Advertisement

ಉಪ-ಸಮರ: 5 ಕ್ಷೇತ್ರಗಳಲ್ಲಿ ಬಿಜೆಪಿಗೇ ಗೆಲುವು

03:50 AM Apr 14, 2017 | Team Udayavani |

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ನಂತರವೂ ಬಿಜೆಪಿಯ ಗೆಲುವಿನ ಮಂದಹಾಸ ಮುಂದುವರಿದಿದೆ. “ಮಿನಿ ಸಮರ’ವೆಂದೇ ಪರಿಗಣಿತವಾಗಿದ್ದ ದೇಶದ 8 ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಬಿಜೆಪಿ ತನ್ನ ಗೆಲುವಿನ ಓಟವನ್ನು ಕಾಯ್ದಕೊಂಡು ಬಂದಿದೆ.

Advertisement

ಉಳಿದಂತೆ, ಕರ್ನಾಟಕದ 2 ಕ್ಷೇತ್ರಗಳು, ಮಧ್ಯಪ್ರದೇಶದ 1 ಕ್ಷೇತ್ರ ಕಾಂಗ್ರೆಸ್‌ ಪಾಲಾದರೆ, ಪಶ್ಚಿಮ ಬಂಗಾಳದ ಕಾಂತಿ ದಕ್ಷಿಣ್‌ನಲ್ಲಿ ತೃಣಮೂಲ ಕಾಂಗ್ರೆಸ್‌ ಗೆದ್ದಿದೆ, ಇನ್ನು ಜಾರ್ಖಂಡ್‌ನ‌ ಲಿಟಿಪಾರಾದಲ್ಲಿ ಜೆಎಂಎಂ ಗೆಲವು ಸಾಧಿಸಿದೆ. ಒಟ್ಟಿನಲ್ಲಿ ಈ ಉಪಸಮರವೂ ಕಮಲ ಪಾಳಯಕ್ಕೆ ಸಿಹಿ ಹಂಚಿದೆ.

ಗುರುವಾರ ಪ್ರಕಟವಾದ ಫ‌ಲಿತಾಂಶದಲ್ಲಿ ಬಿಜೆಪಿಯ ಅತಿದೊಡ್ಡ ಸಾಧನೆಯೆಂದರೆ, ದೆಹಲಿಯ ರಜೌರಿ ಗಾರ್ಡನ್‌ ಅನ್ನು ಆಮ್‌ ಆದ್ಮಿ ಪಕ್ಷದಿಂದ ಕಸಿದುಕೊಂಡಿ ರುವುದು. ಕಳೆದ ಚುನಾವಣೆಯಲ್ಲಿ ಆಪ್‌ ಪಾಲಾಗಿದ್ದ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಆಪ್‌ ಅಭ್ಯರ್ಥಿಯು ಠೇವಣಿಯನ್ನೂ ಕಳೆದುಕೊಂಡು, 3ನೇ ಸ್ಥಾನಕ್ಕೆ ತೃಪ್ತಿಪಡುವಷ್ಟರಮಟ್ಟಿಗೆ ಬಿಜೆಪಿ ಇಲ್ಲಿ ನೆಲೆಯೂರಿದೆ. ಇಲ್ಲಿನ ಫ‌ಲಿತಾಂಶವು ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಪ್‌ಗೆ ಮರ್ಮಾಘಾತ ಉಂಟುಮಾಡಿದರೆ, ಎರಡನೇ ಸ್ಥಾನ ಗಳಿಸಿರುವ ಕಾಂಗ್ರೆಸ್‌ ದೆಹಲಿಯಲ್ಲಿ ತನ್ನ ಅಸ್ತಿತ್ವ ಈಗಲೂ ಇದೆ ಎಂಬುದನ್ನು ತೋರಿಸಿಕೊಟ್ಟಿದೆ.

