Advertisement

ಧನಾತ್ಮಕ ಚಿಂತನೆ ಅಳವಡಿಸಿಕೊಳ್ಳಿ

05:23 PM Feb 09, 2020 | Suhan S |

ರಾಣಿಬೆನ್ನೂರ: ಇಂದಿನ ಒತ್ತಡದ ಜೀವನ ಹಾಗೂ ಆಧುನಿಕತೆಯ ಭರಾಟೆಯ ದಿನಗಳಲ್ಲಿ ಸಾಮಾಜಿಕ ಪಿಡುಗು ಎಂದೆನಿಸಿರುವ ವರದಕ್ಷಿಣೆ ಪದ್ಧತಿ ಹಾಗೂ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿರುವುದು ದುರ್ದೈವದ ಸಂಗತಿ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಕರ್ಕಿ ಮಠದ ಸಚ್ಚಿದಾನಂದ ಜ್ಞಾನೇಶ್ವರಿ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಮೃತ್ಯುಂಜಯ ನಗರದಲ್ಲಿ ದೈವಜ್ಞ ಸಮಾಜದ ವತಿಯಿಂದ ನೂತನವಾಗಿ ನಿರ್ಮಿಸಿರುವ ದೈವಜ್ಞ ಸಮುದಾಯಭವನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸತ್ತ ಮೇಲೆಯೂ ಆತನ ಹೆಸರು ಜನಮಾನಸದಲ್ಲಿ ಜೀವಂತವಾಗಿರುವಂತಹ ಕೆಲಸಗಳನ್ನು ಮಾಡಬೇಕು. ಮನುಷ್ಯನಿಗೆ ವೈಯುಕ್ತಿಕ ಹಿತಾಸಕ್ತಿಗಿಂತ ಸಮಸ್ತ ಮನುಕುಲದ ಶ್ರೇಯಸ್ಸಿನ ಚಿಂತನೆಯಿರಬೇಕು ಎಂದರು.

ಸಂಕುಚಿತ ಮನೋಭಾವನೆಯಿಂದ ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತವೆ. ಲೋಕದ ಸಮಸ್ತ ಜನರು ಸುಖವಾಗಿರಲಿ ಎಂಬ ಚಿಂತನೆಯಿರಬೇಕು. ಋಣಾತ್ಮಕ ವಿಚಾರಗಳ ಬದಲಿಗೆ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಜನರು ಸಂಘಟಿತರಾಗಿ ಇಂತಹ ಸಣ್ಣ ಊರಿನಲ್ಲಿಯೂ ಭವ್ಯವಾದ ಸಮುದಾಯ ಭವನ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೊಡ್ಡ ಸಮಾಜದವರೇ ಇಂತಹ ಸಮುದಾಯದ ಬಗ್ಗೆ ತಲೆಕೆಡಿಕೊಂಡಿಲ್ಲ. ಹೀಗಿರುವಾಗ ದೈವಜ್ಞ ಸಮಾಜ ಸಣ್ಣ ಸಮಾಜವಾಗಿದ್ದರೂ ಸಹಿತ ತಾಲೂಕಿನಲ್ಲಿ ಭವ್ಯವಾದ ಕಲ್ಯಾಣ ಮಂಟಪ ಕಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಸಾಧನೆ ಮಾಡಲು ಛಲ ಇರಬೇಕು ಎನ್ನುವುದು ತೋರಿಸಿ ಕೊಟ್ಟಿದ್ದಾರೆ ಎಂದರು.

ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ದೈವಜ್ಞ, ದತ್ತಾತ್ರೇಯ ಶೇಜವಾಡಕರ, ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ವಿನಯಾ ರಾಯ್ಕರ್‌, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪಾಂಡುರಂಗ ಗಂಗಾವತಿ, ಬಿಜೆಪಿ ಮುಖಂಡ ಚೋಳಪ್ಪ ಕಸವಾಳ, ಸಮಾಜದ ಮುಖಂಡರಾದ ಕಮಲಾಕರ ಶೇಜವಾಡಕರ, ಮಂಜುನಾಥ ಶೇಜವಾಡಕರ, ಪ್ರಕಾಶ ರೇವಣಕರ, ರಾಜು ರೇವಣಕರ, ಪದ್ಮಾವತಿ ದೈವಜ್ಞ, ವತ್ಸಲಾ ಶೇಜವಾಡಕರ, ಸಂತೋಷ ದೈವಜ್ಞ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next