Advertisement

ದಿನ ಹದಿನೆಂಟು: ಇನ್ನೂ ಪತ್ತೆಯಾಗದ ಹಡಗಿನ ಕಗ್ಗಂಟು

12:30 AM Jan 04, 2019 | |

ಬೆಂಗಳೂರು:ಉಡುಪಿ ಮಲ್ಪೆ ಬಂದರಿನಿಂದ  ಕಳೆದ 18 ದಿನಗಳ ಹಿಂದೆ ತೆರಳಿದ್ದ  ಎಂಟು ಮಂದಿಯಿದ್ದ  ಸುವರ್ಣ ತ್ರಿಭುಜ ಬೋಟ್‌ 12 ನಾಟಿಕಲ್‌ ಮೈಲು ಇರುವ  ದೇಶೀಯ ಸರಹದ್ದು ವ್ಯಾಪ್ತಿ ಮೀರಿ ಸುಮಾರು 60 ನಾಟಿಕಲ್‌ ಮೈಲಿನ ಅಂತಾರಾಷ್ಟ್ರೀಯ ಸರಹದ್ದು ಪ್ರವೇಶಿಸಿರುವುದು ಕೇಂದ್ರ ಗೃಹ ಇಲಾಖೆ ಚಿಂತೆಗೆ ಕಾರಣವಾಗಿದೆ.   

Advertisement

ಈ ಬೆನ್ನಲ್ಲೇ, ಬೋಟು ಮತ್ತು ಮೀನುಗಾರರನ್ನು ಯಾವುದಾದರೂ ದೇಶದ ಕಡಲ್ಗಳ್ಳರು ಹೈಜಾಕ್‌ ಮಾಡಿರಬಹುದೇ? ದೋಣಿ ಅಪಾಯಕ್ಕೆ ಸಿಲುಕಿರಬಹುದೇ ಎಂಬ ಗುಮಾನಿ ಬಲವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯ ಗಂಭೀರವಾಗಿ ಪರಿಗಣಿಸಿದ್ದು, ರಕ್ಷಣಾ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಡಿ.16ರಂದು ಸಂಜೆ ಆರು ಗಂಟೆ ಸುಮಾರಿಗೆ ನಾಪತ್ತೆಯಾದ “ಸುವರ್ಣ ತ್ರಿಭುಜ ಬೋಟ್‌’  ಗೋವಾ ಸಮೀಪ  ಇರುವ ಕಡೆಯ ಸಿಗ್ನಲ್‌ ಪತ್ತೆಯಾಗಿತ್ತು. ಬಳಿಕ ದೇಶೀಯ ವ್ಯಾಪ್ತಿ ಬಿಟ್ಟು ಅಂತಾರಾಷ್ಟ್ರೀಯ ಪರಿಧಿಯಲ್ಲಿರುವ ಲಕ್ಷಣಗಳು ಕಂಡುಬಂದಿವೆ. ಆ ಪ್ರದೇಶದಲ್ಲಿ ವಿದೇಶಿ ಹಡಗುಗಳು ಸಂಚರಿಸುತ್ತವೆ. ಬಹುತೇಕ ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳ ಹಡಗುಗಳು ಈ ಭಾಗದಲ್ಲಿ ಕಂಡುಬರುತ್ತವೆ. ಕಡಲ್ಗಳ್ಳ ಹಡಗುಗಳು ಈ ಭಾಗಗಳಲ್ಲಿ ಇರುವ ಸಂಭವವಿದೆ. ಜತೆಗೆ,  ಪಾಕಿಸ್ತಾನ, ಗಲ್ಫ್ ದೇಶಗಳ ಹಡಗುಗಳೂ ಸಂಚರಿಸುವ ಸಾಧ್ಯತೆಯಿದೆ. ಹೀಗಾಗಿ ಸುವರ್ಣ ತ್ರಿಭುಜ ಹಡಗು ಹಾಗೂ ಮೀನುಗಾರರ ರಹಸ್ಯ ನಿಗೂಢವಾಗಿಯೇ ಉಳಿದುಕೊಂಡಿದೆ.

ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರಿವಾಗಿ ಪರಿಗಣಿಸಿದ್ದು, ನೌಕಾದಳ ಸೇರಿದಂತೆ ಸಂಬಂಧಿತ ಇಲಾಖೆಗಳಿಗೆ ಹೆಚ್ಚಿನ ತನಿಖೆಗೆ ಸೂಚನೆ ನೀಡಿದೆ. ಕೇಂದ್ರ ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, ಇತ್ತೀಚೆಗೆ ಕಡಲ್ಗಳ್ಳರ ದಾಳಿ ಪ್ರಕರಣಗಳು ಆ ಭಾಗದಲ್ಲಿ ಕಂಡುಬಂದಿಲ್ಲ. ಆದರೆ, 2008ರಲ್ಲಿ  ಮುಂಬಯಿಯಲ್ಲಿ ನಡೆದ (26/11) ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಭಾರತೀಯ ಮೀನುಗಾರರ ದೋಣಿಯನ್ನು ವಶಕ್ಕೆ ಪಡೆದ  ಉಗ್ರರು ಅದೇ ದೋಣಿಯನ್ನು ಬಳಸಿ ಮುಂಬಯಿ ಪ್ರವೇಶಿಸದ್ದರು. ಹಾಗಾಗೀ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬೆನ್ನಲ್ಲೇ ಕೇಂದ್ರಗುಪ್ತಚರ ದಳ, ರಕ್ಷಣಾ ಇಲಾಖೆ, ರಾಜ್ಯ ಗುಪ್ತಚರ ದಳ ಪ್ರತ್ಯೇಕವಾಗಿ ಆಂತರಿಕ ತನಿಖೆ ಆರಂಭಿಸಿವೆ. ನೆರೆರಾಜ್ಯಗಳು ಹಾಗೂ ಸಮುದ್ರ ತೀರದ ದೇಶಗಳ ಜತೆ ಚರ್ಚೆ ಆರಂಭಿಸಿವೆ ಎಂದು ತಿಳಿದು ಬಂದಿದೆ.

ಕರಾವಳಿ ಕಾವಲು ಪಡೆ, ಭಾರತೀಯ ನೌಕಾದಳ ಹಾಗೂ ನೆರೆರಾಜ್ಯಗಳ ಪೊಲೀಸ್‌ ಪಡೆಗಳು ಜಲಮಾರ್ಗ, ಹೆಲಿಕಾಪ್ಟರ್‌ ಮೂಲಕ ಶೋಧ ನಡೆಸಿದರೂ ಹಡಗು ಹಾಗೂ ಮೀನುಗಾರರ ಕುರಿತ ಸಣ್ಣ ಸುಳಿವೂ ಇದುವರೆಗೂ ಲಭ್ಯವಾಗಿಲ್ಲ. ಈ  ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಡಗು ಹೈಜಾಕ್‌ ಅಥವಾ ಕಳವು ಶಂಕೆ ಆಧಾರದಲ್ಲಿ ಕೇಂದ್ರ ಗೃಹ ಇಲಾಖೆ ಆಂತರಿಕ ತನಿಖೆ ಆರಂಭಿಸಿದೆ.