ಇದೇ ವೇಳೆ, ಪಶ್ಚಿಮ ಬಂಗಾಳದ ಕಾಂತಿ ದಕ್ಷಿಣ್‌ ಸೀಟಿನಲ್ಲಿ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಿಮಾ ಭಟ್ಟಾಚಾರ್ಯ ಜಯ ಗಳಿಸಿದ್ದಾರೆ. ವಿಶೇಷವೆಂದರೆ, ಇವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಸೌರೀಂದ್ರ ಮೋಹನ್‌ ಅವರನ್ನು 42,526 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಂದರೆ, ಟಿಎಂಸಿ ಭದ್ರಕೋಟೆಯಾದ ಪಶ್ಚಿಮ ಬಂಗಾಳದಲ್ಲಿ ಪ್ರಬಲ ಸ್ಪರ್ಧಿಯಾಗಿ ಬಿಜೆಪಿ ಹೊರಹೊಮ್ಮುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

ಇನ್ನು ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಅರವಿಂದ ಭಡೋರಿಯಾ ಅವರು ಕಾಂಗ್ರೆಸ್‌ನ ಹೇಮಂತ್‌ ಕಟಾರೆ ಅವರನ್ನು ಕೇವಲ 858 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಸ್ಸಾಂನಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿ ಕೊಂಡಿರುವ ಬಿಜೆಪಿ, 9 ಸಾವಿರ ಮತಗಳ ಅಂತರದಿಂದ ಧೇಮಾಜಿ ಕ್ಷೇತ್ರವನ್ನು ಉಳಿಸಿಕೊಂಡಿದೆ. ಇನ್ನು ರಾಜಸ್ಥಾನ ಸಿಎಂ ವಸುಂಧರಾ ರಾಜೇ ಅವರ ಹುಟ್ಟೂರಾದ ಧೋಲ್‌ಪುರ ಕ್ಷೇತ್ರದಲ್ಲಿ ಆಡಳಿತಾರೂಢ ಪಕ್ಷದ ಶೋಭಾ ರಾಣಿ ಕುಶ್ವಾಹಾ ಗೆಲುವು ಸಾಧಿಸುವ ಮೂಲಕ ಬಿಎಸ್‌ಪಿ ಕೈಯಿಂದ ಕ್ಷೇತ್ರವನ್ನು ಕಸಿದುಕೊಂಡಿದ್ದಾರೆ. ಇದೇ ವೇಳೆ, ಜಾರ್ಖಂಡ್‌ನ‌ ಲಿಟ್ಟಿಪಾರಾ ಅಸೆಂಬ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಜೆಎಂಎಂ ಯಶಸ್ವಿಯಾಗಿದೆ. ಜೆಎಂಎಂ ಅಭ್ಯರ್ಥಿ ಸಿಮನ್‌ ಮರಾಂಡಿ ಅವರು 65,551 ಮತಗಳನ್ನು ಗಳಿಸಿದರೆ ಬಿಜೆಪಿಯ ಹೇಮಲಾಲ್‌ ಮರ್ಮು 52,551 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

