Advertisement

ಎರಡು ತಿಂಗಳಿಂದ ವಿದ್ಯುತ್ ಸಮಸ್ಯೆ : ಬೆಸ್ಕಾಂ ಕಚೇರಿ ಎದುರು ಗ್ರಾಮಸ್ಥರಿಂದ ಪ್ರತಿಭಟನೆ

06:12 PM Apr 07, 2022 | Team Udayavani |

ಚಿಕ್ಕಜಾಜೂರು : ಸುಮಾರು ಎರಡು ತಿಂಗಳಿನಿಂದ ಚಿಕ್ಕಜಾಜೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದ್ದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ವಿದ್ಯುತ್ ಸಮಸ್ಯೆಯಿಂದ ಹೈರಾಣಾಗಿ ಹೋಗಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಚಿಕ್ಕಜಾಜೂರು ವಿದ್ಯುತ್ ಪ್ರಸರಣ ಕೇಂದ್ರ ಕಚೇರಿಯ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.

Advertisement

ಚಿಕ್ಕಜಾಜೂರು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಸರಿಸುಮಾರು ಎರಡು ತಿಂಗಳಿಂದ ಕೇವಲ 2 ರಿಂದ 3 ಗಂಟೆ ವಿದ್ಯುತ್ ಪೂರೈಸುತ್ತಿದ್ದು ಮಹಿಳೆಯರಿಗೆ ದಿನನಿತ್ಯದ ಬಳಕೆಗೆ ನೀರನ್ನು ಸಹ ಸಂಗ್ರಹಿಸಲು ಸಾಧ್ಯವಾಗದೇ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪ್ರಸಂಗ ಎದುರಾಗಿದೆ. SSLC ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದಿಕೊಳ್ಳಲು ಕರೆಂಟ್ ಇಲ್ಲದೇ ತುಂಬಾ ತೊಂದರೆ ಆಗಿದೆ, ಈ ಭಾಗದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗರಿಷ್ಠ ಅಂಕ ತೆಗೆದುಕೊಳ್ಳದಿದ್ದರೆ ಇದಕ್ಕೆ ನೇರವಾಗಿ ಬೆಸ್ಕಾಂ ಇಲಾಖೆಯೆ ಕಾರಣ ಎಂದು ಪೋಷಕರು ಕಚೇರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ,ಎಸ್,ಮೂರ್ತಿ ನೇತೃತ್ವದಲ್ಲಿ ಗುರುವಾರ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಬೆಳಿಗ್ಗೆಯಿಂದಲೇ ಚಿಕ್ಕಜಾಜೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ : ಬೆಲೆ ಏರಿಕೆ ಬಿಸಿಗೆ ಜನತೆ ಜೀವಂತ ಶವವಾಗಿದ್ದಾರೆ: ಡಿ.ಕೆ.ಶಿವಕುಮಾರ್‌

ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ರವರಿಗೆ ಪಿಎಸ್ ಮೂರ್ತಿ ದೂರವಾಣಿ ಮುಖಾಂತರ ಈ ಭಾಗದ ಗ್ರಾಮಗಳ ವಿದ್ಯುತ್ ಸಮಸ್ಯೆ ಬಗ್ಗೆ ತಿಳಿಸಿದರು. ದೂರವಾಣಿಯಲ್ಲಿ ಮಾತನಾಡಿದ ಶಾಸಕರು ಚಿತ್ರುರ್ಗ ಇಇ ಜಯಪ್ಪರೊಂದಿಗೆ ಮಾತನಾಡಿ, ಈ ಕೂಡಲೇ ದಾವಣಗೆರೆಯಿಂದ ಹೆಚ್ಚುವರಿಯಾಗಿ ನಾಲ್ಕು ಮೆಗಾವ್ಯಾಟ್ ವಿದ್ಯುತ್ ಪಸರಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇನ್ನು ಕೆಲವೇ ದಿನಗಳಲ್ಲಿ ಪಂಡರಹಳ್ಳಿಯಲ್ಲಿ ನಡೆಯುತ್ತಿರುವ ವಿದ್ಯುತ್ ಪ್ರಸರಣ ಕೇಂದ್ರದ ಕಾಮಗಾರಿ ಪೂರ್ಣಗೊಳ್ಳಲಿದೆ, ವಿದ್ಯುತ್ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ, ಅಲ್ಲಿವರೆಗೆ ನೀವುಗಳು ಆದಷ್ಟು ವಿದ್ಯುತ್ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