Advertisement

ಈಗಾಗಲೇ ಕರ್ನಾಟಕ ಕರಾವಳಿ ಪೊಲೀಸ್‌ ಪಡೆ ಸ್ಥಳೀಯ ಮೀನುಗಾರರು, ವಾಣಿಜ್ಯ ಬೋಟ್‌ಗಳ ಮೀನುಗಾರರ ತಂಡಗಳ ಹೋವರ್‌ ಕ್ರಾಫ್ಟ್, ಡಾರ್ನಿಯಲ್‌ ಏರ್‌ ಕ್ರಾಫ್ಟ್ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಜಲಮಾರ್ಗ ಹಾಗೂ ಹೆಲಿಕಾಪ್ಟರ್‌ಗಳ ಮೂಲಕವೂ ನಾಪತ್ತೆಯಾಗಿರುವ ಹಡಗು ಹಾಗೂ ಮೀನುಗಾರರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.ಇದಲ್ಲದೆ ಡಿ.24ರಿಂದಲೇ ಭಾರತೀಯ ನೌಕಾಪಡೆಯ ಒಂದು ಹಡಗು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಆದರೆ, ಇದುವರೆಗೂ ಮೀನುಗಾರರ ಕುರಿತ ಸುಳಿವು ಲಭ್ಯವಾಗಿಲ್ಲ.ದೋಣಿ  ಹಾಗೂ ಮೀನುಗಾರರ ನಾಪತ್ತೆ ವಿಷಯವನ್ನು ಗುಜರಾತ್‌, ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯದ ಸಮುದ್ರ ತೀರದ ಪ್ರದೇಶಗಳಿಗೆ ಮಾಹಿತಿ ನೀಡಿದ್ದು, ಅವರೂ ಕಾರ್ಯಚರಣೆ ಮುಂದುವರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಜ.5ರಂದು ಗೃಹ ಸಚಿವ ಎಂಬಿ ಪಾಟೀಲ್‌  ಸ್ಥಳಕ್ಕೆ ಭೇಟಿ!
ನಿಗೂಢವಾಗಿ ನಾಪತ್ತೆಯಾಗಿರುವ ಹಡಗು ಹಾಗೂ ಮೀನುಗಾರರ ಪತ್ತೆಗೆ ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸುವಂತೆ ನಿರ್ದೇಶಿಸಿರುವ ರಾಜ್ಯ ಗೃಹ ಸಚಿವ ಎಂ.ಬಿ ಪಾಟೀಲ್‌,  ಜನವರಿ 5ರಂದು ಉಡುಪಿಗೆ ಭೇಟಿ ನೀಡಲಿದ್ದು ಕಾರ್ಯಾಚರಣೆಯ ಮಾಹಿತಿ ಪಡೆಯಲಿದ್ದಾರೆ.ಜತೆಗೆ, ನಾಪತ್ತೆಯಾಗಿರುವ ಮೀನುಗಾರರ ಕುಟುಂಬದವರ ಜತೆಯೂ ಚರ್ಚೆ ನಡೆಸಲಿದ್ದಾರೆ. ಜ.8ರಂದು ರಾಜ್ಯ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಭೇಟಿ ನೀಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಯ ಕರೆ ಯಾರಿಗೆ ಮಾಡಿದ್ದರು ?
ಮೀನುಗಾರಿಕೆ ಸಲುವಾಗಿ ಸುವರ್ಣ ತ್ರಿಭುಜ  ಹಡಗಿನ ಮಾಲೀಕ ಚಂದ್ರಶೇಖರ ಹಾಗೂ ಮೀನುಗಾರರಾದ ದಮಾದಾರ್‌ ಬದನಿಡಿಯಾರ್‌, ಲಕ್ಷ್ಮಣ ಕುಮಟ, ಸತೀಶ್‌ ಕುಮಟ, ರವಿ, ಮಂಕಿ ಹರೀಶ್‌ ಕುಮಟ, ರಮೇಶ್‌ ಕುಮಟ,ಜೋಗಯ್ಯ ಕುಮಟ ಡಿ.13ರಂದು ಸಂಜೆ ಮಲ್ಫೆ ಫಿಶಿಂಗ್‌ ಬಂದರಿನಿಂದ ಸಮುದ್ರಕ್ಕೆ ತೆರಳಿದ್ದರು.

ಡಿ.16ರಂದು ರಾತ್ರಿ 1 ಗಂಟೆ ಸುಮಾರಿಗೆ ಚಂದ್ರಶೇಖರ್‌ ತಮ್ಮ ಸಹೋದರ ನಿತ್ಯಾನಂದ ಅವರಿಗೆ ದೂರವಾಣಿ ಕರೆ ಮಾಡಿ, ಗೋವಾ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಮೀನುಗಾರಿಕೆಗೆ ಬಂದಿದ್ದ ಇತರೆ ಹಡಗುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ತಿಳಿಸಿದ್ದರು.

ಮೀನುಗಾರಿಗೆ ನಡೆಸಲು ಅನುಮತಿ ಪಡೆದುಕೊಂಡಿದ್ದ 10 ದಿನಗಳ ಅವಧಿ ಪೂರ್ಣಗೊಂಡ ಬಳಿಕವೂ ಸಹೋದರ ಹಾಗೂ ಇತರೆ ಏಳು ಮಂದಿ ಮೀನುಗಾರರು ವಾಪಾಸ್‌ ಬರದ ಹಿನ್ನೆಲೆಯಲ್ಲಿ ನಿತ್ಯಾನಂದ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ ಈ ಕುರಿತು ಮಲ್ಪೆ ಪೊಲೀಸ್‌ ಠಾಣೆಯಲ್ಲೂ ದೂರು ನೀಡಿದ್ದರು.

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next