Advertisement

ವಿದ್ಯುತ್‌ ದರ ಏರಿಕೆ ಪ್ರಸ್ತಾವ; ಆಕ್ಷೇಪ

11:05 PM Feb 17, 2023 | Team Udayavani |

ಮಂಗಳೂರು: ವಿದ್ಯುತ್‌ ದರ ಯುನಿಟ್‌ಗೆ ಸರಾಸರಿ 1.38 ರೂ.ನಷ್ಟು ಏರಿಕೆ ಮಾಡುವಂತೆ ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಮಂಡಿಸಿರುವ ಪ್ರಸ್ತಾವಕ್ಕೆ ರೈತರು ಹಾಗೂ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ವತಿಯಿಂದ ಸಾರ್ವಜನಿಕ ವಿಚಾರಣೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕೆಇಆರ್‌ಸಿ ಅಧ್ಯಕ್ಷ ಪಿ. ರವಿಕುಮಾರ್‌ ಅವರು, ಮೆಸ್ಕಾಂ ಪ್ರಸ್ತಾವ ಹಾಗೂ ಗ್ರಾಹಕರ ಆಕ್ಷೇಪ ಆಲಿಸಿದರು. ಸರ್ವರ ಸಲಹೆಯನ್ನು ಪರಿಗಣಿಸಿ ಗ್ರಾಹಕರ ಹಾಗೂ ಮೆಸ್ಕಾಂ ಹಿತರಕ್ಷಣೆಯನ್ನು ಪರಿಗಣಿಸಿ ಸರಕಾರಕ್ಕೆ ಶಿಫಾರಸು ಸಲ್ಲಿಸಲಾಗುವುದು ಎಂದರು. ಸಭೆಯಲ್ಲಿ ಆಯೋಗದ ಸದಸ್ಯ ಎಚ್‌.ಎಂ. ಮಂಜುನಾಥ್‌ ಹಾಗೂ ಎಂ.ಡಿ. ರವಿ ಉಪಸ್ಥಿತರಿದ್ದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಅವರು ವಿದ್ಯುತ್‌ ದರ ಏರಿಕೆಯ ಆವಶ್ಯಕತೆಯನ್ನು ವಿವರಿಸಿದರು. ಕೈಗಾರಿಕಾ ಉದ್ಯಮಿಗಳು, ರೈತರು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಯ ಪ್ರತಿನಿಧಿಗಳು ದರ ಏರಿಕೆ ಪ್ರಸ್ತಾವಕ್ಕೆ ಆಕ್ಷೇಪ ಸೂಚಿಸಿದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಮಾತನಾಡಿದ ಪ್ರತಿನಿಧಿಗಳು ಕೆಇಆರ್‌ಸಿ ನಿರ್ದೇಶನ ನೀಡುವ ದರ ಅಥವಾ ಇತರ ಆದೇಶವನ್ನು ತತ್‌ಕ್ಷಣವೇ ಮೆಸ್ಕಾಂ ಜಾರಿ ಮಾಡಬೇಕು. ಅದರ ಬದಲು ಮೆಸ್ಕಾಂ ಪ್ರತ್ಯೇಕ ಆದೇಶದ ನೆಪ ಹೇಳಿ ಮುಂದೂಡಿಕೆ ತಂತ್ರ ಅನುಸರಿಸುವುದು ಸರಿಯಲ್ಲ ಎಂದರು. ಕೆಇಆರ್‌ಸಿ ಅಧ್ಯಕ್ಷ ಪಿ. ರವಿಕುಮಾರ್‌ ಉತ್ತರಿಸಿ, ಆಯೋಗದ ಆದೇಶವನ್ನು ಅದೇ ದಿನದಿಂದಲೇ ಮೆಸ್ಕಾಂ ಜಾರಿಗೊಳಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಹಕರು ಹೇಳುವುದೇನು?
ಸತ್ಯನಾರಾಯಣ ಉಡುಪ ಮಾತನಾಡಿ, ಮೆಸ್ಕಾಂಗೆ ಬರಲು ಬಾಕಿ ಇರುವ ಹಣವನ್ನು ವಸೂಲು ಮಾಡಿದರೆ ಮೆಸ್ಕಾಂ ದರ ಏರಿಕೆ ಪ್ರಸ್ತಾವವೇ ಇರುವುದಿಲ್ಲ. ಮೆಸ್ಕಾಂ ಈಗಲೂ ಲಾಭದಲ್ಲಿದೆ. ಹೀಗಾಗಿ ದರ ಏರಿಕೆ ಮಾಡಬಾರದು ಎಂದರು. ರಾಮಕೃಷ್ಣ ಶರ್ಮ ಉಡುಪಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಲೋ ವೋಲ್ಟೆàಜ್‌ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹಳೆಯ ಹಾಗೂ ತುಂಡಾದ ತಂತಿಯ ಸಮಸ್ಯೆ ಇದೆ. ಲೆಕ್ಕಕ್ಕಿಂತ ಅಧಿಕ ಪಂಪ್‌ ಜೋಡಣೆಯೂ ಇದೆ ಎಂದರು.

Advertisement

ರವೀಂದ್ರ ಗುಜ್ಜರಬೆಟ್ಟು ಮಾತನಾಡಿ ವಿದ್ಯುತ್‌ ದರ ಏರಿಕೆ ಮಾಡಿದರೆ ಎಲ್ಲ ಬೆಲೆಯೂ ಏರಲಿದೆ. ಇದಕ್ಕಾಗಿ ವಿದ್ಯುತ್‌ ಬಳಕೆ ಕಡಿಮೆ ಮಾಡುವ ಬಗ್ಗೆ ಮೆಸ್ಕಾಂ ಜನರಿಗೆ ಅರಿವು ಮೂಡಿಸಬೇಕು ಎಂದರು. ಬಿ. ಪ್ರವೀಣ್‌, ವಾಸುದೇವ ನಾಯಕ್‌, ರೋಹಿತ್‌ ಪೂಜಾರಿ ಮುಂತಾದವರು ಮಾತನಾಡಿದರು.

