Advertisement

ಗರಿಗೆದರಿದ ಚುನಾವಣೆ ಚಟುವಟಿಕೆ

06:35 AM Mar 20, 2019 | |

ಬೆಂಗಳೂರು: ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಗೆ ಮಂಗಳವಾರ ಅಧಿಕೃತ ಚಾಲನೆ ದೊರಕಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ ಕೇವಲ ಒಂದು ನಾಮಪತ್ರ ಸಲ್ಲಿಕೆ ಆಗಿದೆ.

Advertisement

ಬೆಂಗಳೂರು ಕೇಂದ್ರದಲ್ಲಿ ಪಾಲಿಕೆ ಕೇಂದ್ರ ಕಚೇರಿ, ಉತ್ತರದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ದಕ್ಷಿಣದಲ್ಲಿ ಜಂಟಿ ಆಯುಕ್ತರ ಕಚೇರಿ (ದಕ್ಷಿಣ ವಿಭಾಗ)ಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಫೆ.28ರವರೆಗೆ ಮೂರೂ ಕ್ಷೇತ್ರಗಳಲ್ಲಿ (24 ವಿಧಾನಸಭಾ ಕ್ಷೇತ್ರಗಳು) 71.68 ಲಕ್ಷ ಮತದಾರರಿದ್ದು, ನಗರದಲ್ಲಿ ಒಟ್ಟು 8,514 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ಎನ್‌. ಮಂಜುನಾಥ ಪ್ರಸಾದ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.16ರಿಂದ ಫೆ.28ರವರೆಗೆ 1.08 ಲಕ್ಷ ಜನ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿದ್ದು, ಈ ಪೈಕಿ ಈಗಾಗಲೇ 93,362 ಜನರಿಗೆ ಎಪಿಕ್‌ ಕಾರ್ಡ್‌ ವಿತರಿಸಲಾಗಿದೆ. ಫೆ.28ರಿಂದ ಮಾ.16ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ 1,20,894 ಅರ್ಜಿಗಳು ಸಲ್ಲಿಕೆಯಾಗಿವೆ. ನಂತರವೂ ನೋಂದಣಿಗೆ ಅವಕಾಶ ಇರುತ್ತದೆ. ಆದರೆ, ಮತ ಚಲಾವಣೆಗೆ ಅವಕಾಶ ಇರುವುದಿಲ್ಲ. ಏ.18ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಜಾಹೀರಾತು ಕಡ್ಡಾಯ: ಮಾ.19ರಿಂದ 26ರವರೆಗೆ ನಿತ್ಯ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಮಾ.23 (4ನೇ ಶನಿವಾರ) ಹಾಗೂ 24 (ಭಾನುವಾರ) ರಜೆ ಇರಲಿದೆ. ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಈ ಬಗ್ಗೆ ಕಡ್ಡಾಯವಾಗಿ ಮೂರು ಟಿವಿ ಮತ್ತು ಪತ್ರಿಕೆಗಳಲ್ಲಿ ತಲಾ ಮೂರು ಬಾರಿ ಜಾಹೀರಾತು ಪ್ರಕಟಿಸಬೇಕು. ರಾಜಕೀಯ ಪಕ್ಷಗಳು ಕೂಡ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಜಾಹೀರಾತು ಪ್ರಕಟಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಅಭ್ಯರ್ಥಿ ಅವಲಂಬಿತರ ಆದಾಯ: ಅಭ್ಯರ್ಥಿಯ ಅವಲಂಬಿತರು ಕಳೆದ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಿರಬೇಕು ಹಾಗೂ ಪ್ರತಿ ವರ್ಷ ಎಷ್ಟು ಆದಾಯ ತೋರಿಸಿದ್ದಾರೆ ಎಂಬುದನ್ನೂ ನಮೂದಿಸಿರಬೇಕು ಎಂದ ಅವರು, ಒಬ್ಬ ಅಭ್ಯರ್ಥಿಗೆ ಒಂದು ಕ್ಷೇತ್ರಕ್ಕೆ 70 ಲಕ್ಷ ರೂ. ಖರ್ಚು ಮಾಡಲು ಅವಕಾಶವಿದ್ದು, ಅದಕ್ಕಾಗಿ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಬೇಕು. ಜತೆಗೆ ಕಾಲಕಾಲಕ್ಕೆ ಆಯೋಗಕ್ಕೆ ಮಾಹಿತಿ ಸಲ್ಲಿಸಬೇಕು ಎಂದರು. 

