ಕರಕುಶಲದ ಸಮ್ಮಿಲನ ಹಾಗೂ ಡಿಜಿಟಲೀಕರಣದ ಲೇಪನವೂ ಇರಲಿದೆ. ಹೇಗೆ ನವ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ರಂಗವನ್ನು ರೂಪಾಂತರಿಸಲಿದೆ, ಈ ವಿಚಾರದಲ್ಲಿ ಎದುರಿರುವ ಸವಾಲುಗಳೇನು ಎನ್ನುವ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ “ಉದಯವಾಣಿ’ಗೆ ನೀಡಿರುವ ವಿಶೇಷ ಸಂದರ್ಶನ ಇಲ್ಲಿದೆ…

Advertisement

=ನಮ್ಮ ಪ್ರಾಥಮಿಕ ಶಿಕ್ಷಣ ಪಠ್ಯಕ್ರಮದಲ್ಲಿ ಪ್ರಾಯೋಗಿಕ ವಿಷಯಕ್ಕಿಂತ ಥಿಯರಿಗೇ ಆದ್ಯತೆ ಹೆಚ್ಚಿದೆ. ಈ ಅಸಮತೋಲನವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಹೇಗೆ ಬಗೆಹರಿಸಬಲ್ಲದು?
ಶಿಕ್ಷಣಾರ್ಥಿಗಳ ವಿವಿಧ ಹಂತದ ಅಭಿವೃದ್ಧಿಯ ಅಗತ್ಯಗಳು ಮತ್ತು ಆಸಕ್ತಿಗಳಿಗೆ ಸ್ಪಂದಿಸಲು ಶಾಲಾಶಿಕ್ಷಣದ ಪಠ್ಯಕ್ರಮವನ್ನು ಮತ್ತು ಬೋಧನಾ ಕ್ರಮವನ್ನು 5+3+3+4 ಸೂತ್ರಕ್ಕೆ ಅನುಗುಣವಾಗಿ ಪುನಾರಚಿಸಲಾಗುವುದು. ಬರೀ ಕಂಠಪಾಠ ಮಾಡುವ ವ್ಯವಸ್ಥೆಯ ಬದಲು ಪ್ರಾಯೋಗಿಕ ಹಂತಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಒಟ್ಟಾರೆ ಶಿಕ್ಷಣದ ಮುಖ್ಯ ಗಮನವು “ಮಾಡಿ ತಿಳಿ’ ಎಂಬ ಅಂಶದ ಮೇಲೆಯೇ ಇರುತ್ತದೆ. ಎಲ್ಲ ಹಂತಗಳಲ್ಲೂ “ಅನುಭವದ ಕಲಿಕೆ’ಯಿರುತ್ತದೆ. ಇದು ಕಲೆ ಸಂಯೋಜಿತ, ಕ್ರೀಡಾ ಸಂಯೋಜಿತ, ಸ್ಟೋರಿ ಟೆಲ್ಲಿಂಗ್‌ ಆಧರಿತ ಶಿಕ್ಷಣವನ್ನೂ ಒಳಗೊಂಡಿದೆ. ಶೈಕ್ಷಣಿಕ ಫ‌ಲಿತಾಂಶಗಳಲ್ಲಿನ ಕೊರತೆ ಸರಿಪಡಿಸಲು ಸಾಮರ್ಥ್ಯ ಆಧಾರಿತ ಕಲಿಕೆಯತ್ತ ತರಗತಿಗಳು ಗಮನಹರಿಸಲಿವೆ.

