Advertisement

ಈ ವಾರ ತೆರೆಗೆ ಎಂಟು

11:22 AM Aug 06, 2018 | |

ಕನ್ನಡ ಪ್ರೇಕ್ಷಕನಿಗೆ ಪ್ರತಿ ವಾರವೂ ಸಿನಿಹಬ್ಬ. ವಾರಕ್ಕೆ ನಾಲ್ಕು, ಐದು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಯಥಾ ಪ್ರಕಾರ ಈ ವಾರವೂ ಕೂಡ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆಷಾಢ ಕಳೆದು ಇದೀಗ ಶ್ರಾವಣ ಮಾಸ ಶುರುವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಲು ಸಾಲಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಈ ಪೈಕಿ ಹೊಸಬರ ಚಿತ್ರಗಳದ್ದೇ ಕಾರುಬಾರು ಎಂಬುದು ವಿಶೇಷ.

Advertisement

ಹೌದು, ಸಂಚಾರಿ ವಿಜಯ್‌ ಅಭಿನಯದ ‘ಪಾದರಸ’ ಬಿಟ್ಟರೆ, ಉಳಿದಂತೆ ಬಹುತೇಕ ಹೊಸಬರ ಚಿತ್ರಗಳೇ ತೆರೆಗೆ ಬರುತ್ತಿವೆ. “ಅಭಿಸಾರಿಕೆ’, “ಅತಂತ್ರ’,”ಹೊಸ ಕ್ಲೈಮ್ಯಾಕ್ಸ್‌’,”ಲೌಡ್‌ ಸ್ಪೀಕರ್‌’, “ಪುಟ್ಟರಾಜು ಲವ್ವರ್‌ ಆಫ್ ಶಶಿಕಲಾ’, ವಂದನ’, “ಕತ್ತಲೆ ಕೋಣೆ’ ಮತ್ತು ಮಕ್ಕಳ ಚಿತ್ರ “ರಾಮ ರಾಜ್ಯ’ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಸಂಚಾರಿ ವಿಜಯ್‌ ಅಭಿನಯದ “ಪಾದರಸ’ ಚಿತ್ರವನ್ನು ಋಷಿಕೇಶ್‌ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಚಿತ್ರದಲ್ಲಿ ವೈಷ್ಣವಿ ಮೆನನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಮನಸ್ವಿನಿ ಕೂಡ ಮತ್ತೂಬ್ಬ ನಾಯಕಿಯಾಗಿದ್ದಾರೆ. ಕೃಷ್ಣ ರೇವಣ್‌ಕರ್‌ ಈ ಚಿತ್ರದ ನಿರ್ಮಾಪಕರು. ಪ್ರಕಾಶ್‌ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಚಿತ್ರಕ್ಕೆ. ಎ.ಟಿ.ರವೀಶ್‌ ಅವರ ಸಂಗೀತವಿದೆ. ಎಂ.ಬಿ.ಅಳ್ಳಿಕಟ್ಟೆ ಛಾಯಾಗ್ರಹಣವಿದೆ. ಸಂಜಯ್‌ ಕುಲಕರ್ಣಿ, ಜಯಂತ್‌ ಕಾಯ್ಕಿಣಿ ಗೀತೆ ರಚಿಸಿದ್ದಾರೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ಈ ಹಿಂದೆ “ಮಳೆ’ ಮತ್ತು “ಧೈರ್ಯಂ’ ಚಿತ್ರ ನಿರ್ದೇಶಿಸಿದ್ದ ಶಿವತೇಜಸ್‌ ಈ ಬಾರಿ “ಲೌಡ್‌ ಸ್ಪೀಕರ್‌’ ಹೆಸರಿನ ಚಿತ್ರ ನಿರ್ದೇಶಿಸಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಈ ಹಿಂದೆ “ಧೈರ್ಯಂ’ ಸಿನಿಮಾ ನಿರ್ಮಿಸಿದ ರಾಜ್‌ ಅವರೇ ಈ ಚಿತ್ರಕ್ಕೂ ನಿರ್ಮಾಪಕರು.

