Advertisement

ಸಮಾನತೆ, ಸಹೋದರತೆ ಸಾರುವ ಈದುಲ್‌ ಫಿತ್ರ

12:58 AM May 03, 2022 | Team Udayavani |

ಶವ್ವಾಲ್‌ ತಿಂಗಳ ಪ್ರಥಮ ಚಂದ್ರೋದಯವನ್ನು ವೀಕ್ಷಿಸಿದ ಕ್ಷಣದಿಂದ ಮುಸ್ಲಿಮರೆಲ್ಲರ ಮನೆ ಮನೆಗಳಲ್ಲೂ, ಮಸೀದಿಗಳಲ್ಲೂ ಮಾರ್ದನಿಗೊಳ್ಳುವ “ಅಲ್ಲಾಹು ಅಕºರ್‌’ ಅಂದರೆ “ದೇವನು ಮಹೋನ್ನ ತನು’ ಎಂಬ ಅಲ್ಲಾಹನ ಸ್ತುತಿಯೊಂದಿಗೆ ಏಕತೆ, ಸಮಾನತೆ ಮತ್ತು ಸಹೋದರತೆಯ ಅಮರ ಸಂದೇಶವನ್ನು ಲೋಕದ ಸಮಗ್ರ ಮಾನವ ಜನಾಂಗಕ್ಕೆ ಸಾರುತ್ತದೆ.

Advertisement

ಅಲ್ಲಾಹನ ಶ್ರೇಷ್ಠತೆಯ ಅಂಗೀಕಾರ, ಮಾನವ ಬದುಕಿಗೆ ಉನ್ನತ ಭರವಸೆಯನ್ನೂ, ಸ್ಫೂರ್ತಿಯನ್ನೂ, ನವ ಚೈತನ್ಯವನ್ನೂ ನೀಡುತ್ತದೆ. ಪವಿತ್ರ ರಮ್ಜಾನ್‌ನ ಒಂದು ಪೂರ್ಣ ಮಾಸ ಕಾಲ ಉಪವಾಸವನ್ನು ಆಚರಿಸಿ, ಆತ್ಮ ಸಂತೃಪ್ತಿಯನ್ನು ಪಡೆದು, ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸತಕ್ಕ ದಿನವೇ ಈದುಲ್‌ ಫಿತ್ರ.

ರಮ್ಜಾನ್‌ ತಿಂಗಳಲ್ಲಿ ನಿರ್ವಹಿಸುವ ಉಪವಾಸ ವ್ರತವು ಪ್ರತಿಪಾದಿಸುವ ಆತ್ಮ ಸಂಯಮ, ನಿಷ್ಠೆ ಮತ್ತು ಜಾಗೃತಿ, ಕೇವಲ ಅದೊಂದು ಮಾಸಕ್ಕೆ ಮಾತ್ರ ಸೀಮಿತವಾಗಿರದೆ, ವರ್ಷದುದ್ದಕ್ಕೂ ಅದರ ಸ್ಫೂರ್ತಿಯು ನಿರಂತರವಾಗಿ ನಮ್ಮ ದೈನಂದಿನ ಬದುಕಿಗೆ ನವ ಚೈತನ್ಯವನ್ನು ನೀಡುವಂತಾಗಬೇಕು. ಪವಿತ್ರ ರಮ್ಜಾನ್‌ ತಿಂಗಳಲ್ಲಿ ಹಗಲಿಡೀ ಹಸಿವೆ, ಬಾಯಾರಿಕೆಯಿಂದ ಕೂಡಿದ, ನಮ್ಮ ಉದರದಿಂದ ಕ್ಷಣಕ್ಷಣಕ್ಕೂ ಹೊರಡುವ ಹಸಿವಿನ ಧ್ವನಿಯು, ನಮ್ಮ ಸುತ್ತಲೂ ಹಸಿವಿನಿಂದ ಬಳಲುವವರತ್ತ ನಮ್ಮ ಗಮನವನ್ನು ಸೆಳೆಯುತ್ತದೆ.