=ಬಹಳಷ್ಟು ನಿರೀಕ್ಷೆಗಳ ಜತೆಯೇ ದೇಶಾದ್ಯಂತ ನವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಶೈಕ್ಷಣಿಕ ವ್ಯವಸ್ಥೆಯ ಸಂಪೂರ್ಣ ರೂಪಾಂತರ ಯಾವಾಗ ಆಗಬಹುದೆಂಬ ನಿರೀಕ್ಷೆಯಿದೆ?
ನವ ರಾಷ್ಟ್ರೀಯ ಶಿಕ್ಷಣ ನೀತಿ 2020ರ (ಎನ್‌ಇಪಿ) ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಾಂತರಿಸಲು ಆಶಿಸುತ್ತಿದ್ದೇವೆ. ಜತೆಗೆ ವಿಮರ್ಶಾತ್ಮಕವಾಗಿ ಯೋಚಿಸುವುದು ಹೇಗೆ, ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ, ಸೃಜನಶೀಲವಾಗಿರುವುದು ಹೇಗೆ ಮತ್ತು ಬದಲಾಗುತ್ತಿರುವ ಕ್ಷೇತ್ರಗಳಿಗೆ ತಕ್ಕಂತೆ ಯಾವ ರೀತಿಯಲ್ಲಿ ನಾವೀನ್ಯತೆ ರೂಪಿಸಿಕೊಳ್ಳಬೇಕು, ಗ್ರಹಿಸಬೇಕು, ಹೊಂದಿಕೊಳ್ಳ ಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳು ಕಲಿಯುವಂತಾಗಲು ಒತ್ತು ನೀಡುತ್ತಿದ್ದೇವೆ. ಶಿಕ್ಷಣವನ್ನು ಹೆಚ್ಚು ಪ್ರಾಯೋಗಿಕವಾಗಿಸಲು, ಸಮಗ್ರವಾಗಿಸಲು ಅನ್ವೇಷಣೆ-ಆಧರಿತವಾಗಿಸಲು, ಸಂಶೋಧನಾತ್ಮಕಗೊಳಿಸುವ ನಿಟ್ಟಿನಲ್ಲಿ ಬೋಧನ ಕಲೆಯು ವಿಕಸನಗೊಳ್ಳುವ ನಿರೀಕ್ಷೆಯಿದೆ. ಎಲ್ಲ ದೃಷ್ಟಿಕೋನಗಳಿಂದಲೂ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ವೃದ್ಧಿಸಲು ಮತ್ತು ಶಿಕ್ಷಣವನ್ನು ಹೆಚ್ಚು ಸುಸಂಗತ ಹಾಗೂ ಉಪಯುಕ್ತಗೊಳಿಸುವ ನಿಟ್ಟಿನಲ್ಲಿ ವಿಜ್ಞಾನ-ಗಣಿತದ ಜತೆಜತೆಗೇ ಕಲೆ, ಕರಕುಶಲ, ಮಾನವಿಕ, ಕ್ರೀಡೆ, ಫಿಟ್ನೆಸ್‌, ಭಾಷೆಗಳು, ಸಾಹಿತ್ಯ, ಸಂಸ್ಕೃತಿ ಮತ್ತು ಮೌಲ್ಯಗಳಂಥ ವಿಷಯಗಳೂ ಪಠ್ಯಕ್ರಮದಲ್ಲಿರಲಿವೆ. ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ನೈತಿಕವಾಗಿ-ತಾರ್ಕಿಕವಾಗಿ-ಸಹಾನುಭೂತಿಯ ವ್ಯಕ್ತಿಗಳನ್ನಾಗಿ ಬೆಳೆಸುವ ಜತೆಗೇ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆ ಹಾಗೂ ಅಗತ್ಯವಿರುವ ಅಂಶಗಳ ನಡುವಿನ ಅಂತರವನ್ನು ಬೃಹತ್‌ ಸುಧಾರಣೆಗಳ ಮೂಲಕ ಬೆಸೆಯುವ ಉದ್ದೇಶ ಶಿಕ್ಷಣ ನೀತಿಗಿದೆ. ಅತ್ಯುನ್ನತ ಗುಣಮಟ್ಟ ಹಾಗೂ ಸಮಗ್ರತೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ತರಲಾಗುವುದು. ಇನ್ನು ದೀರ್ಘ‌ಕಾಲಿಕ ಗುರಿಯೆಂದರೆ, ಎಲ್ಲ ಸಮಾಜದ ಅಥವಾ ಆರ್ಥಿಕ ಹಿನ್ನೆಲೆಯ ಶಿಕ್ಷಣಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಮತ್ತು 2040ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸರಿಸಾಟಿಯಿಲ್ಲದಂತೆ ಬೆಳೆಸುವುದು.

