Advertisement

Election Commission;ಎಲ್ಲ ಬೂತ್‌ಗಳ ಮಾಹಿತಿ ಪ್ರಕಟ ಅಸಾಧ್ಯ: ಏನಿದು ಫಾರ್ಮ್ 17-ಸಿ?

01:08 AM May 24, 2024 | Team Udayavani |

ಹೊಸದಿಲ್ಲಿ: ಮತದಾನ ನಡೆಯುವ ದಿನ ಸಂಪೂರ್ಣ ಮಾಹಿತಿ ಹೊಂದಿರುವ ಫಾರ್ಮ್ 17 ಸಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡ ಬೇಕು ಎಂಬ ಮನವಿಗೆ ಚುನಾವಣ ಆಯೋಗ ವಿರೋಧ ವ್ಯಕ್ತಪಡಿಸಿದೆ. ಇದು ಜನರಲ್ಲಿ ಗೊಂದಲ ಉಂಟು ಮಾಡಬಹುದು ಎಂದು ಹೇಳಿದೆ.

Advertisement

ಮತದಾನದ ಬಳಿಕ ಫಾರ್ಮ್ 17-ಸಿ ಯ ನ್ನು ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡುವಂತೆ ಸೂಚಿಸಬೇಕು ಎಂದು ಕೋರಿ ಎಡಿಆರ್‌ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಈ ಅರ್ಜಿಗೆ ಉತ್ತರ ನೀಡಿರುವ ಆಯೋಗ, ಈ ಮಾಹಿತಿ ಹಂಚಿಕೊಳ್ಳಲು ವಿರೋಧ ವ್ಯಕ್ತಪಡಿಸಿದೆ. ಫಾರ್ಮ್ 17-ಸಿಯನ್ನು ಮತಗಟ್ಟೆಯಲ್ಲಿರುವ ಏಜೆಂಟ್‌ಗಳಿಗೆ ನೀಡಲಾಗುತ್ತದೆ. ಅಲ್ಲದೇ ಇದನ್ನು ಎಲ್ಲರಿಗೂ ನೀಡ ಬೇಕು ಎಂಬುದಕ್ಕೆ ಕಾನೂನಿಲ್ಲ. ಅಲ್ಲದೇ ತತ್‌ಕ್ಷಣಕ್ಕೆ ಇದನ್ನು ಬದಲು ಮಾಡುವುದು ಕಷ್ಟವಾಗುತ್ತದೆ. ಕಳೆದ 60 ವರ್ಷಗಳಿಂದ ಇದು ಹೀಗೆಯೇ ನಡೆದುಕೊಂಡು ಬಂದಿದೆ ಎಂದು ಆಯೋಗ ಹೇಳಿದೆ.

ವಿಪಕ್ಷಗಳ ವಿರೋಧ: ಚುನಾವಣ ಆಯೋಗದ ಹೇಳಿಕೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂಬುದನ್ನು ತಿಳಿಸುವ ಮಾಹಿತಿ ಹಂಚಿಕೊಳ್ಳುವುದರಿಂದ ಯಾವ ಸಮಸ್ಯೆ ಉಂಟಾಗಲಿದೆ ಎಂದು ಪ್ರಶ್ನಿಸಿವೆ.

ಏನಿದು ಫಾರ್ಮ್ 17-ಸಿ?
ಮತಗಟ್ಟೆಯಲ್ಲಿ ಎಷ್ಟು ಮಂದಿ ಮತದಾರರು ನೋಂದಣಿಯಾಗಿದ್ದಾರೆ. ಎಷ್ಟು ಮಂದಿ ಮತ ಹಾಕಲು ನಿರಾಕರಿಸಿದ್ದಾರೆ. ಎಷ್ಟು ಮತ ನಿರಾಕರಣೆಯಾಗಿದೆ. ಎಷ್ಟು ಜನ ಮತ ಹಾಕಿದ್ದಾರೆ. ಇವಿಎಂ ಸಂಖ್ಯೆ, ಮತಪತ್ರಗಳ ಪ್ರಮಾಣದ ಮಾಹಿತಿಯನ್ನು ಇದು ಹೊಂದಿ ರುತ್ತದೆ. ಪ್ರತೀ ಮತಗಟ್ಟೆಯಲ್ಲೂ ಮತದಾನ ಮುಗಿದ ಬಳಿಕ ಮತಗಟ್ಟೆ ಅಧಿಕಾರಿ ಸಹಿ ಮಾಡಿ ಇದನ್ನು ಏಜೆಂಟ್‌ಗಳಿಗೆ ನೀಡುತ್ತಾರೆ.

ಆಯೋಗ ಆದೇಶದ ವಿರುದ್ಧ ಚಿದಂಬರಂ ಗರಂ
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣ ಆಯೋಗವು ಕಾಂಗ್ರೆಸ್‌ಗೆ ಆದೇಶಿಸಿದ್ದು ಸರಿಯಲ್ಲ. ಏಕೆಂದರೆ ಸರಕಾರದ ನೀತಿಗಳನ್ನು ಪ್ರಶ್ನಿಸುವುದು ವಿಪಕ್ಷಗಳ ಹಕ್ಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

Advertisement

ಕಾಂಗ್ರೆಸ್‌ ನಾಯಕರು ಪ್ರಚಾರದಲ್ಲಿ ಅಗ್ನಿಪಥ ಯೋಜನೆ ರದ್ದುಗೊಳಿಸುವ ಬಗ್ಗೆ ಮಾತನಾಡಿದ್ದಕ್ಕೆ ಬುಧವಾರ ಕಾಂಗ್ರೆಸ್‌ ಅನ್ನು ತರಾ ಟೆಗೆ ತೆಗೆದುಕೊಂಡಿದ್ದ ಆಯೋಗ, ರಕ್ಷಣ ಪಡೆಗಳನ್ನು ರಾಜಕೀಯಗೊಳಿಸಬಾರದು ಎಂದು ಸೂಚಿಸಿತ್ತು. ಇದನ್ನು ತಪ್ಪೆಂದು ಹೇಳಿರುವ ಚಿದಂಬರಂ, “ರಾಜಕೀಕರಣ ಎಂದರೆ ಏನು?. ಸರಕಾರದ ನೀತಿಯನ್ನು ಟೀಕಿಸುವುದು ಮತ್ತು ಅಧಿಕಾರಕ್ಕೆ ಬಂದರೆ ಆ ನೀತಿಯನ್ನು ರದ್ದುಪಡಿಸುತ್ತೇವೆ ಎಂದು ಘೋಷಿಸುವುದು ವಿಪಕ್ಷಗಳ ಹಕ್ಕು’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next