Advertisement

ಎಳ್ಳಾರೆ: ಸಾರ್ವಜನಿಕ ಸಾರಿಗೆ ಸಂಪರ್ಕವೇ ಇಲ್ಲದ ಗ್ರಾಮ

12:30 AM Feb 23, 2019 | |

ಅಜೆಕಾರು: ಕಡ್ತಲ ಪಂಚಾಯತ್‌ ವ್ಯಾಪ್ತಿಯ ಎಳ್ಳಾರೆ ಗ್ರಾಮಕ್ಕೆ ಬಸ್ಸು ಸಂಚಾರ ಇಲ್ಲದೆ ಗ್ರಾಮಸ್ಥರು ಬವಣೆ ಪಡುವಂತಾಗಿದೆ. ಈ ಗ್ರಾಮವು ಹಲವು ಗ್ರಾಮಗಳನ್ನು ಸಂಪರ್ಕಿಸುವ ಕೇಂದ್ರಬಿಂದುವಾಗಿದ್ದರೂ ಈವರೆಗೆ ಗ್ರಾಮಕ್ಕೆ ಬಸ್‌ ಸಂಚಾರ ವ್ಯವಸ್ಥೆಯಾಗಿಲ್ಲ. 2500ರಷ್ಟು ಜನಸಂಖ್ಯೆ ಹೊಂದಿರುವ ಎಳ್ಳಾರೆಗೆ ಸಾರಿಗೆ ಸಂಪರ್ಕವಿಲ್ಲದ್ದರಿಂದ ಸ್ಥಳೀಯರು ನಿತ್ಯ ಪರ ದಾಡುತ್ತಿದ್ದಾರೆ.

Advertisement

ಸುತ್ತು ಬಳಸಿ ಸಂಚಾರ 
ಎಳ್ಳಾರೆಯಿಂದ ಮುನಿಯಾಲು, ಕಡ್ತಲ, ಕುಕ್ಕುಜೆ, ಪೆರ್ಡೂರು, ಶಿವಪುರ, ಪಡುಕುಡೂರು ಗ್ರಾಮಗಳನ್ನು ಸಂಪರ್ಕಿ ಸಲು ರಸ್ತೆ, ಸೇತುವೆ ನಿರ್ಮಾಣ ವಾಗಿದ್ದರೂ ಬಸ್‌ ವ್ಯವಸ್ಥೆ ಇಲ್ಲದೆ ಈ ಎಲ್ಲ ಗ್ರಾಮಗಳಿಗೆ ಸುತ್ತುಬಳಸಿ ನಾಗರಿಕರು ಸಂಚರಿಸುವಂತಾಗಿದೆ.

ಮುನಿಯಾಲಿಗೆ 6 ಕಿ.ಮೀ., ಕಡ್ತಲಕ್ಕೆ 5 ಕಿ.ಮೀ., ದೊಂಡೇ ರಂಗಡಿಗೆ 3 ಕಿ.ಮೀ., ಪೆರ್ಡೂರಿಗೆ 12 ಕಿ.ಮೀ. ಯಷ್ಟು ದೂರವಿದ್ದು ಈ ಗ್ರಾಮಗಳಿಗೆ ಎಳ್ಳಾರೆ ಗ್ರಾಮಸ್ಥರು ಖಾಸಗಿ ವಾಹನ ಅಥವಾ ನಡೆದು ಕೊಂಡೇ ಹೋಗಬೇಕಿದೆ.  

ಎಳ್ಳಾರೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ, ಪ್ರಾಚೀನ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನವಿದ್ದು ಇಲ್ಲಿಗೆ ಪ್ರತಿನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಇವರು ಬಸ್‌ ಸಂಪರ್ಕವಿಲ್ಲದೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ.