ರಮ್ಜಾನ್‌ ಉಪವಾಸ ಅನು ಷ್ಠಾನದಿಂದ ನಮ್ಮ ಪಂಚೇಂದ್ರಿಯಗಳ ಮೇಲೆ ಪೂರ್ಣ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ. ಒಂದು ಪೂರ್ಣ ಮಾಸ ಕಾಲದ ರಮ್ಜಾನ್‌ ಉಪ ವಾಸಾನುಷ್ಠಾನ, ಬದುಕಿನಲ್ಲಿ ಪಾವಿತ್ರ್ಯತೆಯನ್ನು ಹೆಚ್ಚಿಸಿ, ಸತ್‌ಚಿಂತನೆ, ಸದ್ವರ್ತನೆ ಮತ್ತು ಸಾತ್ವಿಕತೆಯನ್ನು ಮೈಗೂಡಿಸಿ ಕೊಳ್ಳಲು ನೆರ ವಾಗುತ್ತದೆ. ಇಸ್ಲಾಮಿನ ಪವಿತ್ರ ಗ್ರಂಥವಾದ ಕುರಾನ್‌ ಮನುಕುಲದ ಕಲ್ಯಾಣಕ್ಕೆ ಅವತೀರ್ಣ ಗೊಂಡದ್ದು ರಮಝಾನ್‌ ತಿಂಗಳಲ್ಲಿ.

“ಸತ್ಯವಿಶ್ವಾಸಿಗಳೇ! ನಿಮ್ಮ ಪೂರ್ವಿಕರ ಮೇಲೆ ಉಪವಾಸ ವ್ರತವು ನಿರ್ಬಂಧಗೊಳಿಸಲ್ಪಟ್ಟಂತೆ ನಿಮ್ಮ ಮೇಲೆಯೂ ನಿರ್ಬಂಧಗೊಳಿಸಲಾಗಿದೆ. ಕಾರಣ ನಿಮ್ಮಲ್ಲಿ ಧಾರ್ಮಿಕ ಪ್ರಜ್ಞೆ ಉಂಟಾಗಲು’ ಎಂದು ಪವಿತ್ರ ಕುರಾನ್‌ ಉಪವಾಸ ಅನುಷ್ಠಾನದ ಕುರಿತು ಜಗತ್ತಿಗೆ ಕರೆ ನೀಡಿದೆ. ಪವಿತ್ರ ಕುರ್‌ಆನ್‌ ಅವತೀರ್ಣಗೊಂಡ ಈ ರಮ್ಜಾನ್‌ ಮಾಸವನ್ನು ಮುಸ್ಲಿಮರು ಉಪವಾಸಾನುಷ್ಠಾನ, ಕುರಾನ್‌ ಪಠನ, ಪ್ರಾರ್ಥನೆ, ದಾನ-ಧರ್ಮ ಮತ್ತು ಅಲ್ಲಾಹನ ಸ್ತುತಿಸ್ತೋತ್ರಗಳಿಂದಲೇ ಕಳೆಯುತ್ತಾರೆ. ಮಾತ್ರವಲ್ಲದೆ ರಮಝಾನ್‌ ರಾತ್ರಿಗಳಲ್ಲಿ ಮಸೀದಿಗೆ ತೆರಳಿ, “ತರಾವೀಹ್‌’ ಎಂಬ ವಿಶೇಷವಾದ ಸಾಮೂಹಿಕ ನಮಾಜ್‌ನ್ನು ನಿರ್ವಹಿಸಿ, ಆತ್ಮ ಸಂತೃಪ್ತಿಯನ್ನು ಪಡೆಯುತ್ತಾರೆ.

Advertisement

ಪವಿತ್ರ ರಮ್ಜಾನ್‌ನ ಕೊನೆಯ ಹತ್ತು ದಿನಗಳಲ್ಲಿ ಬರುವ ಒಂದು ರಾತ್ರಿಯು ಅತ್ಯಂತ ಮಹತ್ವಪೂರ್ಣ ರಾತ್ರಿಯಾಗಿರುತ್ತದೆ. ಅದುವೇ “ಲೈಲತುಲ್‌ ಕದ್ರ್’ ಅರ್ಥಾತ್‌ ಶ್ರೇಷ್ಠ ಹಾಗೂ ನಿರ್ಣಾಯಕ ರಾತ್ರಿ. ಸಮಗ್ರ ಮಾನವ ಜನಾಂಗಕ್ಕೆ ಪ್ರಪ್ರಥಮವಾಗಿ ಕುರಾನ್‌ ಅವತೀರ್ಣಗೊಂಡ ರಾತ್ರಿ.