=ಎನ್‌ಸಿಇಆರ್‌ಟಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ ಎನ್ನುವುದು ನಿಜವೇ? ಹೌದು ಎನ್ನುವುದಾದರೆ, ಆ ನಿರೀಕ್ಷಿತ ಬದಲಾವಣೆಗಳು ಯಾವುವು?
ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿಯಲ್ಲಿ Foundational Literacy and Numeracy Mission ಸ್ಥಾಪಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಹಾಗೂ ಸಮಗ್ರ ಶಿಕ್ಷಣ ನೀತಿ ಯನ್ನು ಪರಿಗಣಿಸಿ ಹೇಳುವುದಾದರೆ, ಎನ್‌ಸಿಆರ್‌ಟಿಯು ಈ ಅಂಶಗಳನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸುವಂತಾಗಬೇಕು. ಈ ಕಾರಣಕ್ಕಾಗಿಯೇ ಅದು ಅಗತ್ಯ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅಗತ್ಯ. ಈಗಾಗಲೇ ಎನ್‌ಸಿಇಆರ್‌ಟಿ ಒಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನೂ ಅಭಿವೃದ್ಧಿಪಡಿಸುತ್ತಿದೆ. ಇದರ ಅಡಿಯಲ್ಲಿ 2 ಉಪ-ಚೌಕಟ್ಟುಗಳು ಇರಬೇಕು- ಒಂದು “ಆರಂಭಿಕ ಬಾಲ್ಯದ ಕಲಿಕೆ ಮತ್ತು ಅಭಿವೃದ್ಧಿ’, ಎರಡನೆಯದು “ಶಾಲಾ ಶಿಕ್ಷಣ ಚೌಕಟ್ಟು.’ ಇನ್ನು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನೂ ಪರಿಷ್ಕರಿಸಿ ಪ್ರತೀ ವಿಷಯದಲ್ಲೂ ಅಗತ್ಯ ವಾದ ಅಂಶಗಳನ್ನು ಮಾತ್ರ ಸಂಯೋಜಿಸುತ್ತದೆ. ಜತೆಗೆ ಪಠ್ಯವು ರಚನಾತ್ಮಕವಾಗಿ, ಆಕರ್ಷಕವಾಗಿ ಹಾಗೂ ಕಲಿಕೆಗೆ ಸುಲಭ ಗ್ರಾಹ್ಯವಾಗುವ ರೀತಿಯಲ್ಲಿರುತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳಿಗೆ ಅನುಗುಣವಾಗಿ ಅರ್ಹ ಉದ್ಯೋಗಿಗಳನ್ನು ರೂಪಿಸಲು 2022ರ ವೇಳೆಗೆ ಶಿಕ್ಷಕರಿಗಾಗಿ ರಾಷ್ಟ್ರೀಯ ವೃತ್ತಿಪರ ಮಾನದಂಡ (ಎನ್‌ಪಿಎಸ್‌ಟಿ)ವನ್ನೂ ರಚಿಸಲಾಗುವುದು. ಈ ಕೆಲಸವನ್ನು ರಾಷ್ಟ್ರೀಯ ಶಿಕ್ಷಣ ಮಂಡಳಿಯು ಮಾಡಲಿದೆ.

=ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ದೇಶಾ ದ್ಯಂತ ಏಕರೂಪದ ಪಠ್ಯಕ್ರಮ, ಟೈಮ್‌ಟೇಬಲ್‌ ಜಾರಿಗೆ ತರಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶವಿದೆಯೇ?
ಎನ್‌ಸಿಐಆರ್‌ಟಿಯು ಶಾಲಾ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ತರಲು ಎನ್‌ಸಿಎಫ್ಎಸ್‌ಇ 2020-21 ರೂಪಿಸಿದೆ. ಈ ಚೌಕಟ್ಟು ರಾಷ್ಟ್ರೀಯ ಶಿಕ್ಷಣ ನೀತಿಯ ತತ್ವಗಳ ಆಧಾರದ ಮೇಲೆ ರಚಿತವಾಗಿದೆ. ರಾಜ್ಯ ಸರಕಾರಗಳು, ಸಚಿವಾಲಯಗಳು, ಕೇಂದ್ರದ ಇಲಾಖೆಗಳು ಮತ್ತು ಪರಿಣತರ ತಂಡಗಳೊಂದಿಗೆ ಈ ವಿಚಾರದಲ್ಲಿ ಚರ್ಚೆ ಮಾಡಿ, ಒಂದು ಫ್ರೆàಮ್‌ವರ್ಕ್‌ ರಚಿಸಿದ ಅನಂತರ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಿಸಲಿದ್ದೇವೆ.