ಮಂಜುಗಡ್ಡೆ ಸ್ಥಾವರಗಳಿಗೆ ವಿಶೇಷ ರಿಯಾಯಿತಿ ನಿಯಮವನ್ನು ಎಲ್ಲಾ ಸ್ಥಾವರದವರಿಗೂ ವಿಸ್ತರಿಸಬೇಕು ಎಂದು ಸ್ಥಾವರದ ಪ್ರಮುಖರು ಒತ್ತಾಯಿಸಿದರು. ಜಿ.ಕೆ. ಭಟ್‌ ಅವರು ಮಾತನಾಡಿ ಲೈನ್‌ಮ್ಯಾನ್‌ಗಳ ನೇಮಕ, ಕಂಬಗಳಿಗೆ ಕೇಬಲ್‌ ಅಳವಡಿಕೆಗೆ ನಿಯಮಾವಳಿ ಹಾಗೂ ಗ್ರಾಹಕರ ಸಭೆಯನ್ನು ಆನ್‌ಲೈನ್‌ ಕೈಬಿಟ್ಟು ಕಚೇರಿಯಲ್ಲಿ ಗ್ರಾಹಕರ ಉಪಸ್ಥಿತಿಯಲ್ಲಿ ಮಾಡಬೇಕು ಎಂದರು.

ಬಾಕಿ ವಸೂಲಿ ಮಾಡದೆ ದರ ಏರಿಕೆ ಯಾವ ನ್ಯಾಯ?
ಗ್ರಾಹಕರ ವೇದಿಕೆಯ ಕೆ.ಎನ್‌.ವೆಂಕಟಗಿರಿ ರಾವ್‌ ಮಾತನಾಡಿ, ಗ್ರಾ.ಪಂ. ಸಹಿತ ವಿವಿಧ ಮೂಲಗಳಿಂದ ಮೆಸ್ಕಾಂಗೆ ಸುಮಾರು 1,214 ಕೋ.ರೂ. ಹಣ ಬರಲು ಬಾಕಿ ಇದೆ. ಮೆಸ್ಕಾಂ ಇದನ್ನು ವಸೂಲು ಮಾಡುವುದನ್ನು ಬಿಟ್ಟು 769 ಕೋ.ರೂ. ಕೊರತೆಯ ನೆಪ ಹೇಳಿ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ ಬಿಸಿ ನೀಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ದರ ಏರಿಕೆ ಅನಿವಾರ್ಯತೆ: ಮೆಸ್ಕಾಂ
2023 -24ರಲ್ಲಿ 6313.75 ಮಿ.ಯುನಿಟ್‌ ವಿದ್ಯುತ್‌ ಖರೀದಿಸಲು ಪ್ರಸ್ತಾವವಿದ್ದು, ಇದಕ್ಕಾಗಿ 3787.41 ಕೋ.ರೂ. ವೆಚ್ಚ ಸಹಿತ ಇತರ ವೆಚ್ಚ ಸೇರಿ 5214 ಕೋ.ರೂ. ಕಂದಾಯ ಅಗತ್ಯವಿದೆ. ಆದರೆ, ಮೆಸ್ಕಾಂಗೆ ಎಲ್ಲ ಮೂಲದಿಂದ ಸೇರಿ 4445.43 ಕೋ.ರೂ ಆದಾಯ ನಿರೀಕ್ಷಿಸಲಾಗಿದೆ. ಹೀಗಾಗಿ ಒಟ್ಟು 768.97 ಕೋ.ರೂ. ಕೊರತೆಯಾಗಲಿದೆ. ಇದನ್ನು ಸರಿದೂಗಿಸಲು ಪ್ರತಿ ಯುನಿಟ್‌ಗೆ ಸರಾಸರಿ 1.38 ರೂ. ದರವನ್ನು ಹೆಚ್ಚಿಸಬೇಕಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಅವರು ತಿಳಿಸಿದರು.

ಎಚ್‌ಟಿ ಗ್ರಾಹಕರ ದೂರು/ಮನವಿಗೆ ಶೀಘ್ರ ಸ್ಪಂದಿಸಲು ಎಲ್ಲ ಉಪವಿಭಾಗಾಧಿಕಾರಿ ವ್ಯಾಪ್ತಿಯಲ್ಲಿ ಗ್ರಾಹಕರ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಲಾಗುವುದು. ದ.ಕ. 18, ಉಡುಪಿ 12, ಶಿವಮೊಗ್ಗ 17 ಹಾಗೂ ಚಿಕ್ಕಮಗಳೂರಿನಲ್ಲಿ 12 ಇವಿ ಚಾರ್ಜಿಂಗ್‌ ಯುನಿಟ್‌ ಸ್ಥಾಪಿಸಲಾಗಿದೆ ಹಾಗೂ 2016-17ರಲ್ಲಿ ಶೇ.11.40ರಷ್ಟಿದ್ದ ವಿದ್ಯುತ್‌ ವಿತರಣ ನಷ್ಟ 2021-22ರಲ್ಲಿ ಶೇ.9.02ಕ್ಕೆ ಇಳಿಕೆ ಆಗಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next