ಈ ಪಾವನ ರಾತ್ರಿಯು ಸಾವಿರ ಮಾಸಗಳಿಗಿಂತಲೂ ಶ್ರೇಷ್ಠ ರಾತ್ರಿಯೆಂದು ಕುರಾನ್‌ ಸ್ಪಷ್ಟೀಕರಿಸುತ್ತದೆ. ಇದು ಶಾಂತಿ ಮತ್ತು ಸುಭಿಕ್ಷೆಯ ರಾತ್ರಿ. ಈ ರಾತ್ರಿಯನ್ನು ಸಂಪೂರ್ಣ ಅಲ್ಲಾಹನ ಸ್ತುತಿ-ಸ್ತೋತ್ರ ಗಳಿಂದಲೂ, ನಮಾಜ್‌, ಪ್ರಾರ್ಥನೆ ಮತ್ತು ಭಕ್ತಿಯಿಂದಲೂ, ಕುರ್‌ಆನ್‌ ಪಠನದಿಂದಲೂ ಮುಸ್ಲಿ ಮರು ಕಳೆಯುತ್ತಾರೆ. ರಮ್ಜಾನ್‌ನ ಉಪವಾಸ ಆಚರಣೆಯಿಂದ, ನಮ್ಮ ಶರೀರದಲ್ಲಿ ಅಡಕವಾಗಿರುವ ಕಲ್ಮಶಗಳು ನೀಗಲ್ಪಟ್ಟು, ಶರೀರಕ್ಕೆ ತಗಲಬಹುದಾದ ರೋಗಗಳು ತಡೆಯಲ್ಪಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿರುತ್ತಾರೆ. ಆದುದರಿಂದ ರಮ್ಜಾನ್‌ ಉಪವಾಸ ಅನುಷ್ಠಾನವು ದೇಹ ಹಾಗೂ ಆತ್ಮ ಪರಿಶುದ್ಧತೆಯ ಸಾಧನವೂ ಹೌದು.

ಈದುಲ್‌ ಫಿತ್ರ ಹಬ್ಬದಂದು ಇಸ್ಲಾಮ್‌ ಜಾರಿಗೊಳಿಸಿದ “ಫಿತ್ರ ಝಕಾತ್‌’ ಎಂಬ ನಿರ್ಬಂಧ ದಾನವು ಬಡವರೂ ಹಬ್ಬದಲ್ಲಿ ಪಾಲ್ಗೊಂಡು ಸಂತೋಷಪಡ ಬೇಕೆಂಬ ಸದುದ್ದೇಶದಿಂದ ಕೂಡಿದೆ. ಈದುಲ್‌ ಫಿತ್ರ ಹಬ್ಬವನ್ನಾ ಚರಿಸಲು ಆರ್ಥಿಕ ಸಾಮರ್ಥ್ಯವಿಲ್ಲದ ಬಡವರಿಗೂ, ಅನಾಥರಿಗೂ, ಅಂಗವಿಕಲರಿಗೂ, ವಿಧವೆಯರಿಗೂ, ಬಡತನದ ರೇಖೆಯಲ್ಲಿರುವ ನಿಕಟ ಸಂಬಂಧಿಕರಿಗೂ ಈ ನಿರ್ಬಂಧ ದಾನವನ್ನು ನೀಡಬಹುದಾಗಿದೆ. ಸಮಾಜದ ದುರ್ಬಲ ವರ್ಗಗಳತ್ತ ಸದಾ ಅನುಕಂಪದಿಂದ ಇರಬೇಕೆಂಬ ನೀತಿ ಮಾರ್ಗವನ್ನು ಈ ವಿಶಿಷ್ಟ ದಾನವು ಮನುಕುಲಕ್ಕೆ ಬೋಧಿಸುತ್ತದೆ.

ರಮ್ಜಾನ್‌ ಮತ್ತು ಈದುಲ್‌ ಫಿತ್ರ ಸಾರುವ ಸತ್ಯ, ಶಾಂತಿ, ಸೌಹಾರ್ದವು ಬದುಕಿನಲ್ಲಿ ಭರವಸೆಯನ್ನೂ, ಸ್ಫೂರ್ತಿಯನ್ನೂ, ನವಚೈತನ್ಯವನ್ನೂ ತುಂಬುವುದು ನಮಗಿಂದು ಅಗತ್ಯವಾಗಿದೆ. ಈದುಲ್‌ ಫಿತ್ರ ಬೋಧಿಸುವ ಶಾಂತಿ, ಸಮಾನತೆ ಮತ್ತು ಸೌಹಾರ್ದ ವನ್ನು ಬದುಕಿನಲ್ಲಿ ರೂಢಿಸಿ ಕೊಂಡು, ಮನುಕುಲದ ಶಾಂತಿಗಾಗಿ, ಸುಭಿಕ್ಷೆಗಾಗಿ, ನೆಮ್ಮದಿಗಾಗಿ ದೇವನಲ್ಲಿ ಐಕ್ಯತೆಯಿಂದ ಈ ಶುಭದಿನದಂದು ನಾವೆಲ್ಲ ಪ್ರಾರ್ಥಿಸೋಣ.

-ಕೆ.ಪಿ. ಅಬ್ದುಲ್‌ ಖಾದರ್‌, ಕುತ್ತೆತ್ತೂರು

Advertisement

Udayavani is now on Telegram. Click here to join our channel and stay updated with the latest news.

Next