Advertisement

ದೇಶದ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಯಾಗಬೇಕು ಎಂದು ನಿಮಗೆ ಅನ್ನಿಸುತ್ತದೆ?
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎನ್ನುವ ಬೇಡಿಕೆ ಬಹಳ ಸಮಯದಿಂದಲೂ ಇದೆ. ನವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಹೆಚ್ಚುತ್ತಿರುವ ಬೇಡಿಕೆಗೆ ಸ್ಪಂದಿಸಿದೆ ನಮ್ಮ ಸರಕಾರ. ಶಿಕ್ಷಣ ಮತ್ತು ತಂತ್ರಜ್ಞಾನದ ಸಮ್ಮಿಲನವನ್ನು ಈ ನೀತಿ ಬಲವಾಗಿ ಪ್ರತಿಪಾದಿಸುತ್ತದೆ. ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಕಲಿಕೆ, ಮೌಲ್ಯಮಾಪನ ಮತ್ತು ಆಡಳಿತ ವೈಖರಿಯನ್ನು ವರ್ಧಿಸುವುದಕ್ಕಾಗಿ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ(ಎನ್‌ಇಟಿಎಫ್) ಎಂಬ ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದೂ ನವ ನೀತಿ ಶಿಫಾರಸು ಮಾಡಿದೆ. ತರಗತಿಯ ಪ್ರಕ್ರಿಯೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣದ ಎಲ್ಲ ಸ್ತರಗಳಲ್ಲೂ ತಂತ್ರಜ್ಞಾನವನ್ನು ಸೂಕ್ತವಾಗಿ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ತಂತ್ರಜ್ಞಾನ ಆಧರಿಕ ಶೈಕ್ಷಣಿಕ ವೇದಿಕೆಗಳಾದ “ಸ್ವಯಂ’ ಮತ್ತು “ದೀಕ್ಷಾ’ ಅನ್ನು ಎಲ್ಲ ಶಾಲೆಗಳು,ಉನ್ನತ ಶಿಕ್ಷಣದಲ್ಲಿ ಉತ್ತಮವಾಗಿ ಸಂಯೋಜಿಸಲಾಗುತ್ತದೆ. ಜತೆಗೆ ಡಿಸ್ರಪ್ಟಿವ್‌ ಟೆಕ್ನಾಲಜಿಯಂಥ ನವೀನ ತಂತ್ರಜ್ಞಾನಗಳ ಮೇಲೆ ಸಂಶೋಧನೆ ಕೈಗೊಳ್ಳಲು ಉನ್ನತ ಶಿಕ್ಷಣ ಸಂಸ್ಥೆಗಳು ಅವಕಾಶ ಕಲ್ಪಿಸಲಿವೆ.

=ಕೋವಿಡ್‌ ಕಾಲಘಟ್ಟದಲ್ಲಿ ಶಿಕ್ಷಣ ಇಲಾಖೆ ಯಾವ ಪಾಠಗಳನ್ನು ಕಲಿತಿದೆ? ಪರಿಸ್ಥಿತಿಗೆ ಶಿಕ್ಷಣ ಸಚಿವಾಲಯದ ಪ್ರತಿಕ್ರಿಯೆ ಹೇಗಿದೆ?
ಮಕ್ಕಳ ಶೈಕ್ಷಣಿಕ ಮುಂದುವರಿಕೆಯ ವಿಚಾರದಲ್ಲಿ ಕೋವಿಡ್‌ ಬಹುದೊಡ್ಡ ಸವಾಲು ಒಡ್ಡಿದೆ. ನಮ್ಮ ಸರಕಾರ ಪರಿಸ್ಥಿತಿಯ ಗಾಂಭೀರ್ಯತೆ ಅರಿತು ರಾಜ್ಯಗಳೊಂದಿಗೆ ಹಲವು ಹಂತಗಳಲ್ಲಿ ಸಮಾಲೋಚನೆಗಳನ್ನು ನಡೆಸಿತು. ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಬಾರದು ಎನ್ನುವ ಕಾರಣಕ್ಕಾಗಿ ನಾವು ಅನೇಕ ಉಪಕ್ರಮಗಳನ್ನು ತಂದಿದ್ದೇವೆ. ಪಿಎಂ ಇ-ವಿದ್ಯಾ ಎನ್ನುವ ಕಾರ್ಯಕ್ರಮವು, ಶಿಕ್ಷಣದ ಬಹು-ಆಯಾಮದ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಇದು ದೀಕ್ಷಾ ಮತ್ತು ಸ್ವಯಂನಂಥ ತಂತ್ರಜ್ಞಾನ ಆಧರಿತ‌ ಶೈಕ್ಷಣಿಕ ವೇದಿಕೆ ಗಳನ್ನೂ ಒಳಗೊಂಡಿದೆ. ನ್ಯಾಶನಲ್‌ ಇನ್‌ಸ್ಟಿ ಟ್ಯೂಟ್‌ ಆಫ್ ಓಪನ್‌ ಸ್ಕೂಲಿಂಗ್‌(ಎನ್‌ಐಒಎಸ್‌) ನ ಆನ್‌ಲೈನ್‌ ಪಠ್ಯಕ್ರಮವನ್ನು Swayam ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಯಿತು, ಸಮುದಾಯ ರೇಡಿಯೋ ಬಳಸಿಕೊಳ್ಳಲಾಯಿತು. 600ಕ್ಕೂ ಅಧಿಕ ಡಿಜಿಟಲ್‌ ಪಠ್ಯಗಳು, 3,500 ಅಧಿಕ ಆಡಿಯೋ ತುಣುಕುಗಳು, ಎನ್‌ಸಿಇಆರ್‌ಟಿಯ ವೀಡಿಯೋ ಕಂಟೆಂಟ್‌ಗಳನ್ನು ವಿವಿಧ ಭಾಷೆಗಳಲ್ಲಿ ಸಾರ್ವಜನಿಕ ಡೋಮೇನ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಯಿತು. ಜತೆಗೆ 8 ಹಂತಗಳ ಡಿಜಿಟಲ್‌ ಕಲಿಕೆಯ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆವು.

