Advertisement

ಪಚ್ಚೆ ದ್ವೀಪದ “ಜೆಮ್ಸ್‌’ಬಾಂಡ್‌!

03:11 PM May 20, 2017 | |

ಜಾತಕಗಳಿಗೆ ತಕ್ಕಂತೆ ಮುತ್ತು, ರತ್ನ, ಪಚ್ಚೆ ಹರಳು ಧರಿಸಿದರೆ ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ನಮ್ಮದು. ಅಲ್ಲೆಲ್ಲೋ ಶ್ರೀಲಂಕಾ ಕ್ಯಾಂಡಿಯ ಸಮೀಪದ ನದಿಯಲ್ಲಿ ಹವಳ ಹೆಕ್ಕುವವರ ಅದೃಷ್ಟ ಬದಲಾದಂತೆ ಕಾಣುವುದಿಲ್ಲ. ಆದರೆ, ಬೆವರು ಹರಿಸಿ ಶೋಧಿಸುವಾಗ ಕೈಗೆ ಹರಳು ಸಿಕ್ಕರೆ ಅವರ ಮೊಗದಲ್ಲಿ ಬೆಳಕು ಚಿಮ್ಮುತ್ತದೆ. ಆ ಬೆಳಕಿಗೆ ಹವಳಗಳ ಹೊಳಪಿಗಿಂತ ಹೆಚ್ಚು ಪ್ರಖರತೆ ಇದೆ!  

Advertisement

ಕ್ಯಾಂಡಿಯಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ ಅಲ್ಲಿ ಕರ್ಫ್ಯೂ ಇದೆಯೇನೋ ಅಂತನ್ನಿಸಿತು! ನಿಲ್ದಾಣದ ಅಧಿಕಾರಿಗಳನ್ನು ಬಿಟ್ಟರೆ ಅಲ್ಲೊಬ್ಬ ಇಲ್ಲೊಬ್ಬ ಮಾನವರು ಮಾತ್ರ ಇದ್ದರು. ನಾವು ಶ್ರೀಲಂಕೆಯ ರಾಜಧಾನಿಗೆ ಬಂದಿದ್ದೇವಾ, ಇಲ್ಲಾ ಬೇರೆ ಯಾವುದೋ ಜನವಸತಿಯೇ ಇಲ್ಲದ ಪ್ರದೇಶಕ್ಕೆ ಬಂದಿದ್ದೇವಾ ಎಂಬ ಅನುಮಾನ ಬಂತು. ಇಮಿಗ್ರೇಷನ್‌ನಲ್ಲಿ ಅಧಿಕಾರಿಗಳು ಚೆನ್ನೈಯಿಂದ ಬಂದ ಶ್ರೀಲಂಕಾ ಪ್ರಜೆಗಳ ವಸ್ತುಗಳನ್ನು ಪರಿ ಪರಿಯಾಗಿ ಪರಿಶೀಲಿಸಿ, ಅವರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳುತ್ತಿರುವುದನ್ನು ನೋಡಿದ ನನಗೆ ಯಾರಾದರೂ ಬಾಂಬ್‌ ತಂದಿದ್ದಾರಾ? ಹೀಗೇಕೆ ತಪಾಸಣೆ ಮಾಡುತ್ತಿದ್ದಾರೆ? ನಮಗೂ ಹೀಗೆಯೇ ಮಾಡುತ್ತಾರಾ? ಅಂತನ್ನಿಸಿತು. ಅಲ್ಲೇ  ಇದ್ದ ಅಧಿಕಾರಿ, ನಮ್ಮ ವೀಸಾ ಪರಿಶೀಲಿಸಿ ಏನೂ ತಪಾಸಣೆ ಮಾಡದೆ ಗ್ರೀನ್‌ಸಿಗ್ನಲ್‌ ಕೊಟ್ಟನು! ಲಂಕಾ ಪ್ರವೇಶಿಸುವ ತಮಿಳುನಾಡಿನ ಜನರನ್ನು ತಪಾಸಣೆ ಮಾಡುವುದನ್ನು ನೋಡಿದರೆ, ಇಲ್ಲಿನ ವಾಸ್ತವದ ಪರಿಸ್ಥಿತಿ ಅರಿವಾಗುತ್ತದೆ.