ಈಗಾಗಲೇ ಚಿತ್ರದ ಹಾಡು “ಚಡ್ಡಿಯೊಳಗೆ ಇರುವೆ ಬಿಟ್ಕೊಳ್ಳಿ’ ಹಾಡು ಹಿಟ್‌ ಆಗಿದ್ದು, ಟ್ರೇಲರ್‌ಗೂ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಇಲ್ಲೂ ಹೊಸಬರೇ ಇದ್ದಾರೆ. ಈ ಚಿತ್ರದಲ್ಲಿ ಮುಖ ಹಾಗೂ ಮುಖವಾಡದ ನಡುವಿನ ಬದುಕು, ಯುವಜನತೆಯ ಮೊಬೈಲ್‌ ಪ್ರೇಮ ಸೇರಿದಂತೆ ಹಲವು ಅಂಶಗಳ ವಿಷಯವಿದೆ. ಚಿತ್ರದಲ್ಲಿ ನೀನಾಸಂ ಭಾಸ್ಕರ್‌, ಅಭಿಷೇಕ್‌, ಸುಮಂತ್‌ ಭಟ್‌, ಕಾರ್ತಿಕ್‌ ರಾವ್‌, ಕಾವ್ಯಾ ಶಾ, ಅನುಷಾ, ದಿಶಾ ಪ್ರಮುಖ ಪಾತ್ರ ಮಾಡಿದ್ದಾರೆ.

Advertisement

ಇವರೊಂದಿಗೆ ರಂಗಾಯಣ ರಘು ದತ್ತಣ್ಣ ನಟಿಸಿದ್ದಾರೆ. ಹರ್ಷವರ್ಧನ್‌ ಚಿತ್ರಕ್ಕೆ ಸಂಗೀತ ನೀಡಿದರೆ, ಕಿರಣ್‌ ಹಂಪಾಪುರ ಛಾಯಾಗ್ರಹಣವಿದೆ. ಹೊಸಬರ “ಪುಟ್ಟರಾಜು ಲವ್ವರ್‌ ಆಫ್ ಶಶಿಕಲಾ’ ಚಿತ್ರವನ್ನು ಸಹದೇವ ನಿರ್ದೇಶಿಸಿದ್ದಾರೆ. ಇದೊಂದು ಕೋಕೋ ಕ್ರೀಡೆ ಸುತ್ತ ನಡೆಯುವ ಕಥೆ ಹೊಂದಿದೆ. ಪ್ರಮುಖವಾಗಿ ನೈಜ ಘಟನೆಯೊಂದರ ಸುತ್ತ ಹೆಣೆದ ಕಥೆ. 2001 ರಲ್ಲಿ ತುಮಕೂರು ಸಮೀಪ ನಡೆದ ಒಂದು ಘಟನೆ ಚಿತ್ರಕ್ಕೆ ಸ್ಫೂರ್ತಿ.

ಪ್ರೌಢಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿ ನಡುವೆ ನಡೆಯೋ ಕಥೆಯಲ್ಲಿ ಕೋಕೋ ಆಟ ಪ್ರಧಾನವಾಗಿದೆಯಂತೆ. ಚಿತ್ರದ ನಾಯಕಿ ರಾಜ್ಯ ಕೋಕೋ ಆಟಗಾರ್ತಿ. ಅವಳ ಮೇಲೆ ಆ ಹುಡುಗನಿಗೆ ಮನಸ್ಸಾಗುತ್ತೆ. ಅವಳನ್ನು ಹೇಗಾದರೂ ಮಾಡಿ ಪಟಾಯಿಸಬೇಕು ಅಂತಾನೇ, ಕೋಕೋ ಆಟಕ್ಕೆ ಸೇರಿಕೊಳ್ಳುತ್ತಾನೆ. ಆದರೆ, ಅವನ ಕಳಪೆ ಆಟ ಪ್ರದರ್ಶನದಿಂದ ಆ ಕೋಕೋ ಆಟದಿಂದ ಹೊರಬರುತ್ತಾನೆ.

ಆಮೇಲೆ ಏನಾಗುತ್ತೆ ಎಂಬುದು ಕಥೆ. ನಾಗರಾಜು, ರಾಜು ಬಾಲಕೃಷ್ಣ ನಿರ್ಮಾಪಕರು. ಅಮಿತ್‌ ನಾಯಕ, ಸುಶ್ಮಿತಾ ಸಿದ್ದಪ್ಪ ಮತ್ತು ಜಯಶ್ರೀ ಆರಾಧ್ಯ ನಾಯಕಿ. ಚಿತ್ರದಲ್ಲಿ ವಿಕ್ರಾಂತ್‌, ಕಾವ್ಯ, ರಂಗಭೂಮಿ ಕಲಾವಿದ ಮಹದೇವಮೂರ್ತಿ, ಡಾ.ರಮಾಮಣಿ ನಟಿಸಿದ್ದಾರೆ. ನಿರ್ದೇಶಕ ಸಹದೇವ್‌ ರಚಿಸಿರುವ ಮೂರು ಗೀತೆಗಳಿಗೆ ಶ್ರೀಮಾನ್‌ ಗಂಧರ್ವ ಸಂಗೀತವಿದೆ.