Advertisement

ಮತ್ತೆ ಶ್ರೀನಗರದ “ದಾಖಲೆ’; ಶೇ.2 ಮತದಾನ
ಶ್ರೀನಗರ ಲೋಕಸಭಾ ಕ್ಷೇತ್ರದ 38 ಮತಗಟ್ಟೆಗಳಲ್ಲಿ ನಡೆದ ಮರುಚುನಾವ ಣೆಯಲ್ಲಿ ಕೇವಲ ಶೇ.2ರಷ್ಟು ಮತದಾನವಾಗಿದೆ. ಈ ಮೂಲಕ “ಅತ್ಯಂತ ಕಡಿಮೆ ಮತದಾನ’ದ ತನ್ನದೇ ದಾಖಲೆಯನ್ನು ಶ್ರೀನಗರ ಮತ್ತೂಮ್ಮೆ ಸರಿಗಟ್ಟಿದೆ. ಭಾನುವಾರದ ಮತದಾನದ ವೇಳೆ ಭಾರೀ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಇಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಸೂಚಿಸಿತ್ತು. ಆಗ ಶೇ.6.5ರಷ್ಟು ಮತದಾನ ನಡೆದಿತ್ತು. ಗುರುವಾರ ಬೋಗಸ್‌ ಮತದಾನ, ಕಲ್ಲೆಸೆತ, ಕಾರ್ಯಕರ್ತರ ನಡುವೆ ಘರ್ಷಣೆ ಸೇರಿದಂತೆ ಸಣ್ಣಪುಟ್ಟ ಅಹಿತಕರ ಘಟನೆಗಳ ನಡುವೆಯೂ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ಸ್ಟ್ರಾಂಗ್‌ ಆಗುತ್ತಿದೆಯೇ ಬಿಜೆಪಿ?
ಇಲ್ಲಿನ ಕಾಂತಿ ದಕ್ಷಿಣ್‌ ಕ್ಷೇತ್ರದ ಫ‌ಲಿತಾಂಶವು ಇಂತಹುದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಲ್ಲಿ ಟಿಎಂಸಿಗೆ ಯಾವಾಗಲೂ ಪ್ರಬಲ ಸ್ಪರ್ಧೆ ನೀಡುತ್ತಿದ್ದ ಎಡಪಕ್ಷ ಈ ಬಾರಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಾಂಗ್ರೆಸ್‌ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ, ದೀದಿಯ ಕೋಟೆಯನ್ನು ಪ್ರವೇಶಿಸಿರುವ ಬಿಜೆಪಿ ಬಂಗಾಳದಲ್ಲಿ ತನ್ನ ಖದರ್‌ ತೋರಿಸಲು ಯತ್ನಿಸುತ್ತಿರುವುದು ಸ್ಪಷ್ಟ. ಕಾಂತಿ ದಕ್ಷಿಣ್‌ನಲ್ಲಿ ಟಿಎಂಸಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದು ಬಿಜೆಪಿಯೇ ಹೊರತು ಎಡಪಕ್ಷವಲ್ಲ. ಟಿಎಂಸಿಯ ಭಟ್ಟಾಚಾರ್ಯ 95,369 ಮತಗಳನ್ನು ತಮ್ಮದಾಗಿಸಿಕೊಂಡರೆ, ಬಿಜೆಪಿ ಅಭ್ಯರ್ಥಿ 52,843 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ ಬಿಜೆಪಿಗೆ ಇಲ್ಲಿ ಕೇವಲ 15 ಸಾವಿರ ಮತಗಳಷ್ಟೇ ದೊರೆತಿತ್ತು. ಅಂದರೆ, ಬಿಜೆಪಿಯ ಮತ ಹಂಚಿಕೆ ಪ್ರಮಾಣ ಈಗ 3 ಪಟ್ಟು ಅಧಿಕವಾಗಿದ್ದು, ಇದು ಟಿಎಂಸಿಗೆ ಸವಾಲಾಗಿ ಪರಿಣಮಿಸಿದೆ.