ಆದರೆ, ಅದೇ ತಮಿಳು ಬಡವರು ಈ ಶ್ರೀಲಂಕಾಕ್ಕೆ “ಪಚ್ಚೆ ಬಣ್ಣದ ದ್ವೀಪ’ ಹೆಸರು ತಂದುಕೊಟ್ಟಿದ್ದನ್ನು ಆ ದೇಶ ಮರೆತಂತಿದೆ. ಇಲ್ಲಿ ಹೇರಳವಾಗಿ ಸಿಗುವ ರತ್ನಗಳ ಕಾರಣಕ್ಕಾಗಿ, “ಪಚ್ಚೆ ಬಣ್ಣದ ದ್ವೀಪ’ ಎಂಬ ಹೆಸರು ಬಂದಿದೆ. ಲಂಕೆಗೆ ಭೇಟಿ ನೀಡಿದವರು ಇಲ್ಲಿನ ಆಭರಣದ ಅಂಗಡಿಗಳಿಗೆ ಭೇಟಿ ನೀಡದೆ ಹೋಗುವುದನ್ನು ಊಹಿಸಲಸಾಧ್ಯ. ಹಾಗಾಗಿ, ನಾವು ಸಹ ಕ್ಯಾಂಡಿಗೆ ಹಿಂದಿರುಗಿದ ಸಂಜೆಯೇ ಒಂದು ಸುತ್ತು ಆಭರಣದ ಅಂಗಡಿಗಳ ಕಡೆ ಮುಖ ಮಾಡಿ¨ªೆವು. ಇಲ್ಲಿನ ಮುತ್ತು, ಪಚ್ಚೆ, ಹವಳ, ರತ್ನಗಳು ಉತ್ಕೃಷ್ಟತೆಯಿಂದ ಕೂಡಿದ್ದು, ಭಾರತದಲ್ಲಿ ಇಂಥ ಒಂದು ರತ್ನವಿನ್ಯಾಸ ಹುಡುಕಿದರೂ ಸಿಗುವುದಿಲ್ಲ. ನಮ್ಮಲ್ಲಿ ಗೋಲ್ಡ್‌ ಮೈನ್‌ ಇದ್ದ ಹಾಗೆ, ಲಂಕೆಯಲ್ಲಿ “ಜೆಮ… ಮೈನಿಂಗ್‌’ ಬಹಳ ಫೇಮಸ್ಸು. ಈ ರತ್ನಗಳನ್ನು ಹರಿಯುವ ನದಿಯಲ್ಲಿ ಹಾಗೂ ಭೂಮಿಯಡಿ ಮೈನಿಂಗ್‌ ಮಾಡಿ ಚೆನ್ನಾಗಿ, ಪರಿಷ್ಕರಿಸಿ ಒಂದು ನಿರ್ದಿಷ್ಟ ರೂಪ ಕೊಟ್ಟು ಆಭರಣಕ್ಕೆ ಬಳಸುತ್ತಾರೆ. ಹೀಗೆ ರತ್ನದ ಹರಳುಗಳನ್ನು ಹೆಕ್ಕುವ ಕೆಲಸದಲ್ಲಿ ಭಾಗಿ ಆಗಿರುವ ಶ್ರಮಿಕರಲ್ಲಿ ಅನೇಕರು ಭಾರತದಿಂದಲೇ ವಲಸೆ ಹೋದವರು.