=ಯೋಗದಂಥ ಶಿಕ್ಷಣವನ್ನು ಕಡ್ಡಾಯ ಪಠ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲು ಸಾಧ್ಯವಿದೆಯೇ?
ಹೌದು. ಸಾಧ್ಯವಿದೆ. ನಮ್ಮ ಸರಕಾರವು ನವ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಆದ್ದರಿಂದ ಕ್ರೀಡೆ, ವೃತ್ತಿಪರ ಕರಕುಶಲ ಮತ್ತು ಯೋಗವನ್ನು ನಿಯಮಿತ ಪಠ್ಯಕ್ರಮದ ಭಾಗವಾಗಿ ಅಳವಡಿಸಲು ಶಿಫಾರಸು ಮಾಡಲಾಗಿದೆ. ಲಾಕ್‌ಡೌನ್‌ನ ಸಮಯದಲ್ಲೂ ಸಿಬಿಎಸ್‌ಸಿ, ವೀಡಿಯೋ ಮೂಲಕ ಬಹುತೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ತನ್ನ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಮತ್ತು ಇತರೆ ವ್ಯಾಯಾಮಗಳನ್ನು ಕಲಿಸಿತು. ಕೇವಲ ಭಾರತವೆಂದಷ್ಟೇ ಅಲ್ಲ, ಈಗ ಇಡೀ ಪ್ರಪಂಚವೇ ಯೋಗ ಶಿಕ್ಷಣದತ್ತ ಚಿತ್ತ ನೆಡುತ್ತಿದೆ. ಹೀಗಾಗಿ, ನಮ್ಮ ಮಕ್ಕಳೂ ಈ ದೇಶದ ಹೆಮ್ಮೆಯ ಪರಂಪರೆಯನ್ನು ಕಲಿಯುವ ಮತ್ತು ಸ್ವೀಕರಿಸುವ ಸಮಯವಿದು. ಇದಷ್ಟೇ ಅಲ್ಲದೇ, ಇದರಿಂದಾಗಿ ಮುಂದಿನ ವರ್ಷಗಳಲ್ಲಿ ದೈಹಿಕ ಶಿಕ್ಷಣದಲ್ಲಿ ಡಿಗ್ರಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್‌ ಕೋರ್ಸ್‌ಗಳ ಮೂಲಕ ನಮ್ಮ ಯುವ ಜನಾಂಗಕ್ಕಾಗಿ ಉದ್ಯೋಗಗಳನ್ನೂ ಸೃಷ್ಟಿಸಲು ಸಹಾಯವಾಗಲಿದೆ.

ರಮೇಶ್‌ ಪೋಖ್ರಿಯಾಲ್‌ ಕೇಂದ್ರ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next