200ಕ್ಕೂ ಅಧಿಕ ವಿದ್ಯಾರ್ಥಿಗಳು
ಎಳ್ಳಾರೆಯಲ್ಲಿ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಮಾತ್ರ ಇದ್ದು ಪ್ರೌಢ ಶಿಕ್ಷಣ, ಪದವಿಪೂರ್ವ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣಕ್ಕೆ ದೂರದ ಊರುಗಳಾದ ಮುನಿಯಾಲು, ದೊಂಡೇರಂಗಡಿ, ಪೆರ್ಡೂರಿಗೆ ತೆರಳಬೇಕಾಗಿದ್ದು ಗ್ರಾಮದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಬಸ್‌ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ಹೋಗಬೇಕು.
  
ಎಳ್ಳಾರೆ ಗ್ರಾಮದ ಮೂಲಕ ದಶಕಗಳ ಹಿಂದೆ ಖಾಸಗಿ ಬಸ್ಸೊಂದು ಓಡಾಟ ನಡೆಸುತ್ತಿತ್ತು. ಪ್ರತಿದಿನ ಬೆಳಗ್ಗೆ 8.00 ಗಂಟೆಗೆ ಹಾಗೂ ಮಧ್ಯಾಹ್ನ 12.30ಕ್ಕೆ ಸಂಚರಿಸುತ್ತಿತ್ತು. ಆದರೆ ಅನಂತರದ ದಿನಗಳಲ್ಲಿ ಖಾಸಗಿ ಬಸ್‌ ಮಾಲಕರು ಸಂಚಾರ ಸ್ಥಗಿತ ಗೊಳಿಸಿದ್ದಾರೆ. ಹಾಗಾಗಿ ಈ ಗ್ರಾಮಕ್ಕೆ ಶಾಶ್ವತವಾಗಿ ಬಸ್‌ ಸೌಕರ್ಯ ಬೇಕಾಗಿರುವುದರಿಂದ ಸರಕಾರಿ ಬಸ್‌ ಓಡಾಟ ನಡೆಸಬೇಕು ಎಂಬುದು ಸ್ಥಳೀಯರ ಆಶಯ.

Advertisement

ಹಲವು ಬಾರಿ ಮನವಿ
ಉಡುಪಿ, ಕೊಳಲಗಿರಿ, ಪೆರ್ಡೂರು, ಕುಂಟಲ್‌ಕಟ್ಟೆ, ಎಳ್ಳಾರೆ ಮಾರ್ಗವಾಗಿ ಪಡುಕುಡೂರು, ಮುನಿಯಾಲು, ಮುಟ್ಲುಪಾಡಿ ಸಂಪರ್ಕ ಕಲ್ಪಿಸುವಂತೆ ರಾಜ್ಯ ಸರಕಾರಿ ಸಾರಿಗೆ ಬಸ್‌ ಒದಗಿಸುವಂತೆ ಸಾರಿಗೆ ನಿಗಮಕ್ಕೆ ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇನೆ. ಜಿ.ಪಂ. ಸಭೆಯಲ್ಲಿಯೂ ಪ್ರಸ್ತಾವನೆ ಮಾಡಲಾಗಿದೆ. ಬಸ್‌ ಸಂಪರ್ಕದ ವ್ಯವಸ್ಥೆ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿರುವ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
– ಜ್ಯೋತಿ ಹರೀಶ್‌, ಜಿ.ಪಂ. ಸದಸ್ಯರು

ಸಂಚಾರಕ್ಕೆ ಸಂಕಷ್ಟ
ಗ್ರಾಮಕ್ಕೆ ಬಸ್‌ ಸೌಕರ್ಯ ಇಲ್ಲದೆ ಸ್ಥಳೀಯ ಗ್ರಾಮಸ್ಥರಿಗೆ ಹಾಗೂ ಸುತ್ತಲ ಗ್ರಾಮಸ್ಥರಿಗೆ ಸಂಚಾರಕ್ಕೆ ಸಂಕಷ್ಟಪಡುವಂತಾಗಿದೆ. ಈಗಾಗಲೇ ಹಲವು ಬಾರಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ಮನವಿ ಮಾಡಿದರೂ ನಿಷ್ಪ್ರಯೋಜಕವಾಗಿದೆ.
– ಸತೀಶ್‌ ಪೂಜಾರಿ, ಗ್ರಾ.ಪಂ. ಸದಸ್ಯರು

– ಜಗದೀಶ್‌ ರಾವ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next