ಮೈನಿಂಗ್‌ ಮಾಡುವ ಮುನ್ನ ನಿರ್ದಿಷ್ಟವಾದ ಸ್ಥಳವನ್ನು ಗುರುತಿಸುತ್ತಾರೆ. ಭೂ ತಾಯಿಗೆ ಪೂಜೆ ಮಾಡಿ, ಚೌಕಾಕಾರದಲ್ಲಿ ಮರದ ದಿಮ್ಮಿಗಳನ್ನು ಇಟ್ಟು ನೆಲವನ್ನು ಚೌಕದ ಒಳಗಿನಿಂದ ಅಗೆಯುತ್ತಾ ಹೋಗುತ್ತಾರೆ. ಅಳಕ್ಕೆ ಇಳಿದಂತೆ ನೀರು ಸರಿಯಾಗಿ ಬಸಿಯಲು ಮರದ ಎಲೆಗಳನ್ನು ಬಳಸುತ್ತಾರೆ. ನೀರು ಹೆಚ್ಚಾದಂತೆ ಕೊಳವೆಗಳ ಮೂಲಕ ಮೇಲೆತ್ತುತ್ತಾರೆ. ಹೆಚ್ಚು ಕಡಿಮೆ ನಮ್ಮ ಕೋಲಾರದ ಗಣಿ ಹೇಗಿತ್ತೋ, ಹಾಗೆಯೇ ಇದೆ ಇಲ್ಲಿನ ಗಣಿ ಕೂಡ. ಇಲ್ಲಿನ ಗಣಿಗಳು ಮನೆಯ ಮುಂದಿನ ಪುಟ್ಟ ಬಾವಿಯಂತೆ ಕಂಗೊಳಿಸುತ್ತವೆ. ಸರಿಸುಮಾರು ಅಳಕ್ಕೆ ಹೋದಾಗ ಎಲ್ಲಿ ಹೆಚ್ಚು ಮರಳು ಮಿಶ್ರಿತ ಮಣ್ಣು ಸಿಗುತ್ತದೆಯೋ, ಅಲ್ಲಿಂದ ಮಣ್ಣನ್ನು ಚೆನ್ನಾಗಿ ಸಂಸ್ಕರಿಸಿ ಮೇಲಕ್ಕೆ ಕಳುಹಿಸುತ್ತಾರೆ. ಕೆಳಗಿನವರು ಕಳುಹಿಸಿದ ಮರಳು ಮಿಶ್ರಿತ ಮಣ್ಣನ್ನು ಸಣ್ಣ ತೊಟ್ಟಿಯಲ್ಲಿ ಮತ್ತೆ ಜರಡಿ ಹಿಡಿದು ರತ್ನಗಳ ಕಲ್ಲುಗಳನ್ನು ಬೇರೆ ಮಾಡುತ್ತಾರೆ. ಈ ಕಲ್ಲುಗಳಿಗೆ ತಜ್ಞರು ಆಕಾರ ಕೊಟ್ಟು, ನಮ್ಮ ಕಣ್ಣುಗಳನ್ನು ಕೋರೈಸುವಂತೆ ಮಾಡುತ್ತಾರೆ! 

Advertisement

ಇದಲ್ಲದೆ, ನದಿಯ ತಟದಲ್ಲೂ ಮೈನಿಂಗ್‌ ನಡೆಯುತ್ತದೆ. ಇದು ನಮ್ಮೂರಿನ ಮರಳು ಮಾಫಿಯಾವನ್ನು ನೆನಪಿಸುತ್ತದೆ. ಆದರೆ, ಇಲ್ಲಿ ನೀರು ಎಲ್ಲಿ ತಿಳಿಯಾಗಿ ಹರಿಯುತ್ತದೆಯೋ ಅಲ್ಲಿ ವಿಶೇಷ ರೀತಿಯ ಜರಡಿ ಬಳಸಿ ರತ್ನದ ಕಲ್ಲುಗಳನ್ನು ಬೇರ್ಪಡಿಸುತ್ತಾರೆ. ಈ ನದಿಯ ತಟದ ಮೈನಿಂಗ್‌ ನೆನಪಿಸಿಕೊಂಡರೆ, ತೇಜಸ್ವಿಯವರ ಕಾದಂಬರಿಯಲ್ಲಿ ಬರುವ ಕೆಂಪು ಹೊಳೆಯಲ್ಲಿ ಸಿಗುವ ಅಮೂಲ್ಯ ರತ್ನಗಳು ನೆನಪಾಗುತ್ತವೆ. ಏನೇ ಅನ್ನಿ, ಇಲ್ಲಿನ ರತ್ನಗಳನ್ನು ಒಮ್ಮೆ ನೋಡಿದರೆ ಖರೀದಿ ಮಾಡಲೇಬೇಕು ಎಂದೆನ್ನಿಸುವುದು ನಿಜ. ಆದರೆ, ನಿಮ್ಮ ಜೇಬು ತುಸು ತೂಕವಿರಬೇಕಷ್ಟೇ! 