ಎಂಸಿಡಿ ಚುನಾವಣೆ ಮೇಲೆ  ಕರಿನೆರಳು
ಎಂಸಿಡಿ ಚುನಾವಣೆ ಸಮೀಪಿಸುತ್ತಿರುವಂತೆಯೇ ರಜೌರಿ ಗಾರ್ಡನ್‌ ಉಪಚುನಾವಣೆಯಲ್ಲಿ ಆಪ್‌ಗೆ ಆಘಾತವಾಗಿದೆ. ಆಪ್‌ ಅಭ್ಯರ್ಥಿ ಹರ್ಜೀತ್‌ ಸಿಂಗ್‌ ಕೇವಲ ಶೇ.13.1ರಷ್ಟು ಅಂದರೆ ಒಟ್ಟು ಚಲಾವಣೆಯಾದ ಮತಗಳ ಪೈಕಿ 6ನೇ ಒಂದಕ್ಕಿಂತಲೂ ಕಡಿಮೆ ಮತ ಪಡೆಯುವ ಮೂಲಕ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಪಂಜಾಬ್‌, ಗೋವಾ ವಿಧಾನಸಭೆ ಚುನಾವಣೆಗಳಲ್ಲಿನ ಸೋಲಿನ ಬಳಿಕ ಆಪ್‌ಗೆ ಸಿಕ್ಕಿರುವ ಮತ್ತೂಂದು ಕಹಿ ಸುದ್ದಿಯಿದು. ಸೋಲಿನ ಕುರಿತು ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, “ರಜೌರಿ ಗಾರ್ಡನ್‌ನ ಮಾಜಿ ಶಾಸಕ ಜರ್ನೈಲ್‌ ಸಿಂಗ್‌ ಅವರು ಪಂಜಾಬ್‌ನತ್ತ ಮುಖಮಾಡಿದ್ದರಿಂದ ಮತದಾರರು ಅಸಮಾಧಾನಗೊಂಡಿದ್ದರು. ಆದರೆ, ಇದು ಕೇವಲ ಉಪಚುನಾವಣೆ ಅಷ್ಟೆ. ಇದು ಎಂಸಿಡಿ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ನಾವು ಹೆಚ್ಚು ಶ್ರಮವಹಿಸುತ್ತೇವೆ,’ ಎಂದಿದ್ದಾರೆ. ರಜೌರಿ ಶಾಸಕರಾಗಿದ್ದ ಜರ್ನೈಲ್‌ ಸಿಂಗ್‌ ಅವರು ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಅಲ್ಲಿನ ಸಿಎಂ ಆಗಿದ್ದ ಪ್ರಕಾಶ್‌ ಸಿಂಗ್‌ ಬಾದಲ್‌ ವಿರುದ್ಧ ಕಣಕ್ಕಿಳಿದಿದ್ದರು. ಹೀಗಾಗಿ, ಅವರ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಾಯಿತು.

ದೇಶದ ವಿವಿಧ ಭಾಗಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಸಾಧನೆ ಶ್ಲಾಘನೀಯ. ಅಭಿವೃದ್ಧಿಯ ರಾಜಕೀಯ ಮತ್ತು ಉತ್ತಮ ಆಡಳಿತದ ಮೇಲೆ ಜನರಿಟ್ಟಿರುವ ದೃಢವಾದ ನಂಬಿಕೆಗೆ ಧನ್ಯವಾದ ಸಲ್ಲಿಸುತ್ತೇನೆ. 
ನರೇಂದ್ರ ಮೋದಿ, ಪ್ರಧಾನಿ

ಹಲವು ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಲ್ಲಿ ಜನರಿಗೆ ನಂಬಿಕೆಯಿದೆ ಎಂಬುದನ್ನು ತೋರಿಸಿದೆ.  
ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಕ್ಷೇತ್ರ                  ಗೆದ್ದ ಪಕ್ಷ          ಅಂತರ
ರಜೌರಿಗಾರ್ಡನ್‌      ಬಿಜೆಪಿ           14,000
ಭೋರಂಜ್‌             ಬಿಜೆಪಿ            8,290
ಧೋಲ್‌ಪುರ           ಬಿಜೆಪಿ            38,678
ಬಂದಾವ್‌ಗಡ          ಬಿಜೆಪಿ            25000
ಧೇಮಾಜಿ               ಬಿಜೆಪಿ            9,285
ಅಟೇರ್‌                 ಕಾಂಗ್ರೆಸ್‌     858 
ಕಾಂತಿ ದಕ್ಷಿಣ್‌          ಟಿಎಂಸಿ            42,526
ಲಿಟಿಪಾರಾ              ಜೆಎಂಎಂ    12,900

Advertisement

Udayavani is now on Telegram. Click here to join our channel and stay updated with the latest news.

Next