Advertisement

ಪ್ರತಿಭಟನೆಯ ವಿಚಾರ ತಿಳಿದ ಹೊಳಲ್ಕೆರೆ ಎಡಬ್ಲ್ಯೂಇ ನಾಗರಾಜಪ್ಪ ನಾಗರಾಜಪ್ಪ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ವಿದ್ಯುತ್ ಸಮಸ್ಯೆ ಬಗ್ಗೆ ವಿವರಿಸಿದರು. ಈಗತಾನೆ ಮೇಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಅಧಿಕಾರಿಗಳು ಮೂರು ಮೆಗಾವ್ಯಾಟ್ ವಿದ್ಯುತ್ ಹೆಚ್ಚಿಗೆ ನೀಡುವ ಭರವಸೆ ನೀಡಿದ್ದಾರೆ ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು,

ಇದಕ್ಕೆ ಬಗ್ಗದ ಗ್ರಾಮಸ್ಥರು ನೀವು 2 ತಿಂಗಳಿನಿಂದ ಇದೇ ರೀತಿ ಸುಳ್ಳುಗಳನ್ನು ಹೇಳಿಕೊಂಡು ಬಂದಿದ್ದೀರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಲಸ ನಿರ್ವಹಿಸುವವರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಕೇಳಿದರೆ ನಿಮ್ಮ ಮೇಲೆ ಹೇಳುತ್ತಾರೆ ಸಾರ್ವಜನಿಕರು ನಿಮ್ಮ ಮನೆಯ ಗುಲಾಮರ, ಈ ಸಮಸ್ಯೆ ಮುಂದುವರೆದರೆ ಕಚೇರಿಗೆ ಬೀಗ ಜಡಿದು ದೊಡ್ಡ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಆಧುನಿಕತೆ ಹೊಡೆತದಿಂದ ಕುಂಬಾರಿಕೆ ನೇಪತ್ಯಕ್ಕೆ ; ಗಡಿಗೆ ತಯಾರಿಕೆಗೆ ಆಧುನಿಕ ಸ್ಪರ್ಶ

ಪಿ ಎಸ್ ಮೂರ್ತಿ ಅವರು ಮಾತನಾಡಿ ಚಿಕ್ಕಜಾಜೂರು ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಾತ್ರೆಗಳು ನಡೆಯುತ್ತಿದ್ದು ಹನ್ನೊಂದನೇ ತಾರೀಖಿನವರೆಗೆ ಹಲವು ರೀತಿಯ ದೇವತಾಕಾರ್ಯಗಳು ರಾತ್ರಿ ವೇಳೆ ನಡೆಯುತ್ತಿವೆ ಗ್ರಾಮ ದೇವರುಗಳ ಮೆರವಣಿಗೆಗಳನ್ನು ಕತ್ತಲಲ್ಲಿ ಮಾಡುವ ಪ್ರಸಂಗ ಬಂದಿದೆ, ಹೀಗೆ ಆದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ, ರಸ್ತೆ ತಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾಗರಾಜಪ್ಪ ನಾನು ಕೂಡ ಹಲವು ಬಾರಿ ಇಲಾಖಾ ಮೀಟಿಂಗ್ ಗಳಲ್ಲಿ ಈ ಭಾಗದ ವಿದ್ಯುತ್ ಸಮಸ್ಯೆ ಬಗ್ಗೆ ವಿವರಿಸಿ ಅಧಿಕಾರಿಗಳಿಗೆ ಮಾತನಾಡಿದ್ದೇನೆ, ಸಮಸ್ಯೆ ಬಗ್ಗೆ ತಿಳಿಸಿದ್ದೇನೆ, ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕರು ಹಾಗೂ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಬೇಗನೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಗ್ರಾ,ಪಂ ಉಪಾಧ್ಯಕ್ಷ ಪಿಎಸ್ ಮೂರ್ತಿ, ಸದಸ್ಯರಾದ ಸಿದ್ದೇಶ್, ಜಮೀರ್ ಪಾಷ, ಶ್ರೀಕಾಂತ್, ಕೃ,ಪ,ಸ,ಸಂ,ಸದಸ್ಯ ಪವನ್, ಬಾಬು,ರವಿಕುಮಾರ್, ಸುರೇಶ್, ಹಗೇದ್ ಹಾಲೇಶ್, ಖದೀರ್, ರಾಜು, ಮಲ್ಲಿಕಾರ್ಜುನ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು, ಆರಕ್ಷಕ ಸಿಬ್ಬಂದಿ ಎಎಸ್ಐ ಶಿವಮೂರ್ತಿ, ಗಿರೀಶ್ ಮುಂಜಾಗ್ರತಾ ಕ್ರಮವಾಗಿ ಮೊಕ್ಕಾಂ ಹೂಡಿದ್ದರು,

Advertisement

Udayavani is now on Telegram. Click here to join our channel and stay updated with the latest news.

Next