ದ್ವೀಪಕ್ಕೆ ಹೆಸರನ್ನು ಗಿಫಾrಗಿ ಕೊಟ್ಟ ತಮಿಳು ಬಡವರನ್ನು ಏರ್‌ಪೋರ್ಟಿನ ಸಿಬ್ಬಂದಿ ಏಕೆ ಅನುಮಾನಿಸುತ್ತಾರೆಂದು ಚಿಂತೆ ಆಯಿತು. ಆದರೆ, ಅವರಾರೂ ಈ ಅಳುಕಿನಲ್ಲಿರಲಿಲ್ಲ. ಏಕೆಂದರೆ, ಅವರೆಲ್ಲ ಅಲ್ಲಿ “ಜೆಮ್ಸ್‌’ಬಾಂಡ್‌ಗಳು!

ಬಡವರ ಅದೃಷ್ಟ ಖುಲಾಯಿಸಲಿಲ್ಲ!
ಶ್ರೀಲಂಕಾವು ಹವಳ, ರತ್ನಗಳ ಅಕ್ಷಯ ಪಾತ್ರೆ. 2,500 ವರ್ಷದಿಂದ ಈ ನೆಲದಲ್ಲಿ ರತ್ನಗಳು ಪತ್ತೆ ಆಗುತ್ತಲೇ ಇವೆ. ಕ್ರಿ.ಪೂ. 500ರಲ್ಲಿ ಕೆಲವು ಬೌದ್ಧ ಸನ್ಯಾಸಿಗಳು ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದರಂತೆ. ಇಲ್ಲಿನ ನದಿಯೊಂದರಲ್ಲಿ ಸ್ನಾನ ಮಾಡುವಾಗ, ಅವರ ಕೈಗೆ ಹವಳಗಳು ಸಿಕ್ಕವಂತೆ. ಅವರು ಅದನ್ನು ಉಂಗುರ, ಇತರೆ ಆಭರಣಗಳನ್ನಾಗಿ ಮಾಡಿಕೊಂಡರು ಎನ್ನುತ್ತದೆ ಇತಿಹಾಸ. ಜಾತಕಗಳಿಗೆ ತಕ್ಕಂತೆ ಇಂಥ ಬಣ್ಣದ ರತ್ನಗಳನ್ನು ಧರಿಸಿದರೆ, ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಭಾರತದಲ್ಲಿದೆ. ಈ ನಂಬಿಕೆಯೇ ಶ್ರೀಲಂಕಾದಲ್ಲಿ ರತ್ನಗಳಿಗೆ ಬೇಡಿಕೆಯನ್ನು ಸೃಷ್ಟಿಸಿದೆ. ಆದರೆ, ಶ್ರೀಲಂಕಾ ಪ್ರಜೆಗಳ ಬಡತನ ಈ ಉದ್ಯಮದಿಂದ ಕರಗಲೇ ಇಲ್ಲ ಎಂಬುದು ವಿಪರ್ಯಾಸ.

– ಮಧುಚಂದ್ರ ಎಚ್‌.ಬಿ., ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next