ಇದರೊಂದಿಗೆ ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧಾರಿತ “ಅತಂತ್ರ’ ಚಿತ್ರ ಬಿಡುಗಡೆಯಾಗುತ್ತಿದೆ. ಇಸಾಕ್‌ ಖಾಜೀ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಿ.ಪಿ.ಸಿಂಗ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಸುರೇಶ್‌ ಬಿ.ವಿ.ಎಸ್‌. ಮತ್ತು ವಸ್ತಾದ್‌ ನೂರ್ಜಿ ಸಂಗೀತವಿದೆ. ಶಿವು ಅಂಬ್ಲಿ ಛಾಯಾಗ್ರಹಣವಿದೆ. ರವೀ ಸಂಭಾಷಣೆ ಬರೆದರೆ, ಶ್ರೀಜವಳಿ ಸಂಕಲನವಿದೆ. ಅನಿತಾಭಟ್‌ ಅಭಿನಯದ “ಹೊಸ ಕ್ಲೈಮ್ಯಾಕ್ಸ್‌’ ಚಿತ್ರವೂ ತೆರೆಗೆ ಬರುತ್ತಿದ್ದು, ಈ ಚಿತ್ರಕ್ಕೆ ಡಾ.ಶ್ಯಾಲಿ ನಿರ್ದೇಶಕರು.

ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಮಾರುತಿ ಅವರ ಸಂಗೀತವಿದೆ. ಗೌರಿ ವೆಂಕಟೇಶ್‌ ಛಾಯಾಗ್ರಹಣ ಮಾಡಿದ್ದಾರೆ. ಎ.ಎಸ್‌.ಮಧುಸೂದನ್‌ ನಿರ್ದೇಶನದ “ಅಭಿಸಾರಿಕೆ’ ಚಿತ್ರವನ್ನು ಶಿವಕುಮಾರ್‌, ಮಧುಸೂದನ್‌, ಪ್ರಶಾಂತ್‌ ನಿರ್ಮಾಣ ಮಾಡಿದ್ದಾರೆ. ಬೆನಕ ರಾಜು ಛಾಯಾಗ್ರಹಣವಿದೆ. ಇದರ ಜೊತೆಗೆ ವಿಜೇತ ನಿರ್ದೇಶನದ “ವಂದನ’ ಚಿತ್ರ ಬಿಡುಗಡೆಯಾಗುತ್ತಿದೆ.

ನಿಷ್ಮ ಕ್ರಿಯೇಷನ್ಸ್‌ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ “ನಾ ನಿನ್ನ ಬಿಡಲಾರೆ’ ಎಂಬ ಅಡಿಬರಹವಿದೆ. ಜಿಟಿಬಿ ಗೌಡ ಕೀಲಾರ ಛಾಯಾಗ್ರಹಣವಿದೆ. ಎಂ.ಎಸ್‌.ತ್ಯಾಗರಾಜ್‌ ಅವರ ಸಂಗೀತವಿದೆ. “ಕತ್ತಲ ಕೋಣೆ’ ಚಿತ್ರದ ಪೋಸ್ಟರ್‌ ನೋಡಿದರೆ ಹಾರರ್‌ ಚಿತ್ರ ಎಂಬುದು ಪಕ್ಕಾ ಆಗುತ್ತದೆ. ಚಿತ್ರದ ಶೀರ್ಷಿಕೆಗೆ “ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ’ ಎಂಬ ಅಡಿಬರಹವಿದೆ.

ಸಂದೇಶ್‌ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಸಂದೇಶ್‌ ಶೆಟ್ಟಿ ಹೀರೋ. ಅಮಿನ್‌ ಮುಂಬೈ ನಿರ್ಮಾಣವಿದೆ. ಸದ್ಯಕ್ಕೆ ಈ ವಾರದ ಬಿಡುಗಡೆಯ ಚಿತ್ರಗಳಿವು. ಇನ್ನೆರೆಡು ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆ ಸಾಲಿಗೆ ನಿಂತರೆ ಅಚ್ಚರಿ ಇಲ್ಲ. ಸ್ಟಾರ್‌ಗಳ ಸಿನಿಮಾ ಭರಾಟೆ ಆರಂಭವಾಗುವ ಮುನ್ನ ಹೊಸಬರು ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದಾರೆ. ಅದೃಷ್ಟ ಯಾರ ಕೈ ಹಿಡಿಯುತ್ತೋ ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next