Advertisement

8 ಸಾವಿರ ರೌಡಿಗಳ ಮೇಲೆ ನಿಗಾ: ಈ ವೇಳೆ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಮಾತನಾಡಿ, ಚುನಾವಣಾ ಅಕ್ರಮಗಳ ತಡೆಗೆ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ನಗರದ ಎಂಟೂ ವಿಭಾಗಗಳಲ್ಲಿರುವ ಎಂಟು ಸಾವಿರ ರೌಡಿಗಳ ಮೇಲೆ ನಿಗಾ ಇಡಲಾಗಿದೆ. ಈ ಪೈಕಿ ಪೂರ್ವ ವಿಭಾಗದಲ್ಲಿ ಓರ್ವ ರೌಡಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಐದು ಸಾವಿರ ರೌಡಿಗಳಿಂದ ಸನ್ನಡತೆ ಬಗ್ಗೆ ಬಾಂಡ್‌ನ‌ಲ್ಲಿ ಒಪ್ಪಿಗೆ ಪತ್ರ ಪಡೆಯಲಾಗಿದೆ. ಕನಿಷ್ಠ 1 ಲಕ್ಷದಿಂದ ಗರಿಷ್ಠ 5 ಲಕ್ಷ ಮೊತ್ತದ ಬಾಂಡ್‌ಗಳು ಇವಾಗಿವೆ. ಅಲ್ಲದೆ, ಒಂಬತ್ತು ಸಾವಿರ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿದ್ದು, ಅದರಲ್ಲಿ 7,500ರಿಂದ 8,500 ಶಸ್ತ್ರಾಸ್ತ್ರಗಳನ್ನು ಈಗಾಗಲೇ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಬ್ಯಾಂಕ್‌ಗಳಲ್ಲಿರುವ ಭದ್ರತಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯ್ದ ಅಧಿಕಾರಿಗಳು, ಸಾಂಪ್ರದಾಯಿಕವಾಗಿ ಹೊಂದಿರುವವರಿಗೆ (ಉದಾಹರಣೆಗೆ ಕೊಡಗು ನಿವಾಸಿಗಳು) ಮಾತ್ರ ವಿನಾಯ್ತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

3.98 ಕೋಟಿ ಮೌಲ್ಯದ ಮದ್ಯ ಜಪ್ತಿ: ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈವರೆಗೆ 1.68 ಕೋಟಿ ರೂ. ನಗದು ಹಾಗೂ 3.98 ಕೋಟಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ ಎಂದು ಸುನೀಲ್‌ ಕುಮಾರ್‌ ತಿಳಿಸಿದರು. ಬೆಂಗಳೂರು ಉತ್ತರದಲ್ಲಿ 17 ಲಕ್ಷ ಹಾಗೂ ಕೇಂದ್ರದಲ್ಲಿ 1.67 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ, 3.98 ಕೋಟಿ ಮೊತ್ತದ ಮದ್ಯ, 17 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, 465 ಪ್ರಕರಣಗಳಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಹೇಳಿದರು. 

ಅದಮ್ಯ ಚೇತನ ಟ್ರಸ್ಟ್‌ನಿಂದ ಬಿಸಿಯೂಟ ಪೂರೈಕೆ ಮಾಡುತ್ತಿದ್ದು, ಟ್ರಸ್ಟ್‌ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಬಿಜೆಪಿ ಸಂಭಾವ್ಯ ಅಭ್ಯರ್ಥಿಯೂ ಆಗಿದ್ದಾರೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಜಿಲ್ಲಾ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next